Yagati Raghu Naadig Column: ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!
“ಪತ್ತೇದಾರಿ ಕಥೆಯ ತಿರುವು ನೀಡಿದ ‘ಹಿತವಾದ ಆಘಾತ’ವನ್ನು ಅನುಭವಿಸಲೆಂದು ನಾನು ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ಕಾರು ನಿಂತಿತು ಎಂದು ಭಾವಿಸಿದ್ದೆ; ಆದರೆ ಇಲ್ಲಿ ನೋಡಿದರೆ ಅದು ‘ನಾನು ಹಾಕಿದ’ ಬ್ರೇಕ್ ಅಲ್ಲ, ‘ಮೇಲಿನವ ಹಾಕಿಸಿದ’ ಬ್ರೇಕ್ ಅಂತ ಈಗ ಗೊತ್ತಾಯ್ತು" ಎಂದು ಚಾಲಕ ತನಗಾದ ಬೆರಗನ್ನು ಅವಧೂತರಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡ.


ರಸದೌತಣ
(ಭಾಗ-4)
ಭಕ್ತ ದಂಪತಿಯಿಂದ ಬೀಳ್ಕೊಂಡ ಅವಧೂತರು ಮತ್ತು ಶಿಷ್ಯರು ಕಾರನ್ನೇರಿದರು. ಗಾಡಿಯನ್ನು ಚಾಲನೆ ಮಾಡುವುದಕ್ಕೂ ಮುನ್ನ ಚಾಲಕನು ಅವಧೂತರನ್ನೇ ನಿಬ್ಬೆರಗಾಗಿ ನೋಡುತ್ತಿದ್ದ. “ಏನು ರಾಯರೇ?" ಎನ್ನುತ್ತಾ ಹುಬ್ಬು ಕುಣಿಸಿ ಅವಧೂತರೊಮ್ಮೆ ತುಂಟನಗೆ ನಕ್ಕರು. “ಪತ್ತೇದಾರಿ ಕಥೆಯ ತಿರುವು ನೀಡಿದ ‘ಹಿತವಾದ ಆಘಾತ’ವನ್ನು ಅನುಭವಿಸಲೆಂದು ನಾನು ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ಕಾರು ನಿಂತಿತು ಎಂದು ಭಾವಿಸಿದ್ದೆ; ಆದರೆ ಇಲ್ಲಿ ನೋಡಿದರೆ ಅದು ‘ನಾನು ಹಾಕಿದ’ ಬ್ರೇಕ್ ಅಲ್ಲ, ‘ಮೇಲಿನವ ಹಾಕಿಸಿದ’ ಬ್ರೇಕ್ ಅಂತ ಈಗ ಗೊತ್ತಾಯ್ತು" ಎಂದು ಚಾಲಕ ತನಗಾದ ಬೆರಗನ್ನು ಅವಧೂತರಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡ. ಈ ಮಾತು ಕೇಳಿ ಎಡಗೈಯಲ್ಲಿ ಒಮ್ಮೆ ಗಡ್ಡ ವನ್ನು ನೀವಿಕೊಂಡ ಅವಧೂತರು, ಬಲಗೈಯಲ್ಲಿ ಚಾಲಕನ ಬೆನ್ನನ್ನು ಒಮ್ಮೆ ಗುದ್ದಿ, ಬೆನ್ನಿನ ಉದ್ದಗಲಕ್ಕೂ ಸವರಿದರು. ಅದು ಅರಿವಿನ ಕಿಡಿ ಚಾಲಕನಲ್ಲೂ ಹೊತ್ತಿಕೊಂಡಿದ್ದಕ್ಕೆ ಆತನಿಗೆ ಅವಧೂತರು ನೀಡಿದ ಶಹಭಾಸ್ಗಿರಿ!
