ಶೇಕ್ ಹಸೀನಾ ಸುದ್ದಿಗೋಷ್ಠಿಯಿಂದ ಅಂತರ ಕಾಯ್ದುಕೊಂಡ ಭಾರತ; ಆಗಸ್ಟ್ 5ರ ಕಾರ್ಯಕ್ರಮಕ್ಕೂ ನಮಗೂ ಸಂಬಂಧವಿಲ್ಲವೆಂದು ಸ್ಪಷ್ಟನೆ
Sheikh Hasina: ಬಾಂಗ್ಲಾದೇಶದಲ್ಲಿ 2024ರಲ್ಲಿ ವಿದ್ಯಾರ್ಥಿ ದಂಗೆ ಭುಗಿಲೆದ್ದಾಗ ಆಶ್ರಯ ಕೋರಿ ಭಾರತಕ್ಕೆ ಬಂದ ಮಾಜಿ ಪ್ರಧಾನಿ ಶೇಕ್ ಹಸೀನಾ ಆಗಸ್ಟ್ 5ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಇದೀಗ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ (ಸಂಗ್ರಹ ಚಿತ್ರ) -
ದೆಹಲಿ, ಆ. 4: ಬಾಂಗ್ಲಾದೇಶದಲ್ಲಿ 2024ರಲ್ಲಿ ವಿದ್ಯಾರ್ಥಿ ದಂಗೆ ಭುಗಿಲೆದ್ದಾಗ ಆಶ್ರಯ ಕೋರಿ ಭಾರತಕ್ಕೆ ಬಂದ ಮಾಜಿ ಪ್ರಧಾನಿ ಶೇಕ್ ಹಸೀನಾ (Sheikh Hasina) ಈಗಲೂ ನಮ್ಮ ದೇಶದಲ್ಲೇ ಇದ್ದಾರೆ. ಈ ವರ್ಷಾಂತ್ಯದಲ್ಲಿ ಬಾಂಗ್ಲಾದೇಶದಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಈ ಮಧ್ಯೆ ಬುಧವಾರ (ಆಗಸ್ಟ್ 5) ದೆಹಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ. ವರ್ಚುವಲ್ ಆಗಿ ಈ ಸುದ್ದಿಗೋಷ್ಠಿ ನಡೆಯಲ್ಲಿದ್ದು, ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಖಾಸಗಿಯಾಗಿ ಈ ಕಾರ್ಯಕ್ರಮ ನಡೆಯಲ್ಲಿದ್ದು, ಸರ್ಕಾರ ಯಾವುದೇ ರೀತಿಯಲ್ಲಿ ಇದರಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದೆ. ಭಾರತಕ್ಕೆ ಪಲಾಯನ ಮಾಡಿದ ಬಳಿಕ ಶೇಕ್ ಹಸೀನಾ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದ್ದು, ಬುಧವಾರ ಸಂಜೆ ನಡೆಯಲಿದೆ.
ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಕಚೇರಿಯ ಮೂಲಗಳು ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್ ದಿನೇಶ್ ತ್ರಿವೇದಿ ಅವರಿಗೆ ಈ ಸುದ್ದಿಗೋಷ್ಠಿ 2 ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಹಾಳುಮಾಡಬಹುದು ಎಂದು ಹೇಳಿದ ಒಂದು ದಿನದ ನಂತರ, ಭಾರತದ ನಿಲುವನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು. ದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ನಲ್ಲಿ ನಡೆಯಲಿರುವ ಈ ಸುದ್ದಿಗೋಷ್ಠಿ ಸದ್ಯ ಭಾರಿ ಕುತೂಹಲ ಕೆರಳಿಸಿದೆ.
