Surendra Pai Column: ಇದು ಆತ್ಮವಿಶ್ವಾಸದ ಕೊರತೆಯೋ, ಮೈಗಳ್ಳತನವೋ ?
ಶೈಕ್ಷಣಿಕ ವರ್ಷ ಈಗಷ್ಟೇ ಪ್ರಾರಂಭವಾಗಿದೆ, ಅದಾಗಲೇ ಈ ಬಾರಿ ಹೊಸದಾಗಿ ನೇಮಕಗೊಂಡ ಮೂವರು ಶಿಕ್ಷಕರು ಶಾಲೆಗೆ ಯಾವುದೇ ಮಾಹಿತಿ ನೀಡದೆ ಕೆಲಸ ಬಿಟ್ಟು ಹೋಗಿದ್ದಾರೆ. ಕಾರಣ ತಿಳಿಯಲು ಫೋನ್ ಮಾಡಿದರೆ ಅದಕ್ಕೂ ಉತ್ತರವಿಲ್ಲ; ಆದರೆ ವಾಟ್ಸ್ಯಾಪ್ನಲ್ಲಿ ಮಾತ್ರ ಸಕ್ರಿಯ ಭಾಗವಹಿಸುವಿಕೆ ಕಂಡುಬಂತು.


ಯಕ್ಷಪ್ರಶ್ನೆ
ಸುರೇಂದ್ರ ಪೈ, ಭಟ್ಕಳ
ನಮ್ಮದು ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ ಸಿಬಿಎಸ್ಸಿ ಶಾಲೆ. ತಾಲೂಕಿನ ಸುತ್ತಮುತ್ತ ಲಿನ ಹತ್ತಾರು ಹಳ್ಳಿಯ ಮಕ್ಕಳು, ಅದರಲ್ಲೂ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಶಾಲೆ. ಹೀಗಾಗಿ ಮಕ್ಕಳು, ಶಿಕ್ಷಕರು ಕನ್ನಡವನ್ನು ಸರಾಗವಾಗಿ ಮಾತನಾಡ ಬಹುದು.
ಹಾಗಂತ, ‘ಆಂಗ್ಲ ಮಾಧ್ಯಮ ಶಾಲೆ’ ಎಂಬ ಫಲಕ ಹಾಕಿಕೊಂಡು ಕನ್ನಡದಲ್ಲೇ ಬೋಧನೆ ಮಾಡುವ ಇತರ ಶಾಲೆಯಂತಿರಬಹುದೇ ಅಂದುಕೊಳ್ಳುವುದು ಬೇಡ. ತರಗತಿ ಬೋಧನೆ ಆಂಗ್ಲಭಾಷೆಯಲ್ಲಿ ನಡೆದರೂ, ಪಾಠದ ಮಧ್ಯದಲ್ಲಿ ಮಕ್ಕಳಿಗೆ ವಿಷಯವನ್ನು ಇನ್ನಷ್ಟು ಮನವರಿಕೆ ಮಾಡಿಕೊಡಬೇಕಾಗಿ ಬಂದಾಗ ಶಿಕ್ಷಕರಿಗೆ ಕನ್ನಡವನ್ನು ಬಳಸುವ ಸಂಪೂರ್ಣ ಸ್ವಾತಂತ್ರ್ಯವಿದೆ.
