ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊಟ್ಟೆ ಉರಿದುಕೊಳ್ಳೋರಿಗೆ ಮೈದಾನದಲ್ಲೇ ಉತ್ತರ ಕೊಟ್ಟ ಆರ್‌ಸಿಬಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿ ಟ್ರೋಫಿ ಗೆದ್ದಾಗ ಅದನ್ನು 'ಫ್ಲೂಕ್‌' ಎಂದು ಉಡಾಫೆ ಮಾಡಿದವರೂ ಇದ್ದಾರೆ. ಹೀಗೆ ಆರ್‌ಸಿಬಿ ಎಂದರೆ ಹೊಟ್ಟೆ ಉರಿದುಕೊಳ್ಳೋ ಅದೆಷ್ಟೂ ಹೇಟರ್ಸ್‌ಗೆ ಚಾಲೆಂಜರ್ಸ್‌ ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆಲುವಿನೊಂದಿಗೆ ಖಡಕ್‌ ಉತ್ತರವನ್ನೇ ಕೊಟ್ಟಿದೆ. ಟೀಕಾಕಾರರ ಬಾಯಿಗೆ ಬೀಗ ಜಡಿದಿದೆ.

ಹೊಟ್ಟೆ ಉರಿದುಕೊಳ್ಳೋರಿಗೆ ಮೈದಾನದಲ್ಲೇ ಉತ್ತರ ಕೊಟ್ಟ ಆರ್‌ಸಿಬಿ!

ಟೀಕೆಗಳಿಗೆ ಆರ್‌ಸಿಬಿ ಖಡಕ್ ಉತ್ತರ (ಚಿತ್ರ: ಎಐ). -

Vijeth Kumar DN
Vijeth Kumar DN Jun 1, 2026 10:09 AM

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈಗ ಕೇವಲ ಅಭಿಮಾನಿಗಳ ನೆಚ್ಚಿನ ತಂಡವಲ್ಲ, ಐಪಿಎಲ್‌ ಇತಿಹಾಸದಲ್ಲಿ ತನ್ನದೇ ಅಧ್ಯಾಯ ಬರೆದಿರುವ ಚಾಂಪಿಯನ್‌ ತಂಡವಾಗಿದೆ. ಸತತ ಎರಡು ಕಿರೀಟಗಳನ್ನು ಗೆದ್ದು ಆರ್‌ಸಿಬಿ ತನ್ನ ಬಗ್ಗೆ ಇದ್ದ ಹಲವು ಅನುಮಾನಗಳು, ಟೀಕೆಗಳು ಮತ್ತು ವ್ಯಂಗ್ಯಗಳಿಗೆ ಟ್ರೋಫಿಗಳ ಮೂಲಕ ಉತ್ತರ ನೀಡಿದೆ.

ಒಂದು ಕಾಲದಲ್ಲಿ "ಈ ಸಲ ಕಪ್‌ ನಮ್ದು" ಎಂಬ ಘೋಷಣೆಯನ್ನು ಟ್ರೋಲ್‌ ಮಾಡಲಾಗುತ್ತಿತ್ತು. ಟ್ರೋಫಿ ಗೆಲ್ಲದ ತಂಡ ಎಂದು ಆರ್‌ಸಿಬಿಯನ್ನು ಲೇವಡಿ ಮಾಡುವುದು ಸಾಮಾನ್ಯವಾಗಿತ್ತು. ಆದರೆ 2025ರಲ್ಲಿ ಮೊದಲ ಕಿರೀಟ ಗೆದ್ದ ಬಳಿಕ, 2026ರಲ್ಲೂ ಚಾಂಪಿಯನ್‌ ಆಗುವ ಮೂಲಕ ಬೆಂಗಳೂರು ತಂಡ ತನ್ನ ಯಶಸ್ಸು ಆಕಸ್ಮಿಕವಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಟೀಕಾಕಾರರ ಪಟ್ಟಿಯಲ್ಲಿ ರಾಯುಡು ಮತ್ತು ಬದ್ರಿನಾಥ್‌ ಮುಂದು

