ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ 16 ವರ್ಷ ವಿಳಂಬಕ್ಕೆ ಸುಪ್ರೀಂ ಗರಂ; ಸಂತ್ರಸ್ತರಿಗೆ ಇನ್ನಾದರೂ ಸಿಗುತ್ತಾ ನ್ಯಾಯ?
Supreme Court: ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ 16 ವರ್ಷ ವಿಳಂಬವಾಗಿರುವುದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯವು ಇದನ್ನು ದೇಶಕ್ಕೆ ಅವಮಾನ ಎಂದು ಹೇಳಿದ್ದು, ಬಾಕಿ ಇರುವ ವಿಚಾರಣೆಗಳ ಮಾಹಿತಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಎಲ್ಲ ಹೈಕೋರ್ಟ್ಗಳಿಗೆ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 4: ದೇಶಾದ್ಯಂತ ಆ್ಯಸಿಡ್ ದಾಳಿ ಪ್ರಕರಣಗಳಿಗೆ (Acid attack case) ಸಂಬಂಧಿಸಿದಂತೆ ಬಾಕಿ ಇರುವ ವಿಚಾರಣೆಗಳ ಮಾಹಿತಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಎಲ್ಲ ಹೈಕೋರ್ಟ್ಗಳಿಗೆ (High Court) ನಿರ್ದೇಶನ ನೀಡಿದೆ. ದೆಹಲಿಯಲ್ಲಿ ನಡೆದ ಅಂತಹ ಒಂದು ಪ್ರಕರಣದಲ್ಲಿ ವಿಚಾರಣೆ 16 ವರ್ಷ ವಿಳಂಬವಾಗಿರುವುದನ್ನು ಸರ್ವೋಚ್ಛ ನ್ಯಾಯಾಲಯವು ಕಟುವಾಗಿ ಟೀಕಿಸಿದ್ದು, ಇದನ್ನು ರಾಷ್ಟ್ರೀಯ ಅವಮಾನ ಎಂದು ಕರೆದಿದೆ.
ಆ್ಯಸಿಡ್ ದಾಳಿಯಲ್ಲಿ ಬದುಕುಳಿದ ಶಾಹೀನ್ ಮಲಿಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಕೇಂದ್ರ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. 2009ರಲ್ಲಿ ದಾಖಲಾಗಿದ್ದ ಮಲಿಕ್ ಅವರ ಪ್ರಕರಣವು ಇನ್ನೂ ನ್ಯಾಯಾಲಯದ ಮುಂದೆ ಇತ್ಯರ್ಥಕ್ಕೆ ಕಾಯುತ್ತಿರುವುದಕ್ಕೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವರದಕ್ಷಿಣೆಗಾಗಿ ಸೊಸೆಗೆ ಆಸಿಡ್ ಕುಡಿಸಿ ಕೊಂದ ಅತ್ತೆ-ಮಾವ
ಕಾನೂನು ವ್ಯವಸ್ಥೆಯ ಎಂತಹ ಅಣಕ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ರಾಷ್ಟ್ರ ರಾಜಧಾನಿ ಇದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಯಾರು ಮಾಡುತ್ತಾರೆ? ಇದು ರಾಷ್ಟ್ರೀಯ ಅವಮಾನ ಎಂದು ಪೀಠ ತರಾಟೆಗೆತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಮಲಿಕ್ ಅವರಿಗೆ ತಮ್ಮ ಪಿಐಎಲ್ನಲ್ಲಿ ವಿಳಂಬದ ಹಿಂದಿರುವ ಕಾರಣಗಳನ್ನು ವಿವರಿಸಿ ಅರ್ಜಿ ಸಲ್ಲಿಸಲು ಕೇಳಲಾಯಿತು ಹಾಗೂ ನ್ಯಾಯಾಲಯ ಸ್ವಯಂಪ್ರೇರಿತ ಕ್ರಮವನ್ನು ಸಹ ಕೈಗೊಳ್ಳಬಹುದೆಂದು ಭರವಸೆ ನೀಡಿದರು. ದೇಶಾದ್ಯಂತ ಬಾಕಿ ಇರುವ ಇದೇ ರೀತಿಯ ಪ್ರಕರಣಗಳ ವಿವರಗಳನ್ನು ಒದಗಿಸುವಂತೆ ಪೀಠವು ಎಲ್ಲ ಹೈಕೋರ್ಟ್ಗಳ ನೋಂದಾವಣೆಗಳಿಗೆ ಸೂಚನೆ ನೀಡಿತು.
ವಿಚಾರಣೆಯ ಸಮಯದಲ್ಲಿ, ಆ್ಯಸಿಡ್ ದಾಳಿಯಿಂದ ಬದುಕುಳಿದವರು ಎದುರಿಸುತ್ತಿರುವ ತೀವ್ರ ಸವಾಲುಗಳನ್ನು ಮಲಿಕ್ ವಿವರಿಸಿದರು. ಅವರಲ್ಲಿ ಅನೇಕರು ಶಾಶ್ವತ ಗಾಯಗಳೊಂದಿಗೆ ಬದುಕುತ್ತಿದ್ದಾರೆ. ಬದುಕುಳಿದವರು ವಿಶೇಷ ಚೇತನರು ಎಂದು ಗುರುತಿಸಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಇದರಿಂದ ವಿಶೇಷ ಚೇತನರಿಗೆ ಇರುವ ಸವಲತ್ತುಗಳನ್ನು ಅವರು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೋರ್ಟ್ ಈ ಬೇಡಿಕೆಯ ಕುರಿತು ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿ, ಈ ವಿಷಯವನ್ನು ಸರಿಯಾದ ಗಂಭೀರತೆಯೊಂದಿಗೆ ತೆಗೆದುಕೊಳ್ಳಲಾಗುವುದು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಕೇಂದ್ರವನ್ನು ಕಾನೂನನ್ನು ಬದಲಾಯಿಸುವ ವಿಷಯವನ್ನು ಪರಿಗಣಿಸಲು ಪ್ರೋತ್ಸಾಹಿಸಿದರು. ಆ್ಯಸಿಡ್ ದಾಳಿಯಿಂದ ಬದುಕುಳಿದವರನ್ನು ವಿಶೇಷ ಚೇತನರ ಹಕ್ಕುಗಳ ಕಾಯ್ದೆಯಡಿ ಸೇರಿಸಲು ಶಾಸನದ ಮೂಲಕ ಅಥವಾ ಅಗತ್ಯವಿದ್ದರೆ ಸುಗ್ರೀವಾಜ್ಞೆ ಮೂಲಕ ಕಾನೂನನ್ನು ತಿದ್ದುಪಡಿ ಮಾಡುವ ಬಗ್ಗೆ ಪರಿಗಣಿಸುವಂತೆ ಸಿಜೆಐ ಹೇಳಿದರು. ಈ ರೀತಿಯ ಪ್ರಕರಣಗಳನ್ನು ಸೂಕ್ತ ಸಮಯದಲ್ಲಿ ವಿಶೇಷ ನ್ಯಾಯಾಲಯಗಳು ವಿಚಾರಣೆ ನಡೆಸಬೇಕು ಎಂದು ಅವರು ಹೇಳಿದರು.