Nanjegowda Nanjunda Column: ದೂರದೃಷ್ಟಿಯ ನಾಡದೊರೆ ಕೆಂಪೇಗೌಡರು
ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗೆ 1510ರ ವರ್ಷದಲ್ಲಿ ಯಲಹಂಕದಲ್ಲಿ ಜನಿಸಿದ ಇವರಿಗೆ, ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಅವರು ಜನಿಸಿದ ಕಾರಣಕ್ಕೆ ಹೆತ್ತವರು ‘ಕೆಂಪ’, ‘ಕೆಂಪಯ್ಯ’, ‘ಕೆಂಪಣ್ಣ’ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ.


ತನ್ನಿಮಿತ್ತ
ನಂಜೇಗೌಡ ನಂಜುಂಡ
ಯಲಹಂಕ ನಾಡಪ್ರಭುಗಳ ವಂಶಕ್ಕೆ ಸೇರಿದ, ದೂರದೃಷ್ಟಿಯ ಮತ್ತು ಮೇಧಾವಿ ದೊರೆ ಕೆಂಪೇ ಗೌಡರು ಪರಹಿತ ಚಿಂತಕರು. ಬೆಂಗಳೂರಿನ ಸ್ಥಾಪನೆಗೆ ೧೫೩೭ನೇ ಇಸವಿಯಲ್ಲೇ ನಾಂದಿ ಹಾಡಿ, ವಿಶ್ವದ ಅದ್ಭುತ ನಗರವನ್ನಾಗಿ ಇದನ್ನು ನಿರ್ಮಿಸಿ, ಸರ್ವರಿಗೂ ಸೂರು, ಉದ್ಯೋಗ, ವ್ಯವಹಾರದ ಅವಕಾಶ ಕಲ್ಪಿಸಿ ಮಾದರಿ ದೊರೆಯಾಗಿ ಸೇವೆ ಸಲ್ಲಿಸಿದ ಮಹನೀಯರು ಅವರು.
ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗೆ 1510ರ ವರ್ಷದಲ್ಲಿ ಯಲಹಂಕದಲ್ಲಿ ಜನಿಸಿದ ಇವರಿಗೆ, ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಅವರು ಜನಿಸಿದ ಕಾರಣಕ್ಕೆ ಹೆತ್ತವರು ‘ಕೆಂಪ’, ‘ಕೆಂಪಯ್ಯ’, ‘ಕೆಂಪಣ್ಣ’ ಎಂಬ ಹೆಸರಿನಿಂದ ಕರೆಯು ತ್ತಿದ್ದರಂತೆ.
ಕೆಲ ಕಾಲದ ನಂತರ ಕೆಂಪನಂಜೇಗೌಡರಿಗೆ ಮುಪ್ಪು ಆವರಿಸಿದಾಗ, ಮಗ ಕೆಂಪೇಗೌಡರಿಗೆ ರಾಜ್ಯ ವಾಳುವ ಎಲ್ಲಾ ಅರ್ಹತೆಯಿದೆಯೆಂದು ತಿಳಿದು 1531ರಲ್ಲಿ ನಾಡಪ್ರಭುಗಳ ಅಧಿಕಾರ ವಹಿಸಿ ಕೊಟ್ಟರು. ವಿಜಯನಗರದ ಅರಸರು ಹಿಂದಿನಿಂದಲೂ ತಮ್ಮ ವಂಶಸ್ಥರ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಂಡ ಕೆಂಪೇಗೌಡರು ಉಳಿದ ಸಾಮಂತರಂತೆ ಸ್ವತಂತ್ರರಾಗಲು ಒಪ್ಪದೆ, ವಿಜಯನಗರ ಸಾಮ್ರಾಜ್ಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರಿಸಿದರು.
ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಧ್ವನಿವರ್ಧಕ ವ್ಯವಸ್ಥೆ
ಆಂಧ್ರದ ಹಲವು ಗಡಿಭಾಗಗಳು ಮತ್ತು ತಮಿಳುನಾಡಿನ ಡೆಂಕಣಿಕೋಟೆಯವರೆಗೆ ಹಬ್ಬಿದ್ದ ಕೆಂಪೇ ಗೌಡರ ಆಳ್ವಿಕೆಯು ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿಜಯನಗರದ ಸಾಮಂತ ರಲ್ಲಿ, ಪಾಳೇಗಾರರಲ್ಲಿ ಕೆಂಪೇಗೌಡರ ಸೇವೆ ಬಹಳ ಪ್ರಮುಖವಾದದ್ದು. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ 1565ರ ರಕ್ಕಸತಂಗಡಿ ಅಥವಾ ತಾಳಿಕೋಟೆ ಯುದ್ಧದಲ್ಲಿ ಅವರು ತಮ್ಮ ಸೈನ್ಯ ಸಮೇತ ಹೋರಾಟ ಮಾಡಿದ್ದು ಮರೆಯಲಾಗದ ಇತಿಹಾಸ. ಈ ಯುದ್ಧದಲ್ಲಿ ಕೆಂಪೇಗೌಡರ ಪುತ್ರರಾದಿಯಾಗಿ ಸುಮಾರು 2000ದಷ್ಟು ಸೈನಿಕರು ವಿಜಯನಗರದ ಪರವಾಗಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ.