“ನನ್ನ ಬೆನ್ನಿನ ಮೇಲೆ ನಿಮ್ಮ ‘ಫಿಂಗರ್ಪ್ರಿಂಟ್’ ಆಗಾಗ ಹೀಗೆ ಬೀಳ್ತಾ ಇದ್ರೆ ಅದೇನೋ ಸುಖ ಗುರುಗಳೇ" ಎಂದ ಚಾಲಕ ಕೃತಜ್ಞತಾಪೂರ್ವಕ ದನಿಯಲ್ಲಿ. ಅದು ಅವಧೂತರ ಅಭಯಹಸ್ತವು ತನ್ನ ಬೆನ್ನ ಮೇಲೆ ಆಡಿದಾಗ ಅದ ಅನುಭೂತಿಯನ್ನು ತನ್ನದೇ ಹಾಸ್ಯಶೈಲಿಯಲ್ಲಿ ಆತ ಹಂಚಿ ಕೊಂಡ ಪರಿ. ಹಾಗೆ ಹೇಳಿದವನೇ ತನ್ನ ಕಣ್ಣಂಚಿನಲ್ಲಿ ಪೊರೆ ಕಟ್ಟಿದ್ದ ನೀರನ್ನು ಒರೆಸಿಕೊಂಡು ಕಾರನ್ನು ಚಾಲೂ ಮಾಡಿದ. ಕಾರಿನೊಳಗೆ ಮತ್ತೆ ಕೆಲವು ಕ್ಷಣಗಳವರೆಗೆ ಮೌನಸಾಮ್ರಾಜ್ಯ. ಕಾರಣ, ಅವಧೂತರ ಸಾಂಗತ್ಯದಲ್ಲಿ ತಮಗಾಗುತ್ತಲೇ ಇದ್ದ ಬೆರಗಿನ ಅನುಭವಗಳನ್ನು ಶಿಷ್ಯರು ಮೆಲುಕು ಹಾಕುತ್ತಿದ್ದರು. ಕೆಲ ವಿಷಯಗಳಿಗೆ ಸಂಬಂಧಿಸಿ ಶಿಷ್ಯರ ಮನದೊಳಗೆ ಸಾಕಷ್ಟು ಆಂದೋಲನ ನಡೆಯುತ್ತಿದೆ, ಆದರೆ ಆ ಕುರಿತು ಪ್ರಶ್ನಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಅವಧೂತರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ತಾವೇ ಮಾತಿಗಿಳಿದುಬಿಟ್ಟರು....
“ಮುನಿಯಪ್ಪ-ಚಿಕ್ಕತಾಯಮ್ಮ ದಂಪತಿಗೆ ಒಬ್ಬಳೇ ಮಗಳು. ಶಾರದೆ ಅಂತ ಅವಳ ಹೆಸರು. ತಾವಿದ್ದ ಸಾಮಾಜಿಕ ಪರಿಸ್ಥಿತಿ, ಕೈಹಿಡಿಯದ ಆರ್ಥಿಕ ಪರಿಸ್ಥಿತಿ ಎರಡರಿಂದಲೂ ಬಳಲಿದ್ದ ಆ ದಂಪತಿ, ಶಾರದೆಯನ್ನು ಹೊಲ-ಗದ್ದೆಗಳಲ್ಲಿನ ಕೂಲಿ ಕೆಲಸಕ್ಕೋ, ಅವರಿವರ ಮನೆಯ ಬಟ್ಟೆ ಒಗೆಯುವು ದಕ್ಕೋ ಕಳಿಸುವುದು ಅಂತ ಅಂದುಕೊಂಡಿದ್ದರು. ಆದರೆ ಆ ಹುಡುಗಿಗೆ ಓದಬೇಕೆಂಬ ಆಸೆ. ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎಂಬ ಪರಿಸ್ಥಿತಿಯಲ್ಲಿ ದಿನದೂಡುತ್ತಿದ್ದ ಈ ದಂಪತಿಗೆ ಉಭಯ ಸಂಕಟ. ಆದರೆ ಇದ್ದೊಬ್ಬ ಮಗಳ ಆಸೆಗೆ ತಣ್ಣೀರು ಎರಚಬಾರದೆಂದು ನಿರ್ಧರಿಸಿದ ದಂಪತಿ ಹೊಟ್ಟೆ-ಬಟ್ಟೆ ಕಟ್ಟಿ ಆಕೆಯನ್ನು 7ನೇ ತರಗತಿಯವರೆಗೂ ಓದಿಸಿದರು. ಅಷ್ಟು ಹೊತ್ತಿಗೆ ಸಾಕಷ್ಟು ದಣಿದಿದ್ದ ಆ ದಂಪತಿ, ಮಗಳು ಓದಿದ್ದು ಇನ್ನು ಸಾಕು. ಇನ್ನೊಂದೆರಡು ವರ್ಷ ಅಲ್ಲಿ-ಇಲ್ಲಿ ಮನೆಗೆಲಸ ಮಾಡಿಸಿ ನಂತರ ಮದುವೆ ಮಾಡಿಬಿಡುವುದು ಎಂದೇ ತೀರ್ಮಾನಿಸಿದ್ದರು.