ಆರ್‌ಸಿಬಿ ಯಶಸ್ಸನ್ನು ಎಲ್ಲರೂ ಒಂದೇ ರೀತಿಯಲ್ಲಿ ಸ್ವೀಕರಿಸಿಲ್ಲ. ಮಾಜಿ ಕ್ರಿಕೆಟಿಗರಾದ ಅಂಬಾಟಿ ರಾಯುಡು ಮತ್ತು ಸುಬ್ರಮಣ್ಯನ್‌ ಬದ್ರಿನಾಥ್‌ ಹಲವು ಸಂದರ್ಭಗಳಲ್ಲಿ ಆರ್‌ಸಿಬಿ ಬಗ್ಗೆ ಮಾಡಿದ ಹೇಳಿಕೆಗಳು ಅಭಿಮಾನಿಗಳನ್ನು ಕೆರಳಿಸಿತ್ತು.

RCB fans' celebration: ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು; ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮುಗಿಲುಮುಟ್ಟಿದ ಅಭಿಮಾನಿಗಳ ಸಂಭ್ರಮಾಚರಣೆ

2025ರಲ್ಲಿ ಆರ್‌ಸಿಬಿ ತನ್ನ ಚೊಚ್ಚಲ ಟ್ರೋಫಿ ಗೆದ್ದ ಬಳಿಕ ಪ್ರತಿಕ್ರಿಯಿಸಿದ್ದ ಅಂಬಾಟಿ ರಾಯುಡು, "ಮುಂದಿನ ಟ್ರೋಫಿಗೆ ಮತ್ತೆ 18 ವರ್ಷ ಕಾಯಬೇಕಾಗಬಹುದು" ಎಂದು ವ್ಯಂಗ್ಯ ಮಾಡಿದ್ದರು. ಆ ವೇಳೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆರ್‌ಸಿಬಿ ಯಸ್ಸು ಫ್ಲೂಕ್‌ ಎಂದ ರಾಯುಡುಗೆ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಜಾಡಿಸಿದ್ದರು.

ಈಗ ಒಂದೇ ವರ್ಷದ ಅಂತರದಲ್ಲೇ ಮತ್ತೊಂದು ಟ್ರೋಫಿ ಗೆದ್ದ ಆರ್‌ಸಿಬಿ, ತನ್ನ ಮೇಲಿನ ಎಲ್ಲ ಅನುಮಾನಗಳಿಗೆ ಅಂಗಣದಲ್ಲೇ ಉತ್ತರ ನೀಡಿದಂತಾಗಿದೆ.

ಕೃಣಾಲ್‌ ಪಾಂಡ್ಯ ಘಟನೆ

ಐಪಿಎಲ್‌ 2026ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೃಣಾಲ್‌ ಪಾಂಡ್ಯ ಗಾಯದ ನಡುವೆಯೂ ಆರ್‌ಸಿಬಿಗೆ ಮ್ಯಾಚ್‌ ವಿನ್ನಿಂಗ್‌ ಇನ್ನಿಂಗ್ಸ್‌ ಆಡಿದ್ದರು. ಆ ವೇಳೆ ಅವರಿಗೆ ನೀಡಲಾದ ಮೆಡಿಕಲ್‌ ಟೈಮ್‌ ಔಟ್‌ ಕುರಿತು ಬದ್ರಿನಾಥ್‌ ವ್ಯಕ್ತಪಡಿಸಿದ್ದ ಅಭಿಪ್ರಾಯ ವಿವಾದಕ್ಕೆ ಕಾರಣವಾಗಿತ್ತು.

RCB vs GT: ʻಈ ಸಲಾನು ಕಪ್‌ ನಮ್ದೇʼ-ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಗರಿ!

ಕ್ರಿಕೆಟ್‌ನಲ್ಲಿ ಆಟಗಾರರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ, ಆ ವಿಚಾರದ ಬಗ್ಗೆ ಬಂದ ಪ್ರತಿಕ್ರಿಯೆಗಳು ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದ್ದವು. "ಕೃಣಾಲ್‌ ಮೈದಾನದಲ್ಲೇ ಸಾಯಲಿ", ಎಂದ ಬದ್ರಿನಾಥ್‌ ಕಾಮೆಂಟರಿ ಪ್ಯಾನೆಲ್‌ನಿಂದಲೇ ಬ್ಯಾನ್‌ ಆದರು. ಈಗ ಆರ್‌ಸಿಬಿ ಸತತ ಟ್ರೋಫಿ ಗೆದ್ದಿರುವುದು ಬದ್ರಿನಾಥ್‌ಗೆ ಹೊಟ್ಟೆ ನೋವು ತಂದಿರುವುದರಲ್ಲಿ ಅಚ್ಚರಿಯೇನಿಲ್ಲ.

