Holi 2025: ಹೋಳಿ ಹಬ್ಬದ ಪೌರಾಣಿಕ ಹಿನ್ನೆಲೆ ಏನು...? ಹೋಲಿಕಾ ದಹನ ಯಾಕೆ ಮಾಡುತ್ತಾರೆ ಗೊತ್ತಾ..?
ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬ, ಆಚರಣೆ, ಸಂಪ್ರದಾಯಕ್ಕೂ ಅದರದ್ದೆ ಆದ ಇತಿಹಾಸ, ಮಹತ್ವ, ಧಾರ್ಮಿಕ ಹಿನ್ನೆಲೆ ಮತ್ತು ವೈಜ್ಞಾನಿಕ ಕಾರಣಗಳಿದ್ದು, ಹೋಳಿ ಹಬ್ಬವು ಅದರ ಹೊರತಾಗಿಲ್ಲ. ಆ ಹೋಳಿಯ ಇತಿಹಾಸದ ಕುರಿತು ಮಾಹಿತಿ ಇಲ್ಲಿದೆ.

ಹೋಳಿ ಆಚರಣೆ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬವು ವಿಶೇಷವಾದ ಹಿನ್ನೆಲೆ ಹಾಗೂ ಕಥೆಯನ್ನು ಒಳಗೊಂಡಿದೆ. ಅಂತೆಯೇ ಹೋಳಿ ಹಬ್ಬ ಎಂದು ಕರೆಯುವ ಬಣ್ಣದ ಹಬ್ಬವು ವಿಶೇಷವಾದ ಆಚರಣೆಯನ್ನು ಒಳಗೊಂಡಿದೆ. ಈ ಹಬ್ಬವನ್ನು ಪ್ರತಿಯೊಬ್ಬ ವ್ಯಕ್ತಿಯು ಸ್ವಚ್ಛ ಮನಸ್ಸಿನಿಂದ ಆಹ್ವಾನಿಸಿ ಆಚರಿಸಬೇಕು. ತಾನು, ತನ್ನವರು ಹಾಗೂ ನೆರೆಯವರೊಂದಿಗೆ ಕೂಡಿ ನಲಿಯಬೇಕು. ಆಗ ಹೊಸ ವರ್ಷದ ಆರಂಭವು ಜೀವನದಲ್ಲಿ ಸಂತೋಷವನ್ನು ತಂದುಕೊಡುವುದು. ಎಲ್ಲರೊಂದಿಗೂ ಬೆರೆತು ಆಚರಿಸುವ ಈ ಹಬ್ಬವು ಉತ್ತಮ ಒಡನಾಟ ಹಾಗೂ ಮಾನಸಿಕವಾಗಿ ಉಲ್ಲಾಸವನ್ನು ತಂದುಕೊಡುವುದು.
ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ. ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಹಳೆಯ ವಸ್ತುಗಳನ್ನು ಬೆಂಕಿಯಲ್ಲಿ ದಹನ ಮಾಡಿ, ವಿವಿಧ ಬಣ್ಣಗಳನ್ನು ಬಳಸಿಕೊಂಡು ಆಡುವ ಸಂಭ್ರಮದ ಕ್ಷಣಗಳೇ ಹೋಳಿ ಹಬ್ಬ. ಪುರಾಣದ ಕಾಲದಿಂದಲೂ ಯಾವುದೇ ಮೇಲು ಕೀಳು ಎನ್ನುವ ಬೇಧ ಭಾವವಿಲ್ಲದೆ ಮಾನವೀಯತೆಯ ಭಾವನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕತೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಹೊಸತನದ ಸಂತೋಷವನ್ನು ತಂದುಕೊಡುವುದು.