ಆದರೆ ಶಾರದೆಗೋ ಇನ್ನೂ ಓದುವ ಹಂಬಲ, ತನ್ನ ಗಮ್ಯ ಬೇರೆಲ್ಲೋ ಇದೆ ಎಂಬ ಆತ್ಮವಿಶ್ವಾಸ. ಆದರೆ ಹೆತ್ತವರ ದುಸ್ಥಿತಿಯನ್ನು ಕಂಡು ಏನೂ ಹೇಳಿಕೊಳ್ಳಲಿಕ್ಕಾಗದೆ ಮನದಾಳದ ಮಾತುಗಳನ್ನು ಗಂಟಲಲ್ಲೇ ಗಂಟು ಕಟ್ಟಿ ಇಟ್ಟುಕೊಂಡಿದ್ದಳು. ಆಕೆಯ ವಿಷಯ ಗೊತ್ತಾದ ಶಾಲೆಯ ಮುಖ್ಯೋ ಪಾಧ್ಯಾಯರು ಇವರ ಮನೆಗೇ ಬಂದು, ‘ಪ್ರತಿಭಾವಂತೆ ಶಾರದೆಯ ವಿದ್ಯಾಭ್ಯಾಸವನ್ನು ಯಾವ ಕಾರಣಕ್ಕೂ ನಿಲ್ಲಿಸಬೇಡಿ. ದಿನಗಳೆದಂತೆ ಅವಳ ವಿದ್ಯಾಭ್ಯಾಸದ ಖರ್ಚು-ವೆಚ್ಚ ನೋಡಿಕೊಳ್ಳಲು ಆಗುವುದಿಲ್ಲ ಎಂಬುದು ನಿಮ್ಮ ಆತಂಕವಿರಬಹುದು; ಅದಕ್ಕೊಂದು ದಾರಿಯಿದೆ, ಅವಳನ್ನು ಪಟ್ಟಣದಲ್ಲಿನ ಸಮಾಜಸೇವಾ ಸಂಸ್ಥೆಯ ಶಾಲೆಗೆ ಸೇರಿಸಲು ಯತ್ನಿಸೋಣ. ಆ ಸಂಸ್ಥೆಯ ಆಶ್ರಯ ದಲ್ಲೇ ವಿದ್ಯಾರ್ಥಿ ನಿಲಯವೂ ಇದೆ. 7ನೇ ತರಗತಿಯಲ್ಲಿ ಶಾರದೆಗೆ ಒಳ್ಳೆಯ ಅಂಕಗಳೇ ಬಂದಿರುವು ದರಿಂದ ಎರಡೂ ಕಡೆ ಉಚಿತ ಸೌಲಭ್ಯ ಸಿಗುತ್ತದೆ’ ಎಂದು ಹೇಳಿ ಆ ದಂಪತಿಯ ಮನವೊಲಿಸಿದರು. ಇರುವ ಒಬ್ಬಳೇ ಮಗಳು, ಅದೂ ವಯಸ್ಸಿಗೆ ಬರುತ್ತಿರುವ ಮಗಳನ್ನು ಮನೆಯಿಂದ ಹೊರಗೆ ಕಳಿಸುವುದಕ್ಕೆ ಆಗದೆ ಆ ದಂಪತಿಯ ಮನಸ್ಸು ಹೊಯ್ದಾಡಿದರೂ, ತಮ್ಮ ಬಳಗ ಅಥವಾ ಕುಟುಂಬದಲ್ಲೇ ಯಾರಿಗೂ ಇಲ್ಲದ ‘ತುಂಬಾ ಓದಬೇಕೆಂಬ’ ಆಸೆ ಶಾರದೆಯಲ್ಲಿ ಕೆನೆಗಟ್ಟಿರುವು ದನ್ನು ಕಂಡು, ಅದಕ್ಕೆ ತಣ್ಣೀರೆರಚಬಾರದು ಎಂದು ನಿರ್ಧರಿಸಿ ವಸತಿಶಾಲೆಗೆ ಕಳಿಸಿಕೊಡಲು ಗಟ್ಟಿಮನಸ್ಸು ಮಾಡಿದರು...." ಎಂದು ಹೇಳಿ ಗುರುಗಳು ಅರೆಕ್ಷಣ ಮಾತು ನಿಲ್ಲಿಸಿ ಚಾಲಕನ ಕಡೆಗೆ ನೋಡಿದರು.
