ಸಂಬಳವಿಲ್ಲ, ಮನೆ ಬಾಡಿಗೆ ಪಾವತಿಸಬೇಕು... ಬಿಜೆಪಿಯಿಂದ ಹೊರನಡೆದ ಕಾರಣ ಹಂಚಿಕೊಂಡ ಶೆಹಜಾದ್ ಪೂನವಾಲಾ
ಒತ್ತಡ, ಆರ್ಥಿಕ ಮತ್ತು ವಯಕ್ತಿಕ ಕಾರಣಗಳಿಂದಾಗಿ ಭಾರತೀಯ ಜನತಾ ಪಕ್ಷದಿಂದ ಹೊರ ನಡೆದಿರುವುದಾಗಿ ಶೆಹಜಾದ್ ಪೂನವಾಲಾ ತಿಳಿಸಿದ್ದಾರೆ. ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಮೊದಲ ಬಾರಿಗೆ ನೀಡಿರುವ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಸಂಬಳವಿಲ್ಲ, ಬಾಡಿಗೆ ಪಾವತಿಸಬೇಕು, ಮಾನಸಿಕ ಒತ್ತಡದಿಂದ ಬಳಲುತ್ತಿದ್ದೇನೆ, ಆರ್ಥಿಕ ಸಂಕಷ್ಟ ಎದುರಾಗಿದೆ. ವಯಕ್ತಿಕ ಕಾರಣಗಳು ಇವೆ... ಈ ಎಲ್ಲಾ ಕಾರಣಗಳಿಂದಾಗಿ ಭಾರತೀಯ ಜನತಾ ಪಕ್ಷದ (Bharatiya Janata Party) ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಶೆಹಜಾದ್ ಪೂನವಾಲಾ (Shehzad Poonawalla) ತಿಳಿಸಿದ್ದಾರೆ. ಬಿಜೆಪಿ (BJP) ತೊರೆದ ಬಳಿಕ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ರಾಜೀನಾಮೆ ಹಠಾತ್ ನಿರ್ಧಾರವಲ್ಲ. ಅದರ ಬಗ್ಗೆ 2024ರಿಂದ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷ ತೊರೆದ ಬಳಿಕ ರಾಜಕೀಯ ಜೀವನದ ಹಲವಾರು ಸ್ಪೋಟಕ ಮಾಹಿತಿಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿರುವ ಅವರು, ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ತಮ್ಮ ವಕ್ತಾರರಿಗೆ ಸಂಬಳ ನೀಡುವುದಿಲ್ಲ. ಅವರು ತಮ್ಮನ್ನು ತಾವು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಂದು ತಿಳಿಸಿದರು.
ನನಗೆ ಬಾಡಿಗೆಯನ್ನು ಪಾವತಿಸಬೇಕಿದೆ. ನಾನು ಬಿಜೆಪಿಯವನು ಎಂಬ ಕಾರಣಕ್ಕೆ ಮನೆಮಾಲೀಕರು ನನಗೆ ಮನೆಯನ್ನು ಉಚಿತವಾಗಿ ಉಳಿದುಕೊಳ್ಳಲು ಬಿಡುವುದಿಲ್ಲ. ಅವರು ಪ್ರತಿ ತಿಂಗಳ 1ನೇ ತಾರೀಖಿನಂದು ಬಾಡಿಗೆ ಕೇಳುತ್ತಾರೆ. ರಾಜಕೀಯ ಪಕ್ಷಗಳು ಕಾರ್ಯಕರ್ತರಿಗೆ ಪಾವತಿಸುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ ಎಂದ ಅವರು ಬಿಜೆಪಿಯ ಕೆಲಸ ನನ್ನನ್ನು ಅಥವಾ ಯಾವುದೇ ಇತರ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ಅಲ್ಲ. ರಾಜಕೀಯ ಚಳವಳಿಗೆ ಸೇರಿದಾಗ ಇದು ಒಂದು ಕೆಲಸವಲ್ಲ. ಸಿದ್ಧಾಂತ ಅಥವಾ ವ್ಯಕ್ತಿ ಮೇಲಿನ ಪ್ರೀತಿಯಿಂದಾಗಿರುತ್ತದೆ ಎಂದರು.
#NDTVExclusive | Shehzad Poonawalla's first interview after exit from BJP to NDTV's @ShivAroor on #IndiaMatters
— NDTV (@ndtv) August 18, 2026
Tough questions, direct answers. Watch @Shehzad_Ind respond to the contradictions, the timing, and the politics behind his big decision. pic.twitter.com/bviMkcdPce
ಕಾಂಗ್ರೆಸ್ ಗೆ ಸೇರುವ ಕುರಿತು ಇರುವ ವದಂತಿಗಳನ್ನು ತಳ್ಳಿ ಹಾಕಿದ ಅವರು, ನಾನು ಕಾಂಗ್ರೆಸ್ ಸೇರುತ್ತೇನೆ. ಇದಕ್ಕಾಗಿ ಒಂದು ಷರತ್ತು ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನು ತೆಗೆದುಹಾಕಿ, ನೆಹರೂ ಅವರ ಕ್ರಮಗಳಿಗೆ ಕ್ಷಮೆಯಾಚಿಸಲಿ ಎಂದರು.
ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ದೊಡ್ಡ ನಾಯಕ ಈಗ ಯಾರೂ ಇಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಪಕ್ಷದ ರಾಷ್ಟ್ರೀಯ ವಕ್ತಾರನಾಗಿ ಸೇವೆ ಸಲ್ಲಿಸಿರುವ ನಾನು ಬೇರೆ ಪಕ್ಷದಲ್ಲಿ ಹೇಗೆ ತೃಪ್ತನಾಗುತ್ತೇನೆ. ಭಾರತದಲ್ಲಿ ಈಗ ಇರುವುದು ಅತ್ಯುತ್ತಮ ಪಕ್ಷ ಆಡಳಿತ ನಡೆಸುತ್ತಿದೆ ಎಂದು ಅವರು ಹೇಳಿದರು.
ರಾಜಕೀಯದಲ್ಲಿ ಹೆಚ್ಚಾಗಿ ಕೆಲವು ಪ್ರಯೋಜನಗಳನ್ನು ಪಡೆಯುವವರು ಅಥವಾ ರಾಜಕಾರಣಿಗಳ ಮಕ್ಕಳು ಮಾತ್ರ ಉಳಿಯಲು ಸಾಧ್ಯ. ಆದರೆ ನಾನು ಎರಡಕ್ಕೂ ಸೇರಿದವನಲ್ಲ. ಹೀಗಾಗಿ ನನ್ನನ್ನು ನಾನು ಉಳಿಸಿಕೊಳ್ಳಲು ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ನನ್ನಂತಹ ರಾಜಕಾರಣಿಗಳು ಯಾವುದೇ ಪರಂಪರೆಯಿಂದ ಬಂದವರಲ್ಲ ಎಂದು ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದ ಅವರು, ತಾವು ರಾಜೀನಾಮೆ ನೀಡಿದ ಬಳಿಕ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಅದಕ್ಕೂ ಬಹಳ ಹಿಂದಿನಿಂದಲೇ ನಾನು ಎದುರಿಸುತ್ತಿರುವ ಸವಾಲುಗಳು ಸಾಕಷ್ಟು ಇದ್ದವು ಎಂದರು.
ಪಕ್ಷದಿಂದ ಹೊರಬಂದಾಗ ಅವರು ನನ್ನನ್ನು ಹೇಗೆ ನೋಡಿಕೊಳ್ಳಬಹುದು ಎಂದು ನೋಡಲು ನಾನು ಹೊರಬಂದಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಆತ್ಮಸಾಕ್ಷಿಯು ನನಗೆ ಅಲ್ಲಿರಲು ಅವಕಾಶ ನೀಡುವುದಿಲ್ಲ. ಬಿಜೆಪಿ ಉದ್ಯೋಗಾವಕಾಶವಲ್ಲ. ಅದೊಂದು ಸೈದ್ಧಾಂತಿಕ ಅವಕಾಶ. ಬಿಜೆಪಿಯ ಸಿದ್ಧಾಂತ ಅಥವಾ ಮೋದಿಜಿಯ ದೃಷ್ಟಿಕೋನಕ್ಕೆ ಬದ್ಧರಾಗಲು ಬಿಜೆಪಿಯಲ್ಲಿ ಇರಬೇಕಾಗಿಲ್ಲ ಎಂದು ಹೇಳಿದರು.
ತಮ್ಮ ನಿರ್ಗಮನದ ಹಿಂದೆ ಸಂಚು ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಇದರಲ್ಲಿ ಯಾವುದೇ ಸತ್ಯವಿಲ್ಲ. ನಾನು ನನ್ನ ರಾಜೀನಾಮೆ ಪತ್ರದಲ್ಲಿ ಕೆಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿದ್ದೇನೆ. ಅವರೊಂದಿಗೆ ಕೆಲಸದ ಸಮಸ್ಯೆಗಳು ಮಾತ್ರ ಇದ್ದವು ಎಂದು ತಿಳಿಸಿದರು.
ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸುವ ಅವರ ಇತ್ತೀಚಿನ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕೇಂದ್ರ ಅಥವಾ ಯಾವುದೇ ನಿರ್ದಿಷ್ಟ ಪಕ್ಷವನ್ನು ಗುರಿಯಾಗಿಸಿಕೊಂಡಿಲ್ಲ. ದೇಶದ ನಾಗರಿಕನಾಗಿ ಸಮಸ್ಯೆಯನ್ನು ಎತ್ತಿದ್ದೇನೆ ಎಂದರು.