ತಂದೆಯನ್ನು ಕಳೆದುಕೊಂಡ ದುನಿತ್ ವೆಲ್ಲಾಳಗೆಗೆ ಸಾಂತ್ವನ ಹೇಳಿದ ಸೂರ್ಯಕುಮಾರ್ ಯಾದವ್!
ಶ್ರೀಲಂಕಾ ವಿರುದ್ಧ ಸೂಪರ್-4ರ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಎಲ್ಲರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಲಂಕಾ ಆಟಗಾರ ದುನಿತ್ ವೆಲ್ಲಾಳಗೆ ಅವರನ್ನು ಸೂರ್ಯಕುಮಾರ್ ಯಾದವ್ ಸಾಂತ್ವನ ಹೇಳಿದರು.

ದುನಿತ್ ವೆಲ್ಲಾಳಗೆಗೆ ಸಾಂತ್ವಾನ ಹೇಳಿದ ಸೂರ್ಯಕುಮಾರ್ ಯಾದವ್. -

ದುಬೈ: ಶುಕ್ರವಾರ ಇಲ್ಲಿನ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಸೂಪರ್ ಓವರ್ ಥ್ರಿಲ್ಲರ್ನಲ್ಲಿ ಶ್ರೀಲಂಕಾ ಎದುರು ಭಾರತ ತಂಡ (India) ರೋಚಕ ಗೆಲುವು ಪಡೆದಿತ್ತು. ಈ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಶ್ರೀಲಂಕಾ ಆಟಗಾರ ದುನಿತ್ ವೆಲ್ಲಾಳಗೆ (Dunit Wellalage) ಅವರನ್ನು ಸೂರ್ಯಕುಮಾರ್ ಯಾದವ್ ಸಾಂತ್ವಾನ ಹೇಳಿದರು. ಆ ಮೂಲಕ ಹೃದಯವಂತಿಕೆಯನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ಮೂಲಕ ಸೆಪ್ಟಂಬರ್ 28 ರಂದು ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿಪಾಕಿಸ್ತಾನವನ್ನು ಎದುರಿಸಲಿದೆ.
ದುನಿತ್ ವೆಲ್ಲಾಳಗೆ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ವೇಳೆ ತಮ್ಮ ತಂದೆ ಸುರಂಗ ವೆಲ್ಲಾಳಗೆ ಅವರನ್ನು ಕಳೆದುಕೊಂಡಿದ್ದರು. ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಇದರ ಹೊರತಾಗಿಯೂ ಶ್ರೀಲಂಕಾ ತಂಡದಲ್ಲಿ ಮುಂದುವರಿದು ಸೂಪರ್-4ರ ಪಂದ್ಯಗಳನ್ನು ಆಡಲು ಬಯಸಿದ್ದರು. ಆ ಮೂಲಕ ಕುಟುಂಬದ ಕಠಿಣ ಸಂದರ್ಭದಲ್ಲಿಯೂ ರಾಷ್ಟ್ರೀಯ ತಂಡದ ಪರ ಆಡುವ ಬದ್ದತೆಯನ್ನು ಅವರು ಪ್ರದರ್ಶಿಸಿದ್ದರು. ಅಂದ ಹಾಗೆ ಈ ಪಂದ್ಯದಲ್ಲಿ ನಡೆದಿದ್ದ ಸೂಪರ್ ಓವರ್ನಲ್ಲಿ ಶ್ರೀಲಂಕಾ ತಂಡವನ್ನು ಭಾರತ ಮಣಿಸಿತ್ತು.
ಶುಕ್ರವಾರ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೂರ್ಯಕುಮಾರ್ ಯಾದವ್ ಅವರು ನೇರವಾಗಿ ದುನಿತ್ ವೆಲ್ಲಾಳಗೆ ಅವರನ್ನು ಮಾತನಾಡಿದರು. ಅಲ್ಲದೆ ತಮ್ಮ ಕೈಯನ್ನು ಅವರ ಹೆಗಲ ಮೇಲೆ ಹಾಕಿ ತಮ್ಮ ತಂದೆಯನ್ನು ಕಲೆದುಕೊಂಡ ವೆಲ್ಲಾಳಗೆ ಅವರಿಗೆ ಸಾಂತ್ವಾನ ಹೇಳಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ಸೂರ್ಯಕುಮಾರ್ ಯಾದವ್ ಅವರ ನಡೆಯನ್ನು ಎರಡೂ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
IND vs SL: ಪತುಮ್ ನಿಸಾಂಕ ಶತಕ ವ್ಯರ್ಥ, ಶ್ರೀಲಂಕಾ ವಿರುದ್ಧ ಸೂಪರ್ ಓವರ್ ಥ್ರಿಲ್ಲರ್ ಗೆದ್ದ ಭಾರತ!
ಸೂಪರ್ ಓವರ್ನಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ ಐದು ವಿಕೆಟ್ ನಷ್ಟಕ್ಕೆ 202 ರನ್ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ, ಪತುಮ್ ನಿಸಾಂಕ ಶತಕ ಹಾಗೂ ಕುಸಾಲ್ ಪೆರೇರಾ ಅವರ ಅರ್ಧಶತಕದ ಬಲದಿಂದ ಗೆಲ್ಲುವ ಹಾದಿಯಲ್ಲಿತ್ತು. ಆದರೆ, ಕೊನೆಯಲ್ಲಿ ಭಾರತೀಯ ಬೌಲರ್ಗಳು ಇದಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಶ್ರೀಲಂಕಾ 202 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ಒಂದೇ ಒಂದು ರನ್ನಿಂದ ಗೆಲುವಿನಿಂದ ತಪ್ಪಿಸಿಕೊಂಡಿತು.
Suryakumar Yadav met Dunith Wellalage after the match and he consoling him. 🥹❤️
— Tanuj (@ImTanujSingh) September 27, 2025
- Dunith Wellalage's father passed away last week. pic.twitter.com/CDqD5DxCqY
ಪತುಮ್ ನಿಸಾಂಕ 58 ಎಸೆತಗಳಲ್ಲಿ 107 ರನ್ಗಳನ್ನು ಕಲೆ ಹಾಕಿದರೆ, ಕುಸಾಲ್ ಮೆಂಡಿಸ್ 58 ರನ್ಗಳನ್ನು ಕಲೆ ಹಾಕಿದ್ದರು. ನಂತರ ಉಭಯ ತಂಡಗಳ ಮೊತ್ತ ಸಮವಾದ ಕಾರಣ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ಗೆ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡಕ್ಕೆ ಅರ್ಷದೀಪ್ ಸಿಂಗ್ ಎರಡು ವಿಕೆಟ್ ಕಿತ್ತು ಆಘಾತ ನೀಡಿದರು. ಲಂಕಾ ಕೇವಲ ಮೂರು ರನ್ಗಳ ಗುರಿಯನ್ನು ಭಾರತಕ್ಕೆ ನೀಡಿತ್ತು. ಟೀಮ್ ಇಂಡಿಯಾ ಮೊದಲನೇ ಎಸೆತದಲ್ಲಿ ಮೂರು ರನ್ ಪಡೆಯುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.