ಅವರ ಕಣ್ಣ ಇಶಾರೆಯನ್ನು ಅರಿತವನಂತೆ ಚಾಲಕನು ಕಾರಿನ ವೇಗವನ್ನು ತಗ್ಗಿಸಿ ರಸ್ತೆಯ ಅಂಚಿಗೆ ತಂದು ನಿಲ್ಲಿಸಿದ, “ಏನಾದರೂ ಹಣ್ಣು-ಹಂಪಲು ತಂದುಕೊಡಬೇಕಾ ಗುರುಗಳೇ?" ಎಂದು ಕೇಳಿದ.
ಅದಕ್ಕೆ ನಸುನಕ್ಕ ಅವಧೂತರು, “ಅಯ್ಯಾ, ಆ ಭಕ್ತದಂಪತಿಯ ಮನೆಯಲ್ಲಿ ತಿಂದ ಜೇನುಹಲಸು ಅರಗೋದಕ್ಕೇ ಇನ್ನು ಸಾಕಷ್ಟು ಸಮಯ ಬೇಕು, ಮತ್ತೆಲ್ಲಿಂದ ಹಣ್ಣು-ಹಂಪಲು ತುಂಬಿಸಿಕೊಳ್ಳಲಿ? ನಮ್ಮ ಹೊಟ್ಟೆಯನ್ನೇನೋ ಪುಷ್ಕಳವಾಗಿ ತುಂಬಿಸಿಕೊಂಡಿದ್ದಾಯಿತು, ನಿನ್ನ ಕಾರಿನ ಹೊಟ್ಟೆ ಯನ್ನೂ ತುಂಬಿಸಬೇಕಲ್ವೇನಯ್ಯಾ?" ಎಂದರು. ಅವಧೂತರ ಸೂಕ್ಷ್ಮಪ್ರಜ್ಞೆಗೆ ಮನದಲ್ಲೇ ನಮಿಸಿದ ಚಾಲಕ, ರಸ್ತೆಬದಿಯಲ್ಲಿದ್ದ ಪೆಟ್ರೋಲ್ ಬಂಕ್ನೆಡೆಗೆ ಕಾರನ್ನು ಚಾಲಿಸಿ, ಅದರ ಟ್ಯಾಂಕ್ ತುಂಬಿಸಿ, ಹಣ ಪಾವತಿಸಿ ಹೊರಡಲು ಸಜ್ಜಾದ. ಆದರೆ ಅವಧೂತರು ಅವನನ್ನು ಅರೆಕ್ಷಣ ತಡೆದು ನಿಲ್ಲಿಸಿ ದರು. ಅದೇಕೆಂದು ಚಾಲಕನಿಗೆ ಮೊದಲು ಅರ್ಥವಾಗಿರಲಿಲ್ಲ. ಆದರೆ, ಕಾರಿನ ಕಿಟಕಿಯ ಪಕ್ಕದಲ್ಲೇ ಕೂತಿದ್ದ ಅವಧೂತರನ್ನು ನೋಡಿದ್ದ ಶುಭ್ರ ಶ್ವೇತವಸ್ತ್ರಧಾರಿ ಹಿರಿಯ ಜೀವವೊಂದು ಕಾರಿನೆಡೆಗೆ ಧಾವಿಸುತ್ತಿದ್ದುದನ್ನು ಕಂಡಾಗ ಚಾಲಕನಿಗೆ ಕಾರಣ ಗೊತ್ತಾಯಿತು. ಹಾಗೆ ಬಂದ ಹಿರಿಯರು ಕಾರಿನ ಕಿಟಕಿಯ ಮೇಲಿರಿಸಿದ್ದ ಅವಧೂತರ ಕೈಯನ್ನೊಮ್ಮೆ ಕಣ್ಣಿಗೆ ಒತ್ತಿಕೊಂಡು ಹೆಗಲಲ್ಲಿದ್ದ ಚೀಲ ವನ್ನು ಅವರಿಗೆ ನೀಡಿ, “ಒಪ್ಪಿಸಿಕೊಳ್ಳಬೇಕು ಬುದ್ಧೀ" ಎಂದರು. ಅದನ್ನು ಸ್ವೀಕರಿಸಿ ಹರಸಿದ ಅವಧೂತರು, ಆ ಹಿರಿಯರು ಪೆಟ್ರೋಲ್ ಬಂಕ್ ಪಕ್ಕದಲ್ಲಿದ್ದ ತಮ್ಮ ಗ್ರಂಥಿಗೆ ಅಂಗಡಿಗೆ ಮರಳು ವವರೆಗೂ ಅತ್ತ ಕಡೆಯೇ ದೃಷ್ಟಿನೆಟ್ಟು, ಅಂಗಡಿಯೆಡೆಗೆ ಮತ್ತೊಮ್ಮೆ ಅಭಯಮುದ್ರೆ ತೋರಿಸಿದರು. ಅದು ಕಾರು ಹೊರಡಬಹುದು ಎಂಬುದರ ಸೂಚನೆ...
ಕಾರು ಸಾಗುತ್ತಿದ್ದಂತೆ ಮುಂದಿನ ಸೀಟಿನಿಂದ ಹಿಂದಕ್ಕೆ ಕತ್ತು ಹೊರಳಿಸಿದ ಅವಧೂತರು, “ಗೋಕರ್ಣದಲ್ಲಿ ತಯಾರಾಗೋ ಜನಿವಾರವೇ ಬೇಕು, ಪಳನಿಯ ಸುಗಂಧಭರಿತ ವಿಭೂತಿಯೇ ಬೇಕು ಅಂತ ಒಂದು ವಾರದಿಂದ ಮೌನವಾಗಿ ಹಂಬಲಿಸ್ತಾ ಇದ್ರಲ್ಲಾ ಸ್ವಾಮೀ? ತಗೊಳ್ಳಿ, ನಿಮ್ಮ ಬಯಕೆ ಆ ದೇವರಿಗೂ ಕೇಳಿಸಿಬಿಡ್ತು..." ಅಂತ ಆ ಕೈಚೀಲವನ್ನು ಶಿಷ್ಯರೊಬ್ಬರಿಗೆ ವರ್ಗಾಯಿಸಿದರು.
ಅದನ್ನು ಪಡೆದ ಆ ಶಿಷ್ಯರ ಬಾಯಿ ಬೆರಗಿನ ಕಾರಣದಿಂದಾಗಿ ಸಾಕಷ್ಟು ಕ್ಷಣದವರೆಗೆ ತೆರೆದೇ ಇತ್ತು..!! ಅದನ್ನು ತಾವು ಗಮನಿಸಲಿಲ್ಲ ಎನ್ನುವಂತೆ ಅವಧೂತರು ಮಾತನ್ನು ಮುಂದು ವರಿಸಿದರು...
