ಎಸಿ ಕೋಚ್ನಲ್ಲಿ ಮದ್ಯಪಾನ ಮಾಡಿ ರಂಪಾಟ ಮಾಡಿದ ಸಹಪ್ರಯಾಣಿಕರು: ವಿಡಿಯೊ ಮೂಲಕ ಕಹಿ ಅನುಭವ ಬಿಚ್ಚಿಟ್ಟ ಯುವತಿ!
Viral News: ಗುವಾಹಟಿಯಿಂದ ಕೋಲ್ಕತ್ತಾಕ್ಕೆ ಎಸಿ ಕೋಚ್ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬರು ಸಹ ಪ್ರಯಾಣಿಕರಿಂದ ಉಂಟಾದ ಕಿರಿಕಿರಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಸಾರಾಯ್ ಘಾಟ್ ಎಕ್ಸ್ಪ್ರೆಸ್ನ 2AC ಬೋಗಿಯಲ್ಲಿದ್ದ ಸಹ-ಪ್ರಯಾಣಿಕರು ಮದ್ಯಪಾನ ಮಾಡುವುದು, ಬೋಗಿಯೊಳಗೆ ಕಸ ಹಾಕುವುದು ಮತ್ತು ರಾತ್ರಿಯಿಡೀ ಜೋರಾಗಿ ಸಂಗೀತ ನುಡಿಸುವ ಮೂಲಕ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಎಸಿ ಬೋಗಿಯಲ್ಲಿ ಮದ್ಯಪಾನ ಮಾಡಿ ಸಹಪ್ರಯಾಣಿಕರಿಂದ ಕಿರಿಕಿರಿ -
ಕೋಲ್ಕತಾ,ಸೆ.15: ಇತ್ತೀಚೆಗೆ ಜನರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಕಾಡುತ್ತಿದೆ. ಸಾರ್ವಜನಿಕ ಸ್ಥಳದಲ್ಲೂ ಕೆಲವರು ಅಶಿಸ್ತಿನಿಂದ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗುವಾಹಟಿ ಯಿಂದ ಕೋಲ್ಕತ್ತಾಕ್ಕೆ ಎಸಿ ಕೋಚ್ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬರು ಸಹ ಪ್ರಯಾಣಿ ಕರಿಂದ ಉಂಟಾದ ಕಿರಿಕಿರಿಯ ಬಗ್ಗೆ ಬೇಸರ (Viral News) ಹೊರಹಾಕಿದ್ದಾರೆ. ಸಾರಾಯ್ಘಾಟ್ ಎಕ್ಸ್ಪ್ರೆಸ್ನ 2AC ಬೋಗಿಯಲ್ಲಿದ್ದ ಸಹ-ಪ್ರಯಾಣಿಕರು ಮದ್ಯಪಾನ ಮಾಡುವುದು, ಬೋಗಿಯೊಳಗೆ ಕಸ ಹಾಕುವುದು ಮತ್ತು ರಾತ್ರಿಯಿಡೀ ಜೋರಾಗಿ ಸಂಗೀತ ನುಡಿಸುವ ಮೂಲಕ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಕರ ನಡವಳಿಕೆ ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತವಾಗುವಂತೆ ಮಾಡಿದೆ.
