ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಣಮಟ್ಟದ ಶಿಕ್ಷಣಕ್ಕೆ ಒತ್ತು, ಬಂಡವಾಳ ಆಕರ್ಷಿಸಲು ಕ್ರಮ...; ನೀತಿ ಆಯೋಗದ ಸಭೆಯಲ್ಲಿ ಕೇಂದ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್‌ ನೀಡಿದ ಸಲಹೆಗಳಿವು

CM DK Shivakumar: ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕರ್ನಾಟಕದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಮಹತ್ವದ ತೀರ್ಮಾನಗಳನ್ನು ವಿವರಿಸಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದ್ದಾರೆ.

ನೀತಿ ಆಯೋಗದ ಸಭೆ; ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್‌ ನೀಡಿದ ಸಲಹೆಗಳೇನು?

ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Jun 11, 2026 10:40 PM

ನವದೆಹಲಿ, ಜೂ. 11: ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ತಂತ್ರಜ್ಞಾನ, ಸಂಶೋಧನೆ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ಪ್ರಗತಿಗೆ ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ನೀತಿ ಆಯೋಗದ ಸಭೆಯಲ್ಲಿ ಸಲಹೆ ನೀಡಿದರು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಅವರು, ಕರ್ನಾಟಕದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಮಹತ್ವದ ತೀರ್ಮಾನಗಳನ್ನು ವಿವರಿಸಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.

ಸಿಎಂ ಡಿ.ಕೆ. ಶಿವಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಮುಖ ಸಲಹೆಗಳು

  • ಖಾಸಗಿ ವಲಯಕ್ಕೆ ಸಮನಾಗಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಒಂದು ಬಾರಿಯ ಮೂಲಸೌಕರ್ಯ ಅನುದಾನ ನೀಡಬೇಕು.
  • ಪೌಷ್ಟಿಕಾಂಶ, ಆರೋಗ್ಯ, ಕಲಿಕೆಯ ಫಲಿತಾಂಶಗಳು, ಕೌಶಲ್ಯ, ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರತೆಯ ಸೂಚಕಗಳಲ್ಲಿನ ಅಳೆಯಬಹುದಾದ ಸುಧಾರಣೆಗಳಿಗಾಗಿ ರಾಜ್ಯಗಳಿಗೆ ಉತ್ತೇಜನ ನೀಡಬೇಕು.
  • ತಂತ್ರಜ್ಞಾನ, ಸಂಶೋಧನೆ ಮತ್ತು ಮಾನವ ಬಂಡವಾಳದಲ್ಲಿ ಹೂಡಿಕೆ ಮಾಡುವ ಮೂಲಕ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳನ್ನು ಎದುರಿಸುವ ವಾತಾವರಣ ನಿರ್ಮಿಸಬೇಕು.
  • ನಿರ್ದಿಷ್ಟ ಸಮಯದೊಳಗೆ ಗ್ರಾಮೀಣ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಗಮನಹರಿಸಲು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಮೂಲಕ ಸಿಎಸ್‌ಆರ್ (CSR) ನಿಯಮ ಜಾರಿಗೊಳಿಸುವುದು.
  • ಸರ್ಕಾರವು ವ್ಯಾಪಾರ ಸುಲಭಗೊಳಿಸುವಿಕೆಯನ್ನು ಖಚಿತಪಡಿಸುತ್ತಿರುವಾಗ, ಉದ್ಯಮಗಳು ಮುಂದಿನ 3 ವರ್ಷಗಳ ಕೌಶಲ್ಯ ಮಾನದಂಡ ಕೇಂದ್ರೀಕೃತ ಉದ್ಯೋಗ ಪೋರ್ಟಲ್ ಮೂಲಕ ಉದ್ಯೋಗದ ಅಗತ್ಯತೆಗಳನ್ನು ಹಂಚಿಕೊಳ್ಳಬೇಕು.
  • ಬೆಂಗಳೂರನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಗರ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯ ಕೇಂದ್ರಗಳನ್ನು ಬಲಪಡಿಸುವುದು.
  • ಬೆಂಗಳೂರು ಭಾರತದ ಬೆಳವಣಿಗೆಯ ಕೇಂದ್ರವಾಗಿರುವುದರಿಂದ, ಇತರ ರಾಜ್ಯಗಳಿಂದ ಹೆಚ್ಚಿನ ವಲಸೆಯ ಕಾರಣದಿಂದಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ನಿಭಾಯಿಸಲು ಹೆಚ್ಚುವರಿ ಮೂಲ ಸೌಕರ್ಯ ಅನುದಾನವನ್ನು ನೀಡಬೇಕು. ಬೆಂಗಳೂರನ್ನು ನೆರೆಯ ಸ್ಯಾಟಲೈಟ್ ಟೌನ್‌ಗಳಾದ ಕೋಲಾರ, ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ನಗರಗಳಿಗೆ ಸಂಪರ್ಕಿಸಲು ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ಸ್ (RRTS) ಮಂಜೂರು ಮಾಡಬೇಕು.

ಪ್ರಧಾನಿ ನರೇಂದ್ರ ಮೋದಿಗೆ ಬಸವಣ್ಣ ಸ್ಮರಣಿಕೆ ನೀಡಿದ ಡಿ.ಕೆ. ಶಿವಕುಮಾರ್‌

ಈ ಪರಿವರ್ತನೆಯ ಹಾದಿಯಲ್ಲಿ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳೊಂದಿಗೆ ಪಾಲುದಾರಿಕೆ ಹೊಂದಲು ಕರ್ನಾಟಕವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.