Vishweshwar Bhat Column: ಕನ್ನಡ ಅಸ್ಮಿತೆ ಸೋನು, ತಮನ್ನಾ, ಕಮಲ್ ಅಲ್ಲಾಡಿಸುವಷ್ಟು ದುರ್ಬಲವಾ ?
ಅಷ್ಟಕ್ಕೂ ಸೋನು ನಿಗಮ್ ಹಾಗೆ ಹೇಳಿದಾಕ್ಷಣ ಕನ್ನಡಿಗರ ಸ್ವಾಭಿಮಾನ, ಅಸ್ಮಿತೆ ವೃಷಭಾವತಿ ಯಲ್ಲಿ ಕೊಚ್ಚಿ ಹೋಗ್ತಾ ಇತ್ತಾ? ಬಕ್ವಾಸ್ ! ಇಂಥ ಕ್ಷುಲ್ಲಕ ವಿಷಯಗಳಿಗೆ ಹತ್ತು-ಹದಿನೈದು ದಿನ ವ್ಯಯಿಸುತ್ತೇ ವಲ್ಲ, ಅದು ವಿಷಾದದ ಅಂಶ. ಕೆಲಸಕ್ಕೆ ಬಾರದ ಸಂಗತಿಗಳು ನಮ್ಮನ್ನು ಈ ರೀತಿ ಗಾಢವಾಗಿ ಬಾಧಿಸುತ್ತ ವಲ್ಲ, ಅದು ಖೇದಕರ. ಅಷ್ಟಕ್ಕೂ ಸೋನು ನಿಗಮ್ ಯಾರು? ಒಬ್ಬ ಗಾಯಕ, ಫುಲ್ ಸ್ಟಾಪ್.


ನೂರೆಂಟು ವಿಶ್ವ
vbhat@me.com
ಈ ಬಿಡುವಿಲ್ಲದ ಕಾಲದಲ್ಲೂ ನಮ್ಮ ಜನರಿಗೆ ಎಷ್ಟೆಲ್ಲ ಖಾಲಿ ಪುಗಸಟ್ಟೆ ಸಮಯ ಸಿಗುತ್ತದಲ್ಲ ಎಂದು ಒಮ್ಮೊಮ್ಮೆ ಅಚ್ಚರಿ ಆಗುವುದುಂಟು. ನಮ್ಮ ಎಲ್ಲ ಕೆಲಸ, ಮನೆ-ಮಠ-ಮನೆಯವಳು -ಮಕ್ಕಳನ್ನೆಲ್ಲ ಮರೆತು ಬೀದಿಗಿಳಿದು ಪ್ರತಿಭಟಿಸಲು, ಹೋರಾಟ ಮಾಡಲು, ಸೋಷಿಯಲ್ ಮೀಡಿಯಾದಲ್ಲಿ ಕೈಬೆರಳುಗಳನ್ನು ನೋವು ಮಾಡಿಕೊಂಡು ಟೈಪಿಸುತ್ತಾ ಕಾದಾಡಲು ಸಮಯ, ಸಂಯಮ, ಸವುಡು ಇದೆಯಲ್ಲ ಎಂದು ಸೋಜಿಗವಾಗುವುದುಂಟು. ತಮಗಿಷ್ಟದ ಹಾಡನ್ನು ಹಾಡುವಂತೆ ನಾಲ್ಕೈದು ಹುಡುಗರ ಒತ್ತಾಯ - ಒತ್ತಡದ ಕಿರಿಕಿರಿಗೆ ಖ್ಯಾತ ಗಾಯಕ ಸೋನು ನಿಗಮ್ ನೀಡಿದ ‘ಪೆಹಲ್ಗಾಮ್ ಹೋಲಿಕೆ’ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿ ಬಿಟ್ಟಿತು. ಕೆಲವ ರಂತೂ ದಿನಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು, ಕೈಯಲ್ಲಿ ಮೊಬೈಲು ಹಿಡಿದು ಜಗಳಕ್ಕೆ ನಿಂತುಬಿಟ್ಟರು!
ಕನ್ನಡ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಗೆ ಕುಳಿತವು. ಕನ್ನಡ ಚಲನಚಿತ್ರರಂಗ ಸೋನು ನಿಗಮ್ ಗೆ ನಿಷೇಧ ಹಾಕುವ ಮಟ್ಟಿಗೆ ಹೋಯಿತು. ಟಿವಿ ಚಾನೆಲ್ಲುಗಳಲ್ಲಿ ವಾರಗಟ್ಟಲೆ ಜಟಾಪಟಿ, ಹಾಕ್ಯಾಟ. ಕೆಲವರು ಗಾಯಕನ ವಿರುದ್ಧ ಕೋರ್ಟಿಗೆ ಹೋದರು. ಆತ ‘ತಪ್ಪಾಯ್ತು’ ಎನ್ನುವ ತನಕ ನಮ್ಮ ಜನ ಬಿಡಲಿಲ್ಲ.