ಜತೆಗೆ ಮಕ್ಕಳೂ ತಮ್ಮ ಸಂದೇಹಗಳನ್ನು ಕನ್ನಡದಲ್ಲೇ ಕೇಳಿ ಪರಿಹರಿಸಿಕೊಳ್ಳುವ ಅವಕಾಶವೂ ಇದೆ. ಇಲ್ಲಿ ಕನ್ನಡ ಮಾತನಾಡಿದ್ದಕ್ಕೆ ಮಕ್ಕಳಿಗೆ ದಂಡ ವಿಧಿಸುವ ಪರಿಪಾಠವಿಲ್ಲ ಅಥವಾ ಕನ್ನಡ ಮಾತನಾಡಿದಾಕ್ಷಣ ಮಕ್ಕಳು ಆಂಗ್ಲಭಾಷೆಯ ಕಲಿಕೆಗೆ ಆಸಕ್ತಿ ತೋರುವುದಿಲ್ಲ ಎಂದೇನಿಲ್ಲ. ಇಷ್ಟೆಲ್ಲಾ ಹೇಳಿದ್ದು, ನಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡಕ್ಕೆ ಎಷ್ಟು ಪ್ರಾಮುಖ್ಯವನ್ನು ನೀಡುತ್ತೇವೆ ಎಂಬುದನ್ನು ತಿಳಿಸುವುದಕ್ಕಲ್ಲ; ನಮ್ಮಲ್ಲಿರುವ ಸ್ವಾತಂತ್ರ್ಯದ ಬಗ್ಗೆ ಒಂದು ಕಲ್ಪನೆ ಒಡಮೂಡಲಿ ಎಂಬುದಕ್ಕಷ್ಟೇ.
ಈಗ ವಿಷಯಕ್ಕೆ ಬರೋಣ: ಶೈಕ್ಷಣಿಕ ವರ್ಷ ಈಗಷ್ಟೇ ಪ್ರಾರಂಭವಾಗಿದೆ, ಅದಾಗಲೇ ಈ ಬಾರಿ ಹೊಸದಾಗಿ ನೇಮಕಗೊಂಡ ಮೂವರು ಶಿಕ್ಷಕರು ಶಾಲೆಗೆ ಯಾವುದೇ ಮಾಹಿತಿ ನೀಡದೆ ಕೆಲಸ ಬಿಟ್ಟು ಹೋಗಿದ್ದಾರೆ. ಕಾರಣ ತಿಳಿಯಲು ಫೋನ್ ಮಾಡಿದರೆ ಅದಕ್ಕೂ ಉತ್ತರವಿಲ್ಲ; ಆದರೆ ವಾಟ್ಸ್ಯಾಪ್ನಲ್ಲಿ ಮಾತ್ರ ಸಕ್ರಿಯ ಭಾಗವಹಿಸುವಿಕೆ ಕಂಡುಬಂತು.
ಇದನ್ನೂ ಓದಿ: Surendra Pai Column: ದುಬಾರಿ ಶಾಲಾ ಶಿಕ್ಷಣಕ್ಕೆ ಕಡಿವಾಣ ಬೇಕಲ್ಲವೇ?
ಎರಡು ದಿನದ ಬಳಿಕ ಯಾರೋ ಒಬ್ಬರು ಪ್ರಾಂಶುಪಾಲರಿಗೆ ಕರೆ ಮಾಡಿ, “ನನ್ನ ಮಗಳಿಗೆ ಅನಾರೋಗ್ಯ, ಕ್ಷಮಿಸಿ ಅವರಿನ್ನು ಶಾಲೆಗೆ ಬರುವುದಿಲ್ಲ. ಅವರ ಅಂಕಪಟ್ಟಿ ಬೇಕಿತ್ತು" ಎಂದರು. ಕರೆ ಮಾಡಿದ್ದು ಅಂಕಪಟ್ಟಿಯನ್ನು ಹಿಂತೆಗೆದುಕೊಳ್ಳಲೋ ಅಥವಾ ಇರುವ ವಿಚಾರ ತಿಳಿಸಲೋ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಿಟ್ಟುಹೋದ ಮೂವರೂ ಅನಾರೋಗ್ಯ ಸಂಬಂಧಿತ ‘ವೈದ್ಯಕೀಯ’ ಕಾರಣವನ್ನೇ ನೀಡಿದರು. ಇದು ಕೇವಲ ಈ ವರ್ಷದ ಅಥವಾ ಒಂದು ಶಾಲೆಯ ಕಥೆಯಲ್ಲ; ಪ್ರತಿ ವರ್ಷವೂ, ಬಹುತೇಕ ಶಾಲೆಗಳಲ್ಲಿ ಕಾಣಬರುವ ಗೋಳು.
