ಮೋಹನ್ಲಾಲ್ ನಟಿಸಬೇಕಿದ್ದ 1 ಸಾವಿರ ಕೋಟಿ ಬಜೆಟ್ನ ಸಿನಿಮಾಕ್ಕೆ ರಿಷಬ್ ಶೆಟ್ಟಿ ಎಂಟ್ರಿ? 9 ವರ್ಷಗಳ ಹಿಂದೆ ಏನಾಗಿತ್ತು ಗೊತ್ತಾ?
Rishab Shetty: ಎಂ. ಟಿ. ವಾಸುದೇವನ್ ನಾಯರ್ ಅವರ 'ರಂಡಾಮೂಳಂ' ಕಾದಂಬರಿ ಆಧರಿಸಿ ಉದ್ಯಮಿ ಬಿ.ಆರ್. ಶೆಟ್ಟಿ ಅವರು 9 ವರ್ಷಗಳ ಹಿಂದೆ 1000 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ಘೋಷಿಸಿದ್ದರು. ಆದರೆ ಅದು ನಿಂತುಹೋಗಿತ್ತು. ಈ ಬೃಹತ್ ಪ್ರಾಜೆಕ್ಟ್ಗೆ ಈಗ ರಿಷಬ್ ಶೆಟ್ಟಿ ಮರುಜೀವ ನೀಡಲಿದ್ದಾರೆ ಎನ್ನಲಾಗುತ್ತಿದೆ.
-
ನಟ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾದ ಭರ್ಜರಿ ಗೆಲುವಿನಲ್ಲಿ ತೇಲುತ್ತಿದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ತೆಲುಗಿನ ಎರಡು ಬಿಗ್ ಪ್ರೊಡಕ್ಷನ್ ಹೌಸ್ ಜೊತೆಗೆ ರಿಷಬ್ ಶೆಟ್ಟಿ ಅವರು ಕಮಿಟ್ ಆಗಿರುವುದು ಗೊತ್ತೇ ಇದೆ. ಅವರ ನಿರ್ದೇಶನದ ಮುಂದಿನ ಸಿನಿಮಾದ ಕುರಿತು ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಅದೇನಪ್ಪ ಅಂದರೆ, 9 ವರ್ಷಗಳ ಹಿಂದೆ ಘೋಷಣೆ ಆಗಿ, ನಿಂತಿದ್ದ ಸಿನಿಮಾವನ್ನು ರಿಷಬ್ ಶೆಟ್ಟಿ ಟೇಕಾಫ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಯಾವುದು ಆ ಸಿನಿಮಾ?
ಎಂ ಟಿ ವಾಸುದೇವನ್ ನಾಯರ್ ಅವರ ಪ್ರಶಸ್ತಿ ವಿಜೇತ ಕಾದಂಬರಿ ʻರಂಡಾಮೂಳಂʼ ಅನ್ನು ಅದೇ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಸಿನಿಮಾ ಮಾಡುವ ಪ್ಲ್ಯಾನಿಂಗ್ ಇತ್ತು. ಅರಬ್ ಒಕ್ಕೂಟದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಬಿ. ಆರ್. ಶೆಟ್ಟಿ ಅವರು ಈ ಸಿನಿಮಾವನ್ನು 1000 ಕೋಟಿ ರೂ. ಬಜೆಟ್ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜಿಸಿದ್ದರು. ಜಾಹೀರಾತು ಚಿತ್ರಗಳ ನಿರ್ದೇಶಕ ವಿ.ಎ.ಶ್ರೀಕುಮಾರ್ ಮೆನನ್ ಇದರ ನಿರ್ದೇಶನ ಮಾಡಬೇಕಿತ್ತು.
ರಿಷಬ್ ಶೆಟ್ಟಿ-ಅಕ್ಷಯ್ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್ ಪಕ್ಕಾ!
