ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಅಂಬೇಡ್ಕರ್‌ ಗೆದ್ದ ಹಿಂದೂ ಬಾಹುಳ್ಯದ ಪ್ರದೇಶವನ್ನೇ ಪಾಕ್‌ಗೆ ಬಿಟ್ಟುಕೊಟ್ಟ ಕಾಂಗ್ರೆಸ್‌: ಪ್ರಲ್ಹಾದ್‌ ಜೋಶಿ ವಾಗ್ದಾಳಿ

Pralhad Joshi: ಮಹಾತ್ಮ ಗಾಂಧಿ ಅವರ ಶತಮಾನ ಸಂಭ್ರಮವೇ ಆಗಲಿ, ಅಂಬೇಡ್ಕರ್‌ ಅವರ ʼಭೀಮ ಹೆಜ್ಜೆʼ ಸಂಭ್ರಮವೇ ಆಗಲಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು, ದಲಿತ ನಾಯಕರು ಮತ್ತು ದಲಿತ ಚಿಂತಕರನ್ನು ಕರೆದು ಚರ್ಚಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ, ಸರ್ಕಾರ ಮಹಾತ್ಮಾ ಗಾಂಧಿ ಅವರ ಶತಮಾನ ಸಮಾರಂಭವನ್ನು ಪಕ್ಷದ ಒಂದು ಸಮಾವೇಶದ ರೀತಿ ಆಚರಿಸಿದರೆ, ‘ಭೀಮ ಹೆಜ್ಜೆ’ ಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಕಾರ್ಯಕ್ರಮಕ್ಕೆ ಪ್ರಲ್ಹಾದ್‌ ಜೋಶಿ ಚಾಲನೆ

Profile Siddalinga Swamy Apr 11, 2025 6:00 PM

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಅವಮಾನಿಸುತ್ತಲೇ ಬಂದಿದೆ. ಅಂಬೇಡ್ಕರ್‌ ಗೆದ್ದಂತಹ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತಹ ದುರುಳ ನೀತಿ ತೋರಿದವರು ಕಾಂಗ್ರೆಸ್ಸಿಗರು. ಈಗ ದಲಿತರ ವೋಟ್‌ ಬ್ಯಾಂಕ್‌ಗಾಗಿ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದರು. ಬೆಂಗಳೂರಿನಲ್ಲಿ ಇಂದು ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್‌ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಲೆಂದೇ ಕಾಂಗ್ರೆಸ್‌ ಅಂದು ಅಂಬೇಡ್ಕರ್‌ ಗೆದ್ದಂತಹ ಜೈಸೂರು, ಕುಲ್ಲಾ, ಹರೀದ್ಪುರ ಪ್ರದೇಶಗಳನ್ನು ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು ಎಂದು ಗಂಭೀರ ಆರೋಪ ಮಾಡಿದರು.

ದೇಶಕ್ಕೆ ಒಂದು ಸಂವಿಧಾನದ ಸುಭದ್ರ ಚೌಕಟ್ಟು ನಿರ್ಮಿಸಿಕೊಟ್ಟಂತಹ ಮಹಾನ್‌ ನಾಯಕ ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಪಕ್ಷ ಸ್ವತಂತ್ರ ಪೂರ್ವದಿಂದಲೂ ಮಹಾ ಅವಮಾನಗಳನ್ನೇ ಮಾಡುತ್ತ ಬಂದಿದೆ. ಗಾಂಧಿ, ನೆಹರು ಕಾಲದಿಂದ ಇಲ್ಲಿವರೆಗೂ ಇದು ಮುಂದುವರಿದೇ ಇದೆ. ಪ್ರಸ್ತುತದಲ್ಲಿ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವಗಣನೆಯೂ ಇದಕ್ಕೊಂದು ನಿದರ್ಶನ ಎಂದು ದೂರಿದರು.

