VB-G RAM G Bill: ಲೋಕಸಭೆಯಲ್ಲಿ ವಿಬಿ-ಜಿ ರಾಮ್ ಜಿ ಮಸೂದೆ ಅಂಗೀಕಾರ; ವಿಪಕ್ಷಗಳಿಂದ ಪ್ರತಿ ಹರಿದು ಹಾಕಿ ಭಾರೀ ಪ್ರತಿಭಟನೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲು ಮಾಡಿ ವಿಕಸಿತ್ ಭಾರತ್ – ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 ಅನ್ನು (ವಿಬಿ–ಜಿ ರಾಮ್ ಜಿ) ಮಸೂದೆಯನ್ನು ಲೋಕಸಭೆ ಗುರುವಾರ ಅಂಗೀಕರಿಸಿತು.
ಸಾಂಧರ್ಬಿಕ ಚಿತ್ರ -
ನವದೆಹಲಿ: ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ (VB-G RAM G Bill) ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲು ಮಾಡಿ ವಿಕಸಿತ್ ಭಾರತ್ – ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 ಅನ್ನು (ವಿಬಿ–ಜಿ ರಾಮ್ ಜಿ) ಮಸೂದೆಯನ್ನು ಲೋಕಸಭೆ ಗುರುವಾರ ಅಂಗೀಕರಿಸಿತು. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ 16 ರಂದು ಸಂಸತ್ತಿನಲ್ಲಿ ವಿಬಿ-ಜಿ ರಾಮ್ ಜಿ ಮಸೂದೆಯನ್ನು ಮಂಡಿಸಿದರು.
ಪ್ರಸ್ತಾವಿತ ಶಾಸನವು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಈ ಉಪಕ್ರಮಕ್ಕಾಗಿ ಸರ್ಕಾರ ₹ 95,000 ಕೋಟಿ ಹಂಚಿಕೆ ಮಾಡಿದೆ. ಹೊಸ ಕಾನೂನು ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಒಂದು ಹಣಕಾಸು ವರ್ಷದಲ್ಲಿ ಪ್ರಸ್ತುತ ಖಾತರಿಪಡಿಸಿರುವ ವೇತನ ಸಹಿತ ಕೆಲಸ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಮಹಾತ್ಮಾ ನನ್ನ ಕುಟುಂಬದವರಲ್ಲ... ನರೇಗಾ ಕಾನೂನು ದುರ್ಬಲಗೊಳಿಸಲಿದೆ ಹೊಸ ಮಸೂದೆ: ಪ್ರಿಯಾಂಕಾ ಗಾಂಧಿ
ವಿರೋಧ ಪಕ್ಷದ ಪ್ರತಿಭಟನೆಯ ನಡುವೆಯೇ ಲೋಕಸಭೆಯು ಜಿ ರಾಮ್ ಜಿ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ಹಲವಾರು ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು, ಮಸೂದೆಯ ಪ್ರತಿಗಳನ್ನು ಹರಿದು ಪೀಠದ ಕಡೆಗೆ ಎಸೆದರು. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು, ಎಂಜಿಎನ್ಆರ್ಇಜಿಎ ಹಿಂತೆಗೆದುಕೊಳ್ಳುವ ಮೂಲಕ ಎನ್ಡಿಎ ಸರ್ಕಾರವು ಮಹಾತ್ಮ ಗಾಂಧಿಯವರನ್ನು ಅವಮಾನಿಸುತ್ತಿದೆ ಮತ್ತು ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಕಿಡಿ ಕಾರಿದೆ.
ವಿಬಿ-ಜಿ RAM ಜಿ ಬಿಲ್ ಎಂದರೇನು?
ಯುಪಿಎ ಆಡಳಿತಾವಧಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನೇರಗಾ) ಹೆಸರಿನ ಬದಲಿಗೆ ಕೇಂದ್ರ ಸರ್ಕಾರ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ ಎಂದು ಹೆಸರು ಬದಲಾಯಿಸಲಾಗಿದೆ. ಹೊಸ ಮಸೂದೆಯು 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ . ಪ್ರಸ್ತಾವಿತ ಕಾನೂನು "ಗ್ರಾಮಗಳ ಸಮಗ್ರ ಅಭಿವೃದ್ಧಿಗೆ" ಕಾರಣವಾಗುತ್ತದೆ ಮತ್ತು "ಪ್ರತಿಯೊಬ್ಬ ಬಡವರಿಗೂ ಹೇರಳವಾದ ಉದ್ಯೋಗವನ್ನು ಒದಗಿಸುತ್ತದೆ, ಅವರ ಘನತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಅಂಗವಿಕಲರು, ವೃದ್ಧರು, ಮಹಿಳೆಯರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ" ಎಂದು ಶಿವರಾಜ್ ಚೌಹಾಣ್ ಹೇಳಿದ್ದಾರೆ.