ʻತಮಿಳುನಾಡಿನಲ್ಲಿ ಸೆಟ್ಲ್ ಆಗಿ 52 ವರ್ಷ ಆಯ್ತು, ಕನ್ನಡದ ಟಚ್ ಬಿಟ್ಟುಹೋಗಿದೆ. ಆದ್ರೆ ಕನ್ನಡವನ್ನು ಮರೆತಿಲ್ಲ..ʼ- ನಟ ರಜನಿಕಾಂತ್
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡ ನಟ ರಜನಿಕಾಂತ್, ತಮ್ಮ ಕನ್ನಡದ ನಂಟನ್ನು ಸ್ಮರಿಸಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿ 52 ವರ್ಷಗಳಾದರೂ ಕನ್ನಡ ಮರೆತಿಲ್ಲ ಎಂದು ಹೇಳಿದ್ದಾರೆ.
-
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಆರ್ಟ್ ಆಫ್ ಲಿವಿಂಗ್ ಆಶ್ರಮದ 45ನೇ ವರ್ಷಾಚರಣೆ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ರಜನಿಕಾಂತ್, ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಆಶ್ರಮಕ್ಕೆ ಭೇಟಿದ ನೀಡಿದ ಮೇಲೆ ತಮಗೆ ಆಧ್ಯಾತ್ಮಿಕ ಶಕ್ತಿ ಮತ್ತು ನಿಜವಾದ 'ಸ್ಟಾರ್ಡಮ್' ಎಂದರೆ ಏನು ಎಂಬುದನ್ನು ತಿಳಿಸಿಕೊಟ್ಟಿತು ಎಂದು ಹೇಳಿಕೊಂಡಿದ್ದಾರೆ. ರಜನಿಕಾಂತ್ ಅವರ ಭಾಷಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನಾನು ಕನ್ನಡವನ್ನು ಮರೆತಿಲ್ಲ
ಇದೇ ವೇಳೆ ತಮಗೆ ಕನ್ನಡದ ಟಚ್ ಬಿಟ್ಟುಹೋಗಿದೆ ಎಂಬ ವಿಚಾರವನ್ನು ರಜನಿಕಾಂತ್ ಹೇಳಕೊಂಡಿದ್ದಾರೆ. "ನಾನು ಇಲ್ಲಿ (ಬೆಂಗಳೂರಿನಲ್ಲಿ) 25 ವರ್ಷ ವಾಸವಾಗಿದ್ದೆ. ಇಲ್ಲಿಯೇ ನಾನು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಅದು ಎಲ್ಲರಿಗೂ ಗೊತ್ತಿದೆ. ನಂತರ ನಾನು ಚೆನ್ನೈಗೆ ಸ್ಥಳಾಂತರಗೊಂಡೆ. ನಾನು ಕಳೆದ 52 ವರ್ಷಗಳಿಂದ ತಮಿಳುನಾಡಿನ ಚೆನ್ನೈನಲ್ಲಿ ವಾಸಿಸುತ್ತಿದ್ದೇನೆ. ಆದ್ದರಿಂದ ನನಗೆ ಈಗ ಕನ್ನಡದ ಟಚ್ ಬಿಟ್ಟುಹೋಗಿದೆ. ಏಕೆಂದರೆ, ಅಲ್ಲಿ ಯಾರೂ ನನ್ನೊಂದಿಗೆ ಕನ್ನಡ ಮಾತನಾಡುವವರು ಇಲ್ಲ. ಆದರೆ ನಾನು ಕನ್ನಡವನ್ನು ಮರೆತಿಲ್ಲ" ಎಂದು ರಜನಿಕಾಂತ್ ಅವರು ಹೇಳಿಕೊಂಡಿದ್ಧಾರೆ.
ಆರ್ಟ್ ಆಫ್ ಲಿವಿಂಗ್ ಬಗ್ಗೆ ರಜನಿ ಮಾತು
"ನಾನು ಹಿಂದೊಮ್ಮೆ ಕೇವಲ ಎರಡು ದಿನಗಳ ವಾಸ್ತವ್ಯಕ್ಕೆಂದು ಈ ಆಶ್ರಮಕ್ಕೆ ಬಂದಿದ್ದೆ. ಆದರೆ ಆಶ್ರಮದ ಸೌಂದರ್ಯಕ್ಕೆ ಮಾರುಹೋಗಿ ನಾನು 15 ದಿನಗಳ ಕಾಲ ಇಲ್ಲಿಯೇ ಉಳಿದುಕೊಂಡೆ. ಆಶ್ರಮವು ಹಸಿರು, ಕೆರೆ ಮತ್ತು ಸದಾ ನಗುತ್ತಿರುವ ಜನರಿಂದ ತುಂಬಿತ್ತು. ಅಲ್ಲಿ ಆನೆ, ಕುದುರೆ ಮತ್ತು ನೂರಾರು ಹಸುಗಳಿದ್ದವು. ವಿಶೇಷವೆಂದರೆ ಅಲ್ಲಿದ್ದ ಒಂದು ಕುದುರೆಯ ಹೆಸರು 'ರಜಿನಿ' ಎಂದಿತ್ತು" ಎಂದು ಹೇಳುವ ಮೂಲಕ ನೆರೆದಿದ್ದವರಲ್ಲಿ ನಗು ಉಕ್ಕಿಸಿದರು. ಹಿಮಾಲಯದ ನಂತರ ಈ ಆಶ್ರಮವೇ ತಮಗೆ ಅತ್ಯಂತ ಪ್ರಿಯವಾದ ಸ್ಥಳ ಎಂದು ಅವರು ತಿಳಿಸಿದರು.
ಆ ಒಂದು ದಿನ ನನ್ನ ಅಹಂ ಇಳಿಯಿತು
ತಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಿದ ಘಟನೆಯನ್ನು ವಿವರಿಸಿದ ರಜನಿಕಾಂತ್, "ಒಂದು ವಿಶೇಷ ದಿನದಂದು ರವಿಶಂಕರ್ ಗುರೂಜಿ ಅವರು ನನ್ನನ್ನು ದರ್ಶನಕ್ಕೆ ಜೊತೆಯಲ್ಲಿ ಬರುವಂತೆ ಕೇಳಿದರು. ಅಂದು ಆಶ್ರಮದಲ್ಲಿ ಸಾವಿರಾರು ಭಕ್ತರಿದ್ದರು. ನಾನು ದೊಡ್ಡ ಸ್ಟಾರ್ ಆಗಿರುವುದರಿಂದ, ಜನರು ನನ್ನನ್ನು ಗುರುತಿಸಿ ಆಟೋಗ್ರಾಫ್ ಅಥವಾ ಫೋಟೋಗಾಗಿ ಮುಗಿಬೀಳಬಹುದು ಎಂದು ಯೋಚಿಸಿ ತುಸು ಮುಜುಗರ ಅನುಭವಿಸುತ್ತಿದ್ದೆ" ಎಂದರು.
"ಅಲ್ಲಿ ನೂರಾರು ಜನ ಸೇರಿದ್ದರು, ತಮಿಳುನಾಡಿನಿಂದ ಬಂದವರೂ ಅಲ್ಲಿದ್ದರು. ಆದರೆ ನಾನು ಸುಳ್ಳು ಹೇಳುತ್ತಿಲ್ಲ, ಅಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ನನ್ನತ್ತ ತಿರುಗಿಯೂ ನೋಡಲಿಲ್ಲ. ನಾನು ಕೈಬೀಸಿದರೂ ಯಾರೂ ಗಮನಿಸಲಿಲ್ಲ. ಫೋಟೋ, ಆಟೋಗ್ರಾಫ್ ಹೋಗಲಿ, ಕನಿಷ್ಠ ಯಾರೂ ನನ್ನನ್ನು ಮಾತಾಡಿಸಲೂ ಇಲ್ಲ. ಈ ಅನುಭವ ನನ್ನ ಅಹಂ (Ego) ಅನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿತು" ಎಂದು ರಜನಿಕಾಂತ್ ಅವರು ಹೇಳಿದ್ದಾರೆ.
ಕನ್ನಡದ ಬಗ್ಗೆ ರಜನಿಕಾಂತ್ ಮಾತು
Super Star #Rajinikanth Recent
— Movie Tamil (@_MovieTamil) May 13, 2026
- I was here for 25 years and worked as a bus conductor, so everyone knew me. Then I moved to Chennai.
- I have been in Tamil Nadu for the last 52 years & I have been living in Chennai, so I have forgotten Kannada.pic.twitter.com/Wq9zNeXYXm
ನನಗೆ ಸ್ಟಾರ್ಡಮ್ ಎಂದರೆ ಏನು ಎಂಬುದು ಗೊತ್ತಾಯಿತು
"ಆ ಘಟನೆಯು ಆಧ್ಯಾತ್ಮದ ಶಕ್ತಿಯನ್ನು ತಮಗೆ ಅರ್ಥ ಮಾಡಿಸಿತು. ನಟನಾಗಿ ಸಿಗುವ ಸ್ಟಾರ್ಡಮ್ ಬರುತ್ತೆ, ಹೋಗುತ್ತೆ. ಆದರೆ ಆಧ್ಯಾತ್ಮಿಕ ಸ್ಟಾರ್ಡಮ್ ಎನ್ನುವುದು ಅತ್ಯುನ್ನತವಾದುದು. ಸಾವು ಸಂಭವಿಸಿದ ನಂತರವೂ ಅಂತಹ ಸ್ಟಾರ್ಡಮ್ ಶಾಶ್ವತವಾಗಿ ಉಳಿಯುತ್ತದೆ, ಅಷ್ಟೇ ಅಲ್ಲದೆ ಅದು ಬೆಳೆಯುತ್ತಾ ಹೋಗುತ್ತದೆ" ಎಂದು ರಜನಿಕಾಂತ್ ಹೇಳಿದ್ದಾರೆ.