ಅಂಬೇಡ್ಕರ್‌ ಅವರು ಚುನಾವಣೆ ಮೂಲಕ ಸಂವಿಧಾನ ಸಭೆ ಪ್ರವೇಶಿಸಲು ಬಯಸಿದರೆ ಎರಡು ಬಾರಿಯೂ ಬೆಂಬಲಿಸದ ಕಾಂಗ್ರೆಸ್‌ ಕುತಂತ್ರ ನಡೆಸಿ ಸೋಲಿಸಿತು. ಕೊನೆಗೆ ದಲಿತ ನಾಯಕ ಜೋಗೇಂದ್ರನಾಥ್ ಮೊಂಡಲ್ ಅವರ ಒತ್ತಾಯದ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿ ಸಂವಿಧಾನ ಸಭೆಗೆ ಆಯ್ಕೆಯಾದರು. ಆದರೆ ಇದನ್ನೂ ಸಹಿಸದ ಕಾಂಗ್ರೆಸ್‌, ಅಂಬೇಡ್ಕರ್‌ ಗೆದ್ದ ಬಹುಸಂಖ್ಯಾತ ಹಿಂದೂಗಳಿದ್ದ ಕ್ಷೇತ್ರಗಳನ್ನೇ ಪಾಕ್‌ಗೆ ಬಿಟ್ಟುಕೊಟ್ಟಿತು ಎಂದು ಸಚಿವ ಜೋಶಿ ದೂರಿದರು.

1952ರಲ್ಲಿ ಮೊದಲ ಲೋಕಸಭಾ ಚುನಾವಣೆಗೆ ಅಂಬೇಡ್ಕರ್‌ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ಅಂಬೇಡ್ಕರ್‌ ಸಹಾಯಕನನ್ನೇ ಅಪಹರಿಸಿ ಅವರ ವಿರುದ್ಧ ಎತ್ತಿಕಟ್ಟಿ ಕಣಕ್ಕಿಳಿಸಿತು. ಪ್ರಧಾನಿ ನೆಹರೂ ಎರಡೆರಡು ಬಾರಿ ಪ್ರಚಾರಕ್ಕೆ ಹೋಗಿ ಸೋಲುವಂತೆ ಮಾಡಿದರು. 1954ರಲ್ಲಿ ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಗೆಲ್ಲಲು ಬಿಡಲಿಲ್ಲ ಎಂದರು.

ಅಂಬೇಡ್ಕರ್‌ ಅವರನ್ನು ಪರಾಭವಗೊಳಿಸಿದ ನಾರಾಯಣ ಕಾಟ್ರೋಲ್ಕರ್‌ಗೆ 1970ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟ ಕಾಂಗ್ರೆಸ್‌, ಸಂವಿಧಾನ ಶಿಲ್ಪಿಗೆ ಭಾರತ ರತ್ನ ಪುರಸ್ಕಾರ ನೀಡದೆ ಅವಮಾನಿಸಿತು. ಸಂಸತ್‌ ಭವನದಲ್ಲಿ ಅಂಬೇಡ್ಕರ್‌ ತೈಲ ಚಿತ್ರ ಅನಾವರಣಕ್ಕೂ ಬಿಡಲಿಲ್ಲ. ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ಸಹ ನೀಡಲಿಲ್ಲ ಅಂದಿನ ಕಾಂಗ್ರೆಸ್‌ ಸರ್ಕಾರ. ಕೊನೆಗೆ ಮುಂಬೈನ ಸಮುದ್ರ ತಟದಲ್ಲಿ ಅವರ ಅನುಯಾಯಿಗಳು ಅಂತಿಮ ಸಂಸ್ಕಾರ ನೆರವೇರಿಸಬೇಕಾಯಿತು. ಹೀಗೆ ಅಂಬೇಡ್ಕರ್‌ ಅವರಿಗೆ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್‌ ಅವಮಾನ ತೋರುತ್ತಲೇ ಬಂದಿದೆ ಎಂದು ಆರೋಪಿಸಿದರು.

