ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaji Column: ವಾಲಿವಧೆಗೊಂದು ಕಾಲಚೋದಿತ ಕಾರಣ: ರಾಜ ಶಾಸ್ತ್ರಾಧೀನ, ಶಾಸ್ತ್ರ ಧರ್ಮಾಧೀನ ಎಂದು ಸಾರಿದ ಪುರುಷೋತ್ತಮ

Narayana Yaji Column: ರಾಮ ದೇವರೆನ್ನುವುದನ್ನು ಮೊದಲು ಮರೆತು ವಾಲಿವಧೆಯನ್ನು ಗಮನಿಸಬೇಕು. ಕಾವ್ಯ ರಚಿಸುವ ಮೊದಲು ವಾಲ್ಮೀಕಿಗಿರುವ ಸಂಶಯವೇ ’ಹದಿನಾರು ಸದ್ಗುಣಗಳಿರುವ ಪರಿಪೂರ್ಣ ಪುರುಷರು ಈ ಲೋಕದಲ್ಲಿ ಇದ್ದಾರಾ?’ ಎನ್ನುವುದು. ಮನುಷ್ಯನಾದವನಿಗೆ ಸಹಜವಾಗಿರುವ ರಾಗ ದ್ವೇಷ ಕ್ರೋಧ ಮೋಹ ಎಲ್ಲವೂ ಇರುತ್ತಲೇ ದೇವರಾಗಬಲ್ಲ ಎನ್ನುವುದು ಕಾವ್ಯದ ತಿರುಳು.

ವಾಲಿವಧೆ: ರಾಜ ಶಾಸ್ತ್ರಾಧೀನ, ಶಾಸ್ತ್ರ ಧರ್ಮಾಧೀನ ಎಂದು ಸಾರಿದ ಪುರುಷೋತ್ತಮ

vali vadha

ಹರೀಶ್‌ ಕೇರ ಹರೀಶ್‌ ಕೇರ Jun 22, 2025 6:00 AM

- ನಾರಾಯಣ ಯಾಜಿ

narayana yaji

ತದ್ವ್ಯತೀತಸ್ಯ ತೇ ಧರ್ಮಾತ್ಕಾಮವೃತ್ತಸ್ಯ ವಾನರ!

ಭ್ರಾತೃಭಾರ್ಯಾವಮರ್ಶೇಸ್ಮಿನ್ದಣ್ಡೋಯಂ ಪ್ರತಿಪಾದಿತಃ ৷৷ಕಿ.18.20৷৷

ಧರ್ಮಭ್ರಷ್ಟನಾದ, ಕಾಮ ಪ್ರವೃತ್ತನಾದ ನೀನು ನಿನ್ನ ತಮ್ಮನ ಹೆಂಡತಿಯೊಡನೆ ಸಂಬಂಧವಿಟ್ಟುಕೊಂಡುದಕ್ಕಾಗಿ ನಿನಗೆ ಈ ಮರಣ ದಂಡನೆಯನ್ನು ವಿಧಿಸಿದ್ದೇನೆ.

ವಾಲಿ ತನ್ನ ಮೇಲೆ ಹಿಂದಿನಿಂದ ಬಾಣಬಿಟ್ಟು ಮರಣೋತ್ಕೃಮಣದ ಸ್ಥಿತಿಗೆ ತಲುಪಿಸಿದ ಕಾರಣದಿಂದ ಒಟ್ಟೂ ಐವತ್ತು ಶ್ಲೋಕಗಳಲ್ಲಿ ರಾಮನನ್ನು ನಿಂದಿಸುವ ಭಾಗ ತುಂಬಾ ಪ್ರಭಾವಶಾಲಿಯಾದುದು. ಸಂವಹನ ಕ್ರಿಯೆಯಲ್ಲಿ ಮಾತು ಬಹಳ ಪ್ರಭಾವವನ್ನು ಬೀರುತ್ತದೆ. ಒಳ್ಳೆಯವರನ್ನು ಕೆಟ್ಟವರನ್ನಾಗಿಯೂ, ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಮಾಡುತ್ತದೆ. ರಂಗ ಭಾಷೆಯಲ್ಲಿ ಇದನ್ನು “ಪರಿಣಾಮದಲ್ಲಿ ಯಶಸ್ವಿಯಾದರೂ ಮಾಧ್ಯಮದಲ್ಲಿ ವಿಫಲ” ಎನ್ನುತ್ತಾರೆ. ವಿಲಿಯಂ ಷೇಕ್ಸ್‌ಪಿಯರ್ ರಚಿಸಿದ ಜ್ಯೂಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಅಂಟೋನಿಯೋನ ಭಾಷಣ ಬಹಳ ಪ್ರಭಾವಶಾಲಿಯಾಗಿತ್ತು. ಸೀಸರನ ವಿರುದ್ಧ ಬಂಡಾಯವೆದ್ದ ಜನರ ನಾಯಕನಾದ ಬ್ರೂಟಸ್ ನನ್ನು ಹೊಗಳುತ್ತಲೇ (Brutus is an honorable man) ಆತನ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಆತನ ಚಾಕಚಕ್ಯತೆಯನ್ನು ನೆನಪು ಮಾಡಿಕೊಳ್ಳಬಹುದು. ವಾಲಿಯ ಮಾತುಗಳೂ ಸಹ ಇದೇ ರೀತಿಯಲ್ಲಿ ಸಾಗುತ್ತದೆ.