ಇತ್ತೀಚೆಗೆ ಸಾರ್ವಜನಿಕ ಸ್ಥಳವೂ ತಮ್ಮದೆ ಆಸ್ತಿ ಎಂಬಂತೆ ಜನರು ವರ್ತನೆ ತೋರುತ್ತಿದ್ದಾರೆ. ಇದೀಗ ಗುವಾಹಟಿಯಿಂದ ಕೋಲ್ಕತ್ತಾಗೆ ಪ್ರಯಾಣ ಮಾಡುತ್ತಿದ್ದ ಯುವತಿಯೂ ಎಸಿ ಕೋಚ್ ನಲ್ಲಿದ್ದರೂ ಸಹಪ್ರಯಾಣಿಕರು ಮದ್ಯಪಾನ ಮಾಡಿ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಒಂದುವರೆ ದಿನದ ಸುದೀರ್ಘ ಪ್ರಯಾಣ ನರಕ ಯಾತನೆಯಾಗಿ ಕೂಡಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೋ ನೋಡಿ:
ಇನ್ಸ್ಟಾಗ್ರಾಮ್ನಲ್ಲಿ ಪಿಂಕ್ ಪೆಬಲ್ ಹೆಸರಿನಲ್ಲಿ ಬ್ಲಾಗರ್ ಸಂಧ್ಯಾ ಮಜ್ಜಿ ಎಂಬುವರು ಈ ಕಹಿ ಅನುಭವ ಹಂಚಿಕೊಂಡಿದ್ದಾರೆ. ಎಸಿ ಬೋಗಿನಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದು ಎಂದು ಅಂದುಕೊಂಡಿದ್ದರೂ ಸಹಪ್ರಯಾಣಿಕರು ಮಧ್ಯರಾತ್ರಿಯಲ್ಲೂ ತೊಂದರೆ ಮಾಡಿದ್ದಾರೆ. ಜೋರಾಗಿ ಫೋನ್ನಲ್ಲಿ ಮಾತನಾಡುವುದು, ಹೆಡ್ಫೋನ್ ಬಳಸದೇ ಹಾಡುಗಳನ್ನು ಹಾಕುವುದು ಹಾಗೂ ಮದ್ಯಪಾನ ಮಾಡಿ ರಂಪಾಟ ಮಾಡಿದ್ದಾಗಿ ಆರೋಪಿಸಿದ್ದಾರೆ.
ಬೋಗಿಯ ಹೊರಭಾಗದಲ್ಲಿ ಡಸ್ಟ್ಬಿನ್ ಇದ್ದರೂ ಸಹ, ಕಸವನ್ನು ಕೋಚ್ನಲ್ಲಿ ಎಸೆದು ಅಸ್ವಚ್ಛತೆ ಉಂಟುಮಾಡಿದ್ದಾರೆ. ನಾಗರಿಕ ಪ್ರಜ್ಞೆ ಎಂದರೆ ನೀವು ಎಲ್ಲಿ ಕುಳಿತಿದ್ದೀರಿ ಅಥವಾ ಎಷ್ಟು ಹಣ ಪಾವತಿಸಿದ್ದೀರಿ ಎಂಬುದು ಮುಖ್ಯ ಅಲ್ಲ, ಅದು ಸಾರ್ವಜನಿಕರು ಹಂಚಿಕೊಳ್ಳುವ ಸ್ಥಳಗಳನ್ನು ಗೌರವಿಸುವುದಕ್ಕೆ ಸಂಬಂಧಿಸಿದೆ. ಅದರಲ್ಲೂ ಅಪರಿಚಿತರನ್ನು ಪ್ರಶ್ನಿಸುವುದು ಸುರಕ್ಷತೆಯ ದೃಷ್ಟಿಯಿಂದ ಭಯ ಹುಟ್ಟಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಅನೇಕ ನೆಟ್ಟಿಗರು ಪ್ರಯಾಣಿಕರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಳಕೆದಾರರೊಬ್ಬರು ಇಂತಹ ವ್ಯಕ್ತಿಗಳಿಗೆ ಇನ್ಮುಂದೆ ಪ್ರಯಾಣಿಸಲು ಅವಕಾಶವೇ ನೀಡಬಾರದು ಎಂದರು. ಮತ್ತೊಬ್ಬರು ರೈಲ್ವೆ ಸಹಾಯವಾಣಿ ಆ್ಯಪ್ ಮೂಲಕ ತಕ್ಷಣ ದೂರು ನೀಡಬೇಕಿತ್ತು ಎಂದು ಸಲಹೆ ಕೊಟ್ಟಿದ್ದಾರೆ.