ಇಲ್ಲಿ ನಾನು ಸೋನು ನಿಗಮ್ ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಅದು ಆಗಲೂ ತಲೆಕೆಡಿಸಿ ಕೊಳ್ಳುವ ಭಾರಿ ಪ್ರಮುಖ ವಿಚಾರ ಆಗಿರಲಿಲ್ಲ. ಈಗಂತೂ ಅಲ್ಲವೇ ಅಲ್ಲ ಬಿಡಿ. ಈಗ ಎಲ್ಲವೂ ಮುಗಿದು ಹೋದ ಪ್ರಕರಣ. ಆದರೆ ನಾವು ಒಬ್ಬ ಗಾಯಕ ಹೇಳಿದ passing remarks ಗೆ ವಾರ ಗಟ್ಟಲೆ ತಲೆಕೆಡಿಸಿಕೊಳ್ಳಬೇಕಿರಲಿಲ್ಲ.
ಆದರೆ ಇಷ್ಟೆಲ್ಲ ಮಾಡಲು ನಮ್ಮ ಜನರಲ್ಲಿ ಸಮಯ ಇದೆಯಲ್ಲ, ಅದು ಆಶ್ಚರ್ಯ ಹುಟ್ಟಿಸೋದು. ಸೋನು ನಿಗಮ್ನ ಆ ಒಂದು ಅವಿವೇಕಿ, ಅಸಂಬದ್ಧ ಹೇಳಿಕೆ ನಮ್ಮ ಒಂದು ಸಣ್ಣ ಪ್ರತಿಕ್ರಿಯೆಗೂ ಯೋಗ್ಯವಲ್ಲದ್ದು. ಐದೂ ಬೆರಳನ್ನು ಅಳಿಲಿನ ಮೂತಿಯ ಆಕೃತಿಯಂತೆ ಮಾಡಿ, ಅಕ್ಕಿ ಕಾಳನ್ನು ಬಿಸಾಕುತ್ತಾರಲ್ಲ, ಹಾಗೆ ಮಾಡಿದ್ದರೆ ಸಾಕಿತ್ತು.
ಇದನ್ನೂ ಓದಿ:Vishweshwar Bhat Column: ಸೆಂಚಾ ಚಹಾದ ಗಮ್ಮತ್ತು ಗೊತ್ತಾ ?
ಅಷ್ಟಕ್ಕೂ ಸೋನು ನಿಗಮ್ ಹಾಗೆ ಹೇಳಿದಾಕ್ಷಣ ಕನ್ನಡಿಗರ ಸ್ವಾಭಿಮಾನ, ಅಸ್ಮಿತೆ ವೃಷಭಾವತಿ ಯಲ್ಲಿ ಕೊಚ್ಚಿ ಹೋಗ್ತಾ ಇತ್ತಾ? ಬಕ್ವಾಸ್ ! ಇಂಥ ಕ್ಷುಲ್ಲಕ ವಿಷಯಗಳಿಗೆ ಹತ್ತು-ಹದಿನೈದು ದಿನ ವ್ಯಯಿಸುತ್ತೇವಲ್ಲ, ಅದು ವಿಷಾದದ ಅಂಶ. ಕೆಲಸಕ್ಕೆ ಬಾರದ ಸಂಗತಿಗಳು ನಮ್ಮನ್ನು ಈ ರೀತಿ ಗಾಢವಾಗಿ ಬಾಧಿಸುತ್ತವಲ್ಲ, ಅದು ಖೇದಕರ. ಅಷ್ಟಕ್ಕೂ ಸೋನು ನಿಗಮ್ ಯಾರು? ಒಬ್ಬ ಗಾಯಕ, ಫುಲ್ ಸ್ಟಾಪ್.
ಆತನ ಪುಟಗೋಸಿ ಹೇಳಿಕೆಯಿಂದ ನಾವು ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾದ, ಘಾಸಿಗೊಳಗಾಗ ಬೇಕಾದ ಅಗತ್ಯವೂ ಇರಲಿಲ್ಲ. ಆತನ ಮಾತುಗಳಿಗೆ ಕರ್ನಾಟಕ ಬಂದ್ ಮಾಡುವುದೊಂದೇ ಬಾಕಿ ಇತ್ತು. ಜವಾಬ್ದಾರಿಯುತ ಹುದ್ದೆಯಲ್ಲಿದ್ದವರೋ, ತೀರಾ ಗಣ್ಯವ್ಯಕ್ತಿಗಳೋ ಹಾಗೆ ಹೇಳಿದ್ದರೆ ಅದು ಬೇರೆ ವಿಷಯ.