ಆತನ ಮಾತುಗಳಲ್ಲಿ ಇರುವ ವಿರೋಧಾಭಾಸವನ್ನು ಗಮನಿಸಿ. ಆತನಿಗೆ ತಾನೋರ್ವ ರಾಜ ಎನ್ನುವ ಹಮ್ಮಿದೆ. ಅಧಿಕಾರದ ಮದ ತುಂಬಿ ತುಳುಕಾಡುತ್ತಿದೆ. ಹಾಗಾಗಿ ರಾಮನಲ್ಲಿ ಅಯೋಧ್ಯೆ ಅರಸರಲ್ಲಿ ತನಗೆ ವೈರವಿರಲಿಲ್ಲ. ತನ್ನೊಟ್ಟಿಗೆ ಯುದ್ಧ ಮಾಡಬಹುದಿತ್ತು. ರಾಜನನ್ನು ಕೊಂದವನಿಗೆ ಘೋರ ನರಕ ತಪ್ಪುದುದಲ್ಲ ಹೀಗೆ ಹಲವಾರು ಮಾತುಗಳಲ್ಲಿ ನಿಂದಿಸುತ್ತಾನೆ. ವಾಲಿ ಒಮ್ಮೆ ತಾನು ಮಹಾ ಪರಾಕ್ರಮಿ ಎನ್ನುತ್ತಾನೆ. ಇನೊಮ್ಮೆ ತಾನು ಮೃಗ ಎಂದು ಜಾರಿಕೊಳ್ಳುತ್ತಾನೆ. ರಾಜ ಎನ್ನುವುದನ್ನು ಒಪ್ಪಿಕೊಂಡು ಧರ್ಮದ ಉಪದೇಶವನ್ನು ಮಾಡುತ್ತಾನೆ. ಅದನ್ನು ಅನುಷ್ಠಾನಗೊಳಿಸುವ ರಾಜಧರ್ಮವನ್ನು ಮರೆತು ತನ್ನದು ಕಾಡಿನ ನ್ಯಾಯ ಎನ್ನುತ್ತಾನೆ. ಮೊದಲೇ ಹೇಳಿದಂತೆ ವಾನರರೆಂದರೆ ಮಂಗಗಳಲ್ಲ, ಅದೊಂದು ಬುಡಕಟ್ಟು ಜನಾಂಗ. ಆದರೆ ಕಿಷ್ಕಿಂಧೆಯ ವಾನರರು ಕ್ಷತ್ರಿಯ ಧರ್ಮವನ್ನು ಅನುಸರಿಸುತ್ತಿದ್ದರು (ಸಂಧ್ಯಾವಂದನೆ, ಪಾಣಿಗ್ರಹಣ ಇತ್ಯಾದಿ). ರಾಜನಾದವ ಎಂದರೆ ದೇವತೆಗಳೇ ಮನುಷ್ಯರೂಪದಲ್ಲಿ ರಾಜರಾಗಿ ಜನಿಸುತ್ತಾರೆ. ಅಂತಹ ರಾಜರನ್ನು ಹಿಂಸಿಸಬಾರದು. ವಾಲಿ ರಾಜನಾದರೂ ಧರ್ಮದ ಅನುಷ್ಠಾನವನ್ನು ಇನ್ನೊಬ್ಬರಿಗೆ ಹೇಳುತ್ತಿದ್ದನೇ ಹೊರತೂ ತನಗೆ ಅದು ಅನ್ವಯಿಸುವುದಿಲ್ಲ ಎಂದುಕೊಂಡಿದ್ದ.

ಪಾರ್ಥಿಸುಬ್ಬನ ವಾಲಿವಧಾ ಪ್ರಕರಣದಲ್ಲಿ ವಾಲಿಯ ಪದ್ಯಗಳು ಮೂಲ ರಾಮಾಯಣಕ್ಕಿಂತಲೂ ಪ್ರಭಾವಶಾಲಿಯಾಗಿವೆ.

ರಣದ ಮೇಲಭಿಲಾಷೆಯುಳ್ಳಡೆ! ಕೆಣಕಿ ಣೋಡಿದಡರಿಯಬಹುದು! ಬ್ಬಣ ಶರಾಸನ ಸರಳ ಹುರಿಗೆಯ ಹೊಂತಕಾರಿಗಳ!! ಹುಣುಗಿ ಮರೆಗೊಂಡೆಸೆವ ಲುಬ್ಧಕ! ರೆಣಿಕೆಯಲಿ ಕೈಮಾಡುವುದು ಭೂ! ಷಣವೆ ಭಟರಿಗೆ ಕೇಳಿದಿರೆ ಜಾಂಬವರು ನೀವೆಂದ!!

