ಸಿಂಧೂ ನದಿ ಜಲ ಒಪ್ಪಂದ: ಮಧ್ಯಸ್ಥಿಕೆ ನ್ಯಾಯಾಲಯದ ಆದೇಶ ತಿರಸ್ಕರಿಸಿದ ಭಾರತ; ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ
Indus Waters Treaty: ಸಿಂಧೂ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ನೀಡಿರುವ ತೀರ್ಪನ್ನು ಭಾರತ ಸರ್ಕಾರ ಅಧಿಕೃತವಾಗಿ ತಿರಸ್ಕರಿಸಿದೆ. ಈ ನ್ಯಾಯಾಲಯದ ರಚನೆಯೇ ಕಾನೂನುಬಾಹಿರವಾಗಿದ್ದು, ಒಪ್ಪಂದವನ್ನು ಅಮಾನತಿನಲ್ಲಿಡುವ ತನ್ನ ನಿರ್ಧಾರ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಆ. 31: ವಿಶ್ವಬ್ಯಾಂಕ್ನಿಂದ ರಚಿಸಲ್ಪಟ್ಟಿದ್ದ ಮಧ್ಯಸ್ಥಿಕೆ ನ್ಯಾಯಾಲಯ (Permanent Court of Arbitration) ಸಿಂಧೂ ನದಿ ಜಲ ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ನೀಡಿರುವ ಮಧ್ಯಂತರ ತೀರ್ಪನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಈ ನ್ಯಾಯಾಲಯವು ಕಾನೂನುಬಾಹಿರವಾಗಿ ರಚನೆಯಾಗಿದ್ದು, ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ತೀರ್ಪು ನೀಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಷ್ಟೇ ಅಲ್ಲದೆ, ಪ್ರಸ್ತುತ ಪರಿಸ್ಥಿಯಲ್ಲಿ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ಧಾರ ಬದಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸಿಂಧೂ ನದಿ ಜಲ ಒಪ್ಪಂದದ ಅಮಾನತು ಮುಂದುವರಿಸಿದ ಭಾರತ:
🔸 #PCA Press Release | The Indus Waters Western Rivers Arbitration (Islamic Republic of Pakistan v. Republic of India) 🔸
— Permanent Court of Arbitration (@PCA_CPA) August 31, 2026
𝗧𝗵𝗲 𝗖𝗼𝘂𝗿𝘁 𝗼𝗳 𝗔𝗿𝗯𝗶𝘁𝗿𝗮𝘁𝗶𝗼𝗻 𝗜𝘀𝘀𝘂𝗲𝘀 𝗔𝘄𝗮𝗿𝗱 𝗼𝗻 𝘁𝗵𝗲 𝗦𝘁𝗮𝘁𝘂𝘀 𝗼𝗳 𝘁𝗵𝗲 𝗜𝗻𝗱𝘂𝘀 𝗪𝗮𝘁𝗲𝗿𝘀 𝗧𝗿𝗲𝗮𝘁𝘆 𝗮𝗻𝗱… pic.twitter.com/0QWASt85Cw
ಈ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ತೀರ್ಪು ನೀಡಲು ಯಾವುದೇ ರೀತಿಯ ಅಧಿಕಾರ ವ್ಯಾಪ್ತಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ʼʼಮಧ್ಯಸ್ಥಿಕೆ ನ್ಯಾಯಾಲಯ ಈಗಿನ ಅಥವಾ ಭವಿಷ್ಯದ ಯಾವುದೇ ತೀರ್ಪುಗಳು ಭಾರತವು ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳುವ ಕಾರ್ಯಗಳ ಮೇಲೆ ಎಂದಿಗೂ ಪ್ರಭಾವ ಬೀರಲಾರವು. ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರವು ಜಾರಿಯಲ್ಲೇ ಇರಲಿದೆʼʼ ಎಂದು ಹೇಳಿದೆ.
ಭಯೋತ್ಪಾದನೆ, ಕಾಶ್ಮೀರ, ಸಿಂಧೂ ನದಿ ನೀರು ಒಪ್ಪಂದ ವಿಚಾರ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ
ಕಳೆದ ವರ್ಷ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಭಾರತೀಯರು ಪ್ರಾಣ ಕಳೆದುಕೊಂಡಿದ್ದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಕೈಗೆತ್ತಿಕೊಂಡಿರು ಕಿಶನ್ ಗಂಗಾ ಮತ್ತು ರಾಟ್ಲೆ ಜಲ ವಿದ್ಯುತ್ ಯೋಜನೆಗಳ ವಿರುದ್ಧ ಪಾಕಿಸ್ತಾನ ಈ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ನ್ಯಾಯಾಲಯದ ಈ ತೀರ್ಪನಿಂದ ಭಾರತದ ಯೋಜನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ ತೀರ್ಪೇನು?
ಯಾವುದೇ ಕಾರಣಗಳೂ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡಲು ಅಥವಾ ರದ್ದುಗೊಳಿಸುವುದು ಸಮರ್ಥನೀಯವಲ್ಲ. ಭಾರತವು ಪಶ್ಚಿಮ ನದಿಗಳ ಮೇಲಿನ ತನ್ನ ಜಲವಿದ್ಯುತ್ ಯೋಜನೆಗಳ ವಿನ್ಯಾಸ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳು ಸೇರಿದಂತೆ ಒಪ್ಪಂದದಡಿ ಇರುವ ತನ್ನ ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಧ್ಯಸ್ಥಿಕೆ ನ್ಯಾಯಾಲಯ ಹೇಳಿದೆ.
ವಿವಾದಕ್ಕೆ ಕಾರಣ ಮತ್ತು ಹಿನ್ನಲೆ
ಸಿಂಧೂ ನದಿ ಜಲ ಒಪ್ಪಂದದಡಿ ಚೇನಾಬ್, ಝೀಲಂ ಮತ್ತು ಸಿಂಧೂ ನದಿಗಳ ನೀರನ್ನು ಬಳಸಿಕೊಂಡು ಭಾರತವು ಜಮ್ಮು ಕಾಶ್ಮೀರದಲ್ಲಿ ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಪಾಕಿಸ್ತಾನ ನಿರಂತರವಾಗಿ ಅಡ್ಡಿಪಡಿಸುತ್ತಾ ಬಂದಿದೆ. ಒಪ್ಪಂದದ ಪ್ರಕಾರ ವಿವಾದಗಳನ್ನು ಬಗೆಹರಿಸಲು ತಟಸ್ಥ ತಜ್ಞರ ನೇಮಕಕ್ಕೆ ಅವಕಾಶವಿದೆ. ಆದರೆ ಪಾಕಿಸ್ತಾನವು ಈ ಹಂತವನ್ನು ಮೀರಿ ನೇರವಾಗಿ ವಿಶ್ವಬ್ಯಾಂಕ್ ಮೂಲಕ ಮಧ್ಯಸ್ಥಿಕೆ ನ್ಯಾಯಾಲಯ ರಚಿಸುವಂತೆ ಒತ್ತಡ ಹೇರಿತ್ತು. ಭಯೋತ್ಪಾದನೆ ನಿಯಂತ್ರಿಸುವ ಮತ್ತು ಒಪ್ಪಂದದ ನಿಯಮಗಳನ್ನು ಮರುಪರಿಶೀಲಿಸಿದ ಹೊರತು ಈ ಒಪ್ಪಂದವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಭಾರತ ಈಗಾಗಲೇ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ. ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಭಾರತ ಈಗಲೂ ತನ್ನ ನಿಲುವು ಮುಂದುವರಿಸಿದೆ.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.