ಪೌರಾಣಿಕ ಹಿನ್ನಲೆ
ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ. ಅದರಲ್ಲಿ ಪ್ರಹ್ಲಾದನ ಕಥೆಯೂ ಸೇರಿಕೊಂಡಿದೆ. ಪ್ರಹ್ಲಾದನು ಹುಟ್ಟಿನಿಂದಲೇ ಮಹಾನ್ ವಿಷ್ಣುವಿನ ಭಕ್ತನಾಗಿದ್ದನು. ನಿತ್ಯವೂ ವಿಷ್ಣು ದೇವರ ಆರಾಧನೆ ಹಾಗೂ ಪೂಜೆ ಮಾಡುವುದರ ಮೂಲಕವೇ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದನು. ಆದರೆ ಅವನ ತಂದೆ ಹಿರಣ್ಯಕಶಿಪು ಬಹಳ ಅಹಂಕಾರಿ ಮತ್ತು ಕ್ರೂರ ರಾಜನಾಗಿದ್ದನು. ಅವನು ತಾನೇ ದೈವಶಕ್ತಿಗಿಂತ ಶ್ರೇಷ್ಠ, ತನ್ನನ್ನೇ ಎಲ್ಲರೂ ಆರಾಧಿಸಬೇಕು ಎಂದು ತನ್ನ ಪ್ರಜೆಗೆ ಆದೇಶ ಹೊರಡಿಸಿದ್ದನು. ಆದರೆ ಅವನ ಮಗನು ತಂದೆಯನ್ನು ಆರಾಧಿಸದೆ ವಿಷ್ಣು ದೇವರ ಆರಾಧನೆಯನ್ನು ಮಾಡುತ್ತಿದ್ದನು. ಅದನ್ನು ಸಹಿಸದ ಹಿರಣ್ಯಕಶಿಪು ಮಗನಿಗೆ ಸರಿಯಾಗಿ ಪಾಠ ಕಲಿಸಬೇಕು, ಅವನ ಚಿಂತನೆಗಳನ್ನು ಬದಲಿಸಬೇಕು ಎಂದು ಬಯಸಿದನು. ಅದರಂತೆಯೇ ಸಾಕಷ್ಟು ಕ್ರಮದಲ್ಲಿ ಅವನಿಗೆ ವಿಷ್ಣು ಆರಾಧನೆ ಮಾಡದಂತೆ ಹೇಳಿದನು. ಆದರೆ ವಿಷ್ಣುವಿನ ಪರಮ ಭಕ್ತನಾದ ಪ್ರಹ್ಲಾದನು ವಿಷ್ಣುವಿನ ಆರಾಧನೆಯನ್ನು ಬಿಟ್ಟರೆ ಬೇರಾವ ವ್ಯಕ್ತಿಯ ಆರಾಧನೆಯನ್ನು ಮಾಡೆನು ಎಂದು ಹೇಳಿದನು.
ಪುಟ್ಟ ಹುಡುಗನಾದ ಈ ಪ್ರಹ್ಲಾದನಿಗೆ ಇನ್ಯಾವ ಬಗೆಯಲ್ಲೂ ಬುದ್ಧಿ ಹೇಳಲು ಸಾಧ್ಯವಿಲ್ಲ. ಏನಿದ್ದರೂ ಅವನನ್ನು ಸಾಯಿಸುವುದೊಂದೇ ಮಾರ್ಗ ಎಂದುಕೊಂಡನು. ಅಂತೆಯೇ ಪ್ರಹ್ಲಾದನನ್ನು ಸಾಯಿಸಲು ಸಾಕಷ್ಟು ವಿಧಾನವನ್ನು ಅನುಸರಿಸಿದನು. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಅವುಗಳನ್ನು ಕಂಡ ಹಿರಣ್ಯಕಶಿಪು ಅತ್ಯಂತ ಕೋಪಕ್ಕೆ ಒಳಗಾದನು. ನಂತರ ತನ್ನ ತಂಗಿಯಾದ ಹೋಲಿಕಾಳನ್ನು ಕರೆಸಿದನು. ಹೋಲಿಕಾ ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರು ಸುಟ್ಟು ಹೋಗಬೇಕು ಎನ್ನುವ ವರವನ್ನು ಪಡೆದುಕೊಂಡಿದ್ದಳು. ಹಾಗಾಗಿ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಲು ಹಿರಣ್ಯ ಕಶಿಪು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಳು. ಆ ಸಮಯದಲ್ಲಿ ಪ್ರಹ್ಲಾದನು ಹರಿಯನ್ನು ಧ್ಯಾನಿಸುತ್ತಲೇ ಕುಳಿತನು. ಆ ಸಮಯದಲ್ಲಿ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋದಳು. ಪ್ರಹ್ಲಾದನು ಬೆಂಕಿಯಿಂದ ಹೊರ ಬಂದನು. ಈ ಹಿನ್ನೆಲೆಯಲ್ಲಿಯೇ ಹೋಳಿಯ ಹಬ್ಬವನ್ನು ಆಚರಿಸಲಾಯಿತು ಎಂದು ಹೇಳಲಾಗುವುದು.
