ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶೋಪಿಯಾನ್‌ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ; ಲಷ್ಕರ್ ಸದಸ್ಯನನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಎಸ್‌ಒಜಿ, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಒಬ್ಬ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕಾರ್ಯಾಚರಣೆ ಬಳಿಕ ಶೋಧ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಶೋಪಿಯಾನ್‌ನಲ್ಲಿ ಲಷ್ಕರ್ ಉಗ್ರ ಹತ್ಯೆ..!

ಸಾಂದರ್ಭಿಕ ಚಿತ್ರ -

Profile
Sushmitha Jain Jul 8, 2026 10:44 AM

ಶ್ರೀನಗರ, ಜು. 8: ಜಮ್ಮು-ಕಾಶ್ಮೀರದ ಶೋಪಿಯಾನ್ (Shopian) ಜಿಲ್ಲೆಯಲ್ಲಿನ ಜಂಟಿ ಭದ್ರತಾ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (Lashkar-e-Taiba - LeT) ಸಂಘಟನೆಯ ಪ್ರಮುಖ ಕಮಾಂಡರ್ ಜಾಕಿರ್ ಗನಾಯಿ (Zakir Ganai) ಹತ್ಯೆಯಾಗಿದ್ದಾನೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಮೂಲಗಳು ಬುಧವಾರ ದೃಢಪಡಿಸಿವೆ.

ಶೋಪಿಯಾನ್ ಸ್ಪೆಷಲ್ ಆಪರೇಷನ್ಸ್ ಗ್ರೂಪ್ (SOG), ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ (Rashtriya Rifles - RR) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ನಡೆಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಯ ಐದನೇ ದಿನ ಈ ಯಶಸ್ಸು ದೊರೆತಿದೆ.

ಜಾಕಿರ್ ಗನಾಯಿ ಭದ್ರತಾ ಸಂಸ್ಥೆಗಳ ಪಟ್ಟಿಯಲ್ಲಿ A++ ವರ್ಗದ ಉಗ್ರನಾಗಿದ್ದು, ಜುಲೈ 3ರಂದು ಶೋಪಿಯಾನ್‌ನ ದಟ್ಟ ಹಣ್ಣಿನ ತೋಟದಲ್ಲಿ ನಿಗಾ ಕ್ಯಾಮೆರಾಗಳಲ್ಲಿ ಇಬ್ಬರು ಉಗ್ರರು ಪತ್ತೆಯಾಗಿದ್ದರು. ಅವರಲ್ಲಿ ಜಾಕಿರ್ ಗನಾಯಿ ಹತ್ಯೆಯಾಗಿದ್ದು, ಆತನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ.

ಇದೀಗ ಕಾರ್ಯಾಚರಣೆ ಮತ್ತೊಬ್ಬ ಲಷ್ಕರ್ ಉಗ್ರ ಲತೀಫ್ ಭಟ್ (Latif Bhatt) ಪತ್ತೆಗಾಗಿ ಮುಂದುವರಿದಿದೆ. ಸುಮಾರು ಏಳು ಗ್ರಾಮಗಳನ್ನು ಒಳಗೊಂಡ ಪ್ರದೇಶದಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸೇನೆ ಸಂಪೂರ್ಣ ಪ್ರದೇಶವನ್ನು ಸುತ್ತುವರೆದಿದೆ.

ಕಾರ್ಯಾಚರಣೆಯಲ್ಲಿ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್‌ನ ಹಲವು ತಂಡಗಳು ಭಾಗವಹಿಸಿವೆ. ಉಗ್ರರು ತಪ್ಪಿಸಿಕೊಳ್ಳದಂತೆ ಎಲ್ಲ ನಿರ್ಗಮನ ಮಾರ್ಗಗಳನ್ನು ಮುಚ್ಚಲಾಗಿದ್ದು, ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ.

ಗಡಿ ಭದ್ರತಾ ಪಡೆ-ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆ: ಆರೋಪಿ ಬಂಧನ, 26 ಶಸ್ತ್ರಾಸ್ತ್ರಗಳು ವಶಕ್ಕೆ

ಭದ್ರತಾ ಅಧಿಕಾರಿಗಳ ಪ್ರಕಾರ, ಬೇಸಿಗೆ ಕಾಲದಲ್ಲಿ ದಟ್ಟ ಹಸಿರು ಮರಗಳು ಮತ್ತು ತೋಟಗಳು ಉಗ್ರರಿಗೆ ಸಹಜ ರಕ್ಷಣೆ ಒದಗಿಸುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಆದರೂ ಭದ್ರತಾ ಪಡೆಗಳು ಕಟ್ಟುನಿಟ್ಟಿನ ಸುತ್ತುವರಿಯುವಿಕೆ ಮೂಲಕ ಉಗ್ರರನ್ನು ಗುರಿಯಾಗಿಸಿಕೊಂಡಿವೆ.

ಭದ್ರತಾ ದಾಖಲೆಗಳ ಪ್ರಕಾರ, ಜಾಕಿರ್ ಗನಾಯಿ ಮತ್ತು ಲತೀಫ್ ಭಟ್ ಇಬ್ಬರೂ ದಕ್ಷಿಣ ಕಾಶ್ಮೀರದ ಕುಲ್ಗಾಂ (Kulgam) ಜಿಲ್ಲೆಯ ನಿವಾಸಿಗಳಾಗಿದ್ದು, ಜಾಕಿರ್ 2024ರಿಂದ ಲಷ್ಕರ್ ಸಂಘಟನೆಯೊಂದಿಗಿದ್ದರೆ, ಲತೀಫ್ ಕಳೆದ ವರ್ಷ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರ ಪೊಲೀಸರು ಈ ಕಾರ್ಯಾಚರಣೆಯ ಬಗ್ಗೆ "ನೀವು ಓಡಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ!" ಎಂದು ಉಗ್ರರಿಗೆ ಎಚ್ಚರಿಕೆ ನೀಡಿದ್ದು, ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.