ಎರಡನೇ ವಾರಕ್ಕೆ ಕಾಳಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (bigg boss kannada 12) ಪೈಪೋಟಿ ಹೆಚ್ಚಾಗುತ್ತಿದೆ. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೊಟ್ಟ ವಾರ್ನಿಂಗ್ ಇದೀ ಎರಡನೇ ವಾರದ ಮೊದಲ ದಿನವೇ ಕೆಲಸ ಮಾಡಲು ಶುರುಮಾಡಿದೆ. ಮೊದಲ ವಾರ ಸೈಲೆಂಟ್ ಆಗಿದ್ದ ಕೆಲ ಸ್ಪರ್ಧಿಗಳು ಇದೀಗ ಜಗಳಕ್ಕಿಳಿದಿದ್ದಾರೆ. ಅದರಲ್ಲೂ ಮೊದಲ ವಾರ ಹೆಚ್ಚೇನು ಕಾಣಿಸಿಕೊಳ್ಳದ ಅಭಿಷೇಕ್, ಜಾನ್ವಿ ಇದೀಗ ಏರು ಧ್ವನಿಯಲ್ಲಿ ಮಾತನಾಡಿ ಸರಿಯಾಗಿ ಕಿತ್ತಾಡಿಕೊಂಡಿದ್ದಾರೆ. ಇದರ ಮಧ್ಯೆ ದೊಡ್ಮನೆಯಲ್ಲಿ ಕಾಕ್ರೋಚ್ ಸುಧಿ ಅಸುರಾಧಿಪತಿ ಆಗಿದ್ದಾರೆ.
ಮನೆಯ ಮೊಟ್ಟ ಮೊದಲ ಫೈನಲಿಸ್ಟ್ ಆಗಿರುವ ಸುಧಿ ಅಸುರ ಸರ್ವೋಚ್ಚ ಅಧಿಪತಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇವರು ಹೇಳಿದಂತೆ ಇಡೀ ಮನೆ ಕೇಳಬೇಕು.. ಎದುರು ಮಾತನಾಡಿದರೆ ತಮಗೆ ಇಷ್ಟ ಬಂದ ಶಿಕ್ಷೆ ಕೊಡಬಹುದು. ಕಾಕ್ರೋಚ್ ಮನೆಯಲ್ಲಿ ತಮ್ಮದೇ ಆದ ಕೆಲವು ರೂಲ್ಸ್ ಕೂಡ ಮಾಡಿದ್ದಾರೆ. ನಾನು ಬರುವಾಗ ಎಲ್ಲರೂ ಎದ್ದು ನಿಂತುಕೊಳ್ಳಬೇಕು ಎಂದು ಆದೇಶಿಸಿದ್ದಾರೆ.
ಇದು ಒಂದುಕಡೆಯಾದರೆ ಮತ್ತೊಂದೆಡೆ ಒಂಟಿ-ಜಂಟಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ನಿಯಮ ಉಲ್ಲಂಘನೆಯ ವಿಚಾರದಲ್ಲಿ ಎರಡೂ ತಂಡಗಳ ನಡುವೆ ವಾಗ್ವಾದ ನಡೆದಿದೆ. ಅರಸ ಅರಸಿಯರ ಸೇವೆ ಮಾಡದವರಿಗೆ ನಾವ್ಯಾಕೆ ಊಟ ಹಾಕ್ಬೇಕು ಎಂದು ಒಂಟಿಗಳ ಮೇಲೆ ಜಂಟಿಗಳು ರೇಗಾಡಿದ್ದಾರೆ. ನಮಗೆ ಮರ್ಯಾದೆ ಇಲ್ವಾ ನಾವ್ಯಾಕೆ ಯಾರತ್ರ ಕೇಳಿಸಿಕೊಳ್ಳಬೇಕೆಂದು ಮಂಜು ಅವರು ಗರಂ ಆಗಿದ್ದಾರೆ.
ಇದರಿಂದ ಸಿಡಿದೆದ್ದ ಅಶ್ವಿನಿ ಗೌಡ, ಕೋತಿ ಕುಣಿಯುತ್ತಿಲ್ಲ, ಕೋತಿಯನ್ನು ಕುಣಿಸೋದು ಹೇಗೆಂದು ನಮಗೆ ಗೊತ್ತೆಂದು ಖಡಕ್ ಆಗಿಯೇ ಹೇಳಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದು ಮಾತ್ರವಲ್ಲದೆ, ಗಾಂಚಾಲಿ ಮಾಡ್ತಾ ಇದ್ದೀರಿ ಅಂಥ ಅಭಿಷೇಕ್ಗೆ ಜಾನ್ವಿ ಹೇಳಿದ್ದಾರೆ. ಇದಕ್ಕೆ ಅಭಿಷೇಕ್ ಕೂಡ, ನೀವೇನು ಮಾಡೇ ಇಲ್ವಾ? ಎಂದು ಸಿಟ್ಟಿನಲ್ಲೇ ಮರು ಪ್ರಶ್ನೆ ಹಾಕಿದ್ದಾರೆ. ಒಟ್ಟಾರೆ ಒಂಟಿ- ಜಂಟಿಗಳ ನಡುವೆ ವಾಗ್ವಾದ ಜೋರಾಗಿದ್ದು, ಇದು ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಇಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.