ಮೈದಾನದಲ್ಲೇ ಬಂದ ಉತ್ತರ

ಕ್ರೀಡೆಯಲ್ಲಿ ವಾದ-ವಿವಾದಗಳು ಹೊಸದೇನಲ್ಲ. ಪ್ರತಿಯೊಂದು ಯಶಸ್ವಿ ತಂಡಕ್ಕೂ ಬೆಂಬಲಿಗರ ಜೊತೆಗೆ ಟೀಕಾಕಾರರೂ ಇರುತ್ತಾರೆ. ಆದರೆ ಅಂತಿಮವಾಗಿ ಮಾತನಾಡುವುದು ಅಂಕಿಅಂಶಗಳು ಮತ್ತು ಟ್ರೋಫಿಗಳು ಅಷ್ಟೇ. ಆರ್‌ಸಿಬಿ ಈಗ ಅದನ್ನೇ ಮಾಡಿದೆ.

ವಿರಾಟ್‌ ಕೊಹ್ಲಿ ಅವರ ಅನುಭವ, ರಜತ್‌ ಪಾಟಿದಾರ್‌ ಅವರ ನಾಯಕತ್ವ, ಬೌಲಿಂಗ್‌ ವಿಭಾಗದ ಸ್ಥಿರ ಪ್ರದರ್ಶನ ಮತ್ತು ಯುವ ಆಟಗಾರರ ನಿರ್ಭೀತ ಆಟ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ಒಂದು ಟ್ರೋಫಿ ಗೆಲ್ಲುವುದನ್ನು ಅದೃಷ್ಟ ಎನ್ನಬಹುದು. ಆದರೆ ಸತತ ಎರಡು ಬಾರಿ ಚಾಂಪಿಯನ್‌ ಆಗುವುದು ಯೋಜನೆ, ಶಿಸ್ತು ಮತ್ತು ಸಾಮರ್ಥ್ಯದ ಫಲ.

RCB vs GT ಫೈನಲ್‌ಗೂ ಮುನ್ನ ಆಟಗಾರರಿಗೆ ನೀಡಿದ್ದ ಸಂದೇಶವನ್ನು ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ!

ಅಭಿಮಾನಿಗಳ ಸಂಭ್ರಮ

18 ವರ್ಷಗಳ ಕಾಲ ಕಾಯುತ್ತಿದ್ದ ಅಭಿಮಾನಿಗಳಿಗೆ ಮೊದಲ ಟ್ರೋಫಿಯೇ ಭಾವನಾತ್ಮಕ ಕ್ಷಣವಾಗಿತ್ತು. ಈಗ ಎರಡನೇ ಕಿರೀಟವು ಆ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿದೆ.

ಒಂದು ಕಾಲದಲ್ಲಿ ವ್ಯಂಗ್ಯಕ್ಕೆ ಗುರಿಯಾಗಿದ್ದ "ಈ ಸಲ ಕಪ್‌ ನಮ್ದು" ಘೋಷಣೆ ಇಂದು ಐಪಿಎಲ್‌ ಇತಿಹಾಸದ ಯಶಸ್ವಿ ಘೋಷಣೆಗಳಲ್ಲಿ ಒಂದಾಗಿದೆ.

ಆರ್‌ಸಿಬಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವರನ್ನು ಟೀಕಿಸುವುದಕ್ಕಿಂತ, ಅವರ ಪ್ರಶ್ನೆಗಳಿಗೆ ತಂಡವೇ ತನ್ನ ಪ್ರದರ್ಶನದ ಮೂಲಕ ಉತ್ತರ ಕೊಟ್ಟಿದೆ ಎನ್ನುವುದು ಹೆಚ್ಚು ಸೂಕ್ತ. ಏಕೆಂದರೆ ಕ್ರೀಡೆಯಲ್ಲಿ ಅತ್ಯಂತ ಪರಿಣಾಮಕಾರಿ ಉತ್ತರ ಮಾತುಗಳಿಂದಲ್ಲ, ಸಾಧನೆಯಿಂದ ಬರುತ್ತದೆ.