Indian Railways: ರೈಲ್ವೇ ಪ್ರಯಾಣಿಕರಿಗೆ ಗುಡ್ನ್ಯೂಸ್! ಟ್ರೈನ್ನಲ್ಲೇ ಲಭ್ಯವಿರುತ್ತೆ ATM ಸೌಲಭ್ಯ
ಪ್ರತಿನಿತ್ಯ ಲಕ್ಷಾಂತರ ಮಂದಿ ರೈಲು ಪ್ರಯಾಣ ಮಾಡುತ್ತಾರೆ. ಇವರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯು ಹೊಸಹೊಸ ಯೋಜನೆಗಳನ್ನು ನಿರಂತರ ಪರಿಚಯಿಸುತ್ತಲೇ ಇದೆ. ಇದೀಗ ಮೊದಲ ಬಾರಿಗೆ ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನೊಳಗೆ ಎಟಿಎಂ ಅನ್ನು ಪರಿಚಯಿಸಿದೆ. ಇದರಿಂದ ಹಣಕ್ಕಾಗಿ ಪ್ರಯಾಣಿಕರು ರೈಲು ನಿಲ್ದಾಣ ತಲುಪುವರೆಗೂ ಕಾಯಬೇಕಿಲ್ಲ.


ನವದೆಹಲಿ: ಪ್ರತಿನಿತ್ಯ ಲಕ್ಷಾಂತರ ಮಂದಿ ರೈಲು ಪ್ರಯಾಣ ಮಾಡುತ್ತಾರೆ. ಇವರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯು (Indian Railways) ಹೊಸಹೊಸ ಯೋಜನೆಗಳನ್ನು ನಿರಂತರ ಪರಿಚಯಿಸುತ್ತಲೇ ಇದೆ. ಇದೀಗ ಮೊದಲ ಬಾರಿಗೆ ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನೊಳಗೆ (Panchavati Express) ಎಟಿಎಂ (ATM on train) ಅನ್ನು ಪರಿಚಯಿಸಿದೆ. ಇದರಿಂದ ಹಣಕ್ಕಾಗಿ ಪ್ರಯಾಣಿಕರು ರೈಲು ನಿಲ್ದಾಣ ತಲುಪುವರೆಗೂ ಕಾಯಬೇಕಿಲ್ಲ. ರೈಲು ಚಲಿಸುತ್ತಿರುವಾಗಲೇ ತಮಗೆ ಅಗತ್ಯವಿರುವಷ್ಟು ನಗದನ್ನು ಪಡೆಯಬಹುದು. ಈ ಯೋಜನೆಯನ್ನು ಇದೇ ಮೊದಲ ಬಾರಿಗೆ ಮುಂಬೈನಲ್ಲಿ (Mumbai) ಪರಿಚಯಿಸಲಾಗಿದೆ.
ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡಲು ಪ್ರಯತ್ನಿಸುತ್ತಿರುವ ರೈಲ್ವೆಯಲ್ಲಿ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್, ರೈಲು ಸಮಯ ಪರಿಶೀಲನೆ ಸೇರಿದಂತೆ ವಿವಿಧ ಮಾಹಿತಿಗಳಿಗೆ ಒಂದೇ ಆ್ಯಪ್ ಅನ್ನು ಪರಿಚಯಿಸಲಾಗಿದೆ. ಈ ನಿಟ್ಟಿನಲ್ಲಿ ಈಗ ಹೊಸ ಸೇರ್ಪಡೆ ಎಟಿಎಂ ಮಶಿನ್ ಸೌಲಭ್ಯ.
ಮುಂಬೈ- ಮನ್ಮಾಡ್ ಪಂಚವಟಿ ಎಕ್ಸ್ಪ್ರೆಸ್ನಲ್ಲಿ ( Panchavati Express) ಪ್ರಯಾಣಿಕರು ಇನ್ನು ಮುಂದೆ ಹಣವನ್ನು ಹಿಂಪಡೆಯಲು ರೈಲು ನಿಲ್ದಾಣ ಬರುವವರೆಗೆ ಕಾಯಬೇಕಿಲ್ಲ. ಚಲಿಸುವ ರೈಲಿನಲ್ಲೇ ನಗದು ಪಡೆಯಬಹುದು. ಪ್ರಯಾಣಿಕರಿಗೆ ಪ್ರಯಾಣವನ್ನು ಅನುಕೂಲಕರವಾಗಿಸಲು ಸೆಂಟ್ರಲ್ ರೈಲ್ವೆ (ಸಿಆರ್) ಇದನ್ನು ಪರಿಚಯಿಸಿದೆ. ಖಾಸಗಿ ಬ್ಯಾಂಕಿನಿಂದ ಒದಗಿಸಲಾದ ಎಟಿಎಂ ಅನ್ನು ಹವಾನಿಯಂತ್ರಿತ ಕೋಚ್ನಲ್ಲಿ ಇರಿಸಲಾಗಿದೆ. ಕೋಚ್ನ ಹಿಂಭಾಗದಲ್ಲಿರುವ ಸಣ್ಣ ಕ್ಯೂಬಿಕಲ್ನಲ್ಲಿ ಸ್ಥಾಪಿಸಲಾಗಿದೆ. ಆದರ ಸುರಕ್ಷತೆ ಮತ್ತು ರೈಲು ಚಲಿಸುವಾಗಲೂ ಅದು ಕಾರ್ಯನಿರ್ವಹಿಸಲು ಕ್ಯೂಬಿಕಲ್ ಶಟರ್ ಬಾಗಿಲನ್ನುಅಳವಡಿಸಲಾಗಿದೆ.