ಶೇಕ್ ಹಸೀನಾ ಸುದ್ದಿಗೋಷ್ಠಿ ಬಗ್ಗೆ ರಣಧೀರ್ ಜೈಸ್ವಾಲ್ ಹೇಳಿಕೆ:
Indian Govt has no involvement in organising Sheikh Hasina’s virtual address at FCC South Asia, or endorses any views at the forum — MEA
— Dhairya Maheshwari (@dhairyam14) August 4, 2026
The Bangladesh government has formally raised the issue with Indian High Commissioner Dinesh Trivedi pic.twitter.com/yiUrNaOde0
"ಈ ಸಂವಾದವನ್ನು ಖಾಸಗಿ ಮಾಧ್ಯಮ ಸಂಸ್ಥೆಯು ಆಯೋಜಿಸುತ್ತಿದೆ. ಕೇಂದ್ರ ಸರ್ಕಾರವು ಇದರಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ವೇದಿಕೆಯಲ್ಲಿ ವ್ಯಕ್ತಪಡಿಸಬಹುದಾದ ಯಾವುದೇ ಅಭಿಪ್ರಾಯಗಳಿಗೆ ಕೇಂದ್ರ ಜವಾಬ್ದಾರಿಯಾಗಿರುವುದಿಲ್ಲ" ಎಂದು ಹೇಳಿದ ಅವರು, "ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲʼʼ ಎಂದು ಒತ್ತಿ ಹೇಳಿದರು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಮತ್ತೊಂದು ಶಾಕ್; ಅವಾಮಿ ಲೀಗ್ ಪಕ್ಷಕ್ಕೆ ನಿಷೇಧ ಹೇರಿದ ಸರ್ಕಾರ
ಬಾಂಗ್ಲಾದೇಶಕ್ಕೆ ಮರಳುವ ಬಗ್ಗೆ ವಿವರ ನೀಡ್ತಾರಾ?
ಡಿಸೆಂಬರ್ ವೇಳೆಗೆ ಭಾರತದಿಂದ ಬಾಂಗ್ಲಾದೇಶಕ್ಕೆ ಮರಳುವ ಶೇಕ್ ಹಸೀನಾ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಜೈಸ್ವಾಲ್ ನಿರಾಕರಿಸಿದರು. ಆಗಸ್ಟ್ 5ರಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ಮಾಧ್ಯಮಗಳೊಂದಿಗಿನ ವರ್ಚುವಲ್ ಸಂವಾದದಲ್ಲಿ ಹಸೀನಾ ಸ್ವದೇಶಕ್ಕೆ ಮರಳುವ ನಿರ್ಧಾರವನ್ನು ವಿವರಿಸುವ ನಿರೀಕ್ಷೆಯಿದೆ. ಈ ಸುದ್ದಿಗೋಷ್ಠಿಯಲ್ಲಿ ಅವರ ಪುತ್ರ ಸಜೀಬ್ ವಾಜೀದ್ ಜಾಯ್ ಮತ್ತು ಅವಾಮಿ ಲೀಗ್ ನಾಯಕರಾದ ಮೊಹಿಬುಲ್ ಹಸನ್ ಚೌಧರಿ ನೌಫೆಲ್, ಶಕೀಬ್ ಅಲ್ ಹಸನ್ ಮತ್ತಿತರರು ಭಾಗವಹಿಸುವ ಸಾಧ್ಯತೆ ಇದೆ.
ಈಗಾಗಲೇ ಬಾಂಗ್ಲಾದೇಶ ಸರ್ಕಾರ ತನ್ನ ದೇಶದ ಮಾಧ್ಯಮಗಳಿಗೆ ಹಸೀನಾ ಅವರ ಹೇಳಿಕೆಗಳನ್ನು ಬಿತ್ತರಿಸದಂತೆ ಎಚ್ಚರಿಕೆ ನೀಡಿದೆ. 2024ರ ಆಗಸ್ಟ್ನಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಆಂದೋಲನದ ಹಿನ್ನೆಲೆಯಲ್ಲಿ ಢಾಕಾದಿಂದ ಪಲಾಯನ ಮಾಡಿದ ನಂತರ 78 ವರ್ಷದ ಹಸೀನಾ ಸದ್ಯ ಭಾರತದಲ್ಲಿ ವಾಸಿಸುತ್ತಿದ್ದಾರೆ.
ʼʼಈ ವರ್ಷ ಸ್ವದೇಶಕ್ಕೆ ಮರಳುತ್ತೇನೆʼʼ: ಭಾರತದಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ
2024ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಅವರ ಸರ್ಕಾರ ಕ್ರೂರವಾಗಿ ಹತ್ತಿಕ್ಕಿದೆ ಎನ್ನುವ ಆರೋಪದ ಮೇಲೆ 2025ರ ನವೆಂಬರ್ನಲ್ಲಿ ಢಾಕಾದ ವಿಶೇಷ ನ್ಯಾಯಮಂಡಳಿಯು ಹಸೀನಾ ಅವರಿಗೆ ಮರಣದಂಡನೆ ವಿಧಿಸಿತ್ತು. ಈ ತೀರ್ಪಿನ ನಂತರ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಈ ವಿಚಾರವನ್ನು ಪರಿಶೀಲಿಸುವುದಾಗಿ ಭಾರತ ಹೇಳಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.