ಬಿಜೆಪಿ ಶಾಸಕರ ಇನ್ನೋವಾ ಕಾರ್ ತೊಳೆದ ಅಗ್ನಿಶಾಮಕ ದಳ ಸಿಬ್ಬಂದಿ: ವಿಡಿಯೊ ವೈರಲ್, ಕಾಂಗ್ರೆಸ್ ವಾಗ್ದಾಳಿ
MLA's Innova Washed by Fire Department: ಮಧ್ಯ ಪ್ರದೇಶದ ಬಿಜೆಪಿ ಶಾಸಕ ರಾಮ್ನಿವಾಸ್ ಶಾ ಅವರ ಟೊಯೋಟಾ ಇನ್ನೋವಾ ಕಾರನ್ನು ತೊಳೆಯಲು ಅಗ್ನಿಶಾಮಕ ದಳದ ವಾಹನ ಬಳಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜತೆಗೆ ಇದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಮಧ್ಯ ಪ್ರದೇಶದಲ್ಲಿ ಬಿಜೆಪಿ ಶಾಸಕರ ಇನ್ನೋವಾ ಕಾರನ್ನು ತೊಳೆದ ಅಗ್ನಿಶಾಮಕ ದಳದ ಸಿಬ್ಬಂದಿ -
ಭೋಪಾಲ್, ಆ. 26: ಬಿಜೆಪಿ ಶಾಸಕ ರಾಮ್ನಿವಾಸ್ ಶಾ ಅವರ ಸರ್ಕಾರಿ ನಿವಾಸದ ಹೊರಗೆ, ಅವರ ಟೊಯೋಟಾ ಇನ್ನೋವಾ ಕಾರನ್ನು ತೊಳೆಯಲು ಅಗ್ನಿಶಾಮಕ ದಳದ ವಾಹನವನ್ನು ಬಳಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮಧ್ಯ ಪ್ರದೇಶದ (Madhya Pradesh) ಸಿಂಗ್ರೌಲಿಯಲ್ಲಿ ಘಟನೆ ನಡೆದಿದೆ. ಇದು ವ್ಯಾಪಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ತನ್ನ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದರ ಬಗ್ಗೆ ತನಗೆ ತಿಳಿದಿಲ್ಲ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ಟೀಕಿಸಿವೆ. ವಿಡಿಯೊದಲ್ಲಿ, ಸಿಂಗ್ರೌಲಿ ಜಿಲ್ಲೆಯಲ್ಲಿರುವ ಶಾ ಅವರ ಸರ್ಕಾರಿ ನಿವಾಸದ ಹೊರಗೆ ಅವರ ಇನ್ನೋವಾ ಕಾರನ್ನು ತೊಳೆಯಲು ಮಹಾನಗರ ಪಾಲಿಕೆ ಸಿಬ್ಬಂದಿ ಅಗ್ನಿಶಾಮಕ ದಳದ ವಾಹನದಿಂದ ನೀರನ್ನು ಬಳಸುತ್ತಿರುವುದನ್ನು ತೋರಿಸಲಾಗಿದೆ. ದೃಶ್ಯಗಳಲ್ಲಿ, ಮೂವರು ಸಿಬ್ಬಂದಿ ಅಗ್ನಿಶಾಮಕ ಯಂತ್ರಕ್ಕೆ ಸಂಪರ್ಕ ಹೊಂದಿರುವ ಪೈಪ್ ಮೂಲಕ ವಾಹನದ ಮೇಲೆ ನೀರು ಸಿಂಪಡಿಸುವುದನ್ನು ಕಾಣಬಹುದು.
ಇದು ಕೂಡಲೇ ರಾಜಕೀಯ ವಿವಾದವನ್ನು ಹುಟ್ಟುಹಾಕಿತು ಸರ್ಕಾರಿ ಸಂಪನ್ಮೂಲಗಳನ್ನು ಖಾಸಗಿ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದರು. ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತೆ ಸವಿತಾ ಪ್ರಧಾನ್ ಪ್ರತಿಕ್ರಿಯಿಸಿ ಘಟನೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.
ವಿಡಿಯೊ ವೀಕ್ಷಿಸಿ:
Video: Fire Brigade Washing BJP MLA's Innova Triggers Row In Madhya Pradesh
— NDTV (@ndtv) August 26, 2026
Read more: https://t.co/EbAD0znXBl pic.twitter.com/lEcoSUJx5J
ಮಧ್ಯ ಪ್ರದೇಶದ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಗತ್ಯವಿದ್ದಾಗ, ಅಗ್ನಿಶಾಮಕ ದಳಗಳು ಸಾಮಾನ್ಯ ಜನರ ಮನೆಗಳಿಗೆ ಬೆಂಕಿಯನ್ನು ನಂದಿಸಲು ವಿಫಲವಾಗುತ್ತವೆ. ಆದರೆ ಸಿಂಗ್ರೌಲಿಯಲ್ಲಿ, ಬಿಜೆಪಿ ಶಾಸಕರು ಅಗ್ನಿಶಾಮಕ ದಳವನ್ನು ತಮ್ಮ ಖಾಸಗಿ ವಾಹನದ ತೊಳೆಯುವ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು.
ವೈರಲ್ ವಿಡಿಯೊ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕ ಶಾ, ಆರಂಭದಲ್ಲಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಶಾಸಕರೇ ಕಾರು ತೊಳೆಯಿಸಿದ್ದಾರೆಯೇ ಎಂಬುದನ್ನು ಜನರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ನಂತರ ಅವರು ಸಿಂಗ್ರೌಲಿಯಲ್ಲಿ ಕಾಂಗ್ರೆಸ್ನ ಚುನಾವಣಾ ಸಾಧನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಮೇಲೆ ವಾಕ್ಪ್ರಹಾರ ನಡೆಸಿದರು.
ತುರ್ತು ಸೇವೆಗೆಂದು ಇರುವ ಅಗ್ನಿಶಾಮಕ ದಳದ ವಾಹನವನ್ನು, ಕಾರನ್ನು ತೊಳೆಯಲು ಬಳಸುವುದು ಸೂಕ್ತವೇ ಎಂಬ ಮಾಧ್ಯಮದ ಪ್ರಶ್ನೆಗೆ, ಶಾ ಆರೋಪದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಆ ಸಮಯದಲ್ಲಿ ತಾನು ನಿವಾಸದಲ್ಲಿ ಇರಲಿಲ್ಲ. ಆದ್ದರಿಂದ ಏನಾಯಿತು ಎಂದು ತನಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.