“ಶಾರದೆ ವಸತಿ ಶಾಲೆಗೆ ಸೇರಿಕೊಂಡ ಒಂದು ವರ್ಷದವರೆಗೆ ಏನೂ ಸಮಸ್ಯೆ ಇರಲಿಲ್ಲ. ಆದರೆ ತರುವಾಯದಲ್ಲಿ ಅವಳ ಮೇಲೆ ಒಂದು ರಣಹದ್ದಿನ ಕಣ್ಣುಬಿತ್ತು. ಹುಟ್ಟಿನಿಂದಲೇ ಲಕ್ಷಣವಾಗಿದ್ದ ಮಗು ಅದು. ಹರೆಯಕ್ಕೆ ಕಾಲಿಡುತ್ತಿದ್ದಂತೆ ಆ ಲಕ್ಷಣಕ್ಕೆ ವಯೋ ಸಹಜವಾಗಿ ಮತ್ತಷ್ಟು ಲಾವಣ್ಯ ತುಂಬಿಕೊಂಡು, ಆಕೆ ವಿದ್ಯಾಭ್ಯಾಸಕ್ಕೆಂದು ಆಶ್ರಯ ಪಡೆದಿದ್ದ ಸಮಾಜಸೇವಾ ಸಂಸ್ಥೆಯ ಆಯಕಟ್ಟಿನ ಸ್ಥಾನದಲ್ಲಿದ್ದ ಮಹಾನ್ ವ್ಯಕ್ತಿಯೊಬ್ಬರು ಆಕೆಯ ಮೇಲೆ ಕಣ್ಣು ಹಾಕಿದರು. ಉಚಿತ ಊಟ-ವಿದ್ಯಾಭ್ಯಾಸ ನೀಡುತ್ತಿರುವ ತಮಗೆ ಈ ಸೌಂದರ್ಯವನ್ನು ಇಡಿಯಾಗಿ ಸವಿಯುವ ಹಕ್ಕು ಇದೆ ಎಂಬುದು ಅವರ ‘ವಿತಂಡ ಗ್ರಹಿಕೆ’ಯಾಗಿತ್ತು. ಮೊದ ಮೊದಲಿಗೆ ಶಾರದೆಗೆ ಇದು ಗೊತ್ತಾಗು ತ್ತಿರಲಿಲ್ಲ. ಉಚಿತ ಊಟ, ವಸತಿ, ವಿದ್ಯಾಭ್ಯಾಸ ಪಡೆಯುತ್ತಿದ್ದುದಕ್ಕೆ ಪ್ರತಿಯಾಗಿ ಸೇವೆ ಎಂಬಂತೆ ಅಂಥ ವಿದ್ಯಾರ್ಥಿಗಳು ಆ ಸಂಸ್ಥೆಯ ಆವರಣದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬೇಕಾದುದು ಒಂದು ಅಲಿಖಿತ ನಿಯಮವಾಗಿತ್ತು. ಇದರ ನಿಮಿತ್ತವಾಗಿ ಆ ಮಹಾವ್ಯಕ್ತಿಯು ಕರೆದಾಗಲೆಲ್ಲಾ, ಶಾರದೆ ಓಗೊಟ್ಟು ಕೆಲಸ ಮಾಡಿಕೊಟ್ಟು ಬರಬೇಕಿತ್ತು. ಗಿಡಗಳಿಗೆ ನೀರುಣಿಸುವುದು, ಪೂಜೆಗೆ ಹೂವು-ಪತ್ರೆ ಕೊಯ್ದು ತರುವುದು, ಹಸುವಿನ ಹಾಲು