ಅದು ಬಿಟ್ಟು, after all, ಒಬ್ಬ ಗಾಯಕ ಹೇಳಿದ್ದಕ್ಕೆ ನಾವು ‘ಮೈತುಂಬಾ ಗಾಯ’ ಮಾಡಿಕೊಂಡವ ರಂತೆ ಅರಚುವುದು ಖಂಡಿತವಾಗಿಯೂ ಪ್ರಬುದ್ಧ ನಡೆಯಲ್ಲ ಬಿಡಿ. ಮೊನ್ನೆ ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್, ‘ನಿಮ್ಮ ಕನ್ನಡ ಭಾಷೆ ಹುಟ್ಟಿದ್ದು ನಮ್ಮ ತಮಿಳಿನಿಂದ’ ಎಂದು ಹೇಳಿದರು.
ಸರಿ, ಈ ಹೇಳಿಕೆ ಬಹಿರಂಗವಾಗುತ್ತಿದ್ದಂತೆ, ಇಲ್ಲಿ ಬೆಂಕಿ! ಸೋಷಿಯಲ್ ಮೀಡಿಯಾ ಸೇನಾನಿಗಳು ಎದ್ದು ಕುಳಿತು ಕತ್ತಿ ಝಳಪಿಸಲಾರಂಭಿಸಿದರು. ಕಮಲ್ ಹಾಸನ್ ಅವರನ್ನು ಬಾಯ್ಕಾಟ್ ಮಾಡ ಬೇಕು, ಅವರ ಪ್ರತಿಕೃತಿ ಸುಡಬೇಕು, ಅವರು ಬೆಂಗಳೂರಿಗೆ ಕಾಲಿಡದಂತೆ ಮಾಡಬೇಕು, ಅವರು ಕ್ಷಮೆ ಯಾಚಿಸಬೇಕು, ಕಮಲ್ ಅವರದ್ದು ಭಾಷಾ ದುರಭಿಮಾನ, ಸಂಸ್ಕೃತಿ ಹೀನ ನಡೆವಳಿಕೆ.. ಹೀಗೆಲ್ಲ ಗಲಾಟೆ ಶುರುವಾಗೋಯ್ತು. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಅಚ್ಚುಮೆಚ್ಚಿನ ನಟನಾಗಿದ್ದ ಕಮಲ್ ಹಾಸನ್ ಏಕಾಏಕಿ ಖಳನಟರಾಗಿಬಿಟ್ಟರು!
ಭಾಷೆ ಬಗ್ಗೆ ಮಾತಾಡಲು ಕಮಲ್ ಹಾಸನ್ ಏನು ಭಾಷಾ ಪಂಡಿತರೇ? ಭಾಷಾ ತಜ್ಞರೇ, ವಿದ್ವಾಂ ಸರೇ? ಅಷ್ಟಕ್ಕೂ ಅವರು ಯಾರು? ಅವರೊಬ್ಬ ಸಿನಿಮಾ ನಟ ಹಾಗೂ ರಾಜಕೀಯದಲ್ಲಿ ಸೋತು ಸುಣ್ಣವಾದ ಎಳಸು ನಾಯಕ. ಫುಲ್ ಸ್ಟಾಪ್. ತೆಂಡೂಲ್ಕರ್, ಅಜರುದ್ದೀನ್ ಕೃಷಿ ಬಗ್ಗೆ ಮಾತಾಡಿ ದರೆ ಹೇಗೋ, ಕಮಲ್ ಹಾಸನ್ ಭಾಷೆ ಬಗ್ಗೆ ಮಾತಾಡಿದರೆ. ಅದಕ್ಕೆಲ್ಲ ಬಹಳ ತಲೆ ಕೆಡಿಸಿಕೊಳ್ಳ ಬಾರದು. ಇಂಥ ಹೇಳಿಕೆಗಳನ್ನು ಉದಾಸೀನ ಮಾಡುವುದು ಲೇಸು.
