Nirmala Sitharaman: ಬಜೆಟ್ ಲೋಗೋದಲ್ಲಿ ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರದ ವಿರುದ್ಧ ಸಚಿವೆ ನಿರ್ಮಲಾ ಗರಂ
Nirmala Sitharaman: ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡಿನ ಡಿಎಂಕೆ ಸರ್ಕಾರ ರಾಷ್ಟ್ರೀಯ ಕರೆನ್ಸಿ ರೂಪಾಯಿಯ ಚಿಹ್ನೆ (₹) ದೇವನಾಗರಿ ಲಿಪಿಯಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ಬಜೆಟ್ ಲೋಗೋದಲ್ಲಿ ಬದಲಾಯಿಸುವ ಸಾಹಸಕ್ಕೆ ಕೈ ಹಾಕಿದೆ. ಈ ಕ್ರಮದ ವಿರುದ್ಧ ವಿತ್ತ ಸಚಿವೆ ನಿರ್ಮ ಸೀತಾರಾಮನ್ ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್ ಮತ್ತು ಎಂ.ಕೆ.ಸ್ಟಾಲಿನ್.

ಹೊಸದಿಲ್ಲಿ: ಕೇಂದ್ರದೊಂದಿಗಿನ ತಮಿಳುನಾಡು ಸರ್ಕಾರದ ಭಾಷಾ ಸಮರ ತಾರಕಕ್ಕೇರಿದೆ. ಎಂ.ಕೆ.ಸ್ಟಾಲಿನ್ (MK Stalin) ನೇತೃತ್ವದ ಡಿಎಂಕೆ (DMK) ಸರ್ಕಾರ ರಾಷ್ಟ್ರೀಯ ಕರೆನ್ಸಿ ರೂಪಾಯಿಯ ಚಿಹ್ನೆ (₹) ದೇವನಾಗರಿ ಲಿಪಿಯಲ್ಲಿದೆ ಎನ್ನುವ ಕಾರಣಕ್ಕೆ ಅದನ್ನು ಬಜೆಟ್ ಲೋಗೋದಲ್ಲಿ ಬದಲಾಯಿಸುವ ಸಾಹಸಕ್ಕೆ ಕೈ ಹಾಕಿದೆ. 2025-26ರ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರವಾಗಿ ಬದಲಾಯಿಸಿದ್ದಕ್ಕೆ ಇದೀಗ ಬಿಜೆಪಿ ಕೆರಳಿ ಕೆಂಡವಾಗಿದ್ದು, ಡಿಎಂಕೆ ವಿರುದ್ದ ಮುಗಿಬಿದ್ದಿದೆ. ಹೊತ್ತಿ ಉರಿಯುತ್ತಿರುವ ಈ ಸಮರಕ್ಕೆ ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಎಂಟ್ರಿ ಕೊಟ್ಟಿದ್ದು, ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.
ರೂಪಾಯಿಯ ₹ ಚಿಹ್ನೆಯನ್ನು 2010ರಲ್ಲಿ ಅಂಗೀಕರಿಸಲಾಗಿತ್ತು. ಒಂದುವೇಳೆ ಡಿಎಂಕೆಗೆ ಇದರ ಬಗ್ಗೆ ಆಕ್ಷೇಪವಿದ್ದರೆ ಅಂದೇ ಅದನ್ನು ಹೇಳಬೇಕಿತ್ತು ಎಂದು ನಿರ್ಮಲಾ ಸೀತಾರಾಮನ್ ಕುಟುಕಿದ್ದಾರೆ.
ವಿತ್ತ ಸಚಿವೆ ಹೇಳಿದ್ದೇನು?
ʼʼಡಿಎಂಕೆಗೆ ರೂಪಾಯಿಯ ₹ ಚಿಹ್ನೆಯ ಬಗ್ಗೆ ತಕರಾರಿದ್ದರೆ ಅದನ್ನು ಅಂಗೀಕರಿಸಿದ 2010ರಲ್ಲೇ ತಿಳಿಸಬಹುದಿತ್ತು. ಈ ಚಿಹ್ನೆಯನ್ನು ಅಧಿಕೃತವಾಗಿ ಅಂಗೀಕರಿಸಿದ್ದು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಐ ಸರ್ಕಾರ. ಡಿಎಂಕೆ ಕೂಡ ಈ ಮೈತ್ರಿಕೂಟದ ಭಾಗವಾಗಿತ್ತು. ಅಲ್ಲದೆ ₹ ಚಿಹ್ನೆಯನ್ನು ರೂಪಿಸಿದವರು ತಮಿಳುನಾಡಿನವರಾದ ಡಿ.ಉದಯ್ ಕುಮಾರ್. ಇವರು ಡಿಎಂಕೆಯ ಮಾಜಿ ಶಾಸಕ ಧರ್ಮಲಿಂಗಂ ಅವರ ಪುತ್ರ. ಈಗ ಆ ಚಿಹ್ನೆಯನ್ನು ಅಳಿಸಿಹಾಕುವ ಮೂಲಕ ಡಿಎಂಕೆ ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸುವುದಲ್ಲದೆ, ತಮಿಳುನಾಡಿನ ಯುವಕರ ಸೃಜನಶೀಲ ಕೊಡುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ" ಎಂದು ಕಿಡಿಕಾರಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಪೋಸ್ಟ್ ಇಲ್ಲಿದೆ.
