Nepal Flood: ಉತ್ತರ ಪ್ರದೇಶಕ್ಕೂ ಹರಿದು ಬಂತು ರಾಶಿ ರಾಶಿ ಮೃತದೇಹ; ಛಿದ್ರ ಛಿದ್ರ ಶವಗಳ ಗುರುತು ಪತ್ತೆಯೇ ಸವಾಲು
Nepal Flood Horror: ನೇಪಾಳದಲ್ಲಿ ಸಂಭವಿಸಿದ ಪ್ರವಾಹದ ಪರಿಣಾಮ ಭಾರತದ ಮೇಲೂ ಆಗಿದೆ. ಉತ್ತರ ಪ್ರದೇಶದಲ್ಲಿ ಹರಿಯುತ್ತಿರುವ ಗಂಡಕ್ ನದಿಯಲ್ಲಿ ಸುಮಾರು 10 ಮೃತದೇಹಗಳು ಪತ್ತೆಯಾಗಿವೆ. ಸದ್ಯ ಈ ಮೃತದೇಹಗಳ ಪತ್ತೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ -
ಲಖನೌ, ಆ. 30: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ 700ಕ್ಕೂ ಜನರ ಜೀವವನ್ನು ಬಲಿ ಪಡೆದರೆ, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ತ್ರಿಶೂಲಿ ನದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಅಪಾಯಕಾರಿಯಾಗಿ ಬದಲಾಗಿ ಹಲವರ ಬದುಕು ಅತಂತ್ರಗೊಂಡಿದೆ (Nepal Flood Horror). ಕೆಲವು ಗ್ರಾಮಗಳೇ ಕೊಚ್ಚಿಕೊಂಡು ಹೋಗಿವೆ. ಇದರ ಪರಿಣಾಮ ಭಾರತದಲ್ಲಿಯೂ ಕಂಡು ಬಂದಿದ್ದು, ಬಿಹಾರ, ಉತ್ತರ ಪ್ರದೇಶದಲ್ಲಿಯೂ ನದಿ ಮೇರೆ ಮೀರಿ ಹರಿದಿದೆ. ಅಲ್ಲದೆ ಉತ್ತರ ಪ್ರದೇಶದಲ್ಲಿ ಹರಿಯುವ ನದಿಗಳ 2 ದಿನಗಳಲ್ಲಿ 10ಕ್ಕೂ ಹೆಚ್ಚು ಮೃತದೇಹ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ನೇಪಾಳದಿಂದ ಈ ಮೃತದೇಹಗಳು ತೇಲಿ ಬಂದಿವೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ನೇಪಾಳ ಗಡಿಗೆ ಹೊಂದಿಕೊಂಡಿರುವ ಮಹಾರಾಜಗಂಜ್ ಮತ್ತು ಖುಷಿನಗರ್ ಜಿಲ್ಲೆಗಳಲ್ಲಿ ಗಂಡಕ್ ನದಿಯಲ್ಲಿ 6 ಮೃತದೇಹಗಳು ಪತ್ತೆಯಾಗಿವೆ. ಈ ಮೃತದೇಹಗಳ ಗುರುತು ಇನ್ನೂ ಗೊತ್ತಾಗಿಲ್ಲ. ಗುರುತು ಪತ್ತೆಹಚ್ಚುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೃತದೇಹ ಪತ್ತೆ:
#WATCH | Khushinagar, UP | Three bodies were recovered from the Gandak River in Uttar Pradesh's Maharajganj district after being swept downstream by strong currents from devastating flash floods in Nepal
— ANI UP/Uttarakhand (@ANINewsUP) August 27, 2026
Additional District Magistrate Vaibhav Mishra says, "Following the… pic.twitter.com/dN4Py3Mj0Y
ಮಹಾರಾಜಗಂಜ್ನಲ್ಲಿ 3 ಮೃತದೇಹ ಕಂಡು ಬಂದಿದ್ದು, ಇವು ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನದ್ದು ಎಂದು ಗೊತ್ತಾಗಿದೆ. ಸಶಸ್ತ್ರ ಸೀಮಾ ಬಲ್ನ (SSB) ಕಾರ್ಯಾಚರಣಾ ಪಡೆ ನದಿಯುದ್ದಕ್ಕೂ ಪರಿಶೀಲನೆ ನಡೆಸುತ್ತಿದೆ. ಬೋಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ. ತ್ರಿಶೂಲಿ ನದಿಯ ಭಾಗವಾಗಿರುವ ಗಂಡಕ್ ನದಿ ನೇಪಾಳದಿಂದ ಭಾರತಕ್ಕೆ ಹರಿದು ಬರುತ್ತದೆ. ಇನ್ನು ಟಿಬೆಟ್ನಲ್ಲಿ ಹುಟ್ಟುವ ಭೋಟೆಕೋಶಿ ನದಿಯು ನೇಪಾಳದಲ್ಲಿ ತ್ರಿಶೂಲಿಯೊಂದಿಗೆ ಸೇರಿ ಹರಿಯುತ್ತದೆ. ನಂತರ ಅಂತಿಮವಾಗಿ ಗಂಡಕ್ ಆಗಿ ಭಾರತವನ್ನು ಪ್ರವೇಶಿಸುತ್ತದೆ. ಹೀಗಾಗಿ ನದಿಯ ಪ್ರವಾಹದ ಪರಿಣಾಮ ಭಾರತದಲ್ಲೂ ಕಂಡು ಬಂದಿದೆ. ಮಹಾರಾಜ್ಗಂಜ್ ಸಮೀಪದ ಖುಷಿನಗರದಲ್ಲಿ ಗಂಡಕ್ ನದಿಯಲ್ಲಿ 3 ಶವ ಕಂಡು ಬಂದಿದೆ. ಖಡ್ಡಾದ ಮದನ್ಪುರ-ಸುಕ್ರೌಲಿ ಪ್ರದೇಶದ ಬ್ಯಾರೇಜ್ ಪಿಯರ್ ಸಂಖ್ಯೆ 3ರ ಬಳಿ ಅವು ಪತ್ತೆಯಾಗಿದ್ದು, ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ನೇಪಾಳ ಪ್ರವಾಹ; ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಭಾರತದ ತಲುಪಿದ 2 ಗೋಲ್ಡನ್ ರಿಟ್ರೈವರ್ ನಾಯಿಗಳು!
