Vastu Tips: ದೇವರ ಪೂಜೆಯ ವೇಳೆ ಪಾಲಿಸಲೇಬೇಕು ಈ 7 ನಿಯಮ
ಸಾಮಾನ್ಯವಾಗಿ ಮನೆಯಲ್ಲಿ ನಾವು ನಿತ್ಯ ಪೂಜೆ ಮಾಡುತ್ತೇವೆ. ಈ ವೇಳೆ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇರಿಸದೇ ಇದ್ದರೆ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೇ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ವೃದ್ಧಿ ಸೇರಿದಂತೆ ಅನೇಕ ವಾಸ್ತು ಸಮಸ್ಯೆಗಳಿಗೂ ಕಾರಣವಾಗುವುದು. ವಾಸ್ತು ಶಾಸ್ತ್ರಗಳಲ್ಲಿ ಹೇಳಿರುವ ಪೂಜೆಯ ವೇಳೆ ಪಾಲಿಸಲೇಬೇಕಾದ ಕೆಲವು ನಿಯಮಗಳು ಇಂತಿವೆ.


ಬೆಂಗಳೂರು: ಮನೆಯಲ್ಲಿ ಪೂಜಾ (Rules for worshipping God) ಕೈಂಕರ್ಯಗಳನ್ನು ಮಾಡುವಾಗ ಶ್ರದ್ದೆ, ಭಕ್ತಿ, ಪ್ರೀತಿ ಮುಖ್ಯವಾಗಿರುತ್ತದೆ. ಇದಕ್ಕಾಗಿ ಶಿಸ್ತು, ನಿಯಮ (Vastu for home) ಪಾಲನೆ ಅತ್ಯಾವಶ್ಯಕ. ಹಾಗಿದ್ದಾಗ ಮಾತ್ರ ಪೂಜೆಯ ಫಲ ನಮಗೆ ದೊರೆಯಲು ಸಾಧ್ಯ. ನಿತ್ಯ ಪೂಜೆಯನ್ನು ಮಾಡುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇರಿಸಲೇಬೇಕು. ಇದು ಮನದ ಗೊಂದಲವನ್ನು ದೂರ ಮಾಡುತ್ತದೆ. ಮನೆಯಲಿ ನಿತ್ಯ ಪೂಜೆ ಮಾಡುವ ವೇಳೆ ಸರಿಯಾದ ನಿಯಮ ಪಾಲನೆ ಮಾಡದಿದ್ದರೆ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೇ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ವೃದ್ಧಿ ಸೇರಿದಂತೆ ಅನೇಕ ವಾಸ್ತು (Vastu Tips) ಸಮಸ್ಯೆಗಳಿಗೂ ಕಾರಣವಾಗುವುದು.
ಮನೆಯಲ್ಲಿ ನಿತ್ಯ ಮಾಡುವ ಪೂಜೆಗಾಗಿ ಕೆಲವು ನಿಯಮಗಳನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಇದನ್ನು ಪಾಲಿಸುವುದರಿಂದ ಅಪೇಕ್ಷಿತ ಫಲಗಳನ್ನು ಪಡೆಯಬಹುದು.
ದೇವರನ್ನು ಮೆಚ್ಚಿಸಲು, ಮನಸ್ಸಿನಲ್ಲಿ ಶುದ್ಧವಾದ ಭಕ್ತಿ ಇರಬೇಕು ಎನ್ನಲಾಗುತ್ತದೆ. ಆದರೂ ಅನೇಕ ಬಾರಿ ನಮ್ಮ ಮನಸ್ಸು ಪೂಜೆಯ ವಿಧಿವಿಧಾನಗಳಲ್ಲಾಗುವ ಸರಿ ಅಥವಾ ತಪ್ಪುಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಇದರಿಂದ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು ಯಾವುದು ಎನ್ನುವ ಕುರಿತು ವಾಸ್ತು ಶಾಸ್ತ್ರವು ಹೇಳಿರುವ ಕೆಲವು ಸಂಗತಿಗಳು ಇಲ್ಲಿವೆ.

ತುಳಸಿ ಎಲೆ
ಪೂಜೆಗಾಗಿ ಸ್ನಾನ ಮಾಡದೆ ತುಳಸಿ ಎಲೆಗಳನ್ನು ಕೀಳಬಾರದು. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಎಲೆಗಳನ್ನು ಕಿತ್ತರೆ ಅದನ್ನು ದೇವರು ಪೂಜೆಯಲ್ಲಿ ಸ್ವೀಕರಿಸುವುದಿಲ್ಲ. ತುಳಸಿ ಎಲೆಗಳಿಗೆ ಪ್ರತಿದಿನ ನೀರನ್ನು ಸಿಂಪಡಿಸಿ ಬಳಿಕ ದೇವರಿಗೆ ಅರ್ಪಿಸಬಹುದು. ಇಷ್ಟು ಮಾತ್ರವಲ್ಲ ಭಾನುವಾರ, ಏಕಾದಶಿ, ದ್ವಾದಶಿ, ಸಂಕ್ರಾಂತಿ ಮತ್ತು ಸಂಜೆ ಹೊತ್ತು ತುಳಸಿ ಎಲೆಗಳನ್ನು ಕೀಳಬಾರದು ಎನ್ನುತ್ತದೆ ಶಾಸ್ತ್ರಗಳು.
ಇದನ್ನೂ ಓದಿ: Vastu Tips: ಮನೆಯ ಸುಖ, ಶಾಂತಿ, ನೆಮ್ಮದಿಗೆ ಊಟದ ಕೋಣೆಯಲ್ಲಿ ಪಾಲಿಸಲೇಬೇಕು ಈ ಐದು ನಿಯಮ
ಯಾವುದನ್ನು ಎಲ್ಲಿ ಇಡಬೇಕು?
ಪೂಜೆಯ ಸಮಯದಲ್ಲಿ ದೀಪವನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹುಮುಖ್ಯ. ತುಪ್ಪದ ದೀಪವನ್ನು ಬಲಭಾಗದಲ್ಲಿ ಮತ್ತು ಎಣ್ಣೆಯ ದೀಪವನ್ನು ಎಡಭಾಗದಲ್ಲಿ ಇರಿಸಬೇಕು. ಎಡಭಾಗದಲ್ಲಿ ನೀರಿನ ಪಾತ್ರೆ, ಗಂಟೆ, ಧೂಪದ್ರವ್ಯದಂತಹ ವಸ್ತುಗಳನ್ನು ಇರಿಸಬೇಕು. ಶಂಖವನ್ನು ನೆಲದ ಮೇಲೆ ಇಡುವಂತಿಲ್ಲ. ಶಂಖವನ್ನು ಯಾವುದಾದರೂ ವಸ್ತುವಿನ ಮೇಲೆ ಇರಿಸಿ. ಶ್ರೀಗಂಧ ಮತ್ತು ಹೂವುಗಳನ್ನು ಶಂಖದಲ್ಲಿ ಇರಿಸಬಹುದು.
ಈ ವಸ್ತುಗಳನ್ನು ಅರ್ಪಿಸಬೇಡಿ
ಶಿವ, ಗಣೇಶ ಮತ್ತು ಭೈರವನಿಗೆ ತುಳಸಿಯನ್ನು ಅರ್ಪಿಸುವಂತಿಲ್ಲ. ವಿಷ್ಣುವಿಗೆ ಅನ್ನ, ಗಣೇಶನಿಗೆ ತುಳಸಿ, ದೇವಿಗೆ ದೂರ್ವ ಮತ್ತು ಸೂರ್ಯನಿಗೆ ಬಿಲ್ವ ಪತ್ರೆಯನ್ನು ಅರ್ಪಿಸಬಾರದು. ಶಿವನಿಗೆ ಬಿಲ್ವ ಪತ್ರ, ಗಣೇಶನಿಗೆ ಹಸಿರು ದೂರ್ವ, ವಿಷ್ಣುವಿಗೆ ತುಳಸಿ ಮತ್ತು ದುರ್ಗೆಗೆ ಹಲವು ರೀತಿಯ ಹೂವುಗಳು ಇಷ್ಟ ಎನ್ನುತ್ತದೆ ಶಾಸ್ತ್ರಗಳು.
ತಿಲಕ
ಉಂಗುರದ ಬೆರಳು ಅಥವಾ ಕೈಯ ಮೂರನೇ ಬೆರಳಿನಿಂದ ದೇವರಿಗೆ ತಿಲಕ ಅಥವಾ ಸಿಂದೂರವನ್ನು ಹಚ್ಚಬೇಕು. ದೇವರಿಗೆ ಸ್ನಾನ ಮಾಡಿಸಿದ ಬಳಿಕ ಶ್ರೀಗಂಧದ ತಿಲಕ ಹಚ್ಚಲು ಮರೆಯಬೇಡಿ. ಗಣೇಶ, ಹನುಮಾನ್, ದುರ್ಗಾ ಮಾತೆ ಅಥವಾ ಯಾವುದೇ ವಿಗ್ರಹದಿಂದ ಸಿಂದೂರವನ್ನು ತೆಗೆದು ನಮ್ಮ ಹಣೆಗೆ ಹಚ್ಚಕೂಡದು.
ಮರೆತ ವಸ್ತುಗಳು
ಪೂಜೆಗೆ ತರಲು ಯಾವುದೇ ವಸ್ತು ಮರೆತರೆ ಚಿಂತಿಸಬೇಡಿ. ಅದಕ್ಕಾಗಿ ಪೂಜೆಯನ್ನು ಮಧ್ಯದಲ್ಲಿ ಬಿಡಬಾರದು. ದೇವರಿಗೆ ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸಿ ಮನಸ್ಸಿನಲ್ಲಿ ಆ ವಿಷಯದ ಬಗ್ಗೆ ಧ್ಯಾನಿಸಿ. ಇದರಿಂದ ಮರೆತ ವಸ್ತುವನ್ನು ದೇವರಿಗೆ ಸಮರ್ಪಿಸಿದಂತೆಯೇ ಎನ್ನುತ್ತದೆ ಶಾಸ್ತ್ರಗಳು.
ದಕ್ಷಿಣೆ
ನಮ್ಮ ಇಷ್ಟಾರ್ಥಗಳು ನೆರವೇರಬೇಕಾದರೆ ಪೂಜೆಯ ಕೊನೆಯಲ್ಲಿ ದಕ್ಷಿಣೆಯನ್ನು ಅರ್ಪಿಸಬೇಕು. ಆಗ ಮಾತ್ರ ಪೂಜೆ ಯಶಸ್ವಿಯಾಗುತ್ತದೆ ಎಂದು ಪರಿಗಣಿಸಲಾಗುತ್ತದೆ.
ಅರತಿ
ದೇವರ ಆರತಿಗೆ ತಯಾರಿ ನಡೆಸುವಾಗ ಬೇರೆ ದೀಪದಿಂದ ದೀಪ, ಧೂಪ ಅಥವಾ ಕರ್ಪೂರವನ್ನು ಎಂದಿಗೂ ಬೆಳಗಿಸಬಾರದು. ಬೆಳಗ್ಗೆ ಮತ್ತು ಸಂಜೆ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿ. ಯಾವಾಗಲೂ ಒಂದು ತುಪ್ಪ ಮತ್ತು ಒಂದು ಎಣ್ಣೆಯ ದೀಪವನ್ನು ಬೆಳಗಿಸಬೇಕು. ಈ ನಿಯಮಗಳ ಪಾಲನೆಗೆ ಹೆಚ್ಚು ಒತ್ತು ಕೊಟ್ಟರೆ ಪೂಜೆಯ ಫಲವನ್ನು ಪಡೆಯಬಹುದು ಎನ್ನುತ್ತದೆ ಶಾಸ್ತ್ರ.