ಕೆಲಸ ಕೇಳಿಕೊಂಡು ಬರುವಾಗ ಇರುವ ಶ್ರದ್ಧೆ, ವೃತ್ತಿಪರತೆ ಕುರಿತಾದ ದೃಢಸಂಕಲ್ಪ ಎರಡೇ ವಾರದಲ್ಲಿ ಕಾಣೆಯಾಗಿರುತ್ತದೆ. ನೇಮಕಾತಿಗೂ ಮುನ್ನ ಅವರ ಬೋಧನಾ ವೈಖರಿಯನ್ನು ವೀಕ್ಷಿಸಿಯೇ, ಶಾಲೆಯ ನಿಯಮಾವಳಿ, ಸಂಬಳ-ಸವಲತ್ತು ಇತ್ಯಾದಿಯನ್ನು ವಿವರಿಸಿಯೇ, ಒಂದು ವರ್ಷದ ಕರಾರಿನ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ; ಆದರೂ ವೈದ್ಯಕೀಯ ಕಾರಣ ನೀಡಿ ಪಲಾಯನ ಮಾಡುವುದೇಕೆ?
ಇದರ ಹಿಂದೆ ಒಂದಷ್ಟು ಕಾರಣಗಳಿವೆ. ಅದಕ್ಕೂ ಮೊದಲು ನೇಮಕಾತಿ ವಿಧಾನವನ್ನೊಮ್ಮೆ ಅವಲೋಕಿಸೋಣ. ಮುಂದಿನ ಶೈಕ್ಷಣಿಕ ವರ್ಷದ ತಯಾರಿಯಾಗಿ ಜನವರಿಯಿಂದಲೇ ಎಲ್ಲೆಡೆ ಶಿಕ್ಷಕರ ನೇಮಕಾತಿ ನಡೆಯುತ್ತದೆ. ಅದಕ್ಕಾಗಿ ರಾಜ್ಯ ಮಟ್ಟದ ಪತ್ರಿಕೆ, ಸಾಮಾಜಿಕ ಜಾಲತಾಣ ಇತ್ಯಾದಿ ಕಡೆ ಜಾಹೀರಾತು ನೀಡಲಾಗುತ್ತದೆ. ತಾಲೂಕು ಭಾಗವಾದ್ದರಿಂದ ಗುಣಮಟ್ಟದ ಶಿಕ್ಷಕರು ದೊರಕುವುದು ಕಷ್ಟ. ಇತ್ತೀಚಿನ ಹಲವು ವರ್ಷಗಳಲ್ಲಿ, ನಗರ ಪ್ರದೇಶಗಳ ಬಹುತೇಕ ಖಾಸಗಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಕರು ದೊರಕುವುದು ವಿರಳವಾಗಿದೆ. ಕಾರಣ, ‘ಅರ್ಹತೆಗೆ ತಕ್ಕಂತೆ ಸಂಬಳ ಸಿಗದಿರುವುದು’ ಅಲ್ಲ, ಬದಲಾಗಿ ಶಿಕ್ಷಕರಲ್ಲಿ ವಿಷಯ ಜ್ಞಾನ, ಬೋಧನಾ ಸಾಮರ್ಥ್ಯ ಹೀಗೆ ಹಲವು ವಿಚಾರಗಳಲ್ಲಿ ಕುಂದುಕೊರತೆಗಳಿರುತ್ತವೆ.
ಸ್ಥಳೀಯವಾಗಿ ಅರ್ಹ ಶಿಕ್ಷಕರ ಅಲಭ್ಯತೆಯ ಕಾರಣ ಬಹುತೇಕ ಶಾಲೆಗಳ ಆಡಳಿತ ಮಂಡಳಿ ಯವರು ಈ ಕೊರತೆಯನ್ನು ನೀಗಲು ಪಕ್ಕದ ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳ ಶಿಕ್ಷಕ ರನ್ನು ನೆಚ್ಚುತ್ತಿದ್ದಾರೆ. ಅದಕ್ಕಾಗಿಯೇ ಇರುವ ಕನ್ಸಲ್ಟೆನ್ಸಿಗಳ ಸಹಾಯದಿಂದ ಆನ್ಲೈನ್ ಮೂಲಕ ಇಂಥ ಪ್ರತಿ ಶಿಕ್ಷಕರ ಐದಾರು ನಿಮಿಷದ ಬೋಧನಾ ವೈಖರಿಯನ್ನು (ಡೆಮೋ) ವೀಕ್ಷಿಸುತ್ತಾರೆ. ಇದೊಂಥರಾ ಆನ್ಲೈನ್ ವಧು-ವರರ ವೇದಿಕೆ ಇದ್ದಹಾಗೆ ಎನ್ನಬಹುದು!
