Viral Video: ಸಮಸ್ಯೆ ಬಗೆಹರಿಸುವ ಕೇಂದ್ರದಲ್ಲೇ ಜಟಾಪಟಿ; ವೃದ್ಧನ ಮೇಲೆ ಪೊಲೀಸ್ ಅಧಿಕಾರಿಯ ದರ್ಪ, ಇಲ್ಲಿದೆ ವಿಡಿಯೊ
ಸರ್ಕಾರಿ ಕುಂದುಕೊರತೆ ಪರಿಹಾರ ಕೇಂದ್ರವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನ ಸಾಥೂರ್ನಲ್ಲಿ ಈ ಘಟನೆ ನಡೆದಿದೆ.

-

ಚೆನ್ನೈ: ಸರ್ಕಾರಿ ಕುಂದುಕೊರತೆ ಪರಿಹರಿಸುವ ಕೇಂದ್ರವೊಂದರಲ್ಲಿ ಪೊಲೀಸ್ (Police) ಅಧಿಕಾರಿಯೊಬ್ಬರು ವೃದ್ಧರ ಮೇಲೆ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸಾಥೂರ್ನಲ್ಲಿ ನಡೆದಿದೆ. ಹಲ್ಲೆಯ ದೃಶ್ಯದ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸರ್ಕಾರವು ಪ್ರಸ್ತುತ ರಾಜ್ಯಾದ್ಯಂತ ಉಂಗಲುಡನ್ ಸ್ಟಾಲಿನ್ (ನಿಮ್ಮ ಜತೆ ಸ್ಟಾಲಿನ್) ಎಂಬ ಕೇಂದ್ರಗಳನ್ನು ನಡೆಸುತ್ತಿದೆ. ಇದು ಅಧಿಕಾರಿಗಳನ್ನು ಜನರ ಹತ್ತಿರ ತರುವ ಮೂಲಕ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಜನರು, ವಿಶೇಷವಾಗಿ ಭೂ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪರಿಹಾರವನ್ನು ಪಡೆಯಲು ಕೇಂದ್ರಗಳಿಗೆ ಹಾಜರಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಥೂರ್ ಕೇಂದ್ರದಲ್ಲಿ, ಉಪ್ಪುಪೆಟ್ಟೈ ನಿವಾಸಿ ವೆಂಕಟಪತಿ ಎಂದು ವೃದ್ಧರು ಅರ್ಜಿ ಸಲ್ಲಿಸಿದರು. ಆದರೆ ಸಂಬಂಧಪಟ್ಟ ಅಧಿಕಾರಿ ಸ್ವೀಕೃತಿ ಚೀಟಿಯನ್ನು ನೀಡಲು ನಿರಾಕರಿಸಿದರು. ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ವೆಂಕಟಪತಿ ತಲೆಗೆ ಗಾಯವಾಗಿದೆ. ವೆಂಕಟಪತಿ ಕೂಡ ಪೊಲೀಸ್ ಅಧಿಕಾರಿಯ ನಡೆಗೆ ಸಿಟ್ಟಾಗಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
மனு கொடுக்க வந்த முதியவரை நெஞ்சில் தாக்கிய போலீஸ்! | TN Police | Ungaludan Stalin | DMK | MK Stalin pic.twitter.com/BDizSyO1Kd
— Ilaya Bharatham (@IBharatham) September 3, 2025
ಈ ವೇಳೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೆಂಕಟಪತಿ ಅವರನ್ನು ಕೇಂದ್ರದಿಂದ ಹೊರದೂಡಲು ಪ್ರಯತ್ನಿಸಿದ್ದಾರೆ. ಈ ಗಲಾಟೆಯ ಸಂದರ್ಭದಲ್ಲಿ, ಒಬ್ಬ ಅಧಿಕಾರಿ ಅವರನ್ನು ತಳ್ಳುವುದು ಮತ್ತು ಗುದ್ದುವುದು ಕಂಡುಬಂದಿದೆ. ಕ್ಯಾಮರಾದಲ್ಲಿ ಸೆರೆಯಾದ ಈ ಹಲ್ಲೆ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಘಟನೆಯ ನಂತರ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಉದ್ದೇಶಿಸಿರುವುದಾಗಿ ವೆಂಕಟಪತಿ ಹೇಳಿದ್ದಾರೆ. ಸಾಥೂರ್ನ ಉಂಗಲುಡನ್ ಸ್ಟಾಲಿನ್ ಕೇಂದ್ರದಲ್ಲಿ ವೃದ್ಧ ವ್ಯಕ್ತಿಯ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ, ತಮಿಳುನಾಡಿನಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಉಂಗಲುಡನ್ ಸ್ಟಾಲಿನ್ ಯೋಜನೆಯ ಪ್ರಯೋಜನವೇನು?
ಈ ಯೋಜನೆಯ ಲಾಭ ಏನೆಂದರೆ ಜನರು ತಮ್ಮ ಅಭಿಪ್ರಾಯಗಳು ಮತ್ತು ದೂರುಗಳನ್ನು ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಬಹುದಾಗಿದೆ. ಜಮೀನು ಸಮಸ್ಯೆ, ಪಿಂಚಣಿ, ರೇಷನ್ ಕಾರ್ಡ್, ಹೌಸಿಂಗ್ ಬೋರ್ಡ್ ಮುಂತಾದ ವಿವಿಧ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ದೊರಕಲು ಇದು ಸಹಾಯಕವಾಗಿದೆ. ಕೇಂದ್ರದಲ್ಲಿ ದಾಖಲಾದ ಹಲವಾರು ಅರ್ಜಿಗಳು ಕೆಲ ದಿನಗಳಲ್ಲಿ ಅಥವಾ ಕೆಲವು ವಾರಗಳಲ್ಲಿ ಪರಿಹಾರಗೊಳ್ಳುವ ಗುರಿಯನ್ನು ಹೊಂದಿದೆ. ವೃದ್ಧರು, ವಿಶೇಷ ಚೇತನರು, ನಿರ್ಗತಿಕರು ಮತ್ತು ಬಡವರು ತಮ್ಮ ಯೋಜನೆಯ ಲಾಭ ಪಡೆಯಬಹುದು.