Colors Kannada: ಕಲರ್ಸ್ ಕನ್ನಡದಲ್ಲಿ ಸೀರಿಯಲ್ಗಳ ಧಮಾಕಾ; ವಿಭಿನ್ನ ಕಥೆಯಲ್ಲಿ ಬರುತ್ತಿವೆ ಯಜಮಾನ, ವಧು ಧಾರಾವಾಹಿ
ಕಲರ್ಸ್ ಮನರಂಜನೆಗೆ ಯಾವತ್ತೂ ಕಡಿಮೆ ಮಾಡಿಲ್ಲ. ಜನವರು 27ರಿಂದ ಕಲರ್ಸ್ನಲ್ಲಿ ಎರಡು ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ ವಧು 10 ಗಂಟೆಗೆ ಯಜಮಾನ ಧಾರಾವಾಹಿ ಪ್ರೇಕ್ಷರ ಮುಂದೆ ಬರಲಿದೆ.

Colors Kannada

ಬೆಂಗಳೂರು: ಬಿಗ್ ಬಾಸ್ ಮುಕ್ತಾಯವಾಗುತ್ತಿದ್ದಂತೆ ಇನ್ನೇನು ಎಂಬ ಪ್ರಶ್ನೆ ಕಲರ್ಸ್ ಕನ್ನಡ (colors Kannada) ವೀಕ್ಷಕರಲ್ಲಿ ಮನೆ ಮಾಡಿತ್ತು. ಆದರೆ ಕಲರ್ಸ್ ಮನರಂಜನೆಗೆ ಯಾವತ್ತೂ ಕಡಿಮೆ ಮಾಡಿಲ್ಲ. ಜನವರು 27ರಿಂದ ಕಲರ್ಸ್ನಲ್ಲಿ ಎರಡು ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ ವಧು (Vadhu) 10 ಗಂಟೆಗೆ ಯಜಮಾನ (Yajamana) ಧಾರಾವಾಹಿ ಪ್ರೇಕ್ಷರ ಮುಂದೆ ಬರಲಿದೆ. ಎರಡೂ ಸೀರಿಯಲ್ಗಳು ವಿಭಿನ್ನ ಕಥಾಹಂದರವನ್ನು ಹೊಂದಿದೆ.
ರಾತ್ರಿ 9.30 ಕ್ಕೆ ಪ್ರಸಾರವಾಗಲಿರುವ ವಧು ಧಾರಾವಾಹಿ ಡಿವೋರ್ಸ್ ಲಾಯರ್ ನ ಮದುವೆ ಕಥೆ ಇದಾಗಿದೆ. ಗಂಡ ಹೆಂಡ್ತಿ ನಡುವೆ ಬಿರುಕು ಮೂಡಿ ಡಿವೋರ್ಸ್ ಕೇಳಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವ್ರನ್ನ ಒಂದು ಮಾಡುವ ಲಾಯರ್ ಹಿರೋಯಿನ್. . ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ಡಿವೋರ್ಸ್ ಕೇಸ್ ಫೈಲ್ ಮಾಡಿದಾಗ ವಧು ಹತ್ತಿರ ಸಹಾಯ ಕೋರಿ ಬರುವ ಮೋಸ್ಟ್ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಹಿರೋ ಸಾರ್ಥಕ್. ಈಗ ಸಾರ್ಥಕ್ ಮತ್ತು ಪ್ರಿಯಾಂಕಾಳ ಡಿವೋರ್ಸ್ ಕೇಸ್ ತೆಗೆದುಕೊಂಡಿದ್ದು, ಇಬ್ಬರನ್ನೂ ಬೇರೆ ಮಾಡುತ್ತಾಳಾ ಅಥವಾ ಒಂದು ಮಾಡಲು ಹೋಗಿ ಸಾರ್ಥಕ್ ಜೊತೆಗೆ ಸಪ್ತಪದಿ ತುಳಿಯುತ್ತಾಳಾ ಎಂಬುದೇ ಪ್ರಶ್ನೆಯಾಗಿದೆ.