ಐದಾರು ನಿಮಿಷದ ‘ಡೆಮೊ’ ಬೋಧನೆಯ ವೀಕ್ಷಣೆಯಿಂದ ಅಭ್ಯರ್ಥಿಗಳ ಅರ್ಹತೆಯು ಅಷ್ಟಾಗಿ ಗೊತ್ತಾಗದಿದ್ದರೂ, ‘ಸಿಕ್ಕಿದ್ದೇ ಸೀರುಂಡೆ’ ಎಂಬ ಮಾತಿನಂತೆ, ಇವರನ್ನು ಕೈಬಿಟ್ಟರೆ ಬೇರೆ ದಾರಿ ಯಿಲ್ಲ ಎಂದುಕೊಂಡೇ ಅನ್ಯ ರಾಜ್ಯದ ಶಿಕ್ಷಕರನ್ನು ಶಾಲೆಗಳ ಆಡಳಿತ ಮಂಡಳಿಯವರು ನೇಮಿಸಿಕೊಳ್ಳುತ್ತಿದ್ದಾರೆ.
ಅವರಿಗೆ ಎಲ್ಲಾ ವಿಷಯಗಳಲ್ಲೂ ಸ್ಥಳೀಯ ಶಿಕ್ಷಕರಿಗಿಂತಲೂ ವಿಶೇಷ ಪ್ರಾಧಾನ್ಯ ನೀಡಲಾಗುತ್ತದೆ. ಇವರಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್ ವಾಕ್ಚಾತುರ್ಯ ಬಿಟ್ಟರೆ, ಬೋಧನಾ ವಿಷಯದಲ್ಲಿ ಹೆಚ್ಚಿನ ಕೌಶಲವೇನೂ ಇರುವುದಿಲ್ಲ. ಹಾಗಂತ ಅನ್ಯರಾಜ್ಯಗಳ ಇಂಥ ಶಿಕ್ಷಕರೆಲ್ಲರೂ ‘ಅನರ್ಹರು’ ಎಂದರ್ಥವಲ್ಲ.
ಇಷ್ಟೆಲ್ಲಾ ಸಮಸ್ಯೆಗೆ ಕಾರಣ, ಸ್ಥಳೀಯವಾಗಿ ಅರ್ಹ ‘ಶಿಕ್ಷಕ ಸಂಪನ್ಮೂಲಗಳು’ ದೊರಕದಿರುವುದು. ಆದರೆ ತಾಲೂಕಿನಲ್ಲಿ ಒಂದೆರಡು ಬಿ.ಇಡಿ ಕಾಲೇಜುಗಳು ಇದ್ದೇ ಇರುತ್ತವೆ. ರಾಜ್ಯದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ 250ಕ್ಕೂ ಹೆಚ್ಚಿನ ಬಿ.ಇಡಿ ಕಾಲೇಜುಗಳಿವೆ. ಪ್ರಸ್ತುತ ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಮಿಕ್ಕ, ತರಬೇತಿ ಪಡೆದ ಶಿಕ್ಷಕ ಅಭ್ಯರ್ಥಿಗಳಿದ್ದು, ಪ್ರತಿ ತಾಲೂಕಿನಲ್ಲೂ ಕನಿಷ್ಠ 400-500 ಮಂದಿ ಸಿಕ್ಕೇ ಸಿಗುತ್ತಾರೆ.