The DMK government has reportedly removed the official Rupee symbol ‘₹’ from the Tamil Nadu Budget 2025-26 documents, which will be presented tomorrow.
— Nirmala Sitharaman (@nsitharaman) March 13, 2025
If the DMK (@arivalayam) has a problem with ‘₹’, why didn’t it protest back in 2010 when it was officially adopted under the…
ಡಿಎಂಕೆ ವಿರುದ್ಧ ಅಣ್ಣಾಮಲೈ ಗುಡುಗು
ಇದಕ್ಕೂ ಮೊದಲು ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಕೂಡ ಡಿಎಂಕೆ ಸರ್ಕಾರ ಈ ನಿರ್ಧಾರದ ವಿರುದ್ದ ಗುಡುಗಿದ್ದಾರೆ. “2025-26ರ ಡಿಎಂಕೆ ಸರ್ಕಾರದ ರಾಜ್ಯ ಬಜೆಟ್ನ ಲೋಗೋ ತಮಿಳಿಗನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬದಲಾಯಿಸಿದೆ. ಈ ಚಿಹ್ನೆಯನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿಯೂ ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಉದಯ್ ಕುಮಾರ್ ಮಾಜಿ ಡಿಎಂಕೆ ಶಾಸಕರ ಮಗ. ಎಂ.ಕೆ. ಸ್ಟಾಲಿನ್ ಅವರದ್ದು ಮೂರ್ಖತನದ ನಿರ್ಧಾರʼʼ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Rupee Symbol: ರಾಷ್ಟ್ರೀಯ ಕರೆನ್ಸಿ ಚಿಹ್ನೆ ₹ ಬದಲಾಯಿಸಿದ ತಮಿಳುನಾಡು ಸರ್ಕಾರ; ಕೇಂದ್ರದ ವಿರುದ್ಧ ಮುಂದುವರಿದ ಭಾಷಾ ಸಮರ
ಎಂ.ಕೆ.ಸ್ಟಾಲಿನ್ ಪೋಸ್ಟ್ ಇಲ್ಲಿದೆ.
சமூகத்தின் அனைத்துத் தரப்பினரும் பயன்பெறும் வகையில் தமிழ்நாட்டின் பரவலான வளர்ச்சியை உறுதி செய்திட…#DravidianModel #TNBudget2025 pic.twitter.com/83ZBFUdKZC
— M.K.Stalin (@mkstalin) March 13, 2025
ಏನಿದು ವಿವಾದ?
ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ತ್ರಿಭಾಷಾ ಸೂತ್ರವನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, 2025-26ರ ಬಜೆಟ್ನ ಲೋಗೋದಲ್ಲಿ ರೂಪಾಯಿಯ ₹ ಚಿಹ್ನೆಯ ಬದಲು ತಮಿಳು ಲಿಪಿ ಅಳವಡಿಸಿರುವುದನ್ನು ಪ್ರದರ್ಶಿಸುವ ವಿಡಿಯೊವನ್ನು ಬಿಡುಗಡೆ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಕೊಂಡಿತು. ಇದುವರೆಗೆ ತಮಿಳುನಾಡು ಸರ್ಕಾರ ಬಜೆಟ್ನಲ್ಲಿ ಅಧಿಕೃತ ರೂಪಾಯಿ ಚಿಹ್ನೆ (₹)ಯನ್ನೇ ಬಳಸುತ್ತಿತ್ತು. ಇದೀಗ ಮೊದಲ ಬಾರಿಗೆ ಬಜೆಟ್ ಲೋಗೋದಲ್ಲಿ ಎಂ.ಕೆ.ಸ್ಟಾಲಿನ್ ಸರ್ಕಾರ ತಮಿಳು ಚಿಹ್ನೆಯನ್ನು ಬಳಸಿದೆ. ಸ್ಥಳೀಯ ಭಾಷೆಯಲ್ಲಿ ರೂಪಾಯಿ ಚಿಹ್ನೆಯನ್ನು ಬಳಸುವ ಈ ನಿರ್ಧಾರವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರದ ವಿರುದ್ಧದ ರಾಜ್ಯದ ಬಲವಾದ ನಿಲುವಿನ ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಜೆಟ್ ಮಾ. 14ರಂದು ಮಂಡನೆಯಾಗಲಿದೆ.