ಆದರೆ ವಿಜಯನಗರವು ದಖನ್ನಿನ ಸುಲ್ತಾನರಿಂದ ನಿರ್ನಾಮವಾಗಿದ್ದು, ಜತೆಗೆ ಈ ಯುದ್ಧದಲ್ಲಿ ಬಂಧುಗಳು, ಸೈನಿಕರು ಸಾವನ್ನಪ್ಪಿದ್ದು ಕೆಂಪೇಗೌಡರ ಮನಸ್ಸಿನಲ್ಲಿ ಅಳಿಸಲಾರದ ನೋವನ್ನು ಉಂಟುಮಾಡುತ್ತದೆ. ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು ಐಟಿ-ಬಿಟಿ ಕಂಪನಿಗಳ ತವರೆನಿಸಿಕೊಂಡಿರುವ ಬೆಂಗಳೂರು, ಕೆಂಪೇಗೌಡರ ಕಾಲದಲ್ಲೂ ವಾಣಿಜ್ಯ ಕೇಂದ್ರವಾಗಿತ್ತು.
ಇವರ ಅಧಿಕಾರಾವಧಿಯಲ್ಲಿ ವೃತ್ತಿಯ ಹೆಸರಲ್ಲಿ 54 ಪೇಟೆಗಳನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರ ಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆಪೇಟೆ, ಹಳೇತರುಗುಪೇಟೆ, ಹೊಸ ತರುಗುಪೇಟೆ, ಸುಣಕಲ್ಪೇಟೆ, ಕುರುಬರಪೇಟೆ, ಕುಂಚಟಿಗರ ಪೇಟೆ, ಮುತ್ಯಾಲಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ತಾರಾಮಂಡಲಪೇಟೆ, ದರ್ಜಿಪೇಟೆ, ಕಲಾರಪೇಟೆ, ಮೇದಾರಪೇಟೆ, ಹಳೆ ಪಟ್ನೂಲು ಪೇಟೆಗಳು ನಗರದ ಜೀವನಾಡಿಯಾಗಿದ್ದವು.
ದೊಡ್ಡ ಪೇಟೆ ರಾಜಕಾರಣಕ್ಕೆ, ಚಿಕ್ಕಪೇಟೆ ವ್ಯಾಪಾರಕ್ಕೆ ಸೀಮಿತವಾಗಿದ್ದವು. ಎಲ್ಲ ಜಾತಿ- ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟ ಅವರ ಸರ್ವಧರ್ಮ ಸಹಿಷ್ಣುತೆಯು ಪ್ರಜೆಗಳ ಮನಗೆದ್ದಿತ್ತು. ಬೆಂಗಳೂರಿಗೆ ನದಿಮೂಲಗಳಿರಲಿಲ್ಲ. ಹೀಗಾಗಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು ಕೆರೆ, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ಕೆಂಪೇಗೌಡರು ನಿರ್ಮಿಸಿದ್ದರು.
ಅವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಎನ್ನಲಾಗಿದೆ. ಇನ್ನು, ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸುವ ಮೂಲಕ ಕೆಂಪೇಗೌಡರು ತಮ್ಮ ದೈವಭಕ್ತಿಯನ್ನು ತೋರ್ಪಡಿಸಿದ್ದರು.
ಹೊಯ್ಸಳ ದೊರೆ ಬಿಟ್ಟಿದೇವನ (ವಿಷ್ಣುವರ್ಧನನ) ಪತ್ನಿ ಶಾಂತಲೆಯು, ದೇವರಸಗೌಡನ ಕಾಲಕ್ಕೆ ಹೆಸರು ಮಾಡಿದ್ದ ಶಿವಗಂಗೆಯ ಬೆಟ್ಟದ ಮೇಲಿಂದ ಬಿದ್ದಳೆಂಬ ಐತಿಹ್ಯವಿದೆ. ಆದರೂ ಆಗಿನ ಕಾಲದಲ್ಲಿ ಬೆಟ್ಟವನ್ನೇರುವುದು ಬಹಳ ಪ್ರಯಾಸಕರವಾಗಿತ್ತು. 1550ರಲ್ಲಿ ಶಿವಗಂಗೆಯನ್ನು ವಶ ಪಡಿಸಿಕೊಂಡ ಕೆಂಪೇಗೌಡರು ಇಲ್ಲಿನ ಕುಂದುಕೊರತೆಗಳತ್ತ ಗಮನಹರಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ಕೆಂಪೇಗೌಡರು ಸರ್ವ ಧರ್ಮ-ಜಾತಿಯವರನ್ನು ಸಮಭಾವದಿಂದ ಕಂಡ ಧೀಮಂತ ಆಡಳಿತಗಾ ರರು. ಬೆಂಗಳೂರನ್ನು ‘ಸರ್ವಜನಾಂಗದ ಶಾಂತಿಯ ತೋಟ’ದಂತೆ ನಿರ್ಮಾಣ ಮಾಡಿ, ಉದ್ಯೋಗ ಮತ್ತು ವ್ಯವಹಾರದ ಅವಕಾಶಗಳನ್ನು ಕಲ್ಪಿಸುವ ಮೂಲಕ ಇದನ್ನು ಪ್ರಪಂಚದ ಮೆಚ್ಚಿನ ನಗರವಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.
(ಲೇಖಕರು ಒಕ್ಕಲಿಗ ಯುವ ಬ್ರಿಗೇಡ್ನ
ಸಂಸ್ಥಾಪಕ ಅಧ್ಯಕ್ಷರು)