ಆದರೆ ಸ್ಥಳೀಯ 5-6 ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಖಾಲಿಯಿದ್ದರೂ, ಇವರು ಪ್ರಯತ್ನ ಮಾಡಿದರೂ ಆಯ್ಕೆಯಾಗುವುದಿಲ್ಲ. ಏಕೆಂದರೆ ಇವರ ಪೈಕಿ ಮೂರು ತೆರನಾದ ಮನಸ್ಥಿತಿಯುಳ್ಳ ಅಭ್ಯರ್ಥಿಗಳಿರುತ್ತಾರೆ. ಅವರೆಂದರೆ: 1) ಸರಕಾರಿ ಉದ್ಯೋಗಕ್ಕಾಗಿ ಮಾತ್ರ ಬಿ.ಇಡಿ ತರಬೇತಿ ಪಡೆದಿರುವವರು. ಇವರು ಹಾಗೆಲ್ಲಾ ಖಾಸಗಿ ಶಾಲೆಗಳಿಗೆ ಹೋಗಿ ಪಾಠ ಮಾಡುವುದಿಲ್ಲ. ಇವರಲ್ಲಿ ಬಹುತೇಕರು ಮಹಿಳೆಯರೇ ಇರುವುದರಿಂದ, ಮದುವೆಯಾಗಿ ಸಂಸಾರ ನಡೆಸುತ್ತಾ ಸರಕಾರಿ ನೇಮಕಾತಿಗಾಗಿ ಕಾಯುತ್ತಿರುತ್ತಾರೆ.
೨) ಇವರಲ್ಲಿ ಆಂಗ್ಲಭಾಷಾ ಜ್ಞಾನ, ಪ್ರಾವೀಣ್ಯ ಹಾಗೂ ಸೂಕ್ತ ಅರ್ಹತೆ ಇರುವುದಿಲ್ಲ. ಹೀಗಾಗಿ ಇವರೆಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲೋ, ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿಯೋ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿರುತ್ತಾರೆ. ಕನ್ನಡ ವಿಷಯದ ಶಿಕ್ಷಕರು ಮಾತ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಠ ಮಾಡಲು ಸಿದ್ಧರಿರುತ್ತಾರೆ.
೩) ಇವರು ಅರ್ಹ ಸ್ಥಳೀಯ (ತಾಲೂಕು, ಜಿಲ್ಲೆ ಹಾಗೂ ರಾಜ್ಯದ) ಅಭ್ಯರ್ಥಿಗಳು. ಅದರಲ್ಲೂ ನಿರ್ದಿಷ್ಟವಾಗಿ ಮೊದಲ ಬಾರಿಗೆ ಶಿಕ್ಷಕ ವೃತ್ತಿಗೆ ಇಳಿಯುವವರು. ಆದರೆ ಇವರದ್ದು ಕೆಲ ಸಮಸ್ಯೆ ಗಳಿರುತ್ತವೆ. ಖಾಸಗಿ ಶಾಲೆಯಲ್ಲಿನ ಕೆಲಸದ ವಿಚಾರದಲ್ಲಿ, ಬೋಧನೆಯ ಕುರಿತಾದ ಕಟ್ಟುನಿಟ್ಟಿನ ನಿಯಮಗಳ ಪಾಲನೆ ಮಾಡುವ ವಿಷಯ ಬಂದಾಗ ಮೈಗಳ್ಳತನ ತೋರುವುದು ಸೇರಿದಂತೆ, ಮೊಬೈಲ್ ಬಳಕೆಗೆ ಆಸ್ಪದವಿಲ್ಲದಿರುವಿಕೆ, ಸಮಯಪಾಲನೆ ಮಾಡಲಾಗದಿರುವಿಕೆ ಹಾಗೂ ತರಗತಿ ಯೊಂದರಲ್ಲಿನ 40 ವಿದ್ಯಾರ್ಥಿಗಳನ್ನು ಸಂಭಾಳಿಸುವಲ್ಲಿನ ವೈಫಲ್ಯದ ಭಯ, ಆತ್ಮವಿಶ್ವಾಸದ ಕೊರತೆ, ಚಂಚಲ ಮನಸ್ಥಿತಿ, ಬಿ.ಇಡಿ ಕೋರ್ಸ್ ಅವಧಿಗೂ ವಾಸ್ತವಿಕ ತರಗತಿಗೂ ಬೋಧನಾ ವೈಖರಿ/ ಸನ್ನಿವೇಶದಲ್ಲಿ ಇರುವ ವ್ಯತ್ಯಾಸ ಹೀಗೆ ಇಂಥವರದ್ದು ಒಂದಿಷ್ಟು ಸಮಸ್ಯೆಗಳಿವೆ.
