Bigg Boss Kannada 11: 20 ಲಕ್ಷ ರೂ. ನಿರಾಕರಿಸಿದ ಬಿಗ್ ಬಾಸ್ ಸ್ಪರ್ಧಿಗಳು; ಕಿಚ್ಚ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ನಡೆಯುತ್ತಿದೆ. ಎಲಿಮಿನೇಷನ್ ವೇಳೆ ಫೈನಲಿಸ್ಟ್ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಕಿಶನ್ ಹಾಗೂ ಹನುಮಂತ ಅವರಿಗೆ ಮೊದಲಿಗೆ ಕೊಡುಗೆಯೊಂದನ್ನು ನೀಡಲಾಗಿತ್ತು. 20 ಲಕ್ಷ ರೂ. ಪಡೆದು ಅರ್ಧದಲ್ಲೇ ವೇದಿಕೆ ಬಿಟ್ಟು ಹೋಗಬಹುದು ಎಂದು ಸುದೀಪ್ ಘೋಷಿಸಿದರು. ಆದರೆ ಇದನ್ನು ಯಾರೂ ಒಪ್ಪಿಕೊಂಡಿಲ್ಲ.
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಫಿನಾಲೆ ಹಂತವನ್ನು ತಲುಪಿದೆ. ಫಿನಾಲೆಯನ್ನು ನಟ, ನಿರೂಪಕ ಕಿಚ್ಚ ಸುದೀಪ್ (Kichcha Sudeepa) ನಡೆಸಿಕೊಡುತ್ತಿದ್ದಾರೆ. ಶನಿವಾರ ಆರಂಭವಾದ ಗ್ರ್ಯಾಂಡ್ ಫಿನಾಲೆ ಭಾನುವಾರವೂ ಮುಂದುವರಿದಿದೆ. ಫಿನಾಲೆ ವೇದಿಕೆಗೆ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಕಿಶನ್ ಹಾಗೂ ಹನುಮಂತ ಆಗಮಿಸಿದ್ದರು. ಎಲಿಮಿನೇಷನ್ ಪ್ರಕ್ರಿಯೆ ವೇಳೆ ಈ ಬಾರಿ ಟ್ವಿಸ್ಟ್ ನೀಡಲಾಗಿತ್ತು. ಅದೇನು ಎನ್ನುವ ವಿವರ ಇಲ್ಲಿದೆ.
ಫಿನಾಲೆ ವೇದಿಕೆಗೆ ಬಂದಿರುವ ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಕಿಶನ್ ಹಾಗೂ ಹನುಮಂತ ಅವರಿಗೆ ಮೊದಲಿಗೆ ಭರ್ಜರಿ ಆಯ್ಕೆಯೊಂದನ್ನು ನೀಡಲಾಗಿತ್ತು. ಅದೇನೆಂದರೆ 20 ಲಕ್ಷ ರೂ. ಪಡೆದು ಅರ್ಧದಲ್ಲೇ ವೇದಿಕೆ ಬಿಟ್ಟು ಹೋಗಬಹುದು ಎಂದು ಸುದೀಪ್ ಘೋಷಿಸಿದರು. ಯಾರೂ ಬೇಕಾದರೂ ಈ ಕೊಡುಗೆಯನ್ನು ಸ್ವೀಕರಿಸಬಹುದು ಎಂದು ತಿಳಿಸಲಾಗಿತ್ತು. ಆದರೆ ಯಾರೂ ಹಣದ ಆಮೀಷಕ್ಕೆ ಒಳಗಾಗಲಿಲ್ಲ. ತಮ್ಮತನ ಬಿಟ್ಟು ಕೊಡುವುದಿಲ್ಲ ಎಂದೇ 5 ಮಂದಿಯೂ ತಿಳಿಸಿದರು. ಇದಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದರು. ʼʼಈ ರೀತಿಯಾಗಿ ಕೋಟಿ ರೂ. ಕೊಟ್ಟರೂ ಕೂಡ ನಮಗೆ ಇದು ಬೇಡʼ’ ಎಂದು ಎಲ್ಲ ಸ್ಪರ್ಧಿಗಳು ಹೇಳಿದ್ದು ವಿಶೇಷ.
ಮೊದಲಿಗೆ ಸುದೀಪ್ ಸೂಟ್ಕೇಸ್ನಲ್ಲಿ 5 ಲಕ್ಷ ರೂ. ಇಟ್ಟು ಅದನ್ನು ಪಡೆದು ಈಗಲೇ ವೇದಿಕೆಯಿಂದ ತೆರಳಬಹುದು ಎಂದು ತಿಳಿಸಿದರು. ಇದಕ್ಕೆ ಯಾರೂ ಮುಂದೆ ಬರಲಿಲ್ಲ. ಬಳಿಕ ಈ ಮೊತ್ತವನ್ನು ಹಂತ ಹಂತವಾಗಿ ಹೆಚ್ಚಿಸಿ 20 ಲಕ್ಷ ರೂ.ಗೆ ಏರಿಸಲಾಯಿತು. ಇದಕ್ಕೂ ಯಾರೂ ಸೊಪ್ಪು ಹಾಕಲಿಲ್ಲ.
ಈ ಸುದ್ದಿಯನ್ನೂ ಓದಿ: Kichcha Sudeepa: ಪದ್ಮ ಭೂಷಣ ಪುರಸ್ಕೃತ ಅನಂತ್ನಾಗ್ಗೆ ಕಿಚ್ಚನ ಚಪ್ಪಾಳೆ
ಯೋಚಿಸಲು 2 ನಿಮಿಷಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಹೀಗಿದ್ದರೂ ಯಾರೂ ಈ ಅವಕಾಶ ಬಳಸಿಕೊಳ್ಳಲಿಲ್ಲ. ಹಣಕ್ಕಿಂತ ವ್ಯಕ್ತಿತ್ವವೇ ಮುಖ್ಯ ಎಂದು ಎಲ್ಲ ಸ್ಪರ್ಧಿಗಳು ತಿಳಿಸಿದರು. ಇದರಿಂದ ನಿಮ್ಮ ಮನೆಯವರು ಹೆಮ್ಮೆ ಪಡುತ್ತಾರೆ ಎಂದು ಸುದೀಪ್ ಮೆಚ್ಚುಗೆ ಸೂಚಿಸಿದರು. ಸ್ಪರ್ಧಿಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆಯೂ ಲಭಿಸಿತು.
ಇದೀಗ ಎಲಿಮಿನೇಷನ್ ಪ್ರಕ್ರಿಯೆ ಮುಂದುವರಿದಿದ್ದು ಈಗಾಗಲೇ ಉಗ್ರಂ ಮಂಜು, ಮೋಕ್ಷಿತಾ ಮತ್ತು ರಜತ್ ಕಿಶನ್ ಹೊರ ನಡೆದಿದ್ದಾರೆ. ತ್ರಿವಿಕ್ರಮ್ ಮತ್ತು ಹನುಮಂತನ ಪೈಕಿ ಯಾರಾಗ್ತಾರೆ ಚಾಂಪಿಯನ್? ಉತ್ತರ ಕೆಲವೇ ಹೊತ್ತಲ್ಲಿ ಸಿಗಲಿದೆ.