ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ahmedabad Plane Crash: ವಿಶ್ವಾಸ್‌ ಕುಮಾರ್‌, ವೆಸ್ನಾ, ಬಹಿಯಾ...; ವಿವಿಧ ವಿಮಾನ ಅಪಘಾತಗಳಲ್ಲಿ ಬದುಕುಳಿದ ಏಕೈಕ ಅದೃಷ್ಟಶಾಲಿಗಳಿವರು

Vishwash Kumar Ramesh: ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾಗಿ 260ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ ಚಿಸ್ವಾಸ್‌ ಕುಮಾರ್‌ ರಮೇಶ್‌ ಒಬ್ಬರೇ ಬದುಕುಳಿದಿದ್ದಾರೆ. ವಿವಿಧ ವಿಮಾನ ಅಪಘಾತಗಳಲ್ಲಿ ಪಾರಾದ ಏಕೈಕ ಪ್ರಯಾಣಿಕರ ವಿವರ ಇಲ್ಲಿದೆ.

ವಿವಿಧ ವಿಮಾನ ಅಪಘಾತಗಳಲ್ಲಿ ಬದುಕುಳಿದ ಏಕೈಕ ಅದೃಷ್ಟಶಾಲಿಗಳಿವರು

ವಿಶ್ವಾಸ್‌ ಕುಮಾರ್‌ ರಮೇಶ್‌ ಅವರನ್ನು ಭೇಟಿಯಾದ ಪ್ರಧಾನಿ ಮೋದಿ.

Profile Ramesh B Jun 13, 2025 6:34 PM

ಹೊಸದಿಲ್ಲಿ: ಇವರು ಸಾವನ್ನೇ ಗೆದ್ದ ಮೃತ್ಯುಂಜಯರು. ಯಾಕೆಂದರೆ ಇವರು ಬದುಕಿ ಬಂದ ರೀತಿಯೇ ಅಂತಹದ್ದು. ಕಣ್ಣ ಮುಂದೆ ಸಾವು ಕುಣಿದಾಡುತ್ತಿದ್ದರೂ ಅದಕ್ಕೆ ಚಳ್ಳೆಹಣ್ಣು ತಿನ್ನಿಸಿ ಮತ್ತೆ ಬದುಕಿನ ಹಾದಿಗೆ ಮರಳಿದವರು. ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ, ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆ ವಿಶ್ವಾಸ್‌ ಕುಮಾರ್‌ ರಮೇಶ್‌ನನ್ನು (Vishwash Kumar Ramesh) ನೋಡುವಾಗಲೆಲ್ಲ ಇವರೂ ನೆನಪಾಗುತ್ತಾರೆ (Ahmedabad plane crash). ವಿವಿಧ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕರ ರೋಮಾಂಚನಕಾರಿ ವಿವರ ಇಲ್ಲಿದೆ.

ವೆಸ್ನಾ ವುಲೋವಿಕ್ (Vesna Vulovic)

ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಪವಾಡ ಸದೃಶ ರೀತಿಯಲ್ಲಿ ಬದುಕುಳಿದವರ ಪಟ್ಟಿ ಪರಿಶೀಲಿಸಿದಾಗ ಅದರಲ್ಲಿ ಕಂಡುಬರುವ ಮೊದಲ ಹೆಸರೇ ಯುಗೊಸ್ಲೋವಿಯಾ ಮೂಲದ ವೆಸ್ನಾ ವುಲೋವಿಕ್. ಗಗನಸಖಿಯಾಗಿದ್ದ ಅವರಿದ್ದ ವಿಮಾನ 33,000 ಅಡಿ (ಸುಮಾರು 10.16 ಕಿ.ಮೀ.) ಎತ್ತರದಿಂದ ಬಿದ್ದರೂ ಬದುಕುಳಿದಿದ್ದರು ಎಂದರೆ ನೀವು ನಂಬಲೇ ಬೇಕು. ಅದೂ ಪ್ಯಾರಚೂಟ್‌ ಸಹಾಯವಿಲ್ಲದೆ ಎನ್ನುವುದು ವಿಶೇಷ. 1972ರ ಜ. 26ರಂದು ಅವರು ಕಾರ್ಯ ನಿರ್ವಹಿಸುತ್ತಿದ್ದ ಯುಗೊಸ್ಲಾವ್ ಏರ್‌ಲೈನ್‌ ಡೌಗ್ಲಾಸ್ ಡಿಸಿ -9 ವಿಮಾನ ಶಂಕಿತ ಬಾಂಬ್ ಸ್ಫೋಟದಿಂದ ಜೆಕೊಸ್ಲೊವಾಕಿಯಾದ ಪರ್ವತಗಳ ನಡುವೆ ಉರುಳಿತು. ವಿಮಾನದಲ್ಲಿ ಒಟ್ಟು 28 ಮಂದಿ ಇದ್ದರು. ಆ ಪೈಕಿ ಬದುಕುಳಿದಿದ್ದು ವೆಸ್ನಾ ವುಲೋವಿಕ್‌ ಮಾತ್ರ. 33,000 ಅಡಿ ಎತ್ತರದಿಂದ ಬಿದ್ದರೂ ಅವರು ಪಾರಾಗಿದ್ದು ಇಂದಿಗೂ ಸೋಜಿಗ ಎನಿಸಿಕೊಂಡಿದೆ. ಇವರು 2016ರಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನೂ ಓದಿ: Ahmedabad Plane Crash: ಅಹಮದಾಬಾದ್‌ ವಿಮಾನ ದುರಂತ; ಮೃತ ದೇಹದ ಪತ್ತೆಗೆ ಇರುವ ದಾರಿಗಳೇನು?