1990ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್‌ ಸರ್ಕಾರ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಿತು. ವಾಜಪೇಯಿ ಅವರ ಆಗ್ರಹದ ಮೇರೆಗೆ ಸಂಸತ್‌ ಭವನದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಮನ್ನಣೆ ದೊರಕಿತು ಎಂದು ತಿಳಿಸಿದರು.

ಅಂಬೇಡ್ಕರ್‌ ಬರೆದ ಪತ್ರವೇ ಇಲ್ಲ!

ನೆಹರು ಅವರ ಸರ್ಕಾರದಲ್ಲಿ ಡಾ.ಅಂಬೇಡ್ಕರ್‌ ಅವರು ರಾಜೀನಾಮೆ ಕೊಡುತ್ತಲೇ ಒಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ತಮ್ಮನ್ನು ಹೇಗೆ ನಡೆಸಿಕೊಂಡಿದೆ. ಚುನಾವಣೆಯಲ್ಲಿ ಹೇಗೆ ಸೋಲಿಸಿತು ಮತ್ತು ದಲಿತರಿಗೆ, ಒಬಿಸಿಯವರಿಗೆ ಮೀಸಲಾತಿ ಕಲ್ಪಿಸುವಲ್ಲಿ ಅದೆಷ್ಟು ವಿರೋಧ ವ್ಯಕ್ತಪಡಿಸಿತು ಎಂಬ ಅನೇಕ ಸಂಗತಿಗಳುಳ್ಳ ಈ ಪತ್ರವನ್ನು ಇತಿಹಾಸದಲ್ಲಿ ಎಲ್ಲೂ ಲಭ್ಯವಿಲ್ಲದಂತೆ ಮಾಡಿದೆ ಕಾಂಗ್ರೆಸ್‌ ಎಂದು ಆರೋಪಿಸಿದರು.

ಮೀಸಲಾತಿ ವಿರೋಧಿಸಿದವರು ಕಾಂಗ್ರೆಸ್‌ ನಾಯಕರು

ಅಂಬೇಡ್ಕರ್‌ ಅವರು ದಲಿತರಿಗೆ ಸಂವಿಧಾನ ಬದ್ಧ ಮೀಸಲಾತಿ ಕಲ್ಪಿಸಿದರೆ, ಪಂಡಿತ್‌ ನೆಹರು ಅವರು ಅದನ್ನು ವಿರೋಧಿಸಿ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ನಂತರದಲ್ಲಿ ರಾಜೀವ ಗಾಂಧಿ ಅವರೂ ದಲಿತ ಮತ್ತು ಒಬಿಸಿ ಮೀಸಲಾತಿ ವಿರೋಧಿಸಿ ಸುದೀರ್ಘ ಭಾಷಣ ಮಾಡಿದ್ದರು. ಇಂದಿನ ಕಾಂಗ್ರೆಸ್‌ ನಾಯಕರಲ್ಲೂ ಅದೇ ಧೋರಣೆಯಿದೆ. ದಲಿತರನ್ನು, ಓಬಿಸಿಯವರನ್ನು, ಮುಸ್ಲಿಂರನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದರು.

ದಲಿತ ನಾಯಕ ಖರ್ಗೆ ಅವರಿಗೆ ಅವಮಾನ

ದಲಿತ ವಿರೋಧಿ ನೀತಿ ಕಾಂಗ್ರೆಸ್‌ನವರಿಗೆ ನೆಹರು, ರಾಜೀವ ಗಾಂಧಿ ಅವರಿಂದ ರಕ್ತಗತವಾಗಿ ಬಂದಿದೆ. ಹಾಗಾಗಿ ಮೊನ್ನೆ ಮೊನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್‌ ಸಮಾವೇಶದಲ್ಲಿ ಖರ್ಗೆ ಅವರಿಗೆ ಮುಖ್ಯ ಭೂಮಿಕೆಯಲ್ಲಿ ಕುರ್ಚಿ ಕೊಡದೆ, ಎಲ್ಲೋ ಒಂದು ಬದಿಗೆ ಸೋಫಾ ಮೇಲೆ ಕುಳ್ಳಿರಿಸಿ ಒಬ್ಬ ದಲಿತ ನಾಯಕನನ್ನು ಅವಮಾನಿಸಿದ್ದಾರೆ. ದಲಿತ ವಿರೋಧಿ ಮನಸ್ಥಿತಿ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.