ಕಮಲ್ ಹಾಸನ್ ತಮ್ಮ ಹೇಳಿಕೆಗೆ ಸಾಕಷ್ಟು ಸಾಕ್ಷ್ಯ ಅಥವಾ ಅಧ್ಯಯನದ ಪುರಾವೆಗಳನ್ನು ಕೊಟ್ಟರೆ, ಅದು ಬೇರೆ ಮಾತು. ಕಮಲ್ ಹಾಸನ್ ಹೇಳಿಕೆಯಿಂದ ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು ಎಂದು ಭಾವಿಸುವುದೇ ನಮ್ಮ ದಡ್ಡತನ. ನಮ್ಮ ಅಸ್ತಿತ್ವ, ಅಸ್ಮಿತೆ, ಶುಂಠಿಕೊಂಬು ಕಮಲ್ ಹಾಸನ್ ಹೇಳಿಕೆಯಲ್ಲಿ ಅವಿತುಕೊಂಡಿಲ್ಲ. ಅಷ್ಟಕ್ಕೇ ಬೀದಿಗಿಳಿಯುವುದು, ಗಂಟಲು ಹರಿದು ಕೊಳ್ಳುವುದು, ಟಿವಿಯಲ್ಲಿ ದಿನಗಟ್ಟಲೆ ಡಿಬೇಟು ಮಾಡುವುದು, ಅವರ ಮೇಲೆ ನಿಷೇಧ ಹೇರಿ ಎಂದು ಬೊಬ್ಬೆ ಹಾಕುವುದು, ಅವರ ಸಿನಿಮಾದ ಪೋಸ್ಟರುಗಳನ್ನು ಹರಿದು ಹಾಕುವುದು...ಅದು ಸರ್ವಥಾ ಕನ್ನಡ ಅಭಿಮಾನವೂ ಅಲ್ಲ, ಸ್ವಾಭಿಮಾನವೂ ಅಲ್ಲ.
ಇಲ್ಲಿ ನಾವು ಸೋನು ನಿಗಮ್ ಮತ್ತು ಕಮಲ್ ಹಾಸನ್ ಅವರನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ. ಇಬ್ಬರ ಹೇಳಿಕೆಗಳು ನಮ್ಮ ಪ್ರತಿಕ್ರಿಯೆಗೂ ಯೋಗ್ಯವಲ್ಲ. ‘ನೋ ಕಾಮೆಂಟ್ಸ್’ ಅಂದ್ರೆ ಅದೇ ದೊಡ್ಡ ಕಾಮೆಂಟ್. ಅಷ್ಟು ಸಾಕು! ಅದು ಬಿಟ್ಟು, ಮೂಳೆಗಳಿಗೆ ಕಿತ್ತಾಡುವ ಶ್ವಾನಗಳ ಹಾಗೆ ಬೀದಿಕಾಳಗಕ್ಕೆ ಇಳಿಯಬಾರದು. ಅಂಥ ಪ್ರದರ್ಶನ ‘ಕನ್ನಡ ಅಭಿಮಾನ’ ಎಂದು ಕರೆಯಿಸಿಕೊಳ್ಳುವುದಿಲ್ಲ.
ಇದೇ ರೀತಿ, ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ತನ್ನ ಉತ್ಪನ್ನ ವಾದ ಮೈಸೂರು ಸ್ಯಾಂಡಲ್ ಸೋಪ್ ಮಾರಾಟಕ್ಕೆ ರೂಪದರ್ಶಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾಳಿಗೆ ಆರು ಕೋಟಿ ರುಪಾಯಿ ನೀಡಿದ್ದು ಕರ್ನಾಟಕದಲ್ಲಿ ‘ಆಪರೇಷನ್ ಸಿಂದೂರ’ ನಂತರ ದೊಡ್ಡ ಸುದ್ದಿಯಾಯಿತು. ಈ ವಿವಾದಕ್ಕೂ ಮುಖ್ಯ ಕಾರಣ ಕನ್ನಡಿಗರ ಅಸ್ಮಿತೆ, ಕನ್ನಡತನ ಮತ್ತು ಸ್ವಾಭಿಮಾನ. ಕನ್ನಡದಲ್ಲಿ ನಟಿಯರು, ರೂಪದರ್ಶಿಗಳು ಇರಲಿಲ್ಲವಾ? ಕನ್ನಡ ದವರನ್ನು ಬಿಟ್ಟು ಬೇರೆ ರಾಜ್ಯಗಳ ನಟಿಯರಿಗೆ ಮಣೆ ಹಾಕಿದ್ದು ಎಷ್ಟು ಸರಿ? ನಮ್ಮ ಯದುವೀರ ಅವರನ್ನು ರೂಪದರ್ಶಿಯಾಗಿ ಮಾಡಬಹುದಿತ್ತಲ್ಲವಾ, ನಟಿ ರಶ್ಮಿಕಾ ಮಂದಣ್ಣ ಇರಲಿಲ್ಲವಾ? ಹೀಗಿರುವಾಗ ಪರರಾಜ್ಯದ ನಟಿಗೆ ಅಷ್ಟೊಂದು ಹಣ ನೀಡಿದ್ದು ಕನ್ನಡಿಗರಿಗೆ ಮಾಡಿದ ಅನ್ಯಾಯ ವಲ್ಲವೇ? ಕನ್ನಡಿಗರು ಕನ್ನಡಿಗರನ್ನೇ ಕಡೆಗಣಿಸುವುದು ಎಷ್ಟು ಸರಿ?’ ಎಂದು ಕೆಲವರು ಬಾಯಿ ಹರಿದುಕೊಂಡರು.
