ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: ಬ್ರಹ್ಮ ಮುಹೂರ್ತದಲ್ಲೇ ‘ರಾಮಾಯಣ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದೇಕೆ? ಏನಿದರ ವಿಶೇಷತೆ?

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೇಲರ್ ಅನ್ನು ಬೆಳಗಿನ ಜಾವ 4.15 ರ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗಿದೆ. ಸಾತ್ವಿಕ ಗುಣದಿಂದ ಕೂಡಿರುವ ಈ ಪವಿತ್ರ ಸಮಯವು ದೈವಿಕ ಆರಂಭಕ್ಕೆ ಸಾಕ್ಷಿಯಾಗಿದೆ.

ಬೆಳಗಿನಜಾವ 4.15 ಗಂಟೆಗೆ ‘ರಾಮಾಯಣ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದೇಕೆ?

-

Avinash GR
Avinash GR Jul 30, 2026 12:28 PM

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ಈ ಟ್ರೇಲರ್‌ ಅನ್ನು ರಿಲೀಸ್ ಮಾಡಲು ನಿರ್ಮಾಪಕರು ಅತ್ಯಂತ ಅಪರೂಪದ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಾಮಾನ್ಯ 'ಪ್ರೈಮ್-ಟೈಮ್' ಬಿಡುಗಡೆಯ ಬದಲಿಗೆ, ಹಿಂದೂ ಸಂಪ್ರದಾಯದಲ್ಲಿ ದಿನದ ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾದ ಬ್ರಹ್ಮ ಮುಹೂರ್ತದಲ್ಲಿ, ಅಂದರೆ ಬೆಳಗಿನ ಜಾವ 4:15 ಕ್ಕೆ ಟ್ರೇಲರ್ ಅನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿತ್ತು.

ಬ್ರಾಹ್ಮೀ ಮುಹೂರ್ತವೇ ಏಕೆ?

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಟ್ರೇಲರ್ ಅನ್ನು ವಿಶ್ವಾದ್ಯಂತ ಬ್ರಹ್ಮ ಮುಹೂರ್ತದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದರು. ಈ ನಿರ್ಧಾರವು ತಕ್ಷಣವೇ ಅಭಿಮಾನಿಗಳ ಗಮನ ಸೆಳೆಯಿತು. ಏಕೆಂದರೆ, ಈ ಸಮಯಕ್ಕೆ ವಿಶೇಷ ಆಧ್ಯಾತ್ಮಿಕ ಪ್ರಾಮುಖ್ಯತೆಯಿದೆ. ಬ್ರಹ್ಮ ಮುಹೂರ್ತ ಎಂಬುದು ಹಿಂದೂ ಸಂಪ್ರದಾಯದಲ್ಲಿ ಒಂದು ಪ್ರಮುಖ ಪರಿಕಲ್ಪನೆಯಾಗಿದ್ದು, ಇದು ಸೂರ್ಯೋದಯಕ್ಕಿಂತ ಸುಮಾರು 1 ಗಂಟೆ 36 ನಿಮಿಷಗಳ ಮುಂಚಿತವಾಗಿ ಆರಂಭವಾಗುತ್ತದೆ. ನಿರ್ದಿಷ್ಟ ಪ್ರದೇಶದ ಸೂರ್ಯೋದಯಕ್ಕೆ ಅನುಗುಣವಾಗಿ ಸಮಯವು ಕೊಂಚ ಬದಲಾಗುತ್ತದೆಯಾದರೂ, ಬ್ರಾಹ್ಮೀ ಮುಹೂರ್ತದ ಅವಧಿಯು ಸುಮಾರು 48 ನಿಮಿಷಗಳ ಕಾಲ ಇರುತ್ತದೆ.

ಸಾತ್ವಿಕ ಗುಣದಿಂದ ಆವೃತವಾಗಿರುತ್ತದೆ

ಹಿಂದೂ ಧರ್ಮದ ಪ್ರಕಾರ, ಬ್ರಹ್ಮ ಮುಹೂರ್ತವು ಪವಿತ್ರತೆ ಮತ್ತು ಮಾನಸಿಕ ಸಮತೋಲನದ ಸ್ಥಿತಿಯಾದ 'ಸಾತ್ವಿಕ' ಗುಣದಿಂದ ಆವೃತವಾಗಿರುತ್ತದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ ಮತ್ತು ಮನಸ್ಸನ್ನು ಭಂಗಗೊಳಿಸುವ ಅಂಶಗಳು ತೀರಾ ಕಡಿಮೆಯಿರುತ್ತವೆ. ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಂಕೇತಿಕ ದೃಷ್ಟಿಕೋನದಿಂದ ನೋಡಿದರೂ, ಬ್ರಹ್ಮ ಮುಹೂರ್ತದಲ್ಲಿ ಟ್ರೇಲರ್ ಬಿಡುಗಡೆ ಮಾಡಿರುವುದು ಅದರ ಆರಂಭಕ್ಕೆ ಮತ್ತೊಂದು ಹಂತದ ಅರ್ಥವನ್ನು ನೀಡುತ್ತದೆ. "ಯಾವುದೇ ಶುಭ ಕಾರ್ಯದ ಆರಂಭದಷ್ಟೇ, ಆ ಆರಂಭದ ಸಮಯವೂ ಅಷ್ಟೇ ಪ್ರಮುಖವಾಗಿರುತ್ತದೆ" ಎಂಬ ಭಾರತೀಯ ಪರಂಪರೆಯನ್ನು ಇದು ಜನರಿಗೆ ನೆನಪಿಸುತ್ತದೆ.