ʼಭೀಮ ಹೆಜ್ಜೆʼಗೆ ಕಡೆಗಣಿಸಿದ ರಾಜ್ಯ ಸರ್ಕಾರ

ಮಹಾತ್ಮಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ ʼಶತಮಾನ ಸಂಭ್ರಮʼ ಆಚರಿಸಿದ ಕಾಂಗ್ರೆಸ್‌ ಸರ್ಕಾರ, ಅದೇ ಬೆಳಗಾವಿಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಬಂದು ಹೋದ ನೆನಪಿಗೆ ʼಶತಮಾನ ಸಂಭ್ರಮʼ ಆಚರಿಸದೆ ʼಅವಮಾನ ಸಂಪ್ರದಾಯʼವನ್ನು ಮುಂದುವರಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ಮಹಾತ್ಮ ಗಾಂಧಿ ಅವರ ಶತಮಾನ ಸಂಭ್ರಮವೇ ಆಗಲಿ, ಅಂಬೇಡ್ಕರ್‌ ಅವರ ʼಭೀಮ ಹೆಜ್ಜೆʼ ಸಂಭ್ರಮವೇ ಆಗಲಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು, ದಲಿತ ನಾಯಕರು ಮತ್ತು ದಲಿತ ಚಿಂತಕರನ್ನು ಕರೆದು ಚರ್ಚಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ, ಸರ್ಕಾರ ಮಹಾತ್ಮಾ ಗಾಂಧಿ ಅವರ ಶತಮಾನ ಸಮಾರಂಭವನ್ನು ಪಕ್ಷದ ಒಂದು ಸಮಾವೇಶದ ರೀತಿ ಆಚರಿಸಿದರೆ, ‘ಭೀಮ ಹೆಜ್ಜೆ’ ಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಸಚಿವ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯ ಕಾಂಗ್ರೆಸ್‌ ಸರ್ಕಾರ ʼಭೀಮ ಹೆಜ್ಜೆʼ ಸಂಭ್ರಮ ಆಚರಿಸದೆ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ಅವಮಾನಿಸಿದೆ: ಜೋಶಿ ಆರೋಪ

ಬಿಜೆಪಿಯಿಂದ 5 ದಿನ ಭೀಮ ಹೆಜ್ಜೆ ಕಾರ್ಯಕ್ರಮ

100 ವರ್ಷಗಳ ಹಿಂದೆ 1925ರಲ್ಲಿ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಏ.10, 11ರಂದು ಎರಡು ದಿನಗಳ ಕಾಲ ನಡೆದ ಹಿತಕಾರಿಣಿ ಸಭಾದ ಅಧಿವೇಶನದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದ್ದರು. ಈ ಐತಿಹಾಸಿಕ ದಿನದ ನೆನಪಾಗಿ ʼಭೀಮ ಹೆಜ್ಜೆʼ ಶತಮಾನದ ಸಂಭ್ರಮ. ಆಚರಿಸುತ್ತಿದ್ದು, ನಿರಂತರ ಐದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. 15ರಂದು ನಿಪ್ಪಾಣಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಯುಕ್ತ ಬೆಂಗಳೂರಿನಿಂದ ನಿಪ್ಪಾಣಿವರೆಗೆ ಬೈಕ್ ಜಾಥಾ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.‌ ಈ ವೇಳೆ ವಿಪಕ್ಷ ನಾಯಕರಾದ ಆರ್‌.ಅಶೋಕ್‌, ಚಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಹಾಗೂ ವಿವಿಧ ದಲಿತ ನಾಯಕರು, ಮುಖಂಡರು ಪಾಲ್ಗೊಂಡಿದ್ದರು.