ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhargavastra: ಭಾರತೀಯ ಸೇನೆ ಈಗ ಪರಶುರಾಮನಷ್ಟೇ ಬಲಿಷ್ಠ; ಡ್ರೋನ್‌ ದಾಳಿ ತಡೆಗೆ ಸಜ್ಜಾಯ್ತು ಭಾರ್ಗವಾಸ್ತ್ರ

ಇದೀಗ ಭಾರತ ಡ್ರೋನ್‌ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದು, ಪ್ರಯೋಗ ಯಶಸ್ವಿಯಾಗಿದೆ. ಈ ಕೌಂಟರ್ ಡ್ರೋನ್ ವ್ಯವಸ್ಥೆಗೆ ಭಾರ್ಗವಾಸ್ತ್ರ ಎನ್ನುವ ಅನ್ವರ್ಥ ಹೆಸರನ್ನು ಇಡಲಾಗಿದೆ. ಭಾರ್ಗವಾಸ್ತ್ರ ಭಾರತೀಯ ಸೇನೆಯ ಪ್ರಮುಖ ಆಯುಧವಾಗಲಿದ್ದು, ಶತ್ರುಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಿದೆ. ಈ ಕುರಿತಾದ ವಿವರ ಇಲ್ಲಿದೆ.

ಡ್ರೋನ್‌ ದಾಳಿ ತಡೆಗೆ ಸಜ್ಜಾಯ್ತು ಭಾರತದ ಭಾರ್ಗವಾಸ್ತ್ರ

Profile Ramesh B May 14, 2025 6:05 PM

ಹೊಸದಿಲ್ಲಿ: ಪುರಾಣದಲ್ಲಿ ಬರುವ ಪರಶುರಾಮ ವಿಷ್ಣುವಿನ 6ನೇ ಅವತಾರ. ಹುಟ್ಟುತ್ತಲೇ ಪರಾಕ್ರಮಿಯಾಗಿದ್ದ ಪರಶುರಾಮ ಕಠಿಣ ತಪಸ್ಸು ಮಾಡಿ ಪಡೆದ ಆಯುಧವೇ ಕೊಡಲಿ. ಈ ದೈವಿಕ ಕೊಡಲಿಗೆ ಭಾರ್ಗವಾಸ್ತ್ರ ಎಂದು ಹೆಸರು. ಇದು ಅತ್ಯಂತ ಶಕ್ತಿಶಾಲಿ ಆಯುಧ ಎನಿಸಿಕೊಂಡಿದೆ. ಇದೀಗ ಭಾರತ ಡ್ರೋನ್‌ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದು, ಪ್ರಯೋಗ ಯಶಸ್ವಿಯಾಗಿದೆ. ಈ ಕೌಂಟರ್ ಡ್ರೋನ್ ವ್ಯವಸ್ಥೆಗೆ ಭಾರ್ಗವಾಸ್ತ್ರ ಎನ್ನುವ ಅನ್ವರ್ಥ ಹೆಸರನ್ನು ಇಡಲಾಗಿದೆ. ಭಾರ್ಗವಾಸ್ತ್ರ ಭಾರತೀಯ ಸೇನೆಯ ಪ್ರಮುಖ ಆಯುಧವಾಗಲಿದ್ದು, ಶತ್ರುಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಿದೆ. ಹೀಗೆ ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಈ ಆಧುನಿಕ ಭಾರ್ಗವಾಸ್ತ್ರ ವೈಶಿಷ್ಟ್ಯವೇನು? ಇದು ಹೇಗೆ ಕಾರ್ಯ ನಿರ್ವಹಿಸಲಿದೆ? ಮುಂತಾದ ಕುತೂಹಲಕಾರಿ ವಿವರ ಇಲ್ಲಿದೆ.

ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ ಮೇಲೆ ದಾಳಿ ನಡೆಸಿದ ಉಗ್ರರು 26 ಭಾರತೀಯರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಂಡ ಭಾರತ ಮೇ 7ರ ಮುಂಜಾನೆ ಆಪರೇಷನ್‌ ಸಿಂದೂರ್‌ ಹೆಸರಿನಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸಿ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಪ್ರಮುಖ ಉಗ್ರ ನಾಯಕರು ಹತರಾಗಿದ್ದು, ಪಾಕ್‌ ಕದನ ವಿರಾಮ ಉಲ್ಲಂಘಿಸಿ ಪ್ರತಿ ದಾಳಿ ನಡೆಸಿತು.

ಈ ವೇಳೆ ಪಾಕಿಸ್ತಾನ ಮುಖ್ಯವಾಗಿ ಬಳಸಿದ್ದು ಡ್ರೋನ್‌ಗಳನ್ನು. ರಾತ್ರಿಯಾಗುತ್ತಿದ್ದಂತೆ ಭಾರತದೊಳಗೆ ಪಾಕಿಸ್ತಾನದ ಡ್ರೋನ್‌ಗಳ ಪ್ರವಾಹವೇ ಹರಿದುಬರುತ್ತಿತ್ತು. ಇದನ್ನು ಭಾರತದ ರಕ್ಷಣಾ ವ್ಯವಸ್ಥೆ ಆಗಸದಲ್ಲೇ ನಾಶಗೊಳಿಸಲು ಯಶಸ್ವಿಯಾಗಿತ್ತು. ಮೂಲಗಳ ಪ್ರಕಾರ ಪಾಕಿಸ್ತಾನ 3-4 ದಿನಗಳಲ್ಲಿ ಸುಮಾರು 700 ಡ್ರೋನ್‌ಗಳನ್ನು ಭಾರತದ ಮೇಲೆ ಪ್ರಯೋಗಿಸಿತ್ತು. ಇದೀಗ ಭಾರತ ಯಶಸ್ವಿಯಾಗಿ ಭಾರ್ಗವಾಸ್ತ್ರದ ಪ್ರಯೋಗ ನಡೆಸಿದ್ದು, ಡ್ರೋನ್‌ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದೆ.



ಏನಿದು ಭಾರ್ಗವಾಸ್ತ್ರ?

ತಂತ್ರಜ್ಞಾನದಲ್ಲಿ ಸ್ವಾಲಂಬನೆಯತ್ತ ದಾಪುಗಾಲು ಹಾಕುತ್ತಿರುವ ಭಾರತ ರಕ್ಷಣಾ ಕ್ಷೇತ್ರದಲ್ಲಿಯೂ ತನ್ನ ಕಾಲ ಮೇಲೆ ತಾನು ನಿಲ್ಲಲು ಮುಂದಾಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆಯಾಗಿ ಭಾರ್ಗವಾಸ್ತ್ರ ನಮ್ಮ ಕಣ್ಣಮುಂದಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೌಂಟರ್ ಡ್ರೋನ್ ವ್ಯವಸ್ಥೆಯೇ ಭಾರ್ಗವಾಸ್ತ್ರ. ಈ ಕಿರು ಕ್ಷಿಪಣಿ ವ್ಯವಸ್ಥೆಯನ್ನು ಒಡಿಶಾದ ಗೋಪಾಲಪುರದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದು ಸಾಮೂಹಿಕ ಡ್ರೋನ್‌ ದಾಳಿಯನ್ನು ಹಿಮ್ಮೆಟಿಸುವ ಭಾರತದ ಸಾಮರ್ಥ್ಯಕ್ಕೆ ಇನ್ನಷ್ಟು ಬಲ ತುಂಬಲಿದೆ.

ಈ ಸುದ್ದಿಯನ್ನೂ ಓದಿ: Pak attack India: ಭಾರತದ ವಿರುದ್ಧದ ದಾಳಿಗೆ ಪಾಕ್‌ಗೆ ಸಹಾಯ- ಟರ್ಕಿಯ ಕುಕೃತ್ಯ ಬಟಾಬಯಲು!

ಏನಿದರ ವೈಶಿಷ್ಟ್ಯ?