ಕಳೆದ ಎರಡು ವಾರಗಳಿಂದ ಸೋಷಿಯಲ್ ಮೀಡಿಯಾ, ಟಿವಿಗಳಲ್ಲಿ ಇದೇ ಬಿಸಿಬಿಸಿ ಚರ್ಚೆ. ಮತ್ತೆ ನಮ್ಮ ಸ್ವಾಭಿಮಾನ, ಅಸ್ಮಿತೆಗೆ ಕುತ್ತು ಬಿತ್ತೆಂಬ ಧಬೆಧಬೆ. ಅಸ್ಮಿತೆ ಬಗ್ಗೆ ಮಾತಾಡುವವರಿಗೆ ಗೊತ್ತಿರದ ಸಂಗತಿ ಅಂದ್ರೆ ಇದೊಂದು ಪಕ್ಕಾ ವ್ಯವಹಾರ (ಕಮರ್ಷಿಯಲ್ ಡೀಲ್) ಎಂಬುದು. ಕಳೆದ ವರ್ಷ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಬರೋಬ್ಬರಿ 1785 ಕೋಟಿ ರುಪಾಯಿ ವಹಿವಾಟು ಮಾಡಿ, ನಿವ್ವಳ 415 ಕೋಟಿ ರುಪಾಯಿ ಲಾಭ ಮಾಡಿದೆ.
ಅಷ್ಟೇ ಅಲ್ಲ, 43 ಸಾವಿರ ಮೆಟ್ರಿಕ್ ಟನ್ ಗಳಷ್ಟು ಸಾಬೂನನ್ನು ಮಾರಾಟ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಸಂಸ್ಥೆ ಶೇ. ಹದಿನೇಳರಷ್ಟು ಮಾರಾಟ ಬೆಳವಣಿಗೆಯನ್ನು ಸಾಧಿಸಿದೆ. ಮೈಸೂರು ಸ್ಯಾಂಡಲ್ ಸಾಬೂನು ಗುಣಮಟ್ಟ, ಪರಂಪರೆ, ಗ್ರಾಹಕರ ನಿಯತ್ತಿನ ವಿಷಯದಲ್ಲಿ ಅತ್ಯಂತ ಪ್ರಬಲ ಬ್ರ್ಯಾಂಡ್ ಎಂಬ ಅಗ್ಗಳಿಕೆ, ಅಭಿದಾನಕ್ಕೆ ಪಾತ್ರವಾಗಿದೆ.
ದಕ್ಷಿಣ ಭಾರತದಲ್ಲಿ ಈ ಸಾಬೂನಿಗೆ ನಾಯಕ ಪಟ್ಟ. ಇಲ್ಲಿ ಇನ್ನೊಂದು ಗಮನಾರ್ಹ ಅಂಶವಿದೆ. ಅದೇನೆಂದರೆ, ಶೇ.82 ರಷ್ಟು ಸದ್ಯದ ಮಾರಾಟ ಹೊರರಾಜ್ಯಗಳಲ್ಲಾಗುತ್ತಿದೆ. ಇದರಿಂದ ಗೊತ್ತಾಗುವ ಸಂಗತಿಯೇನೆಂದರೆ, ಕರ್ನಾಟಕ ಮತ್ತು ದಕ್ಷಿಣ ಭಾರತವಲ್ಲದೇ, ಇಡೀ ದೇಶದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಈಗಾಗಲೇ ತನ್ನ ಅಸ್ತಿತ್ವವನ್ನು ವ್ಯಾಪಿಸಿಕೊಂಡಿದೆ ಎಂಬುದು.
ಹಾಗಂತ ಈ ಸಾಧನೆ ಯಾವುದೇ ರೂಪದರ್ಶಿಯ ಸಹಾಯವಿಲ್ಲದೇ ಆಗಿದ್ದು. ಹಾಗಂತ ಈ ಸ್ಥಿತಿ, ಮೇಲುಗೈ ಯಾವತ್ತೂ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆ ಯುಗದಲ್ಲಿ brand health ಕಾಪಾಡಿಕೊಳ್ಳುವುದು ಎಷ್ಟು ದೊಡ್ಡ ಸವಾಲೋ, growth rate ಕಾಪಾಡಿಕೊಳ್ಳುವುದೂ ಅಷ್ಟೇ ದೊಡ್ಡ ಸವಾಲು.
