ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ! ಋತುರಾಜ್‌ ಗಾಯಕ್ವಾಡ್‌ ಔಟ್‌

MS Dhoni will lead CSK in IPL 2025: ಗಾಯದ ಕಾರಣ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಋತುರಾಜ್‌ ಗಾಯಕ್ವಾಡ್‌ ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಸ್‌ ಧೋನಿ ಟೂರ್ನಿಯ ಇನ್ನುಳಿದ ಭಾಗದಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಗ್ಗೆ ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ!

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಎಂಎಸ್‌ ಧೋನಿ ನಾಯಕ.

Profile Ramesh Kote Apr 10, 2025 6:37 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತು ಭಾರಿ ಹಿನ್ನಡೆ ಅನುಭವಿಸಿರುವ ಐದು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ (Chennai Super Kings) ಮತ್ತೊಂದು ಆಘಾತವಾಗಿದೆ. ಸಿಎಸ್‌ಕೆ ನಾಯಕ ಋತುರಾಹ್‌ ಗಾಯಕ್ವಾಡ್‌ ಅವರು ಗಾಯದ ಕಾರಣ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎಂಎಸ್‌ ಧೋನಿ (MS Dhoni) ಮುನ್ನಡೆಸಲಿದ್ದಾರೆ. ಈ ಬಗ್ಗೆ ಚೆನ್ನೈ ಫ್ರಾಂಚೈಸಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮೂಲಕ ತಿಳಿಸಿದೆ.

ಏಪ್ರಿಲ್‌ 9 ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌ ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಈ ಪಂದ್ಯದಲ್ಲಿ ಸಿಎಸ್‌ಕೆ 18 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಬಗ್ಗೆ ಚೆನ್ನೈ ಫ್ರಾಂಚೈಸಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕುವ ಮೂಲಕ ಖಚಿತಪಡಿಸಿದೆ. ಅಲ್ಲದೆ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಕೂಡ ಮಾಹಿತಿ ನೀಡಿದ್ದರು.

IPL 2025: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ; ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

"ಮೊಣಕೈ ಗಾಯದ ಕಾರಣ ಋತುರಾಜ್‌ ಗಾಯಕ್ವಾಡ್‌ ಅವರು 2025ರ ಐಪಿಎಲ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡವನ್ನು ಎಂಎಸ್‌ ಧೋನಿ ಮುನ್ನಡೆಸಲಿದ್ದಾರೆ. ಬಹುಬೇಗ ಗುಣಮುಖರಾಗಿ ಋತು!," ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ "ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ," ಎಂದು ತಿಳಿಸಿದೆ.



ಆರಂಭಿಕ ಆಘಾತ ಅನುಭವಿಸಿದ ಸಿಎಸ್‌ಕೆ

ಪ್ರಸಕ್ತ ಆವೃತ್ತಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಆಡಿದ ಐದು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದಿದ್ದ ಸಿಎಸ್‌ಕೆ, ನಂತರ ಆರ್‌ಸಿಬಿ, ರಾಜಸ್ಥಾನ್‌ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ವಿರುದ್ದದ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಕೇವಲ ಎರಡು ಅಂಕಗಳನ್ನು ಹೊಂದಿರುವ ಸಿಎಸ್‌ಕೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.



2023ರ ಫೈನಲ್‌ ಬಳಿಕ ಮೊದಲ ಬಾರಿ ನಾಯಕತ್ವಕ್ಕೆ ಎಂಎಸ್‌ ಧೋನಿ

2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಯ ಫೈನಲ್‌ ಪಂದ್ಯದ ಬಳಿಕ ಎಂಎಸ್‌ ಧೋನಿ ಇದೇ ಮೊದಲ ಬಾರಿ ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ್ದಾರೆ. ಇವರು ಕೊನೆಯ ಬಾರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎಂಎಸ್‌ ಧೋನಿ ಮುನ್ನಡೆಸಿದ್ದರು ಹಾಗೂ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಆದರೆ, 2024ರ ಐಪಿಎಲ್‌ ಆರಂಭಕ್ಕೂ ಮುನ್ನ ಅವರು ನಾಯಕತ್ವವನ್ನು ಋತುರಾಜ್‌ ಗಾಯಕ್ವಾಡ್‌ಗೆ ಬಿಟ್ಟುಕೊಟ್ಟಿದ್ದರು.