ಎಂತಹ ನಿರ್ವೀರ್ಯರನ್ನೂ ಬಡಿದೆಬ್ಬಿಸುವ ಮಾತುಗಳಿವು. ರಾಮನಿಗಿಂತ ಜಾಂಬವನಲ್ಲಿ ಕೇಳುವುದು ಕಾವ್ಯದ ದೃಷ್ಟಿಯಿಂದ ಬಹಳ ಪರಿಣಾಮಕಾರಿಯಾಗಿದೆ. ರಾಮ ದೇವರೆನ್ನುವುದನ್ನು ಮೊದಲು ಮರೆತು ವಾಲಿವಧೆಯನ್ನು ಗಮನಿಸಬೇಕು. ಕಾವ್ಯರಚಿಸುವ ಮೊದಲು ವಾಲ್ಮೀಕಿಗಿರುವ ಸಂಶಯವೇ ’ಹದಿನಾರು ಸದ್ಗುಣಗುಣಗಳಿರುವ ಪರಿಪೂರ್ಣ ಪುರುಷರು ಈ ಲೋಕದಲ್ಲಿ ಇದ್ದಾರೆಯ’ ಎನ್ನುವುದನ್ನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ” ಎಂದು ನಾರದರನ್ನೇ ಕೇಳುತ್ತಾನೆ. ರಾಮನಲ್ಲಿ ಆ ಗುಣಗಳಿರುವುದನ್ನು ಕೇಳಿ ರಾಮಾಯಣದ ರಚನೆಯಲ್ಲಿ ತೊಡಗುತ್ತಾನೆ. ಮನುಷ್ಯನಾದವನಿಗೆ ಸಹಜವಾಗಿರುವ ರಾಗ ದ್ವೇಷ ಕ್ರೋಧ ಮೋಹ ಎಲ್ಲವೂ ಇರುತ್ತಲೇ ದೇವರಾಗಬಲ್ಲ ಎನ್ನುವುದು ಕಾವ್ಯದ ತಿರುಳು.

ಅಡಿಗರ “ರಾಮನವಮಿಯ ದಿವಸ” ಕವನದಲ್ಲಿ ಕೋಸುಂಬರಿಯಿಂದ ಪುರುಷೋತ್ತಮನ ದಿವ್ಯ ರೂಪಕ್ಕೆ ಸಾಗುವ ರೂಪಕ ಇಲ್ಲಿ ನೆನಪಾಗುತ್ತದೆ. ರಾಮನ ಅವತಾರಕ್ಕೆ ಕಾರಣವಾಗುವ ಮೂಲ ಅಂಶವೇ ರಾವಣನನ್ನು ಕೊಲ್ಲುವುದು. ಈ ಕೆಲಸ ಮನುಷ್ಯರಾದವರಿಂದ ಮಾತ್ರ ಸಾಧ್ಯ. ರಾವಣನೇ ಕೇಳಿಕೊಂಡ ವರವದು. ರಾವಣವಧೆಗೆ ಸಂಕಲ್ಪ ಸಿದ್ಧವಾದುದೇ ಪಂಚವಟಿಯ ಸಮೀಪದ ಅಗಸ್ತ್ಯರ ಆಶ್ರಮದಲ್ಲಿ. ಸೀತೆಯನ್ನು ರಾವಣ ಕದ್ದೊಯ್ದಿರುವುದು ರಾಮನ ವೀರತನಕ್ಕೆ ಎಸೆದ ಸವಾಲಾಗಿದೆ. ಮಡದಿಯನ್ನು ಕಳೆದುಕೊಂಡು ವಿಲಪಿಸುವ ಶೋಕದಲ್ಲಿ ಸೀತೆಯ ಮೇಲಿನ ಮೋಹ ಮತ್ತು ತನ್ನ ಪೌರುಷಕ್ಕೆ ಎಸೆದ ಅವಮಾನ ಎರಡನ್ನೂ ಗುರುತಿಸಬಹುದು (ಸೀತೆಯನ್ನು ಅಗ್ನಿಪ್ರವೇಶಕ್ಕೆ ಗುರಿಯಾಗಿಸುವ ಸಂದರ್ಭದಲ್ಲಿ ವಿವರವಾಗಿ ಗಮನಿಸೋಣ).

ರಾವಣ ಎನ್ನುವವ ಲೋಕಕ್ಕೆ ಕಂಟಕನಾಗಿದ್ದಾನೆ, ಆದರೆ ಆತನ ಲಂಕೆ ಎಲ್ಲಿದೆ ಎನ್ನುವುದು ಗೊತ್ತಿರುವುದು ಸುಗ್ರೀವನಿಗೆ ಮಾತ್ರ. ಅದನ್ನು ರಾಮನಿಗೆ ಕಬಂಧನೆನ್ನುವ ರಾಕ್ಷಸನೇ ಹೇಳಿದ್ದಾನೆ. “ವಾಲಿನಾ ಕೃತಕಲ್ಬಿಷಃ” ಎನ್ನುವಾಗ ಕಿಷ್ಕಿಂಧಾ ರಾಜ್ಯವನ್ನು ತಾನೊಬ್ಬನೇ ಆಳಬೇಕೆನುವ ದುರಾಸೆಯಿಂದ ಸುಗ್ರೀವನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿದ್ದಾನೆಂದು ಅವರಿಬ್ಬರ ವೈರದ ಮೂಲಕಾರಣವನ್ನು ಆತ ತಿಳಿಸಿದ್ದಾನೆ. ರಾಮ ಬಂದಾಗ ರಾವಣನ ಲಂಕೆಯ ಸುಗ್ರೀವ ವಿವರಗಳನ್ನು ಹೇಳಿದ್ದರೆ ಬಹುಶಃ ವಾಲಿವಧೆಯ ಪ್ರಕರಣವನ್ನು ರಾಮ ಮೈಮೇಲೆ ತಂದುಕೊಳ್ಳುತ್ತಿರಲಿಲ್ಲ. ಸುಗ್ರೀವನಿಗೆ ವಾಲಿಯನ್ನು ಕೊಲ್ಲುವ ವೀರನೊಬ್ಬ ಸಿಕ್ಕಾಗ ತನ್ನ ಉದ್ಧೇಶವನ್ನು ಇಡೇರಿಸಿಕೊಳ್ಳುವತನಕ ಲಂಕೆಯ ಮಾರ್ಗವಾಗಲೀ, ಅಲ್ಲಿನ ವಿವರಗಳಾಗಲೀ ತನಗೆ ತಿಳಿದಿಲ್ಲವೆಂದು ಉಪಾಯದಿಂದ ರಾಮನನ್ನು ನಂಬಿಸುವ ಪ್ರಯತ್ನವನ್ನು ಮಾಡುತ್ತಾನೆ (ಸೀತಾನ್ವೇಷಣೆಯ ಪ್ರಕರಣದಲ್ಲಿ ವಿವರಗಳನ್ನು ಗಮನಿಸೋಣ). ರಾಮನಿಗೆ ಈ ವಿಷಯ ಗಮನಕ್ಕೆ ಬಂದಿಲ್ಲವೆಂದಲ್ಲ. ರಾವಣನನ್ನು ದಂಡಿಸುವ ತನ್ನ ಕೆಲಸಕ್ಕೆ ಸುಗ್ರೀವನ ಸಹಾಯ ಬೇಕೇ ಬೇಕು.

