ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಆರೋಗ್ಯವಂತರಾಗಿರಲು ಹೀಗಿರಲಿ ನೀವಾಡುವ ಮಾತು !

‘ಪರುಷ’ ಎಂದರೆ ಕಠೋರವಾದ ಮಾತುಗಳು. ಬೇರೆಯವರ ಮನಸ್ಸನ್ನು ಚುಚ್ಚಿ, ನೋವು ಮಾಡುವಂಥ ಮಾತುಗಳನ್ನು ಪರುಷ ವಚನ ಎಂದು ಹೇಳಬಹುದು. ವಿಷಯ ಎಂಥದ್ದೇ ಇರಲಿ, ಅದರಿಂದ ನಮಗೆ ಎಷ್ಟೇ ಅಸಮಾಧಾನವಿರಲಿ, ಅದನ್ನು ವ್ಯಕ್ತಪಡಿಸುವಾಗ ಬೇರೆಯವರಿಗೆ ನೋವನ್ನು ತರದ ರೀತಿಯಲ್ಲಿ ಮಾತನಾಡುವ ಪ್ರಯತ್ನವು ಸದಾ ನಮ್ಮದಾಗಿರಲಿ.

ಆರೋಗ್ಯವಂತರಾಗಿರಲು ಹೀಗಿರಲಿ ನೀವಾಡುವ ಮಾತು !

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

drsadhanashree@gmail.com

ಸ್ನೇಹಿತರೇ, ಆಯುರ್ವೇದವು ‘ವ್ಯಾಧಿ’ ಗೆ ಹಲವಾರು ಸಮಾನಾರ್ಥಕ ಪದಗಳನ್ನು ನೀಡಿದೆ! ಅದರಲ್ಲಿ ಬಹಳ ಮುಖ್ಯವಾದದ್ದು- ‘ಪಾಪ್ಮಾ’! ಹೌದು, ಆಯುರ್ವೇದವು ರೋಗವನ್ನು ‘ಪಾಪ್ಮಾ’ ಎಂದು ಕರೆದಿದೆ. ಕಾರಣ, ನಮ್ಮ ಪಾಪಕರ್ಮಗಳ ಫಲವೇ ರೋಗ ಅಥವಾ ವ್ಯಾಧಿಯ ಸ್ಥಿತಿ. “ಸದಾ ಸ್ವಸ್ಥರಾಗಿರಲು ಕೇವಲ ನಮ್ಮ ದೇಹದ ಕಾಳಜಿ ಮಾಡಿದರೆ ಸಾಲದು.

ಬದಲಿಗೆ, ತ್ರಿವಿಧ ಪಾಪಕರ್ಮಗಳಿಂದ ದೂರವಿರಬೇಕು" ಎಂದು ನಮ್ಮ ಆರ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಅವುಗಳು- ಕಾಯಿಕ, ವಾಚಿಕ ಮತ್ತು ಮಾನಸಿಕ. ಅಂದರೆ, ನಮ್ಮ ಶರೀರ, ಮಾತು ಮತ್ತು ಮನಸ್ಸಿನ/ಯೋಚನೆಗಳ ಮೂಲಕ ಮಾಡುವ ಪಾಪಕರ್ಮಗಳು. ಈ ಪಾಪಕರ್ಮಗಳಲ್ಲಿ ವಾಗ್ಭಟಾಚಾರ್ಯರು ವಾಚಿಕ ಪಾಪಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು, ಮಾತುಗಳ ಮೂಲಕ ಆಗುವ ನಾಲ್ಕು ರೀತಿಯ ಪಾಪಗಳನ್ನು ನಿಷೇಧಿಸಿದ್ದಾರೆ. ಅವುಗಳೆಂದರೆ ಪೈಶುನ್ಯ, ಪರುಷ, ಅನೃತ ಮತ್ತು ಸಂಭಿನ್ನಾಲಾಪ.