ಕರೆಯುವುದು, ಗೋಶಾಲೆಯನ್ನು ಚೊಕ್ಕ ಮಾಡುವುದು ಹೀಗೆ ವಿವಿಧ ಕೆಲಸಗಳಲ್ಲಿ ಶಾರದೆ ತೊಡಗಿಸಿಕೊಳ್ಳುತ್ತಿದ್ದಳು. ಆದರೆ, ಇದಕ್ಕೆ ಹೊರತಾದ ‘ಅಸಹಜ’ ಚಟುವಟಿಕೆಯಲ್ಲೂ ಶಾರದೆಯು ಭಾಗಿಯಾಗಬೇಕು ಎಂಬ ಅಪೇಕ್ಷೆಯು ಆ ಮಹಾವ್ಯಕ್ತಿಯಿಂದ ಹೊಮ್ಮಿದಾಗ ಆಕೆ ಅರೆಕ್ಷಣ ನಡುಗಿದಳು. ‘ವಿದ್ಯೆಯ ಹಸಿವು ನೀಗುವ ಈ ಜಾಗದಲ್ಲೂ ಇಂಥ ಹಸಿವೇ?’ ಎಂದು ತನ್ನನ್ನೇ ಪ್ರಶ್ನಿಸಿಕೊಂಡಳು. ದಿನಗಳೆದಂತೆ ಆ ಮಹಾವ್ಯಕ್ತಿ ಯ ಆಗ್ರಹ ತೀವ್ರವಾಗತೊಡಗಿದಾಗ ಶಾರದೆ ಕಂಗಾಲಾದಳು. ನಿಂತ ನೆಲವೇ ಕುಸಿದು ಹೋಗಬಾರದೇ ಎಂದು ಆಕೆ ಮೌನವಾಗಿ ರೋಧಿಸಿದ್ದೂ ಉಂಟು. ಅಷ್ಟು ಹೊತ್ತಿಗೆ ವಾರ್ಷಿಕ ಪರೀಕ್ಷೆ ಮುಗಿದು, ಬೇಸಗೆಯ ರಜೆಯ ಅವಧಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಲಕಾಲ ದವರೆಗೆ ತಂತಮ್ಮ ಹುಟ್ಟೂರಿಗೆ ಹೋಗಿ ಬರುವಂಥ ಅವಕಾಶ ಸಿಕ್ಕಿತು. ಊರಿಗೆ ಹೊರಡಲು ಸಜ್ಜಾದ ಶಾರದೆ, ಮನೆಗೆ ತಲುಪುತ್ತಿದ್ದಂತೆ ಸಂಸ್ಥೆಯ ಆವರಣದಲ್ಲಿನ ಈ ‘ಅಸಹಜ’ ಪ್ರವೃತ್ತಿಯ ಕುರಿತು ಹೆತ್ತವರಲ್ಲಿ ಹೇಳಿಕೊಂಡು ಬಿಡಬೇಕು, ಶಿಕ್ಷಣವನ್ನು ಅಲ್ಲಿಗೇ ನಿಲ್ಲಿಸಿಬಿಡಬೇಕು ಎಂದು ಗಟ್ಟಿಮನಸ್ಸು ಮಾಡಿದಳು...." ಎಂದು ಹೇಳಿ ಅವಧೂತರು ಅರೆಕ್ಷಣ ನಿಲ್ಲಿಸಿದರು. ಅದಕ್ಕೆ ಕಾರಣ ಕಾರು ಅದಾಗಲೇ ಅವರ ಮನೆಯ ಹತ್ತಿರ ಬಂದಿತ್ತು....