ಇದೀಗ ಪ್ರಾಯೋಗಿಕವಾಗಿ ಮುಂಬೈ- ಮನ್ಮಾಡ್ ಪಂಚವಟಿ ರೈಲಿನಲ್ಲಿ ಎಟಿಎಂ ಮೆಷಿನ್ ಸ್ಥಾಪಿಸಲಾಗಿದ್ದು, ಇದು ಯಶಸ್ವಿಯಾದರೆ ಮುಂದೆ ಹಂತ ಹಂತವಾಗಿ ಇತರ ಪ್ರಮುಖ ರೈಲುಗಳಲ್ಲಿಯೂ ಅಳವಡಿಸಲಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ, ಪಂಚವಟಿ ಎಕ್ಸ್ಪ್ರೆಸ್ನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಅನ್ನು ಸ್ಥಾಪಿಸಲಾಗಿದೆ. ಇದರ ಪ್ರಯೋಜನದ ಆಧಾರದ ಮೇಲೆ ಮುಂದೆ ಎನ್ಎಫ್ಆರ್ (ನ್ಯೂ ಫ್ರಾಂಟಿಯರ್ ರೈಲ್ವೇಸ್) ಯೋಜನೆಯಡಿಯಲ್ಲಿ ಇತರ ರೈಲುಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಟಿಎಂ ಸ್ಥಾಪನೆಗೆ ಮನ್ಮಾಡ್ ರೈಲಿನ ಕೋಚ್ ಅನ್ನು ಮಾರ್ಪಡಿಸಲಾಗಿದೆ. ರೈಲ್ವೆ ಅಧಿಕಾರಿಗಳು ಈಗ ಅದರ ಕಾರ್ಯಕ್ಷಮತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದಾರಿಯುದ್ದಕ್ಕೂ ನೆಟ್ವರ್ಕ್ ಸಂಪರ್ಕ ಸ್ಥಿರವಾಗಿದೆ. ಪ್ರಯಾಣಿಕರು ಯಾವುದೇ ಸಮಸ್ಯೆಯಿಲ್ಲದೆ ಹಣವನ್ನು ಹಿಂಪಡೆಯಲು ಇದು ಅವಕಾಶ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Caste Census: ಜಾತಿ ಗಣತಿ ವರದಿ: ಇಂದು ಸಚಿವ ಸಂಪುಟ ಸಭೆ, ಚಕಮಕಿ ನಿರೀಕ್ಷೆ
ಪಂಚವಟಿ ಎಕ್ಸ್ಪ್ರೆಸ್ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ನಾಸಿಕ್ನ ಮನ್ಮಾಡ್ ಜಂಕ್ಷನ್ ನಡುವೆ ಪ್ರತಿದಿನ ಪ್ರಯಾಣಿಸುತ್ತದೆ. ಇದರ ಪ್ರಯಾಣದ ಅವಧಿ ಒಟ್ಟು ಸುಮಾರು 4.35 ಗಂಟೆಯಾಗಿದೆ. ಇದರಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಭಾರತೀಯ ರೈಲ್ವೇ ಜಂಟಿಯಾಗಿ ಎಟಿಎಂ ಸೌಲಭ್ಯವನ್ನು ಕಲ್ಪಿಸಿದೆ.
ಮುಂಬೈ- ಮನ್ಮಾಡ್ ರೈಲಿನ ಇಗಪುರಿ ಹಾಗೂ ಕಸಾರ ನಡುವೆ ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿದೆ. ಈ ವೇಳೆಯಲ್ಲಿ ಮತ್ತು ರೈಲು ಸುರಂಗ ಮಾರ್ಗದ ಮೂಲಕ ಸಾಗುವಾಗ ಎಟಿಎಂ ಮೂಲಕ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ನೆಟ್ವರ್ಕ್ ಸಮಸ್ಯೆಯಿಂದ ತಾಂತ್ರಿಕ ಸಮಸ್ಸೆ ಎದುರಾಗುತ್ತಿರುವುದನ್ನು ರೈಲು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.