‘ಪೈಶುನ್ಯ’ ಎಂದರೆ ಒಬ್ಬ ವ್ಯಕ್ತಿಯ ಬೆನ್ನ ಹಿಂದೆ ಅವನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಅವನ ಬಗ್ಗೆ ಸುಳ್ಳು ವಿಷಯವನ್ನು ಹರಡುವುದು. ವಾಸ್ತವದ ವಿರುದ್ಧವಾಗಿ ಮಾತನಾಡಿ ಮತ್ತೊಬ್ಬರ ಚಾರಿತ್ಯಹರಣ ಮಾಡುವುದು ಪೈಶುನ್ಯ. ಯಾವುದಾದರೂ ವ್ಯಕ್ತಿಯ ಮೇಲೆ ನಮಗೆ ಸ್ವಲ್ಪ ಬೇಜಾರು ಅಥವಾ ಸಿಟ್ಟು ಬಂದರೆ ನಾವು ತಕ್ಷಣವೇ ಮಾಡುವುದು ಈ ಪೈಶುನ್ಯದ ಪಾಪ ಕರ್ಮವನ್ನು. ಆದರೆ, ಜೋಕೆ! ಮುಂದೊಂದು ದಿನ ಇದು ನಮಗೆ ಗಂಡಾಂತರಕಾರಿ ಆಗಬಹುದು!

‘ಪರುಷ’ ಎಂದರೆ ಕಠೋರವಾದ ಮಾತುಗಳು. ಬೇರೆಯವರ ಮನಸ್ಸನ್ನು ಚುಚ್ಚಿ, ನೋವು ಮಾಡು ವಂಥ ಮಾತುಗಳನ್ನು ಪರುಷ ವಚನ ಎಂದು ಹೇಳಬಹುದು. ವಿಷಯ ಎಂಥದ್ದೇ ಇರಲಿ, ಅದರಿಂದ ನಮಗೆ ಎಷ್ಟೇ ಅಸಮಾಧಾನವಿರಲಿ, ಅದನ್ನು ವ್ಯಕ್ತಪಡಿಸುವಾಗ ಬೇರೆಯವರಿಗೆ ನೋವನ್ನು ತರದ ರೀತಿಯಲ್ಲಿ ಮಾತನಾಡುವ ಪ್ರಯತ್ನವು ಸದಾ ನಮ್ಮದಾಗಿರಲಿ.

ಇದನ್ನೂ ಓದಿ: Dr Sadhanashree Column: ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !

‘ಅನೃತ’ ಎಂದರೆ ಸುಳ್ಳು ಮಾತು. ವಾಸ್ತವಕ್ಕೆ ದೂರವಾದ/ನಾವೇ ಸಂಯೋಜಿಸಿರುವ/ವಸ್ತುಸ್ಥಿತಿಗೆ ವಿರುದ್ಧವಾಗಿರುವ ಮಾತುಗಳು ಅಸತ್ಯದ ಮಾತುಗಳು. ‘ಸಂಭಿನ್ನಾಲಾಪ’ ಎಂದರೆ ಅಸಂಬದ್ಧ ವಾದ/ನಮಗೆ ಸಂಬಂಧಪಡದ ವಿಷಯಗಳನ್ನು, ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಮಾತನಾಡುವುದು. ‘ಗಾಸಿಪ್’ಗಳು ಬಹಳ ಜನಕ್ಕೆ ಬಹಳ ಪ್ರಿಯವಾದ ಕೆಲಸ.

ಫೋನ್/ಮೆಸೇಜ್‌ಗಳಲ್ಲಿ, ಪಾರ್ಟಿಗಳಲ್ಲಿ ಬಹಳಷ್ಟು ಮಂದಿ ಮಾಡುವ ಪಾಪವೆಂದರೆ ಸಂಭಿನ್ನಾಲಾಪ! ಬಹುಶಃ ನಮ್ಮ ದಿನನಿತ್ಯದ ಜೀವನದಲ್ಲಿ ಬಹುತೇಕರು ಈ ಮೇಲಿನ ಪಾಪ ಗಳನ್ನು ನಿರಂತರವಾಗಿ ಮಾಡಿ ಅದರ ಫಲವನ್ನು ಅನುಭವಿಸುತ್ತಿರುತ್ತೇವೆ. ಈ ರೀತಿಯ ಪಾಪಗಳು ಸಂಚಿತವಾಗಿ ಅದು ಮುಂದೊಮ್ಮೆ ಒಂದು ವ್ಯಾಧಿಯ ರೂಪವನ್ನು ತಾಳಿ ನಮ್ಮನ್ನು ಬಾಧಿಸಲು ಪ್ರಾರಂಭಿಸುತ್ತದೆ.