ಅವಧೂತರು ಹೇಳಬೇಕಿದ್ದ ಕಥೆಯಿನ್ನೂ ಮುಗಿದಿರಲಿಲ್ಲ. ಆದರೆ ಅವರ ಶಿಷ್ಯರಲ್ಲೊಬ್ಬರು ಕಥನದ ಈ ‘ಸಸ್ಪೆನ್ಸ್’ ಹೊಡೆತವನ್ನು ತಡೆದು ಕೊಳ್ಳಲಾಗದೇ, “ಅಬ್ಬಾ! ಸಮಾಜಸೇವಾ ಸಂಸ್ಥೆ ಗಳಲ್ಲೂ ಹೀಗೆ ನಡೆಯೋದುಂಟೇ? ಗುರುಗಳೇ, ನನಗೆ ಅವತ್ತೇ ಸಂದೇಹ ಬಂದಿತ್ತು. ಅಂದು ನಾವು ಆ ಸಂಸ್ಥೆಯಿಂದ ಹೊರಟ ಕೆಲಹೊತ್ತಿಗೆಲ್ಲಾ ಅದರ ಮ್ಯಾನೇಜರ್ ನನ್ನ ಮೊಬೈಲ್ಗೆ ಕರೆ ಮಾಡಿ, ನಿಮಗೆ ಅದನ್ನು ಕೊಡುವಂತೆ ಹೇಳಿದರು. ಆದರೆ ನೀವು ಸ್ಪೀಕರ್ ಆನ್ ಮಾಡುವಂತೆ ಸೂಚಿಸಿದಿರಿ. ಅತ್ತ ಕಡೆಯಿಂದ ಮ್ಯಾನೇಜರ್ ಅಳುತ್ತಾ, ‘ಸಂಸ್ಥೆಯ ಆವರಣದಲ್ಲಿರೋ ಕಳ್ಳಬೆಕ್ಕನ್ನ ಹುಡುಕಿ ಹೊರಹಾಕಿ ಎಂದು ನೀವು ಹೇಳಿದಾಗ, ನನಗೆ ಮೊದಲು ಅರ್ಥವಾಗಲಿಲ್ಲ ಬುದ್ಧೀ... ನನ್ನ ತಪ್ಪು ಏನೆಂದು ಈಗ ಗೊತ್ತಾಯಿತು. ಹೊಟ್ಟೆಗೆ ಹಾಕ್ಕೊಳ್ಳಿ... ಇನ್ನು ಮುಂದೆ ಇಂಥ ತಪ್ಪು ನಮ್ಮ ಕಡೆಯಿಂದ ಆಗೋಲ್ಲ ಬುದ್ಧೀ, ಕರುಣೆ ತೋರಿ ನನ್ನಪ್ಪಾ...’ ಎಂದು ಅಲವತ್ತುಕೊಂಡಿದ್ದನ್ನು ನಾವೆಲ್ಲರೂ ಕೇಳಿಸಿಕೊಂಡೆವು. ಆಯಕಟ್ಟಿನ ಸ್ಥಾನದಲ್ಲಿರುವ, ಅಮಾಯಕ ಮುಖದ ಆ ಮ್ಯಾನೇಜರ್ ಇಂಥಾ ದುರುಳ ಎಂದು ಗೊತ್ತಿರಲಿಲ್ಲ..." ಎಂದು ಒಂದೇ ಸಮನೆ ಕಾರಿಕೊಂಡರು.
ಆದರೆ ಈ ಮಾತಿಗೆ ಏನೂ ಪ್ರತಿಕ್ರಿಯಿಸದ ಅವಧೂತರು ಕಾರಿನಿಂದ ಇಳಿಯದೆಯೇ ತಮ್ಮ ಮನೆಯ ಮುಂಬಾಗಿಲ ಕಡೆಗೇ ‘ಸಾತ್ವಿಕ ಕೋಪ’ದಿಂದ ನೋಡುತ್ತಿದ್ದರು. ಅವರ ಉಸಿರಾಟ ವಾಡಿಕೆಗಿಂತ ತೀವ್ರವಾಗಿತ್ತು.
ಕಾರಣ, ಅಲ್ಲೊಂದು ಕೇಸರಿ ಬಣ್ಣದ ಕಾರು ನಿಂತಿತ್ತು....
ಅದು, ಶಿವರಾತ್ರಿಯ ಅಖಂಡ ಭಜನೆಯ ನಂತರ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಲೆಂದು ಹಾಗೂ ಉನ್ನತ ಅಧ್ಯಯನಕ್ಕೆಂದು ವಾರಾಣಸಿಗೆ ತೆರಳುವಂತೆ ಅವಧೂತರಿಂದ ಆದೇಶವನ್ನು ಸ್ವೀಕರಿಸಿದ್ದ, ಸಮಾಜಸೇವಾ ಸಂಸ್ಥೆಯ ತೆಕ್ಕೆಯಲ್ಲಿದ್ದ ಮಠದ ಸ್ವಾಮೀಜಿಯ ಕಾರು...!!
(ಮುಂದುವರಿಯುವುದು)