2017ರಲ್ಲಿ ಸದ್ದು ಮಾಡಿದ್ದ ಪ್ರಾಜೆಕ್ಟ್ ಈಗ ಡ್ರಾಪ್ ಆಗಿದೆ. ಇದೀಗ ಈ ಸಿನಿಮಾವನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಳ್ಳಲು ಮುಂದಾಗಿದ್ದು, ನಿರ್ದೇಶನದ ಜೊತೆಗೆ ನಟನೆಯನ್ನೂ ಕೂಡ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೊದಲು ಮೋಹನ್ಲಾಲ್ ಅವರು ಇದರ ನಾಯಕರಾಗಿದ್ದರು. ಇದೀಗ ಆ ಜಾಗಕ್ಕೆ ರಿಷಬ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ರಿಷಬ್ ಶೆಟ್ಟಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ, ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಅಂದು ವಿರೋಧ ವ್ಯಕ್ತವಾಗಿತ್ತು
ʻರಂಡಾಮೂಳಂʼ ಕಾದಂಬರಿಯಲ್ಲಿ ಮಹಾಭಾರತವನ್ನು ತಿರುಚಿ ಬರೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. 'ರಂಡಾಮೂಳಂ' ಕೃತಿಯಲ್ಲಿ 'ಮಹಾಭಾರತ' ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದರೆ, ಅದನ್ನು ತೆರೆ ಕಾಣಲು ಬಿಡುವುದಿಲ್ಲ ಎಂದು ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ. ಪಿ. ಶಶಿಕಲಾ ಎಂಬುವವರು ಅಂದು ಬೆದರಿಕೆಯೊಡ್ಡಿದ್ದರು. "ಮಹಾಭಾರತವನ್ನು ತಿರುಚಿ ಬರೆದ ಕೃತಿ ಆಗಿರುವ ರಂಡಾಮೂಳಂ ಅನ್ನು ಅದೇ ಹೆಸರಿನಲ್ಲಿಯೇ ಸಿನಿಮಾ ಮಾಡಬೇಕು. ಮಹಾಭಾರತ ಎಂದು ಹೆಸರಿಟ್ಟು ಪ್ರದರ್ಶಿಸಲು ಮುಂದಾದರೆ, ಅದಕ್ಕೆ ನಾವು ಅವಕಾಶ ನೀಡೆವು. ಮಹಾಭಾರತ ನಂಬಿಕೆಗೆ ಸಂಬಂಧಪಟ್ಟದ್ದು. ಇತಿಹಾಸವನ್ನೂ, ನಂಬಿಕೆಯನ್ನೂ ತಿರುಚಿದ ಕೃತಿಯನ್ನು ಮಹಾಭಾರತ ಎಂದು ಹೆಸರಿಟ್ಟರೆ ಅದನ್ನು ನಾವು ಒಪ್ಪುವುದಿಲ್ಲ" ಎಂದಿದ್ದರು.
ಸಿನಿಮಾವನ್ನು ನಿಲ್ಲಿಸಿದ್ದ ಬಿ ಆರ್ ಶೆಟ್ಟಿ
ನಂತರ 2019ರಲ್ಲಿ 'ರಂಡಾಮೂಳಂ' ಸಿನಿಮಾದ ಯೋಜನೆಯನ್ನು ಕೈಬಿಡಲಾಗಿದೆ. ನಿರ್ದೇಶಕ ಶ್ರೀಕುಮಾರ್ ಮೆನನ್ ಹಾಗೂ ಲೇಖಕ ಎಂ.ಟಿ. ವಾಸುದೇವನ್ ನಾಯರ್ ಅವರ ನಡುವೆ ಉಂಟಾದ ಸಂಘರ್ಷದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಉದ್ಯಮಿ ಬಿ.ಆರ್. ಶೆಟ್ಟಿ ತಿಳಿಸಿದ್ದರು.
ಇದೀಗ ರಿಷಬ್ ಶೆಟ್ಟಿ ಅವರು ಈ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿಯಿಂದಾಗಿ ʻರಂಡಾಮೂಳಂʼ ಕೃತಿ ಮತ್ತೆ ಸುದ್ದಿಯಲ್ಲಿದೆ. ಇದರ ಬಗ್ಗೆ ರಿಷಬ್ ಶೆಟ್ಟಿಯಿಂದಲೇ ಅಧಿಕೃತ ಮಾಹಿತಿ ಹೊರಬರಬೇಕಿದೆ.