ಮಾರುಕಟ್ಟೆ ಪೈಪೋಟಿಯಲ್ಲಿ ವಿಶ್ರಾಂತಿ, ಸಂತೃಪ್ತಿ ಎಂಬುದು ಇಲ್ಲವೇ ಇಲ್ಲ. ಯಾವ ಕಾಲಕ್ಕೂ ವಿರಮಿಸುವಂತೆಯೂ ಇಲ್ಲ. ಇಡೀ ಭಾರತವೇ ತಕ್ಷಣ ಗುರುತಿಸುವ, ಇಷ್ಟಪಡುವ, ಉತ್ಪನ್ನ ದೊಂದಿಗೆ ಗ್ರಾಹಕರನ್ನು ಬೆಸೆಯುವ ಒಂದು ಸುಂದರ ಮುಖ ಈಗ ಮೈಸೂರು ಸ್ಯಾಂಡಲ್ ಸಾಬೂನಿಗೆ ಹಿಂದೆಂದಿಗಿಂತಲೂ ಅಗತ್ಯವಿದೆ. ಮಾರುಕಟ್ಟೆಯ ಬೇಡಿಕೆಗಳೇ ಅಂಥದ್ದು.
ಇದಕ್ಕೆ ಎಲ್ಲ ರೀತಿಯಿಂದಲೂ ತಮನ್ನಾ ಭಾಟಿಯಾ ಸೂಕ್ತ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಸಂಸ್ಥೆಯ ವಹಿವಾಟು, ಲಾಭ ಗಳಿಕೆ ಮತ್ತು ಬ್ರ್ಯಾಂಡ್ ಮೌಲ್ಯಕ್ಕೆ ಹೋಲಿಸಿದರೆ, ಆಕೆಗೆ ನೀಡಿರುವ ಆರು ಕೋಟಿ ರುಪಾಯಿ ಏನೇನೂ ಅಲ್ಲ. ಸದ್ಯದ ಮಟ್ಟಿಗೆ ಪ್ಯಾನ್ ಇಂಡಿಯಾ ಅಪೀಲ್ ಇರುವ ಮುಖ’ಗಳು ಯಾರಿದ್ದಾರೆ? ಬ್ರ್ಯಾಂಡ್ ಅಂಬಾಸಿಡರ್ ಆಗುವವರು ಬ್ರ್ಯಾಂಡ್ ಗಿಂತ ಹೆಚ್ಚು ಜನಪ್ರಿಯರಾಗಿರಬೇಕು. ಆಗಲೇ ಬ್ರ್ಯಾಂಡ್ ಗೆ ಲಾಭ. sorry... ಈ ಬ್ರ್ಯಾಂಡ್ ಇಮೇಜ್ ಖಂಡಿತ ವಾಗಿಯೂ ಕರ್ನಾಟಕದವರೇ ಆದ ಯದುವೀರ, ರಮ್ಯಾ, ರಶ್ಮಿಕಾ, ಪೂಜಾ ಹೆಗಡೆ... ಅವರಿಗಿಲ್ಲ.
