Vijay Sethupathi: ಕಾರ್ಮಿಕರ ಮನೆ ನಿರ್ಮಾಣಕ್ಕೆ 1.30 ಕೋಟಿ ರೂ. ದೇಣಿಗೆ ನೀಡಿದ ವಿಜಯ್ ಸೇತುಪತಿ
ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಅವರು ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘಕ್ಕೆ ಬರೋಬ್ಬರಿ 1.30 ಕೋಟಿ ರೂ. ಸಂಭಾವನೆ ನೀಡಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘದ ಸದಸ್ಯರ ಮನೆ ನಿರ್ಮಾಣಕ್ಕೆ ಈ ದೇಣಿಗೆ ಹಣವನ್ನು ವಿನಿಯೋಗಿಸಲಾಗುತ್ತದೆ.

ವಿಜಯ್ ಸೇತುಪತಿ.

ಚೆನ್ನೈ: ಪ್ರತಿಭಾವಂತ ಕಲಾವಿದರಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ (Vijay Sethupathi) ಕೂಡ ಒಬ್ಬರು. ಆನ್ಸ್ಕ್ರೀನ್ ಮಾತ್ರವಲ್ಲ ಆಫ್ಸ್ಕ್ರೀನ್ನಲ್ಲಿಯೂ ತಾವು ರಿಯಲ್ ಹೀರೋ ಎನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘ (South Indian Movie Workers Union)ಕ್ಕೆ ಅವರು ಬರೋಬ್ಬರಿ 1.30 ಕೋಟಿ ರೂ. ಸಂಭಾವನೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಚಾರ ಸಿನಿಪ್ರಿಯರ ಗಮನ ಸೆಳೆದಿದೆ.
ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘದ ಸದಸ್ಯರ ಮನೆ ನಿರ್ಮಾಣಕ್ಕಾಗಿ ವಿಜಯ್ ಸೇತುಪತಿ ದೇಣಿಗೆ ಹಸ್ತಾಂತರಿಸಿದ್ದಾರೆ. ಚಿತ್ರರಂಗದ ಬೆನ್ನುಲುಬಾಗಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರು, ತಂತ್ರಜ್ಞರಿಗೆ ನೆರವಾಗಲು ಈ ದೇಣಿಗೆಯನ್ನು ಬಳಸಲಾಗುತ್ತದೆ. 1.30 ಕೋಟಿ ರೂ. ಮೊತ್ತವನ್ನು ಅವರು ಚೆನ್ನೈಯ ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ(FEFSI)ಕ್ಕೆ ಹಸ್ತಾಂತರಿಸಿದ್ದಾರೆ.
ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿ ವಿಜಯ್ ಸೇತುಪತಿ ಅವರು 1.30 ಕೋಟಿ ರೂ. ಹಣವನ್ನು ಯೂನಿಯನ್ಗೆ ನೀಡಿದ್ದು, ಆ ಅಪಾರ್ಟ್ಮೆಂಟ್ಗೆ ವಿಜಯ್ ಸೇತುಪತಿ ಅವರ ಹೆಸರು ಇಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಬರೆದುಕೊಂಡಿದ್ದು, ʼʼಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅವರು ಕಾರ್ಮಿಕರ ಮನೆ ನಿರ್ಮಾಣಕ್ಕಾಗಿ ಎಫ್ಇಎಫ್ಎಸ್ಐಗೆ 1.30 ಕೋಟಿ ರೂ. ನೀಡಿದ್ದಾರೆ. ಈ ಅಪಾರ್ಟ್ಮೆಂಟ್ಗೆ ವಿಜಯ್ ಸೇತುಪತಿ ಟವರ್ ಎಂದು ಹೆಸರಿಡಲಾಗುತ್ತದೆʼʼ ಎಂದಿದ್ದಾರೆ.
Makkal Selvan @VijaySethuOffl has donated ₹ 1.30 Crs to #FEFSI Movie workers union to build houses.. 👏
— Ramesh Bala (@rameshlaus) February 22, 2025
The apartment tower will be called " Vijay Sethupathi Towers"
ನೆಟ್ಟಿಗರಿಂದ ಮೆಚ್ಚುಗೆ
ಸದ್ಯ ವಿಜಯ್ ಸೇತುಪತಿ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಅವರ ನಡೆಯನ್ನು ಹೊಗಳುತ್ತಿದ್ದಾರೆ. ʼʼಅದ್ಭುತ ಕಾರ್ಯʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼವಿಜಯ್ ಅವರಿಂದ ಮಾದರಿ ನಡೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ 3 ಚಿತ್ರಗಳು ತೆರೆ ಕಂಡಿದ್ದವು. ಶ್ರೀರಾಮ್ ರಾಘವನ್ ಅವರ ʼಮೆರ್ರಿ ಕಿಸ್ಮಸ್ʼನಲ್ಲಿ ಮೊದಲ ಬಾರಿಗೆ ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ತೆರೆ ಹಂಚಿಕೊಂಡಿದ್ದರು. ಆದರೆ ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದಾದ ಬಳಿಕ ತೆರೆಕಂಡ ತಮಿಳಿನ ʼಮಹಾರಾಜʼ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಅದರಲ್ಲಿಯೂ ವಿಜಯ್ ಸೇತುಪತಿ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ವರ್ಷಾಂತ್ಯದಲ್ಲಿ ತೆರೆಕಂಡ ʼವಿಡುತಲೈ 2ʼ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿತ್ತು.
ಈ ಸುದ್ದಿಯನ್ನೂ ಓದಿ: Director S Shankar: ಖ್ಯಾತ ನಿರ್ದೇಶಕ ಎಸ್. ಶಂಕರ್ ಮೇಲೆ ಇಡಿ ರೇಡ್! ಏನಿದು ಪ್ರಕರಣ?
ವಿಜಯ್ ಸೇತುಪತಿ ಮುಂದಿನ ಪ್ರಾಜೆಕ್ಟ್
ವಿಜಯ್ ಸೇತುಪತಿ ಸದ್ಯ ʼಗಾಂಧಿ ಟಾಕ್ಸ್ʼ, ʼಏಸ್ʼ, ಮತ್ತು ʼಟ್ರೈನ್ʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ʼಗಾಂಧಿ ಟಾಕ್ಸ್ʼ ಮೂಕಿ ಚಿತ್ರವಾಗಿದೆ. ಇನ್ನು ʼಏಸ್ʼನಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ.