ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೋಹಿತ್‌ ಶರ್ಮಾ ಒಡಿಐ ನಿವೃತ್ತಿ ಬಗ್ಗೆ ಬಿಸಿಸಿಐ ಸಭೆಯಲ್ಲಿ ಸ್ಪಷ್ಟನೆ ನೀಡಿದ ದೇವಜಿತ್‌ ಸೈಕಿಯಾ!

ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇತ್ತು. ಆದರೆ ಅವರ ನಿವೃತ್ತಿ ಕುರಿತ ವದಂತಿಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಳ್ಳಿಹಾಕಿದ್ದಾರೆ. ರೋಹಿತ್ ಶರ್ಮಾ ಅತ್ಯುತ್ತಮವಾಗಿ ಆಡುತ್ತಿದ್ದು, ಅವರು ಭಾರತ ತಂಡಕ್ಕೆ ಇನ್ನೂ ಪ್ರಮುಖ ಆಯ್ಕೆಯಾಗಿದ್ದಾರೆ ಎಂದು ಸೈಕಿಯಾ ಹೇಳಿದ್ದಾರೆ.

ರೋಹಿತ್‌ ಶರ್ಮಾ ಭವಿಷ್ಯದ ಬಗ್ಗೆ ದೇವಜಿತ್‌ ಸೈಕಿಯಾ ಸ್ಪಷ್ಟನೆ!

ರೋಹಿತ್‌ ಶರ್ಮಾ ಅವರಭವಿಷ್ಯದ ಬಗ್ಗೆ ದೇವಜಿತ್‌ ಸೈಕಿಯಾ ಸ್ಪಷ್ಟನೆ. -

Profile
Ramesh Kote Sep 3, 2026 9:44 PM

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ (Devajit Saikia), ರೋಹಿತ್ ಶರ್ಮಾ (Rohit Sharma) ಅವರ ಭವಿಷ್ಯದ ಬಗ್ಗೆ ಅನಗತ್ಯ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಮಾಜಿ ನಾಯಕ ರೋಹಿತ್ ಶರ್ಮಾ ಅತ್ಯುತ್ತಮವಾಗಿ ಆಡುತ್ತಿದ್ದಾರೆ ಮತ್ತು ಸದ್ಯಕ್ಕೆ ಭಾರತ ತಂಡದ ಏಕದಿನ ಬಳಗದಲ್ಲಿ ಅವರ ಸ್ಥಾನಕ್ಕೆ ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅವರು (ರೋಹಿತ್) ಎಲ್ಲಾ ಪಂದ್ಯಗಳಲ್ಲೂ ಅದ್ಭುತವಾಗಿ ಆಡುತ್ತಿದ್ದಾರೆ. ಅವರು ಕೊನೆಯದಾಗಿ ಆಡಿದ ಪಂದ್ಯದಲ್ಲಿ 130 ರನ್ ಗಳಿಸಿದ್ದಾರೆ. ಹಾಗಿದ್ದಾಗ ಇನ್ನೇನು ಬೇಕು? ಅವರ ಬಗ್ಗೆ ಏಕೆ ಊಹಾಪೋಹಗಳು ನಡೆಯುತ್ತಿವೆ? ನಾನು ಇಂತಹ ಊಹಾಪೋಹಗಳಿಗೆ ಮತ್ತಷ್ಟು ಬೆಂಬಲ ನೀಡಲು ಬಯಸುವುದಿಲ್ಲ,” ಎಂದು ಸೆಪ್ಟೆಂಬರ್ 3ರಂದು ಗುರುವಾರ ಮುಂಬೈನಲ್ಲಿ ನಡೆದ ಬಿಸಿಸಿಐನ ಉನ್ನತ ಮಟ್ಟದ ಪರಿಶೀಲನಾ ಸಭೆಯ ಬಳಿಕ ಸೈಕಿಯಾ ಹೇಳಿದ್ದಾರೆ.

ಈ ಮಹತ್ವದ ಸಭೆಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಏಕದಿನ ತಂಡದ ನಾಯಕ ಶುಭಮನ್ ಗಿಲ್, ಟಿ20ಐ ತಂಡದ ನಾಯಕ ಶ್ರೇಯಸ್ ಅಯ್ಯರ್, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಮತ್ತು ಕಾರ್ಯದರ್ಶಿ ದೇವಜಿತ್ ಸೈಕಿಯಾ ಭಾಗವಹಿಸಿದ್ದರು. ಆದರೆ ಗಮನಾರ್ಹ ಸಂಗತಿಯೆಂದರೆ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅವರ ಅಧಿಕಾರಾವಧಿ ಈ ವರ್ಷದ ಅಕ್ಟೋಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ರೋಹಿತ್‌ ಶರ್ಮಾರ ಮಹತ್ವವನ್ನು ತಿಳಿಸಿದ ಜಾಂಟಿ ರೋಡ್ಸ್‌!

ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಮತ್ತೊಮ್ಮೆ ಊಹಾಪೋಹಗಳು ತೀವ್ರಗೊಂಡಿರುವ ಸಮಯದಲ್ಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹೇಳಿಕೆ ನೀಡಿದ್ದಾರೆ.

“ಇಂದು ಯಾವುದೇ ಆಯ್ಕೆ ಸಭೆ ನಡೆದಿಲ್ಲ. ಸುಮಾರು ಮೂರು ತಿಂಗಳ ಅಂತರದ ಬಳಿಕ ಸಾಮಾನ್ಯವಾಗಿ ನಡೆಯುವ ಸಭೆಯಂತೆಯೇ ಇಂದು ಕೂಡ ನಿಯಮಿತ ಸಭೆ ನಡೆಸಲಾಯಿತು. ಮುಖ್ಯ ಕೋಚ್, ಕ್ರಿಕೆಟ್ ವಿಭಾಗದ ಮುಖ್ಯಸ್ಥ, ಸಿಒಇ ಹಾಗೂ ಇಬ್ಬರು ನಾಯಕರೊಂದಿಗೆ ನಾವು ಸಭೆ ನಡೆಸಿದೆವು. ನಮ್ಮ ಟಿ20 ತಂಡದ ನಾಯಕ ಮತ್ತು ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಸಭೆಯಲ್ಲಿ ಭಾಗವಹಿಸಿದ್ದರು,” ಎಂದು ಸೈಕಿಯಾ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಎಂದ ಬಿಸಿಸಿಐ ಸೆಲೆಕ್ಟರ್‌ಗಳ ವಿರುದ್ಧ ರೋಹಿತ್‌ ಶರ್ಮಾ ಗರಂ!

“ಮೂಲಭೂತವಾಗಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ನಮ್ಮ ತಂಡದ ಪ್ರದರ್ಶನ ಹೇಗಿತ್ತು ಎಂಬುದರ ಕುರಿತು ಚರ್ಚೆ ನಡೆಸಿದೆವು. ಇದರ ಜೊತೆಗೆ ಮುಂದಿನ ಒಂದು ವರ್ಷದಲ್ಲಿ ನಾವು ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಯಿತು,” ಎಂದರು.

“ಮುಂದಿನ ವರ್ಷದ ಕಾರ್ಯತಂತ್ರದ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. 2027ರಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವಂತೆ ಮಾಡಲು ಹಲವು ಯೋಜನೆಗಳನ್ನು ಕೈಗೊಳ್ಳಲಿದ್ದೇವೆ,” ಎಂದು ಸೈಕಿಯಾ ತಿಳಿಸಿದರು.