ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಛತ್ತೀಸ್‌ಗಢ ಮತ್ತೆ ಮಾವೋವಾದಿಗಳ ಅಟ್ಟಹಾಸ; ಇಬ್ಬರು ನಾಗರಿಕರ ಹತ್ಯೆ

Chhattisgarh: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಭಾನುವಾರ ಇಬ್ಬರು ನಾಗರಿಕರನ್ನು ಹತೈಗೈದಿದೆ. ಈ ಹತ್ಯೆ ಸೆಂದ್ರಾಬೋರ್ ಮತ್ತು ಏಂಪುರ ಗ್ರಾಮಗಳಲ್ಲಿ ನಡೆದಿದೆ. ದಕ್ಷಿಣ ಬಿಜಾಪುರದ ಪಮೇದ್ ಪೊಲೀಸ್ ಠಾಣೆ ವ್ಯಾಪ್ತಿಯ ಈ ಪ್ರದೇಶದಲ್ಲಿ ಮಾವೋವಾದಿ ಚಟುವಟಿಕೆ ಹೆಚ್ಚಿದೆ.

ಛತ್ತೀಸ್‌ಗಢ ಮತ್ತೆ ಮಾವೋವಾದಿಗಳ ಅಟ್ಟಹಾಸ; ಇಬ್ಬರು ನಾಗರಿಕರ ಹತ್ಯೆ

ಸಾಂಧರ್ಬಿಕ ಚಿತ್ರ.

Profile Ramesh B Jun 22, 2025 7:19 PM

ರಾಯ್‌ಪುರ: ಮಾಮೋವಾದಿಗಳ (Maoists) ಅಟ್ಟಹಾಸ ಮತ್ತೆ ಮುಂದುವರಿದಿದ್ದು, ಛತ್ತೀಸ್‌ಗಢ (Chhattisgarh)ದಲ್ಲಿ ಇಬ್ಬರು ನಾಗರಿಕರನ್ನು ಹತ್ಯೆಗೈದಿದೆ. ಛತ್ತೀಸ್‌ಗಢದ ಬಿಜಾಪುರ (Bijapur) ಜಿಲ್ಲೆಯಲ್ಲಿ ಈ ಘಟನೆ ಭಾನುವಾರ (ಜೂ. 22) ನಡೆದಿದೆ. ಪೊಲೀಸ್ ಹೇಳಿಕೆಯ ಪ್ರಕಾರ, ಈ ಹತ್ಯೆ ಸೆಂದ್ರಾಬೋರ್ ಮತ್ತು ಏಂಪುರ ಗ್ರಾಮಗಳಲ್ಲಿ ನಡೆದಿದೆ. ಈ ಗ್ರಾಮಗಳು ದಕ್ಷಿಣ ಬಿಜಾಪುರದ ಪಮೇದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿವೆ. ಈ ಪ್ರದೇಶದಲ್ಲಿ ಮಾವೋವಾದಿ ಚಟುವಟಿಕೆ ಹೆಚ್ಚಿದೆ.

ಕೊಲೆಗಳ ಉದ್ದೇಶ ಮತ್ತು ನಿಖರವಾದ ಸಮಯ ಇನ್ನೂ ದೃಢಪಟ್ಟಿಲ್ಲ. ಅದಾಗ್ಯೂ ಪೊಲೀಸರು ಘಟನೆಯ ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ 2 ದಿನಗಳ ಭೇಟಿಗಾಗಿ ರಾಯ್‌ಪುರಕ್ಕೆ ಆಗಮಿಸಲಿರುವ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಭದ್ರತೆಯನ್ನು ಅಮಿತ್‌ ಶಾ ಪರಿಶೀಲಿಸುವ ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದೆಯಷ್ಟೇ ಮಾವೋವಾದಿಗಳು ಮೂವರು ಗ್ರಾಮಸ್ಥರು ಹತ್ಯೆಗೈದಿದ್ದರು. ಆ ಘಟನೆ ಮಾಸುವ ಮುನ್ನವೇ ಈ ಕೃತ್ಯ ನಡೆದಿದೆ. ಜೂ. 17ರಂದು ಬಿಜಾಪುರ ಜಿಲ್ಲೆಯ ಪೆದ್ದಕೋರ್ಮ ಗ್ರಾಮದಲ್ಲಿ 13 ವರ್ಷದ ಬಾಲಕ ಸೇರಿ ಮೂವರನ್ನು ಮಾವೋವಾದಿಗಳು ಕೊಲೆ ಮಾಡಿದ್ದರು. ಕೊಲೆಯಾದ ಮೂವರ ಪೈಕಿ ಇಬ್ಬರು ಈ ವರ್ಷದ ಮಾರ್ಚ್‌ನಲ್ಲಿ ಶರಣಾದ ಮಾವೋವಾದಿ ಮುಖಂಡ ದಿನೇಶ್‌ ಮೋಡಿಯಾಮ್‌ನ ಸಂಬಂಧಿಕರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Encounter In Chhattisgarh: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; 50 ಲಕ್ಷ ರೂ. ಇನಾಮು ಹೊಂದಿದ್ದ ಮಾವೋವಾದಿ ಮುಖಂಡನ ಹತ್ಯೆ