ಕೇವಲ ಸುಗ್ರೀವನ ಸಹಾಯಕ್ಕಾಗಿ ರಾಮ ವಾಲಿಯನ್ನು ದಂಡಿಸುವ ಕಾರ್ಯಕ್ಕೆ ಮುಂದಾದ ಎಂದರೆ ಆತನ ವ್ಯಕ್ತಿತ್ವಕ್ಕೆ ಕಳಂಕವೂ ಬರುತ್ತದೆ. ರಾಮನಿಗೆ ತನ್ನ ತನವನ್ನು ಕಾಯುವುದಕ್ಕಿಂತ ತನ್ನ ವಂಶದ ಘನತೆಯನ್ನು ಕಾಯುವುದೂ ಮುಖ್ಯ. ಧರ್ಮಮಾರ್ಗದಲ್ಲಿ ಸದಾ ನಡೆಯುವವರು ಅದನ್ನು ಅತಿಕ್ರಮಿಸಿದವರನ್ನು ದಂಡಿಸುತ್ತಾರೆ. ಕಬಂಧ ಸುಗ್ರೀವನ ಸದ್ಗುಣವನ್ನು ಹೇಳುತ್ತಾ ವಾಲಿಯಿಂದ ಆತ ಪೀಡಿತನಾಗಿದ್ದಾನೆ ಎನ್ನುವದನ್ನು ಹೇಳುವಾಗ ರುಮೆಯ ಪ್ರಕರಣವನ್ನೂ ಹೇಳಿದ್ದಾನೆ. ತಮ್ಮನ ಪತ್ನಿಯನ್ನು ಯಾವಾತ ಇಟ್ಟುಕೊಂಡಿದ್ದಾನೋ ಅಲ್ಲಿಗೆ ಆತ ದಂಡನಾರ್ಹ ಎನ್ನುವ ತೀರ್ಮಾನಕ್ಕೆ ರಾಮ ಬಂದಿದ್ದಾನೆ. ವಾಲಿಯ ದುರಾಸೆ ಮತ್ತು ಆತನ ಹೆಂಗಳೆಯರ ವಿಷಯದಲ್ಲಿರುವ ಆತನ ದೌರ್ಬಲ್ಯವ ಅದಾಗಲೇ ಆತನಿಗೆ ತಿಳಿದಿದೆಯೆನ್ನುವುದಕ್ಕೆ ಕಬಂಧನ ಮಾತುಗಳನ್ನು ವಿವೇಚಿಸುವಾಗ ಪರೋಕ್ಷವಾಗಿ ಹೊಳೆಯುತ್ತದೆ. ಸುಗ್ರೀವ ಹೇಳುವ “ಕರ್ತುಮರ್ಹಸಿ ಕಾಕುತ್ಸ್ಥ! ಭಯಂ ಮೇ ನ ಭವೇದ್ಯಥಾ- (ವಾಲಿಯ ಕುರಿತಾಗಿರುವ) ತನ್ನ ಭಯವನ್ನು ಹೋಗಲಾಡಿಸುವುದು ನಿನಗೆ ಉಚಿತವಾಗಿದೆ) ಎನ್ನುವ ಮಾತಿನಲ್ಲಿ ವಾಲಿಯನ್ನು ಕೊಲ್ಲಲೇ ಬೇಕೆನ್ನುವ ಆಗ್ರಹವಿದೆ. ಹಾಗಾಗಿಯೇ ಆತ ವಾಲಿಯನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿರುವುದು.

ತಕ್ಷಣದಲ್ಲಿ ಸುಗ್ರೀವ “ಯಥಾ ನಿಹಂಸ್ಯದ್ಯ ರಿಪುಂಮಮಾಗ್ರಜಮ್- ವಾಲಿಯು ಪುನಃ ತನ್ನನ್ನು ಹಿಂಸೆ ಮಾಡಲು ಸಾಧ್ಯವಾಗದರೀತಿಯಲ್ಲಿ ನೀನು ಅವನನ್ನು ಕೊಲ್ಲಬೇಕು ಎನ್ನುವುದು ಇಲ್ಲಿನ ತಾತ್ಪರ್ಯ. ರಘುವಂಶದವರು ಧರ್ಮ ಎಲ್ಲಿ ತಪ್ಪಿತೋ ಅದನ್ನು ಕಾಪಾಡಲು ಏನು ಬೇಕಾದರೂ ಮಾಡುತ್ತಾರೆನ್ನುವ ಪ್ರತೀತಿ ಇದೆ. ಆಕಾರಣಕ್ಕಾಗಿಯೇ ರಾಮ “ಧರ್ಮಲೋಭಪರೀತೇನ ನ ಚ ವಕ್ಷ್ಯೇ ಕಥಞ್ಚನ – ಧರ್ಮಹಾನಿಯನ್ನು ಸಹಿಸದಿರುವ ನಾನು ವಾಲಿ ಬದುಕಿ ಉಳಿದುಬಿಟ್ಟರೆ ದೋಷಭಾಗಿಯಾಗುತ್ತೇನೆ”. ಎನ್ನುವ ಮಾತುಗಳನ್ನು ಆಡುವಾಗ ವಾಲಿ ದೋಷಿಯಗಿದ್ದ ಎನ್ನುವುದು ಸ್ಪಷ್ಟ. ಅದಕ್ಕೆ ಸರಿಯಾಗಿ ವಾಲಿಯೂ ರಾಮನಲ್ಲಿ ವಾಲಿ ರುಮೆಯನ್ನು ತಾನು ಅನುಭವಿಸಿದ್ದೇನೆ ಎನ್ನುವುದನ್ನು ಮತ್ತು ಅದಕ್ಕೆ ಸಮರ್ಥನೆಕೊಡುವ ಸಾಲು “ಮಾಮಿಹಾನಪರಾಧಿನಂ I ಕಿಂವಕ್ಷ್ಯಸಿ ಸತಾಂ ಮಧ್ಯೇ ಕರ್ಮಕೃತ್ವಾ ಜುಗುಪ್ಸಿತಂ II” ಎನ್ನುವದನ್ನು ಬಿಡಿಸಿದಾಗ – ಜುಗುಪ್ಸಿತಂ ಕರ್ಮಮೃತ್ವಾಪಿ ಮಾಂ ಸತಾಂ ಮಧ್ಯೇ ಅನಪರಾಧಿನಂ ವಕ್ಷ್ಯಸಿ ಕಿಂ (ಸಹೋದರ ಬಾರ್ಯಾ ಪರಿಗ್ರಹವೆಂಬ ಜುಗುಪ್ಸಿತ ಕಾರ್ಯವನ್ನು ಮಾಡಿದಾಗಲೂ ಅಪರಾಧಿ ಆಗುವುದಿಲ್ಲ” ಎನ್ನುವದಾಗಿ ಆಗುತ್ತದೆ.

ಅಂದರೆ ತನ್ನ ನೀತಿಯನ್ನು ಯಾರೂ ಪ್ರಶ್ನಿಸಕೂಡದು, ತಾನು ನಡೆದಿದ್ದೇ ದಾರಿ ಎನ್ನುವ ವಾಲಿಯ ಧರ್ಪ ಇಲ್ಲಿ ಸ್ಪಷ್ಟವಾಗುತ್ತದೆ. ರಾವಣ ಮತ್ತು ವಾಲಿಯ ಅನೈತಿಕ ಮೈತ್ರಿಯೂ ರಾಮನಿಗೆ ನೆನಪಾಗಿರಬಹುದು. ಇದನ್ನು ಸುಗ್ರೀವ ಉದ್ಧೇಶಪೂರ್ವಕವಾಗಿ ರಾಮನಿಂದ ಮುಚ್ಚಿಟ್ಟಿದ್ದ. ಸೀತಾನ್ವೇಷಣೆಯ ಹೊತ್ತಿನಲ್ಲಿ ರಾವಣ ವಾಲಿಯಲ್ಲಿ ಪರಾಭವವನ್ನು ಅನುಭವಿಸಿದ್ದನ್ನು ಲಕ್ಷ್ಮಣನಿಗೆ ಹೇಳಿದವಳು ತಾರೆ. ಆದರೂ ಈ ವಿಷಯ ರಾಮನ ಗಮನಕ್ಕೆ ಬಂದಿತ್ತೆನ್ನುವುದು ಕಬಂಧ ಎಲ್ಲಾ ವಿಷಯವನ್ನೂ ಅಮೂಲಾಗ್ರವಾಗಿ ಹೇಳಿದ್ದಾನೆ ಎನ್ನುವುದರಲ್ಲಿ ಸೂಚಿಸುತ್ತದೆ. ಕಾವ್ಯದಲ್ಲಿ ಪುನರುಕ್ತಿದೋಷ ಉಂಟಾಗಬಾರದೆನ್ನುವ ಕಾರಣಕ್ಕೆ ಕವಿ ಅನೇಕ ವಿಷಯಗಳನ್ನು ಪರೋಕ್ಷವಾವಗಿ ಹೇಳುತ್ತಾನೆ.