ರಾಮಾಯಣವು ಧರ್ಮ, ಸತ್ಯ, ಶಿಸ್ತು ಮತ್ತು ಕರುಣೆಯ ಸಾಕಾರಮೂರ್ತಿಯಾಗಿರುವ ಶ್ರೀರಾಮನ ಕಥೆಯನ್ನು ಹೇಳುತ್ತದೆ. ಟ್ರೇಲರ್ ಬಿಡುಗಡೆಗೆ ಬ್ರಹ್ಮ ಮುಹೂರ್ತವನ್ನು ಆಯ್ಕೆ ಮಾಡಿರುವುದು, ಈ ಚಿತ್ರದ ಪಯಣವು ದೈವಿಕತೆ ಮತ್ತು ಆಶೀರ್ವಾದಗಳೊಂದಿಗೆ ಸಂಪರ್ಕ ಹೊಂದಿದೆ ಎಂಬುದನ್ನು ಸೂಚಿಸುತ್ತದೆ.

ನಿತೇಶ್‌ ತಿವಾರಿ ನಿರ್ದೇಶನದ ಸಿನಿಮಾ

ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಈ ಟ್ರೇಲರ್ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ರಿಲೀಸ್‌ ಆಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೋಸ್', 'DNEG' ಮತ್ತು 'ರಾಕಿಂಗ್‌ ಸ್ಟಾರ್‌' ಯಶ್ ಅವರ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ನಿರ್ಮಿಸಿವೆ. ಈ ಚಿತ್ರವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು, ಜಾಗತಿಕ ವಿತರಣೆಯನ್ನು 'ಸೋನಿ ಪಿಕ್ಚರ್ಸ್' ಹಾಗೂ ಉತ್ತರ ಭಾರತದ ವಿತರಣೆಯನ್ನು 'ಧರ್ಮ ಪ್ರೊಡಕ್ಷನ್ಸ್' ವಹಿಸಿಕೊಂಡಿವೆ.

Ramayana Movie: ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?

ರಾಮಾಯಣ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದರ ದಂಡೇ ಇದೆ. ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಯಶ್ ಅವರು ಬಲಶಾಲಿ ರಾವಣನ ಪಾತ್ರದಲ್ಲಿ ನಟಿಸುವುದರ ಜೊತೆಗೆ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮೂಲಕ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ಸೀತಾಮಾತೆಯಾಗಿ ಸಾಯಿ ಪಲ್ಲವಿ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ರಾಜ ದಶರಥನಾಗಿ ಅರುಣ್ ಗೋವಿಲ್, ಕೈಕೇಸಿಯಾಗಿ ನಟಿ ಶೋಭನಾ, ಋಷಿ ವಿಶ್ವಾಮಿತ್ರನಾಗಿ ಅಜಿಂಕ್ಯ ದೇವ್, ಇಂದ್ರದೇವನಾಗಿ ಕುನಾಲ್ ಕಪೂರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿ ನಟಿಸಿದ್ದಾರೆ.

ಎ ಆರ್‌ ರೆಹಮಾನ್‌ ಸಂಗೀತ ನಿರ್ದೇಶನ

ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ವಿಶೇಷವೆಂದರೆ, ಪೂರ್ವ ಮತ್ತು ಪಶ್ಚಿಮದ ಅತಿದೊಡ್ಡ 'ಕೊಲ್ಯಾಬರೇಷನ್' ಎಂಬಂತೆ, ಆಸ್ಕರ್ ಪ್ರಶಸ್ತಿ ವಿಜೇತ ದಿಗ್ಗಜರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ ಖ್ಯಾತಿಯ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

Ramayana: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು! ‘ರಾಮಾಯಣ’ ಬಿಗ್‌ ಅಪ್‌ಡೇಟ್‌

ನಿರ್ಮಾಪಕರು ಹೇಳಿದ್ದೇನು?

ಈ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, "ರಾಮಾಯಣವು ಕೇವಲ ಒಂದು ಮಹಾಕಾವ್ಯವಲ್ಲ; ಅದು ನಮ್ಮ ಜೀವನಶೈಲಿ ಹಾಗೂ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಾವು ರವಾನಿಸುವ ಮೌಲ್ಯಗಳ ಸಂಕೇತ. ಭಾರತದ ಶ್ರೇಷ್ಠ ಕಥೆಗಳನ್ನು ಜಗತ್ತಿನ ಅತಿ ದೊಡ್ಡ ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕು ಎಂಬುದು ನನ್ನ ಕನಸಾಗಿತ್ತು. ಇಂದು ನಮ್ಮಲ್ಲಿ ಶ್ರೇಷ್ಠ ಕಲಾವಿದರು ಹಾಗೂ ಅತ್ಯಾಧುನಿಕ ತಂತ್ರಜ್ಞಾನವಿದ್ದು, ಈ ಕಥೆಯನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಹೆಮ್ಮೆ" ಎಂದಿದ್ದಾರೆ.