Holi 2025: ರಂಗು ತುಂಬಿದ ಹೋಳಿ ಆಚರಣೆಯ ಸಂಕೇತವೇನು?
ದಕ್ಷಿಣ ಭಾರತದಲ್ಲಿ ಆಚರಣೆ ಹೇಗೆ...?
ದಕ್ಷಿಣ ಭಾರತದಲ್ಲಿ ವಿಭಿನ್ನ ಆಚರಣೆಯ ಮೂಲಕ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮದೇವನ ಕಥೆಯು ಬೆಸೆದುಕೊಂಡಿದೆ. ಶಿವ ಮತ್ತು ಕಾಮ ದೇವನ ಕಥೆಯನ್ನು ಒಳಗೊಂಡಿದೆ. ಶಿವನ ಮೂರನೇ ಕಣ್ಣಿನಿಂದ ಬಂದ ಬೆಂಕಿಯಿಂದ ಕಾಮದೇವನು ಆಹುತಿಯಾದನು. ಜಗತ್ತನ್ನು ಉಳಿಸಲು ಶಿವನ ಕಣ್ಣಿನ ಬೆಂಕಿಗೆ ತಾನೇ ಆಹುತಿಯಾಗುವುದರ ಮೂಲಕ ತ್ಯಾಗ ಮಾಡಿದನು ಎಂದು ಹೇಳಲಾಗುವುದು. ಹಾಗಾಗಿ ಆ ಸನ್ನಿವೇಶದ ಹಿನ್ನೆಲೆಯಲ್ಲಿಯೇ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಕಾಮ ದೇವನನ್ನು ಸುಡುವ ಆಚರಣೆಯ ಮೂಲಕ ಹಬ್ಬದ ಆಚರಣೆ ಮಾಡುತ್ತಾರೆ.
ಈ ಪುರಾಣ ಕಥೆಯ ಹಿನ್ನೆಲೆಯಲ್ಲಿಯೇ ಇಂದಿಗೂ ಕೆಲವು ಹಳ್ಳಿಗಳಲ್ಲಿ ಬೆಂಕಿಯ ಕೆಂಡದ ಮೇಲೆ ನಡೆದು ಸಾಗುವುದು, ಹಸುವನ್ನು ನಡೆಸುವ ಆಚರಣೆಯನ್ನು ಅನುಸರಿಸುತ್ತಾರೆ. ಬೆಂಕಿಯಲ್ಲಿ ನಡೆದು ಸಾಗಿದ ವ್ಯಕ್ತಿಗಳ ಕಾಲಿನಲ್ಲಿ ಒಂದೂ ಸುಟ್ಟ ಗುಳ್ಳೆಗಳು ಇರುವುದಿಲ್ಲ. ಅದನ್ನು ಒಂದು ದೈವ ಲೀಲೆ ಎಂದು ಪರಿಗಣಿಸಲಾಗುವುದು. ಈ ರೀತಿಯ ಅನೇಕ ಆಚರಣೆಗಳು ಶ್ರೇಷ್ಠವಾದ ನಂಬಿಕೆಯ ಮೂಲಕ ಇಂದಿಗೂ ಜೀವಂತವಾಗಿರುವುದು ವಿಶೇಷ. ಕೆಲವೆಡೆ ಕಾಮದೇವನನ್ನು ಸುಡುವುದು, ನಂತರ ಬೂದಿ ಮತ್ತು ಬಣ್ಣವನ್ನು ಬಳಿದುಕೊಂಡು, ನೃತ್ಯ ಮಾಡುವುದು, ಆತ್ಮೀಯರಿಗೆ ಬಣ್ಣವನ್ನು ಬಳಿಯುವ ಆಚರಣೆಯನ್ನು ಕೈಗೊಳ್ಳುತ್ತಾರೆ. ವಿವಿಧ ಕಥೆ ಹಾಗೂ ಆಚರಣೆಯಿಂದ ಕೂಡಿದ್ದರೂ ಏಕತೆ ಹಾಗೂ ಸಂತೋಷದ ಆಚರಣೆಯ ಮೂಲಕ ಬಣ್ಣದ ಹಬ್ಬವನ್ನು ಆಚರಿಸಲಾಗುವುದು.