ಸಂಬಂಧಗಳನ್ನು ಪರೀಕ್ಷೆಗೊಳಪಡಿಸುವ ‘ವಧು’ ಧಾರಾವಾಹಿಯು ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟವನ್ನು ಹೇಳುತ್ತದೆ. ಪ್ರೀತಿ, ಮೋಸ ಮತ್ತು ನಂಬಿಕೆಗಳು ನಮ್ಮನ್ನು ಹೇಗೆಲ್ಲಾ ಘಾಸಿಗೊಳಿಸಬಹುದೆಂಬುದನ್ನು ಬಿಡಿಸಿಡುತ್ತದೆ. ತನ್ನ ಭಾವನೆಗಳ ಜೊತೆಗೆ ಗುದ್ದಾಡುತ್ತಲೇ ತನಗೆ ಸಿಕ್ಕಿರುವ ಈ ಹೊಸ ಕೇಸನ್ನು ವಧು ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ ಮತ್ತು ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಕೇಸ್ ಬದಲಾಯಿಸುತ್ತಾ ಅನ್ನುವುದೇ ಕತೆಯನ್ನು ಮುನ್ನೆಡೆಸುವ ಎಳೆಯಾಗಿದೆ.
ಕಲಾವಿದರ ದಂಡೇ ಇದೆ
ಹೆಸರಾಂತ ಕಲಾವಿದರಾದ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಅಭಿನಹಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ಲಕ್ಷಣ ಧಾರಾವಾಹಿ ಖ್ಯಾತಿಯ ಅಭಿಷೇಕ್ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಲಿದ್ದಾರೆ. ಕುತೂಹಲ ಮತ್ತು ನಾಟಕೀಯ ಸನ್ನಿವೇಶಗಳ ಸಂಗಮವಾಗಿರುವ ‘ವಧು’ ವೀಕ್ಷಕರ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.ಈಗಾಗಲೇ ಪ್ರೊಮೊ ಮೂಲಕ ಸಿಎಸ್ ಪಿ ಪಾತ್ರ ಎಲ್ಲರ ಮನಸನ್ನ ಗೆದ್ದಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಯಜಮಾನ
ರಾತ್ರಿ 10 ಗಂಟೆ ಪ್ರಸಾರವಾಗಲಿರುವ ಈ ಧಾರಾವಾಹಿ ವಿಭಿನ್ನ ಕಥಾಹಂದರವನ್ನು ಹೊಂದಿದೆ. ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ.
ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ದ ಕತೆಯನ್ನು ಬೆಳೆಸುತ್ತಾ ಹೋಗುವ ತಂತು. ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಅಥವಾ ಅವರ ವ್ಯಕ್ತಿತ್ವದಲ್ಲಿರುವ ಭಿನ್ನತೆಯೇ ಅವರನ್ನು ದೂರಾಗಿಸುತ್ತದೆಯಾ? ಉತ್ತರಕ್ಕೆ ಸಂಚಿಕೆಗಳನ್ನು ಕಾದು ನೋಡಬೇಕು.
ಈ ಸುದ್ದಿಯನ್ನೂ ಓದಿ : Mahanayaka: ಗಣರಾಜ್ಯೋತ್ಸವ ಪ್ರಯುಕ್ತ ಜೀ ಕನ್ನಡದಿಂದ ಮನರಂಜನೆಯ ಮಹಾಪೂರ; ಪ್ರಸಾರವಾಗಲಿದೆ ಮಹಾನಾಯಕ ಸೀರಿಯಲ್ನ ಮಹಾಸಂಚಿಕೆ
ಯಾರು ಯಾರು ಇದ್ದಾರೆ?
ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಇಲ್ಲಿದ್ದಾರೆ. ವಧು’ ಮತ್ತು ‘ಯಜಮಾನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಹೊಸ ಸಂಕೀರ್ಣತೆಯನ್ನು ಎಳೆಎಳೆಯಾಗಿ ಬಿಡಿಸಿಡುವ ಹೊಸ ಬಗೆಯ ಕತೆಗಳು. ಭಾವನೆಗಳ ಸಂಘರ್ಷವನ್ನು ಅದರ ಮಿತಿಗಳಾಚೆಗೆ ಜಗ್ಗಿ ಪರೀಕ್ಷಿಗೊಳಪಡಿಸುವ ಈ ಎರಡು ಕತೆಗಳನ್ನು ನೋಡಲು ಮರೆಯದಿರಿ.