ಜೂಲಿಯಾನೆ ಕೊಯೆಪ್ಕೆ (Juliane Koepcke)

1971ರಲ್ಲಿ ಪೆರುವಿವ ಮಳೆ ಕಾಡಿನಲ್ಲಿ ಅಪಘಾತಕ್ಕೀಡಾದ ಲ್ಯಾನ್ಸಾ ಫ್ಲೈಟ್ 508ರಲ್ಲಿ ಬದುಕುಳಿದ ಏಕೈಕ ಪ್ರಯಾಣಿಕರೆಂದರೆ ಅದು ಪೆರು ಮೂಲದ ಜೂಲಿಯಾನೆ ಕೊಯೆಪ್ಕೆ. ಅಂದು ಅವರಿಗೆ 17 ವರ್ಷ ವಯಸ್ಸಾಗಿತ್ತು. ಎಬಿಸಿ ಆಸ್ಟ್ರೇಲಿಯಾ ಪ್ರಕಾರ, 99 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ 3,000 ಮೀಟರ್ (9,842 ಅಡಿ) ಎತ್ತರದಿಂದ ನೆಲಕ್ಕೆ ಉರುಳಿತ್ತು. ಸದ್ಯ ಅವರಿಗೆ 70 ವರ್ಷ ವಯಸ್ಸು.

ಲಾರಿಸಾ ಸವಿಟ್ಸ್ಕಯಾ (Larisa Savitskaya)

ರಷ್ಯಾ ಮೂಲದ ಲಾರಿಸಾ ಸವಿಟ್ಸ್ಕಯಾ 1981ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬಚಾವಾದ ಮತ್ತೊಬ್ಬ ಅದೃಷ್ಟವಂತೆ. ವಿಮಾನ 5,220 ಮೀಟರ್ (17,000 ಅಡಿಗಳಿಗಿಂತ ಹೆಚ್ಚು) ಎತ್ತರದಿಂದ ಬಿದ್ದಾಗ ವಿಮಾನದ ತುಣುಕನ್ನು ಹಿಡಿದುಕೊಂಡು ಬದುಕುಳಿದಿದ್ದರು. ಆಗ ಅವರಿಗೆ 20 ವರ್ಷ. ಹನಿಮೂನ್‌ ಮುಗಿಸಿ ಪತಿಯೊಂದು ಮರಳುತ್ತಿದ್ದಾಗ ಇವರಿದ್ದ ಏರೋಫ್ಲೋಟ್ ಫ್ಲೈಟ್ 811 ರಷ್ಯಾದ ಅಮುರ್ ಒಬ್ಲಾಸ್ಟ್‌ನಲ್ಲಿ ಪತನವಾಗಿತ್ತು. ಈ ವಿಮಾನದಲ್ಲಿ ಒಟ್ಟು 38 ಪ್ರಯಾಣಿಕರಿದ್ದರು. ಈ ಪೈಕಿ ಲಾರಿಸಾ ಸವಿಟ್ಸ್ಕಯಾ ಒಬ್ಬರೇ ಉಳಿದಿದ್ದರು. ಇವರು 2013ರಲ್ಲಿ ನಿಧನರಾದರು.

