ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Revanth Reddy: ಸೋನಿಯಾ ಗಾಂಧಿ ತ್ಯಾಗದಿಂದ ಕ್ರಿಸ್‌ಮಸ್‌ ಆಚರಿಸುತ್ತಿದ್ದೇವೆ; ವಿವಾದದ ಕಿಡಿ ಹೊತ್ತಿಸಿದ ತೆಲಂಗಾಣ ಸಿಎಂ

ದಕ್ಷಿಣ ಭಾರತ, ಅದರಲ್ಲೂ ವಿಶೇಷವಾಗಿ ತೆಲಂಗಾಣದಲ್ಲಿ ಸೋನಿಯಾ ಗಾಂಧಿ ಅವರ ತ್ಯಾಗದಿಂದ ನಾವೆಲ್ಲರೂ ಇಂದು ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ ಎಂದಿದೆ.

ಕ್ರಿಸ್ಮಸ್ ಆಚರಣೆ; ವಿವಾದಾತ್ಮಕ ಹೇಳಿಕೆ ನೀಡಿದ ರೇವಂತ್ ರೆಡ್ಡಿ

ಸೋನಿಯಾ ಗಾಂಧಿ ಮತ್ತು ರೇವಂತ್ ರೆಡ್ಡಿ (ಸಂಗ್ರಹ ಚಿತ್ರ) -

Profile
Sushmitha Jain Dec 21, 2025 11:57 PM

ಹೈದರಾಬಾದ್, ಡಿ. 21: ದೇಶಾದ್ಯಾಂತ ಕ್ರಿಸ್‌ಮಸ್‌ (Christmas) ಹಬ್ಬದ ಸಂಭ್ರಮ ಮನೆ ಮಾಡಿದೆ. ಕ್ರಿಶ್ಚಿಯನ್ ಸಮುದಾಯದವರು ಹಬ್ಬದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಸಂಭ್ರಮಾಚರಣೆ ಮಧ್ಯೆ ವಿವಾದದ ಕಿಡಿಯೊಂದು ಹೊತ್ತಿಕೊಂಡಿದ್ದು, ತೆಲಂಗಾಣ ಮುಖ್ಯಮಂತ್ರಿ (Telangana CM) ರೇವಂತ್ ರೆಡ್ಡಿ(Revanth Reddy) “ಕ್ರಿಸ್ಮಸ್ ಹಬ್ಬವು ಸೋನಿಯಾ ಗಾಂಧಿ ಅವರ ತ್ಯಾಗದಿಂದ ಆಚರಿಸಲಾಗುತ್ತಿದೆ” ಎಂಬ ಹೇಳಿಕೆ (Controversial Statement) ನೀಡಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಭಾರಿಚರ್ಚೆಗೆ ಗ್ರಾಸವಾಗಿದೆ.

ʼʼದಕ್ಷಿಣ ಭಾರತ, ಅದರಲ್ಲೂ ವಿಶೇಷವಾಗಿ ತೆಲಂಗಾಣದಲ್ಲಿ ಸೋನಿಯಾ ಗಾಂಧಿ ಅವರ ತ್ಯಾಗದಿಂದ ನಾವೆಲ್ಲರೂ ಇಂದು ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿದ್ದೇವೆʼʼ ಎಂದು ಹೇಳುವ ಮೂಲಕ ರೇವಂತ್ ರೆಡ್ಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ರೇವಂತ್ ಅವರ ಈ ಹೇಳಿಕೆಯಿಂದ ಬಿಜೆಪಿ ಕೆಂಡಾಮಂಡಲವಾಗಿದ್ದು, “ರಾಜಕೀಯವನ್ನು ಧರ್ಮದೊಂದಿಗೆ ಬೆರೆಸುವುದು ಸೂಕ್ತವಲ್ಲ. ರೇವಂತ್ ರೆಡ್ಡಿ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ಓಲೈಕೆಗೆ ಈ ಹೇಳಿಕೆ ನೀಡಿದ್ದಾರೆ. ಇದರಿಂದ ಮತ ಮತ್ತು ಸಮುದಾಯಗಳ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಾಗುತ್ತಿದೆ” ಎಂದು ಆರೋಪಿಸಿದೆ.

ಬಿಜೆಪಿಯ ಎಕ್ಸ್‌ ಪೋಸ್ಟ್‌:



ಇನ್ನು ತೆಲಂಗಾಣ ಸರ್ಕಾರ ಹೈದರಾಬಾದ್‌ನ ಲಾಲ್ ಬಹುದ್ದೂರ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಕ್ರಿಸ್‌ಮಸ್‌ ಆಚರಣೆ ವೇಳೆ ರೇವಂತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೆಡ್ಡಿ, ಡಿಸೆಂಬರ್ ವಿಶೇಷವಾಗಿದೆ ಎಂದು ಉಲ್ಲೇಖಿಸಿದ್ದು, ʼʼಈ ತಿಂಗಳಲ್ಲೇ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬ, ಕ್ರಿಸ್‌ಮಸ್‌ ಹಾಗೂ ತೆಲಂಗಾಣ ರಾಜ್ಯದ ಸ್ಥಾಪನೆಯ ದಿನಗಳು ಬರುತ್ತವೆ. ಹಬ್ಬದ ಆಚರಣೆ ಸೋನಿಯಾ ಗಾಂಧಿ ಅವರ ತ್ಯಾಗದಿಂದ ಸಾಧ್ಯವಾಗಿದೆʼʼ ಎಂದಿದ್ದಾರೆ.