ಇನ್ನು ಸೀತೆಯ ಸಲುವಾಗಿ ವಾಲಿಯಲ್ಲಿ ರಾಮ ಬಂದು ಕೇಳಿದ್ದರೆ ಅದಾಗಲೇ ರಾವಣನೊಂದಿಗೆ ತುಲ್ಯಾರಿ ಮಿತ್ರತ್ವವನ್ನು ಮಾಡಿಕೊಂಡ ವಾಲಿ ಸೀತೆಯನ್ನು ಕೊಡಿಸುತ್ತಿದ್ದ ಎನ್ನುವುದು ಅನುಮಾನ. ಅದಲ್ಲದೇ ಇಂದ್ರನನ್ನು ಪರಾಭವಗೊಳಿಸಿದವನ ಸಂಗಡವೇ ವಾಲಿ ಮೈತ್ರಿಮಾಡಿಕೊಂಡ ಎಂದರೆ ಆತನ ಈ ಮಾತುಗಳು ಬಡಿವಾರವೇ ಹೊರತೂ ಮತ್ತೇನೂ ಅಲ್ಲ. ದೇವತೆಗಳ ಅಂಶವೆಲ್ಲವೂ ರಾಮನಿಗೆ ನೆರವಾಗಲು ಭೂಮಿಯಲ್ಲಿ ಜನಿಸುವಂತೆ ಬ್ರಹ್ಮ ಸಭೆಯಲ್ಲಿ ರಾವಣ ವಧೆಗೆ ದೇವತೆಗಳು ನಡೆಸಿದ ಸಭೆಯಲ್ಲಿ ಮಹತ್ವದ ಸಲಹೆ ನೀಡಿದ್ದ. ಅದರಂತೆ ಇಂದ್ರನ ಅಂದಿಂದ ವಾಲಿ ಜನಿಸಿದ್ದ. ಆದರೆ ಮೈತ್ರಿಯನ್ನು ಮಾಡಿಕೊಂಡಿದ್ದು ಇಂದ್ರವೈರಿ ರಾವಣನ ಸಂಗಡ. ಹಾಗಾಗಿ ರಾವಣನಿಂದ ಸೀತೆಯನ್ನು ಬಿಡಿಸಿಕೊಡುವ ಮಾತೂ ಸಹ ನಂಬಲಹವಲ್ಲ.