ಬಹಿಯಾ ಬಕಾರಿ (Bahia Bakari)

ಫ್ರಾನ್ಸ್‌ ಮೂಲದ ಬಹಿಯಾ ಬಕಾರಿ 2009ರಲ್ಲಿ ಕೊಮೊರೊಸ್ ಬಳಿ ನಡೆದ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಸಂಚಾರಿ. ಆಗ ಅವರಿಗೆ 12 ವರ್ಷ ವಯಸ್ಸು. ಯೆಮೆನಿಯಾ ಏರ್‌ವೇಸ್‌ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 152 ಜನರು ಮೃತಪಟ್ಟಿದ್ದರು. ಆ ವೇಳೆ ಬಹಿಯಾ ಬಕಾರಿ ಧೈರ್ಯಗುಂದದೆ ಸಮುದ್ರಕ್ಕೆ ಹಾರಿ ಪಾರಾಗಿದ್ದರು.

ಅನೆಟ್ ಹರ್ಫ್ಕೆನ್ಸ್ (Annette Herfkens)

1992ರಲ್ಲಿ ಹೋ ಚಿ ಮಿನ್ಹ್ ನಗರದಿಂದ ವಿಯೆಟ್ನಾಂ ಕರಾವಳಿಗೆ ಪ್ರಯಾಣಿಸುತ್ತಿದ್ದ ವಿಯೆಟ್ನಾಂ ಏರ್‌ಲೈನ್ಸ್‌ ಫ್ಲೈಟ್‌ 474 ವಿಮಾನ ಪತನವಾಗಿ ಅನೆಟ್ ಹರ್ಫ್ಕೆನ್ಸ್ ಒಬ್ಬರೇ ಬದುಕುಳಿದಿದ್ದರು. ವಿಮಾನದಲ್ಲಿ ಒಟ್ಟು 31 ಜನರಿದ್ದರು.

ವಿಶ್ವಾಸ್‌ ಕುಮಾರ್‌ ರಮೇಶ್‌ (Vishwash Kumar Ramesh)

ಇನ್ನು ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ 40 ವರ್ಷದ ಬ್ರಿಟಿಷ್ ಪ್ರಜೆಯಾಗಿದ್ದು, ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಅವರು ಸಹೋದರ ಅಜಯ್ ಕುಮಾರ್ ರಮೇಶ್ (45) ಅವರೊಂದಿಗೆ ಬ್ರಿಟನ್​​ಗೆ ಹಿಂತಿರುಗುತ್ತಿದ್ದರು. ವಿಶ್ವಾಸ್ ವಿಮಾನದಲ್ಲಿ 11Aಯಲ್ಲಿ ಕುಳಿತಿದ್ದರೆ, ಅವರ ಸಹೋದರ ಮತ್ತೊಂದು ಸಾಲಿನಲ್ಲಿ ಕುಳಿತಿದ್ದರು. ವಿಮಾನದಲ್ಲಿ ಒಟ್ಟು 242 ಮಂದಿ ಇದ್ದರು. ಈಗ ಉಳಿದಿರುವವರು ವಿಶ್ವಾಸ್ ಕುಮಾರ್ ರಮೇಶ್ ಒಬ್ಬರೇ. ‘ʼಜನರು ಜೀವಂತ ಉರಿಯುತ್ತಿರುವುದನ್ನು ನಾನು ನೋಡಿದೆ. ನನ್ನ ಸೀಟು 11ಎ ಆಗಿತ್ತು. ವಿಮಾನವು ಕಟ್ಟಡದ ನೆಲ ಮಹಡಿಗೆ ಡಿಕ್ಕಿ ಹೊಡೆದಿತ್ತು. ಬೆಂಕಿಯಿಂದಾಗಿ ಎಡಗೈ ಸುಟ್ಟುಹೋಗಿತ್ತು. ಅಲ್ಲಿಂದ ಹೊರ ಜಿಗಿದು ಓಡಿ ಹೊರಬಂದೆ. ನನ್ನನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆತಂದರು’ ಎಂದು ವಿಶ್ವಾಸ್ ಕುಮಾರ್ ತಿಳಿಸಿದ್ದಾರೆ.