ಸೋಲಾರ್‌ ಡಿಫೆನ್ಸ್‌ ಆ್ಯಂಡ್‌ ಏರೋಸ್ಪೇಸ್‌ ಲಿಮಿಡೆಟ್‌ (Solar Defence and Aerospace Ltd) ಅಭಿವೃದ್ಧಿ ಪಡಿಸಿದ ಭಾರ್ಗವಾಸ್ತ್ರ ಶತ್ರುಗಳ ಡ್ರೋನ್‌ ಗುರಿಯನ್ನು ತಲುಪುವ ಮುನ್ನವೇ ಪುಡಿ ಪುಡಿ ಮಾಡಲಿದೆ. ಅಂದರೆ ಭಾರ್ಗವಸ್ತ್ರವು 2.5 ಕಿ.ಮೀ. ದೂರದಲ್ಲಿನ ಸಣ್ಣ ಡ್ರೋನ್‌ಗಳನ್ನೂ ಪತ್ತೆಹಚ್ಚುವ ಮತ್ತು ಧ್ವಂಸ ಮಾಡುವ ಸುಧಾರಿತ ಸಾಮರ್ಥ್ಯಗಳನ್ನು ಹೊಂದಿದೆ. ಜತೆಗೆ 6 ಕಿ.ಮೀ. ದೂರ ಇರುವುದಾಗಲೇ ಡ್ರೋನ್‌ ಸಾನಿಧ್ಯ ಇದರ ಅರಿವಿಗೆ ಬರಲಿದೆ. ಮಾತ್ರವಲ್ಲ ರಾಡಾರ್‌ಗಳ ಕಣ್ತಪ್ಪಿಸಿ ಒಳ ನುಸುಳುವ ಡ್ರೋನ್‌ಗಳನ್ನೂ ಇದು ಗುರುತಿಸಬಲ್ಲದು. ಇದು ವಿವಿಧ ಸ್ತರಗಳಲ್ಲಿ ಡ್ರೋನ್‌ ದಾಳಿ ಹಿಮ್ಮೆಟ್ಟಿಸಬಲ್ಲದು. ಎತ್ತರದ ಪ್ರದೇಶಗಳೂ ಸೇರಿದಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಂತೆಯೂ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಂದೇ ಬಾರಿಗೆ 64 ಗುರಿಗಳನ್ನು ಇದು ಹೊಡೆದುರುಳಿಸುವ ಸಾಮರ್ಥ್ಯವನ್ನೂ ಈ ಭಾರ್ಗವಸ್ತ್ರ ಹೊಂದಿದೆ.

ಸಾಮಾನ್ಯ ಕ್ಷಿಪಣಿಗಳಂತೆ ಇದನ್ನು ಸಾಗಿಸಲು ವಾಹನಗಳ ಅಗತ್ಯವಿಲ್ಲ. ಬ್ಯಾಗ್‌ನಲ್ಲೇ ಇದನ್ನು ಕೊಂಡೊಯ್ಯಬಹುದು ಎನ್ನುತ್ತಾರೆ ತಜ್ಞರು. ಇದರಲ್ಲಿ ಅಳವಡಿಸಿರುವ ರಾಡಾರ್‌ ಕೇವಲ 16 ಸೆಕೆಂಡ್‌ನಲ್ಲೇ ಶತ್ರು ಡ್ರೋನ್‌ ಗುರುತಿಸುತ್ತದೆ. ಮೇಕ್‌ ಇಂಡಿಯಾ ಯೋಜನೆಯ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಪರಶುರಾಮನ ಭಾರ್ಗವಾಸ್ತ್ರ ಅತ್ಯಂತ ಶಕ್ತಿಶಾಲಿ ಆಯುಧ ಎಂದು ಪುರಾಣ ಹೇಳುತ್ತದೆ. ಅದಕ್ಕೆ ತಕ್ಕಂತೆ ಈ ಆಧುನಿಕ ಭಾರ್ಗವಾಸ್ತ್ರವೂ ಪವರ್‌ಫುಲ್‌ ಆಗಿದ್ದು, ಶತ್ರುಗಳ ಎದೆಯಲ್ಲಿ ಈಗಾಗಲೇ ನಡುಕ ಹುಟ್ಟಿಸಿದೆ.