ಯಾವುದೇ ಕಾರ್ಯವನ್ನು ವಿವೇಚಿಸುವಾಗ ಅದಕ್ಕೆ ಸಂಬಂಧಿಸಿದ ಅನುಬಂದ ಚತುಷ್ಟಯವನ್ನು ಗಮನಿಸಬೇಕು ಎನ್ನುವುದು ಶಾಸ್ತ್ರ ಹೇಳುತ್ತದೆ. ಅಧಿಕಾರಿ, ವಿಷಯ, ಸಂಬಂಧ ಮತ್ತು ಪ್ರಯೋಗ ಈ ನಾಲ್ಕನ್ನು ಇಟ್ಟುಕೊಂಡು ರಾಮ ವಾಲಿಯನ್ನು ವಧಿಸಿರುವುದನ್ನು ವಿವೇಚಿಸಬಹುದು. ಪದೇ ಪದೇ ರಾಮ ವಾಲಿಯಲ್ಲಿ ನಿನ್ನನ್ನು ವಧಿಸಲು ಮೂಲ ಕಾರಣವೇ ಧರ್ಮವನ್ನು ಉದ್ಧರಿಸುವ ನಿರ್ದೇಶನವನ್ನು ಶಾಸ್ತ್ರ ತನಗೆ ಕೊಟ್ಟಿದೆ ಎನ್ನುವುದು-“ವಧೋ ವಾನರಶಾರ್ದೂಲ ನ ವಯಂ ಸ್ವವಶೇ ಸ್ಥಿತಾ:” ಇಲ್ಲಿ ರಾಮನಿಗಿರುವ ಅಧಿಕಾರ ಮತ್ತು ಸಂಬಂಧ ಯಾವುದೆಂದರೆ ಭರತನ ಹತ್ತಿರ ರಾಮ “ನಗರ ಪ್ರದೇಶಕ್ಕೆ ನೀನು ರಾಜನಾಗು. ನಾನು ನದಿ, ನದ ವನ, ಗಿರಿ ಪರ್ವತ ಪ್ರದೇಶಗಳಿಗೆ ರಾಜನಾಗುತ್ತೇನೆ” ಎಂದುದ್ದಾನೆ. ಇಕ್ಷ್ವಾಕು ವಂಶದವರಿಗೆ ನಾಲ್ಕೂ ಸಮುದ್ರ ಪರ್ಯಂತ ಧರ್ಮವನ್ನು ಕಾಯುವ ಅಧಿಕಾರ ಸ್ವಯಂ ಆಗಿ ಬಂದಿದೆ. ಮೂಲತಃ ಭಗವಂತ ಸೂರ್ಯನಿಗೆ ಧರ್ಮವನ್ನು ಉಪದೇಶಿಸಿದ್ದ, ಆತನಿಂದ ಮನುವಿಗೆ ಅದು ದೊರೆಯಿತು ಎನ್ನುವ ಗೀತಾಚಾರ್ಯನ ವಾಣಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಎರಡನೆಯದಾದ ವಿಷಯಕ್ಕೆ ಬಂದರೆ ಅದು ಮುಖ್ಯವಾಗಿ ಪರ ಭಾರ್ಯಾಪಹರಣ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಅದರ ವಿವರ ಈಗಾಗಲೇ ಹೇಳಿಯೂ ಆಗಿದೆ. ಮುಖ್ಯವಾದುದು ಪ್ರಯೋಗವೆನ್ನುವ ನಾಲ್ಕನೆಯದು. ರಾಜನಾದವ ವಿಚಾರಣೆಯನ್ನು ಯಾಕೆ ಮಾಡಿಲ್ಲವೆಂದು ಕೇಳಬಹುದು. ಅಪರಾಧಿಯನ್ನು ವಿಚಾರಿಸುವಾಗ ಬಲಿಷ್ಠನಾದರೆ ಆತನನ್ನು ದಂಡಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ವಿಚಾರಣೆ ಮಾಡುತ್ತಾರೆ. ಇಲ್ಲಿ ರಾಮ ಮಾಡಿರುವುದು ಅದನ್ನೇ. ಹಾಗಾದರೆ ಸುಗ್ರೀವ ಅದೇ ತಪ್ಪನ್ನೇ ಮಾಡಲಿಲ್ಲವೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ವಾಲಿ ಆ ಪ್ರಶ್ನೆಯನ್ನು ಕೇಳುವುದಿಲ್ಲ. ಆದರೆ ಅಂಗದ ಸೀತಾಪಹರಣದ ವಿಷಯದಲ್ಲಿ ಬಂಡಾಯ ಎದ್ದು ಆ ಪ್ರಶ್ನೆಯನ್ನು ಇನ್ನಿತರ ವಾನರರಲ್ಲಿ ಕೇಳುತ್ತಾನೆ. “ಭ್ರಾತುಜ್ಯೇಷ್ಠಸ್ಯ ಸ್ಯಯೋಭಾರ್ಯಾಂ ಜೀವತೋ ಮಹಿಷೀಂಪ್ರಿಯಾಂI ಧರ್ಮೇಣ ಮಾತರಂ ಯಸ್ತು ಸ್ವೀಕರೋತಿ ಜುಗುಪ್ಸಿತಃ II”. ತನ್ನ ತಂದೆ ವಾಲಿ ದಂಡನಾರ್ಹನಾದರೆ ಸುಗ್ರೀವ ತನ್ನ ತಾಯಿಯ ವಿಷಯದಲ್ಲಿ ಮಾಡಿದ್ದೂ ಅದೇ ಅಲ್ಲವೇ. ರಾಮ ಯಾಕೆ ಆತನನ್ನು ಶಿಕ್ಷಿಸಲಿಲ್ಲ” ಎಂದು ದುಃಖಿಸುತ್ತಾನೆ.

ತಾರೆಯ ಜೊತೆಯಲ್ಲಿ ಸುಗ್ರೀವ ವಾಲಿ ಬದುಕಿರುವಾಗಲೇ ಇದ್ದಿದ್ದು ಯಾರ ಬಲವಂತದಿಂದಲ್ಲ. ಪತಿ ಮೃತನಗಿದ್ದಾನೆ ಎಂದು ತಿಳಿದಮೇಲೆ ಪತ್ನಿ ಇನ್ನೊಬ್ಬರನ್ನು ಮದುವೆಯಾಗಬಹುದು ಎನ್ನುತ್ತದೆ. ಮೈದುನನಿಗೆ ’ದೇವರ್’ ಎಂದು ಹೆಸರಿದೆ. ಅದರ ಅರ್ಥ ದ್ವಿತೀಯ ವರ ಎಂದು. ಪತಿ ತೀರಿಹೋದಾಗ ಆತನ ಸಹೋದರ ದುಃಖಿಸುತ್ತಿರುವ ಆಕೆಯಲ್ಲಿ ತಾನು ಎರಡನೇ ವರವಾಗಿ ನಿನ್ನೊಟ್ಟಿಗಿದ್ದೇನೆ. ನಿನ್ನನ್ನು ರಕ್ಷಿಸುತ್ತೇನೆ ಎನ್ನುವ ಮಾತನ್ನು ಕೊಟ್ಟೂ ಆಕೆಯನ್ನು ಸಮಾಧಾನಿಸುವ ಮಂತ್ರಗಳು ಋಗ್ವೇದ, ಅಥರ್ವವೇದದಲ್ಲಿ ಇದೆ. ವಾಲಿಯದು ಬಲತ್ಕಾರ, ಅದನ್ನು ಸುಗ್ರೀವ ಮತ್ತು ತಾರೆಯೆ ವಿಷಯಕ್ಕೆ ಸಮೀಕರಿಸಲಾಗುವುದಿಲ್ಲ. ಇನ್ನು ಸುಗ್ರೀವನನ್ನು ವಾಲಿಯೇ ದಂಡಿಸಬಹುದಿತ್ತು. ನ್ಯಾಯ ತೀರ್ಮಾನ ಬೇರೆ, ದರ್ಪ ಮತ್ತು ದೌರ್ಜನ್ಯಗಳು ಬೇರೆ. ಆರ್ತರ ನೋವನ್ನು ಪರಿಹರಿಸುವುದಕ್ಕಾಗಿಯೇ ಕ್ಷತ್ರಿಯರು ಚಾಪವನ್ನೆತ್ತುತ್ತಾರೆ ಎಂದು ರಾಮ ಪಂಚವಟಿಯಲ್ಲಿ ಸೀತೆಗೆ ಹೇಳಿದ್ದ. ಹಾಗಾಗಿ ಇಲ್ಲಿ ರಾಮ ತನ್ನ ಅಧಿಕಾರವನ್ನು ಚಲಾಯಿಸಿ ಪ್ರಯೋಗಕ್ಕೆ ಮುಂದಾಗಿರುವುದು. ನ್ಯಾಯಶಾಸ್ತ್ರ ದೊಡವರ ಚಿಕ್ಕ ಅಪರಾಧಕ್ಕೂ ದೊಡ್ಡ ಶಿಕ್ಷೆ ವಿಧಿಸಬೇಕು ಎಂದು ಹೇಳುತ್ತದೆ. ರಾಮನಿಗೆ ವಾಲಿ ಪಟ್ಟಾಭಿಷಿಕ್ತ ರಾಜನೆನ್ನುವ ಗೌರವವಿದೆ. ಅದಕ್ಕಾಗಿ ಆತ “ಪಾಪಗಳನ್ನು ಮಾಡಿದ ಮನುಷ್ಯರು ರಾಜನಿಂದ ಯಥೋಚಿತವಾದ ಶಿಕ್ಷೆಯನ್ನು ಅನುಭವಿಸಿದರೆ ಪಾಪಗಳಿಂದ ಮುಕ್ತರಾಗಿ ಸಾಧುಪುರುಷರಂತೆ ಸ್ವರ್ಗಕ್ಕೆ ಹೋಗುತ್ತಾರೆ” ಎಂದು ತನ್ನ ನ್ಯಾಯದ ತೀರ್ಮಾನವನ್ನೂ ಮತ್ತು ಪ್ರಯೋಗಕ್ಕೆ ಕಾರಣವಾದ ಅಂಶವನ್ನು ಸ್ಪಷ್ಟಪಡಿಸುತ್ತಾನೆ.