ಭಾನುವಾರ ನಡೆದ ಹತ್ಯೆ ದಿನೇಶ್‌ ಶರಣಾಗತಿಗೆ ಸಂಬಂಧಿಸಿದೆಯೇ ಎಂಬ ಬಗ್ಗೆಯೂ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಪೊಲೀಸರನ್ನು ಬೆಂಬಲಿಸುವ ಮತ್ತು ಸಹಕರಿಸುವ ಶಂಕಿತರ ವಿರುದ್ಧ ಮಾವೋವಾದಿಗಳು ನಡೆಸುವ ಪ್ರತೀಕಾರದ ಭಾಗವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಅಮಿತ್‌ ಶಾ ಭೇಟಿಗೂ ಮುನ್ನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ. ಅವರು ಬಸ್ತಾರ್‌ನ ಮಾವೋವಾದಿ ಪ್ರಾಬಲ್ಯದ ಪ್ರದೇಶಗಳಲ್ಲಿನ ಆಂತರಿಕ ಭದ್ರತೆಯ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.

ಛತ್ತೀಸ್‌ಗಢದಲ್ಲಿ ಆಪರೇಷನ್ ಬ್ಲ್ಯಾಕ್‌ ಫಾರೆಸ್ಟ್‌: 27 ನಕ್ಸಲರ ಹತ್ಯೆ

ಮೇಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ ಛತ್ತೀಸ್‌ಗಢದಲ್ಲಿ 'ಆಪರೇಷನ್ ಬ್ಲ್ಯಾಕ್‌ ಫಾರೆಸ್ಟ್’ ಕಾರ್ಯಾಚರಣೆ ನಡೆಸಿ ಮಾವೋವಾದಿಯ ಪ್ರಧಾನ ಕಾರ್ಯದರ್ಶಿ ಬಸವರಾಜು ಸೇರಿದಂತೆ 27 ಕಟ್ಟಾ ನಕ್ಸಲರನ್ನು ಹತ್ಯೆಗೈದಿದ್ದರು. 30 ವರ್ಷಗಳಲ್ಲಿ ಮೊದಲ ಬಾರಿಗೆ ಇಷ್ಟು ಉನ್ನತ ಶ್ರೇಣಿಯ ಮಾವೋವಾದಿ ನಾಯಕನನ್ನು ನಿಗ್ರಹಿಸಲಾಗಿತ್ತು. ಇದರ ಜತೆಗೆ 54 ನಕ್ಸಲರನ್ನು ಬಂಧಿಸಲಾಗಿದ್ದು, 84 ಮಂದಿ ಶರಣಾಗಿದ್ದರು. ಛತ್ತೀಸ್‌ಗಢ-ತೆಲಂಗಾಣ ಗಡಿಯ ಕುರ್ರಗುಟ್ಟ ಬೆಟ್ಟಗಳಲ್ಲಿ ಕೇಂದ್ರೀಕೃತವಾಗಿದ್ದ ಈ ಕಾರ್ಯಾಚರಣೆ, ಮಾವೋವಾದಿಗಳ ಅಗಮ್ಯ ಕೋಟೆಯಾಗಿದ್ದ ಪ್ರದೇಶದಲ್ಲಿ 3 ವಾರಗಳ ಕಾಲ ನಡೆಯಿತು. ʼʼಪ್ರಮುಖ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಪಿಎಲ್‌ಜಿಎ ಬೆಟಾಲಿಯನ್ 1 ಹಾಗೂ ದಂಡಕಾರಣ್ಯ ವಿಶೇಷ ವಲಯ ಸಮಿತಿಯಂತಹ ನಕ್ಸಲ್ ಸಂಘಟನೆಗಳನ್ನು ಛಿದ್ರಗೊಳಿಸಲಾಯಿತು. 300ಕ್ಕೂ ಹೆಚ್ಚು ಐಇಡಿಗಳು, 900 ಸ್ಫೋಟಕ ಬಂಡಲ್‌ಗಳು, ಬಿಜಿಎಲ್‌ ಶೆಲ್‌ಗಳ, ಮತ್ತು ಶಸ್ತ್ರಾಸ್ತ್ರ ತಯಾರಿಕೆಯ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆʼʼ ಅದಿಕಾರಿಗಳು ತಿಳಿಸಿದ್ದರು.