ನಾಳೆಯಿಂದ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಸಂದಾಯ: ಲಕ್ಷ್ಮಿ ಹೆಬ್ಬಾಳ್ಕರ್‌

ಒಂದು ಸಮುದಾಯದ ಹಬ್ಬಕ್ಕೆ ಮಾತ್ರ ಪ್ರಚಾರ?

ಈ ಬಗ್ಗೆ ವಾಗ್ದಾಳಿ ನಡೆಸಿರುವ ಬಿಜೆಪಿ, ʼʼರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕರು ʼಓಲೈಕೆ ಸಂಪ್ರದಾಯʼ ಮುಂದುವರಿಸುತ್ತಿದ್ದು, ಕ್ರಿಸ್‌ಮಸ್‌ ಹಬ್ಬವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ. ಹಿಂದಿನ ಸೋನಿಯಾ ಸರ್ಕಾರವು ಜನಪಥ ನಿವಾಸದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಿತ್ತು. ಆದರೆ ಹಿಂದೂ ಹಬ್ಬಗಳನ್ನು ಕಡೆಗಣಿಸಿದೆ. ಇದೀಗ ರೇವಂತ್ ರೆಡ್ಡಿ ಸಹ ಇದೇ ರೀತಿಯ ಕ್ರಮ ಅನುಸರಿಸುತ್ತಿದ್ದಾರೆʼʼ ಎಂದು ಆರೋಪಿಸಿದೆ.

ʼʼಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮ, ನಂಬಿಕೆ ಮತ್ತು ಹಬ್ಬಗಳನ್ನು ಆಚರಿಸುವ ಸಂಪೂರ್ಣ ಹಕ್ಕಿದೆ. ಆದರೆ ರಾಜ್ಯದ ಮುಖ್ಯಮಂತ್ರಿಯಂತಹ ಸಂವಿಧಾನಾತ್ಮಕ ಹುದ್ದೆಯಲ್ಲಿರುವವರು ಕೇವಲ ಒಂದೇ ಸಮುದಾಯದ ಹಬ್ಬಗಳಿಗೆ ಮಾತ್ರ ಮಹತ್ವ ನೀಡುವುದು ಸೂಕ್ತವಲ್ಲ. ಹಬ್ಬಗಳನ್ನು ಆಚರಿಸುವುದಾದರೆ ಹಿಂದೂ ಸಮುದಾಯದ ಹಬ್ಬಗಳನ್ನೂ ಸಮಾನವಾಗಿ ಗೌರವಿಸಬೇಕು. ಹಿಂದೂ ಹಬ್ಬಗಳನ್ನು ಕಡೆಗಣಿಸಿ ಇತರ ಸಮುದಾಯಗಳ ಹಬ್ಬಗಳಿಗೆ ಮಾತ್ರ ಆದ್ಯತೆ ನೀಡುವುದು ಸರಿಯಲ್ಲ. ಹಬ್ಬ ಆಚರಣೆಯಾದರೆ ಎಲ್ಲ ಸಮುದಾಯಗಳನ್ನೂ ಒಳಗೊಂಡಿರಬೇಕು ಎಂಬುದು ಬಿಜೆಪಿಯ ಸ್ಪಷ್ಟ ನಿಲುವುʼʼ ಎಂದು ಹೇಳಿದೆ.

ಇನ್ನು ಈ ವಿಷಯದ ಕುರಿತು ಬಿಜೆಪಿ ವಕ್ತಾರ ನಲಿನ್ ಕೊಹ್ಲಿ ಪ್ರತಿಕ್ರಿಯಿಸಿ, ʼʼಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂತಹ ಓಲೈಕೆ ರಾಜಕೀಯಕ್ಕೆ ಮುಂದಾಗಿದೆʼʼ ಎಂದು ಆರೋಪಿಸಿದ್ದಾರೆ. ʼʼಗಾಂಧಿ–ನೆಹರೂ ಕುಟುಂಬವನ್ನು ತೃಪ್ತಿಪಡಿಸಲು ಈ ರೀತಿಯ ನಡೆ ಅನುಸರಿಸಲಾಗುತ್ತಿದೆʼʼ ಎಂದು ಅವರು ಟೀಕಿಸಿದ್ದಾರೆ.