ಅಧಿಕಾರಿಗಳು ಹೇಳಿದ್ದೇನು?
ಅಧಿಕಾರಿಗಳ ಪ್ರಕಾರ ನೇಪಾಳದಿಂದ ಈ ಮೃತದೇಹಗಳು ತೇಲಿ ಬಂದಿವೆ. ಸದ್ಯ ಅವರು ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹಗಳ ಕುಟುಂಬಗಳನ್ನು ಪತ್ತೆ ಹಚ್ಚಲು ಕಾರ್ಯ ನಿರ್ವಹಿಸುತ್ತಿದ್ದಾರೆ.
ಖಡ್ಡಾ ಎಸ್ಎಚ್ಒ ಸಂದೀಪ್ ಸಿಂಗ್ ಮಾತನಾಡಿ, ʼʼಎಸ್ಡಿಆರ್ಎಫ್ ಮೇಲ್ವಿಚಾರಣಾ ತಂಡದ ಸದಸ್ಯರು ನದಿಯಲ್ಲಿ ತೇಲುತ್ತಿರುವ ಮೃತದೇಹಗಳನ್ನು ಗುರುತಿಸಿ ವಶಪಡಿಸಿಕೊಂಡಿದ್ದಾರೆ. ಗುರುತು ಪತ್ತೆ ಹಚ್ಚಲು ನೇಪಾಳದ ಅಧಿಕಾರಿಗಳೊಂದಿಗೆ ವಿವರ ಹಂಚಿಕೊಳ್ಳಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ. ಪ್ರವಾಹದಲ್ಲಿ ಸಾಕು ಪ್ರಾಣಿಗಳು, ವಾಹನಗಳು, ಗೃಹೋಪಯೋಗಿ ವಸ್ತುಗಳು, ಗ್ಯಾಸ್ ಸಿಲಿಂಡರ್ಗಳು, ಡ್ರಮ್ಗಳು, ಪೀಠೋಪಕರಣಗಳು ಮತ್ತು ಮರದ ದಿಮ್ಮಿಗಳು ತೇಲಿಕೊಂಡು ಬಂದಿವೆ.
ಗುರುತು ಪತ್ತೆಗೆ ಭಾರತದ ಸಹಾಯ ಕೋರಿದ ನೇಪಾಳ
ನೇಪಾಳ ಪ್ರವಾಹದಲ್ಲಿ ಮೃತರ ಸಂಖ್ಯೆ 700 ದಾಟಿದೆ. ಇದೀಗ ನೇಪಾಳ ಗುರುತು ಪತ್ತೆಯಾಗದ 600 ಮಂದಿಯ ಗುರುತು ಪತ್ತೆಗೆ ಡಿಎನ್ಎ ತಂತ್ರಜ್ಞಾನಕ್ಕಾಗಿ ಭಾರತದ ನೆರವು ಕೋರಿದೆ. ಪ್ರವಾಹಕ್ಕೆ ಸಿಲುಕಿದ ಸುಮಾರು 4,000 ಮಂದಿಯನ್ನು 3 ದಿನಗಳಲ್ಲಿ ರಕ್ಷಿಸಲಾಗಿದೆ. ಅನೇಕ ಮೃತದೇಹಗಳು ಛಿದ್ರ ಛಿದ್ರವಾಗಿದ್ದು ಗುರುತು ಪತ್ತೆ ಹಚ್ಚುವುದೇ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಭಾರತ 4 ವಿಮಾನಗಳಲ್ಲಿ ಪರಿಹಾರ ಸಾಮಗ್ರಿ ಕಳುಹಿಸಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.