ಕರ್ನಾಟಕದಲ್ಲಿ ಮಾತ್ರ ಮಾರಾಟವಾಗುವ ಉತ್ಪನ್ನ, ವಸ್ತುಗಳಿಗೆ ಹೊರರಾಜ್ಯದವರನ್ನು ರೂಪದರ್ಶಿಯಾಗಿ ತಂದರೆ ಅಂಥ ಕ್ರಮವನ್ನು ವಿರೋಧಿಸಬಹುದು. ಆದರೆ ಮೈಸೂರು ಸ್ಯಾಂಡಲ್ ಸೋಪ್ ಇಡೀ ಭಾರತವನ್ನು ವ್ಯಾಪಿಸಿರುವ ಬ್ರ್ಯಾಂಡ್. ಕ್ರಿಕೆಟ್ ಆಟಗಾರರು ಮತ್ತು ಸಿನಿಮಾ ತಾರೆಯರು ಮಾತ್ರ ಇದಕ್ಕೆ ಲಾಯಕ್ಕು. 2008ರಲ್ಲಿ ಇದೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ತನ್ನ ಮೈಸೂರು ಸ್ಯಾಂಡಲ್ ಸೋಪ್ ಮಾರಾಟಕ್ಕೆ ರೂಪದರ್ಶಿಯಾಗಿ ಕ್ರಿಕೆಟರ್ ಎಂ.ಎಸ್. ಧೋನಿಯನ್ನು ಆಯ್ಕೆ ಮಾಡಿತ್ತು ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಆಗ ಯಾರೂ ಧೋನಿಯನ್ನೇಕೆ ಆರಿಸಿದಿರಿ, ಕರ್ನಾಟಕದ ಕ್ರಿಕೆಟ್ ಆಟಗಾರರು ಇರಲಿಲ್ಲವೇ ಎಂದು ಕೇಳಲಿಲ್ಲ. ಆಗಲೂ ಧೋನಿ ಆಯ್ಕೆ ಸರಿಯಾಗಿಯೇ ಇತ್ತು. ಯಾಕೆಂದರೆ ಧೋನಿ ಆಗ ಭಾರತ ಕ್ರಿಕೆಟ್ ಟೆಸ್ಟ್ ತಂಡದ ನಾಯಕರಾಗಿದ್ದರು. ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಅದನ್ನು ಮೈಸೂರು ಸ್ಯಾಂಡಲ್ ಸೋಪ್ ಮಾರಾಟಕ್ಕೆ ಬಳಸಿಕೊಂಡಿದ್ದರೆ ಅದು ಉತ್ತಮ ನಿರ್ಧಾರವೇ.
ಇಲ್ಲಿ ಸ್ವಾಭಿಮಾನ, ಅಸ್ಮಿತೆಯ ಪ್ರಶ್ನೆ ಎಲ್ಲಿ ಬಂತು? ಇಂಥ ಅಪ್ರಮುಖ, ಕ್ಷುಲ್ಲಕ ವಿಷಯಗಳಿಗೆ ಜಾಗೃತವಾಗುವ ನಮ್ಮ ಸ್ವಾಭಿಮಾನ, ಅಸ್ಮಿತೆ, ಕನ್ನಡತನ, ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಸರಕಾರ ಹೇಳಿದಾಗ ಯಾಕೆ ಜಾಗೃತವಾಗುವುದಿಲ್ಲ? ಕನ್ನಡ ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ, ಮಕ್ಕಳಿಗೆ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳೇ ದುರಂತ ತಾಣಗಳಾಗಿವೆ ಎಂದಾಗ ಯಾಕೆ ಅಸ್ಮಿತೆ ಮುದುಡಿಕೊಳ್ಳುತ್ತದೆ? ಕರ್ನಾಟಕದಲ್ಲಿ ಇಪ್ಪತ್ತೈದು ಸಾವಿರ ಬಾರು, ಪಬ್, ಎಣ್ಣೆ ಅಂಗಡಿಗಳಿವೆ, ಆದರೆ ಗ್ರಂಥಾಲಯಗಳ ಸಂಖ್ಯೆ ನೂರಕ್ಕಿಂತ ಕಮ್ಮಿ ಎಂದಾಗ, ಯಾರೂ ಏಕೆ ಗಂಟಲು ಹರಿದುಕೊಳ್ಳುವುದಿಲ್ಲ ಮತ್ತು ಬೀದಿಗಿಳಿಯುವುದಿಲ್ಲ? ಪ್ರಾಥಮಿಕ ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಅಂದ್ರೆ ನಮಗೇಕೆ ಏನೂ ಅನಿಸುವುದಿಲ್ಲ? ಗ್ರಂಥಾಲಯ ಸಚಿವರಿಗೆ ಪುಸ್ತಕ ಕೊಟ್ಟರೆ ಅವನ್ನು ಸ್ವೀಕರಿಸದೇ, ಇವನ್ನೆಲ್ಲ ನನ್ನ ಮನೆಯಲ್ಲಿ ಇಟ್ಟುಕೊಳ್ಳಲು ಜಾಗವಿಲ್ಲ, ಓದಲು ನನಗೆ ಪುರುಸೊತ್ತಿಲ್ಲ’ ಎಂದರೆ, ಅದನ್ನು ಯಾರೂ ಕನಿಷ್ಠ ಖಂಡಿಸುವುದೂ ಇಲ್ಲ, ಯಾಕೆ? ಸಾವಿರ ಕನ್ನಡ ಪುಸ್ತಕಗಳ ಪ್ರತಿಗಳನ್ನು ಮುದ್ರಿಸಿದರೆ ಖರೀದಿಸುವವರಿಲ್ಲ ಎಂದು ಕನ್ನಡ ಪ್ರಕಾಶಕರು ಬೊಬ್ಬೆ ಹೊಡೆಯುವುದು ಯಾರಿಗೂ ಕೇಳಿಸುತ್ತಿಲ್ಲವಲ್ಲ, ಏಕೆ? ನಾವು ಕನ್ನಡ ಪುಸ್ತಕಗಳನ್ನು ಖರೀದಿಸುವುದಿಲ್ಲ ಎಂದು ಸರಕಾರ ಹೇಳಿದರೆ ಸೋಷಿಯಲ್ ಮೀಡಿಯಾ ಸೇನಾನಿ ಗಳೇಕೆ ಖಡ್ಗ ಝಳಪಿಸುವುದಿಲ್ಲ? ಇವೆಲ್ಲ ಅತ್ಲಾಗಿರಲಿ, ಇವೆಲ್ಲಕ್ಕಿಂತ ಘೋರ ಸಂಗತಿಯೊಂದನ್ನು ಹೇಳಬೇಕು.
