ವಿಮಾನ ಅಪಘಾತದ ನಂತರ ಅಜಿತ್ ಪವಾರ್ ಮೃತದೇಹವನ್ನು ಗುರುತಿಸಿದ್ದು ಹೇಗೆ? ಆ ಒಂದು ವಸ್ತು ನೀಡ್ತಾ ಸುಳಿವು?
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ವಿಮಾನವು ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದೆ. ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಜಿತ್ ಪವಾರ್ ಅವರ ಹುಟ್ಟೂರು ಪುಣೆ ಜಿಲ್ಲೆಯ ಬಾರಾಮತಿಗೆ ಹಾರುತ್ತಿತ್ತು.
ಸಂಗ್ರಹ ಚಿತ್ರ -
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ವಿಮಾನವು ( Ajit Pawar Death) ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದ್ದು, ಪವಾರ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಲಿಯರ್ಜೆಟ್ 45XR ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಜಿತ್ ಪವಾರ್ ಅವರ ಹುಟ್ಟೂರು ಪುಣೆ ಜಿಲ್ಲೆಯ ಬಾರಾಮತಿಗೆ ಹಾರುತ್ತಿತ್ತು. ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿದೆ.
ಅಪಘಾತವು ಅತ್ಯಂತ ಭೀಕರವಾಗಿತ್ತು, ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ನಾಲ್ಕು ಬಾರಿ ಸ್ಫೋಟ ಸಂಭವಿಸಿದೆ. ಐದು ದೇಹಗಳು ತೀವ್ರವಾಗಿ ಸುಟ್ಟುಹೋಗಿದ್ದವು, ತಕ್ಷಣ ಗುರುತಿಸುವುದು ಕಷ್ಟಕರವಾಗಿತ್ತು. ಆದಾಗ್ಯೂ, ಅಜಿತ್ ಪವಾರ್ ಅವರ ದೇಹವನ್ನು ಅವರು ನಿಯಮಿತವಾಗಿ ಧರಿಸುತ್ತಿದ್ದ ವಾಚ್ನಿಂದಾಗಿ ಗುರುತಿಸಲಾಗಿದೆ. ಆರಂಭದಲ್ಲಿ ಡಿಎನ್ಎ ಮಾದರಿಗಳನ್ನು ಒದಗಿಸಲು ಕೇಳಲಾಗಿತ್ತು, ಆದರೆ ಸ್ಥಳದಿಂದ ವಶಪಡಿಸಿಕೊಂಡ ವೈಯಕ್ತಿಕ ವಸ್ತುಗಳ ಮೂಲಕ ಗುರುತನ್ನು ದೃಢಪಡಿಸಲಾಯಿತು.
ಈಗಾಗಲೇ ಅಪಘಾತಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ. ತಾಂತ್ರಿಕ ವೈಫಲ್ಯ, ಹವಾಮಾನ ಪರಿಸ್ಥಿತಿಗಳು ಮತ್ತು ಪೈಲಟ್ ದೋಷ ಸೇರಿದಂತೆ ಸಂಭವನೀಯ ಕಾರಣಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿಮಾನದ ಕಪ್ಪು ಪೆಟ್ಟಿಗೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಅವರು ಬಾರಾಮತಿಗೆ ತೆರಳುವ ನಿರೀಕ್ಷೆಯಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಫಡ್ನವೀಸ್, ಅಜಿತ್ ಪವಾರ್ ಅವರನ್ನು ಸರಳತೆ ಮತ್ತು ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾದ ನಾಯಕ. ಅವರ ನಿಧನವು ಮಹಾರಾಷ್ಟ್ರಕ್ಕೆ ತುಂಬಲಾಗದ ನಷ್ಟ ಮತ್ತು ತಮಗೆ ವೈಯಕ್ತಿಕ ನಷ್ಟವಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನ
ಬಾರಾಮತಿ ಪ್ರದೇಶದಲ್ಲಿ ಭಾರೀ ಮಂಜಿನಿಂದಾಗಿ ಕುಸಿದ ಗೋಚರತೆ ಮಟ್ಟವು ಅಪಘಾತಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ಸೂಚಿಸಿವೆ. ದಟ್ಟವಾದ ಮಂಜು ವಿಮಾನವು ತನ್ನ ಹಾದಿಯನ್ನು ಕಾಯ್ದುಕೊಳ್ಳಲು ಅಡ್ಡಿಯಾಗಿದೆ ಎಂದು ನಂಬಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ವಿಮಾನವು ನಿಯಂತ್ರಣ ಕಳೆದುಕೊಂಡು ಬಂಡೆಗೆ ಡಿಕ್ಕಿ ಹೊಡೆದಿದ್ದು, ದುರಂತಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ. ಸದ್ಯ ಈ ಕುರಿತು ತನಿಖೆ ನಡೆಸಲಾಗುತ್ತಿದೆ.