ಈ ಎಲ್ಲದರ ಪರಿಣಾಮವಾಗಿ, ಮೇಲೆ ಉಲ್ಲೇಖಿಸಿದಂತೆ ‘ವೈದ್ಯಕೀಯ’ ಕಾರಣದ ನೆಪವೊಡ್ಡಿ ಶಿಕ್ಷಕರು ಶಾಲೆಯಿಂದ ಪಲಾಯನ ಮಾಡುತ್ತಾರೆ. ಇಂದು ಶಿಕ್ಷಣ ವ್ಯವಸ್ಥೆ ನಾವು ಅಂದುಕೊಂಡ ಹಾಗಿಲ್ಲ. ಪಾಲಕರು ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನದನ್ನು/ವಿಶೇಷವಾದುದನ್ನು ನಿರೀಕ್ಷಿಸುತ್ತಾರೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಮಕ್ಕಳಿಗೆ ಯಶಸ್ಸು ಸಿಗುವಂತಾಗಬೇಕು ಎಂಬುದು ಅವರ ಹಂಬಲ ವಾಗಿರುತ್ತದೆಯಾದ್ದರಿಂದ, ಸಾಲ ಮಾಡಿಯಾದರೂ ಲಕ್ಷಾಂತರ ರುಪಾಯಿಯಷ್ಟು ಶಾಲಾ ಶುಲ್ಕ ವನ್ನು ಕಟ್ಟುತ್ತಾರೆ.
ಆದರೆ ವಾಸ್ತವದಲ್ಲಿ ಸ್ವಾಭಾವಿಕ ಶಿಕ್ಷಣ ಪದ್ಧತಿ ಕಾಣೆಯಾಗಿ, ಕೇವಲ ಅಂಕಗಳಿಕೆಗೆ ಪ್ರಾಮುಖ್ಯ ನೀಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇವೆಲ್ಲವನ್ನೂ ಸರಿದೂಗಿಸಲು ಸರಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಅವರ ನೇಮಕಾತಿಯೂ ಅಷ್ಟಾಗಿ ನಡೆಯುತ್ತಿಲ್ಲ. ಸಾವಿರಾರು ಹುದ್ದೆಗಳು ಖಾಲಿಯಿದ್ದರೂ, ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದರೂ ಗುಣಮಟ್ಟದ ಫಲಿತಾಂಶದ ಅಪೇಕ್ಷೆ ಮಾತ್ರ ನಿಂತಿಲ್ಲ!