ಕರ್ನಾಟಕದಲ್ಲಿ ಹುಟ್ಟಿದ, ಇಲ್ಲಿಯೇ ಬೆಳೆದ, ಮನೆಯಲ್ಲಿ ಕನ್ನಡ ಮಾತಾಡುವ, ಕನ್ನಡ ಮಾತೃ ಭಾಷೆಯ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನಪಾಸಾಗುತ್ತಿದ್ದಾರೆ! ಯಾರಿಗೂ ಏನೂ ಅನಿಸುತ್ತಿಲ್ಲವಲ್ಲ? ಅಸ್ಮಿತೆ, ಸ್ವಾಭಿಮಾನ ಎಂದು ಎದೆಯುಬ್ಬಿಸುವವರಾರೂ ಈ ಬಗ್ಗೆ ಮಾತೇ ಆಡುತ್ತಿಲ್ಲವಲ್ಲ? ಇವರೆಲ್ಲರ ನವರಂಧ್ರಗಳೂ ಬಂದ್! ಯಾಕೋ?!
ರಾಜ್ಯದಲ್ಲಿ ಅತಿ ಹೆಚ್ಚು ಜನರು ಕನ್ನಡ ಮಾತಾಡುವ ಜಿಲ್ಲೆ ಅಂದ್ರೆ ಮಂಡ್ಯ. ಕನ್ನಡಪರ ಮತ್ತು ಕಾವೇರಿ ಹೋರಾಟ ನಡೆದ ಈ ಜಿಲ್ಲೆ ರಾಜ್ಯದ ರಾಜಧಾನಿಗೆ ತಾಕಿಕೊಂಡಿದೆ. ಈ ಸಲದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಆ ಜಿಲ್ಲೆಯಲ್ಲಿ ಕನ್ನಡ ವಿಷಯದಲ್ಲಿ ಸುಮಾರು ಆರು ಸಾವಿರ ವಿದ್ಯಾರ್ಥಿ ಗಳು ಫೇಲಾಗಿದ್ದಾರೆ. ಗಣಿತ, ವಿಜ್ಞಾನದಲ್ಲಿ ಫೇಲಾಗುತ್ತಿದ್ದುದು ಸಾಮಾನ್ಯ ಬಿಡಿ. ಈಗ ಕನ್ನಡದ ವಿದ್ಯಾರ್ಥಿಗಳು ಕನ್ನಡದಲ್ಲಿ ಫೇಲಾಗುತ್ತಿದ್ದಾರೆ.
ಈ ವಿಷಯ ಬಹುತೇಕ ಕನ್ನಡದ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ವರದಿಯಾಯಿತು. ಆದರೆ ಯಾರೂ ಕನಿಷ್ಠ ಸೋಷಿಯಲ್ ಮೀಡಿಯಾದದರೂ ಒಂದಕ್ಷರ ಕಕ್ಕಲಿಲ್ಲ! ಯಾಕೋ? ಸೋನು ನಿಗಮ, ತಮನ್ನಾ, ಕಮಲ್ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಕನ್ನಡದ ಅಸ್ಮಿತೆ ದುರ್ಬಲವಾಗಿಲ್ಲ. ಕನ್ನಡವನ್ನು ಬಾಧಿಸುವ ಇನ್ನೂ ಅನೇಕ ವಿಷಯಗಳಿವೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳೋಣ. ಯಾವುದೋ ಬೀದಿ ನಾಯಿ ಇಂಗ್ಲಿಷ್ ಫಲಕಕ್ಕೆ ಉಚ್ಚೆ ಹಾರಿಸಿದರೆ, ಅದು ‘ಕನ್ನಡದ ನಾಯಿ’ ಎಂದು ಬೀಗುವುದನ್ನು ಬಿಡೋಣ.