“ಒಂದು ವೇಳೆ ನೀನೇ ತಾನು ಮೃಗವೆಂದು ಹೇಳಿಕೊಳ್ಳುತ್ತಿಯೋ ಆಗ ನಿನಗೆ ಈ ಪ್ರಶ್ನೆಗಳನ್ನು ಕೇಳುವ ಯಾವ ಅಧಿಕಾರವೂ ಇಲ್ಲ. ಉದ್ಧೇಶವನ್ನು ಹೇಳದೆಯೂ ಮೃಗಗಳನ್ನು ರಾಜ ಕೊಲ್ಲಬಹುದು” ಎನ್ನುತಾನೆ. ಬ್ರಹ್ಮ ಮೊಮ್ಮಗನಾಗಿ, ಇಂದ್ರನ ಮಗನಾಗಿ ಪಟ್ಟಾಭಿಷಿಕ್ತನಾಗಿರುವ ಮೂಲಕ ವಿಷ್ಣುವಿನ ಪ್ರತಿನಿಧಿಯಾಗಿರುವ ವಾಲಿ ಧರ್ಮಮಾರ್ಗವನ್ನು ಬಿಟ್ಟು ಕೇವಲ ಕ್ರೋಧವಶನಾಗಿ ಕ್ಷಾತ್ರಧರ್ಮದಲ್ಲಿ ನಿರತನಾಗಿರುವ ತನ್ನನ್ನು (ರಾಮನನ್ನು) ನಿಂದಿಸುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡಾಗ ವಾಲಿಗೆ ತನ್ನ ಎಲ್ಲಾ ಅಕಾರ್ಯಕ್ಕೆ ವ್ಯಥೆಪಡುತ್ತಾನೆ. ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ರಾಮ ಎಲ್ಲಿಯೂ ವಾಲಿಗೆ ಬದುಕುವ ಆಸೆ ಇದೆಯೋ ಎಂದು ಕೇಳುವುದೇ ಇಲ್ಲ. ಆತನಿಗೆ ರಾವಣನಿಗೆ ಸಹಾಯಕರಾಗಿರುವ ಖರ ದೂಷಣರಂತೆ ವಾಲಿಯ ನಿಗ್ರಹವೂ ಮಹತ್ವದ್ದಾಗಿತ್ತು.

ಹೇಗೆ ಕಾಲವೇ ವಾಲಿ ಸುಗ್ರೀವರ ವೈರಕ್ಕೆ ಕಾರಣವಾಗಿತ್ತೋ ಅದೇ ಕಾಲವೇ ವಾಲಿ ವಧೆಗೂ ರಾಮನಿಂದ ಕಾರಣೀಭೂತವಾಯಿತು.

ಇದನ್ನೂ ಓದಿ: Narayana Yaji Column: ವಾಲಿವಧೆ: ರಾಮನ ವ್ಯಕ್ತಿತ್ವಕ್ಕೆ ಒಡ್ಡಿದ ನಿಕಷ; ಉದ್ದೇಶಪೂರ್ವಕವೋ ಅಥವಾ ಹದ ತಪ್ಪಿದ ನಡೆಯೋ?