ಇತ್ತ ಖಾಸಗಿ ಶಾಲೆಗಳಲ್ಲೂ ನುರಿತ/ಅನುಭವಿ ಹಾಗೂ ಕ್ರಿಯಾಶೀಲ ಶಿಕ್ಷಕರ ಕೊರತೆ ಮೊದಲಿ ನಿಂದಲೂ ಕಾಡುತ್ತಿದೆ. ಬಹುತೇಕ ಶಿಕ್ಷಕರ ತರಬೇತಿ ಸಂಸ್ಥೆಗಳು ಈಗಲೂ ಓಬೀರಾಯನ ಕಾಲದ ತರಬೇತಿಯನ್ನೇ ನೀಡುತ್ತಿವೆ. ಹೀಗಿರುವಾಗ ಗುಣಮಟ್ಟದ ಶಿಕ್ಷಕರು ಎಲ್ಲಿಂದ ಹೊಮ್ಮಬೇಕು! ಬದುಕಿನಲ್ಲಿ ಯಾವುದೇ ಕಠಿಣ ಸನ್ನಿವೇಶ ಎದುರಾದರೂ ಅದನ್ನು ಹೇಗೆ ಸಮರ್ಥವಾಗಿ ಎದುರಿಸಬೇಕೆಂದು ಮಕ್ಕಳಿಗೆ ತಿಳಿಹೇಳಿ ಆತ್ಮವಿಶ್ವಾಸ ತುಂಬಬೇಕಾದ ಶಿಕ್ಷಕರಲ್ಲೇ ಆತ್ಮವಿಶ್ವಾಸದ ಕೊರತೆ ಮತ್ತು ಮೈಗಳ್ಳತನ ಎದ್ದುಕಂಡರೆ, ಮಕ್ಕಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸ ಹೇಗೆ ತಾನೇ ರೂಪುಗೊಂಡೀತು? ವಾಸ್ತವದಲ್ಲಿ ಉದ್ಯೋಗಿಯೊಬ್ಬರು, ‘ಇನ್ನು ಜೀವನದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ವೈದ್ಯಕೀಯ ಚಿಕಿತ್ಸೆಯನ್ನು ಅವಲಂಬಿಸಿಯೇ ದಿನ ದೂಡಬೇಕಿದೆ’ ಎಂದಾದಾಗ ಮಾತ್ರವೇ, ಅಂಥವರು ವೈದ್ಯರ ಪ್ರಮಾಣಪತ್ರದ ಮೇರೆಗೆ ಉದ್ಯೋಗದಿಂದ ಬಿಡುಗಡೆ ಹೊಂದು ವಂತಾಗಬೇಕು; ಆದರೆ ಜ್ವರ-ವಾಂತಿ-ಬೇಧಿಯ ನೆಪವೊಡ್ಡಿ, ಆತ್ಮವಿಶ್ವಾಸದ ಕೊರತೆ ಮತ್ತು ಬೋಧನಾ ವೈಫಲ್ಯವನ್ನು ಮರೆಮಾಚಿ ಅರ್ಧದಲ್ಲೇ ತೊರೆಯುವುದು ವೃತ್ತಿಗೆ ಮಾಡುವ ಅಪಮಾನವಲ್ಲವೇ? ಒಟ್ಟಾರೆ ಹೇಳುವುದಾದರೆ, ನಾವು ಆಯ್ದುಕೊಂಡ ವೃತ್ತಿ ಯಾವುದೇ ಇರಲಿ, ಅದು ನಮ್ಮ ‘ಆಯ್ಕೆ’ ಆಗಿರಬೇಕೇ ಹೊರತು, ಅದು ‘ಅನಿವಾರ್ಯತೆ’ ಮತ್ತು ‘ಒತ್ತಾಯ’ದಿಂದ ಸೇರಿಕೊಂಡಿರುವಂಥದ್ದು ಆಗಬಾರದು.
ಶಿಕ್ಷಕ ವೃತ್ತಿ ಕೂಡ By Choice ಆಗಿರಬೇಕೇ ವಿನಾ, By Chance ಆಗಿರಬಾರದು. ನಮ್ಮ ‘ಆಯ್ಕೆ’ ಆಗಿದ್ದಾಗ ಮಾತ್ರವೇ ವೃತ್ತಿಯು ನೆಮ್ಮದಿ ಮತ್ತು ತೃಪ್ತಿಯನ್ನು ನೀಡುತ್ತದೆ; ಒಂದೊಮ್ಮೆ ಅದು ‘ಬಲವಂತದ ಮಾಘಸ್ನಾನ’ದಂತೆ ಒತ್ತಾಯದಿಂದ ಅಪ್ಪಿಕೊಂಡಿರುವಂಥದ್ದು ಆಗಿದ್ದರೆ, ಅಂಥ ವೃತ್ತಿಯಿಂದ ನಾವು ಯಾರಿಗೂ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮರೆಯ ಬಾರದು...
(ಲೇಖಕರು ಶಿಕ್ಷಕರು)