ಹಾಗಾಗಿ, ಸ್ವಾಸ್ಥ್ಯವನ್ನು ಸದಾ ಕಾಪಾಡಿಕೊಳ್ಳಲು ಬರೀ ದೇಹನ್ನಷ್ಟೇ ಅಲ್ಲದೇ ನಮ್ಮ ಮಾತುಗಳ ಮೇಲೆಯೂ ನಮಗೆ ಅತಿ ಹೆಚ್ಚಿನ ನಿಗಾ ಇರಬೇಕು. ಸದಾ ನಮಗೂ ಸ್ವಾಸ್ಥ್ಯದ ದಾರಿಯನ್ನು ತೋರಿಸುವ ಹಾಗೂ ಪರರಿಗೂ ಹಿತದ ಅನುಭವವನ್ನು ನೀಡುವ ನಮ್ಮ ಮಾತುಗಳು ಹೇಗಿರಬೇಕು ಎಂಬುದರ ಬಗ್ಗೆ ಆಯುರ್ವೇದವು ಸವಿಸ್ತಾರವಾಗಿ ಹೇಳಿದೆ.

ಅದನ್ನು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಶಾಸ್ತ್ರವು ಹೇಳುತ್ತದೆ, ಹೀಗಿದ್ದರೆ ನಿಮ್ಮ ಮಾತು ಸದಾ ಚೆಂದ ಅಂತ: ಕಾಲೇ ಹಿತಂ ಮಿತಂ ಬ್ರೂಯಾತ್ ಅವಿಸಂವಾದಿ ಪೇಶಲಮ್| ಪೂರ್ವಾಭಿಭಾಷೀ ..||

ಕಾಲೇ ಬ್ರೂಯಾತ್: ಹೀಗೆಂದರೆ ಸಕಾಲದಲ್ಲಿ ಆಡುವ ಸರಿಯಾದ ಮಾತು. ಈ ರೀತಿಯ ಮಾತು ಗಳನ್ನಾಡುವವರು, ತಮ್ಮ ಎಲ್ಲಾ ಕಾರ್ಯಗಳಲ್ಲೂ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಅಕಾಲಿಕವಾಗಿ ಆಡುವ ಮಾತುಗಳಿಂದ ನಾವು ಹಲವಾರು ಬಾರಿ ನೋವನ್ನು, ದುಃಖವನ್ನು ಅನುಭವಿಸುವುದೇ ಹೆಚ್ಚು. ಗಡಿಬಿಡಿಯಲ್ಲಿ ಹೊರಗೆ ಹೊರಡುತ್ತಿರುವಾಗ, ಎಲ್ಲಿಗೆ? ಏತಕ್ಕೆ? ಎಂಬ ಅಕಾಲಿಕ ಪ್ರಶ್ನೆಗಳು ನಮಗೆ ಕೋಪವನ್ನು ತರಬಹುದು. ಅದೇ ರೀತಿಯಲ್ಲಿ, ಆಸ್ಪತ್ರೆ ಯಿಂದ ಚಿಕಿತ್ಸೆ ಪಡೆದು ಹೊರಡುತ್ತಿರುವ ರೋಗಿಗೆ ’ಮತ್ತೆ ಬನ್ನಿ’ ಎಂಬ ಮಾತು ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡಬಹುದು.

ಸಂಸಾರದ ಜೀವನವನ್ನು ಸುಖವಾಗಿರಿಸಿಕೊಳ್ಳಲು ಸಕಾಲದ ಮಾತುಗಳನ್ನು ಆಡುವ ಕಲೆಯನ್ನು ಕಲಿಯಲೇಬೇಕು. ನಾನು ಯಾರ ಮುಂದೆ ಮಾತನಾಡುತ್ತಿದ್ದೇನೆ, ಎಲ್ಲಿದ್ದೇನೆ, ಎಷ್ಟು ಮಾತನಾಡ ಬೇಕು, ಯಾವುದು ಮಾತನಾಡಿದರೆ ಸರಿ, ಯಾವುದು ತಪ್ಪು ಎಂಬ ಅರಿವಿಲ್ಲದೆ ಮನಸ್ಸಿಗೆ ಬಂದಂತೆ ಮಾತನಾಡುವ ವ್ಯಕ್ತಿಯು ಜನರ ಮಧ್ಯದಲ್ಲಿ ಆಭಾಸಕ್ಕೀಡಾಗುತ್ತಾನೆ.

ಹಿತಂ ಬ್ರೂಯಾತ್: ಹೀಗೆಂದರೆ ಹಿತವಾದ ಮಾತನ್ನು ಪರರಿಗೆ ಹಿತವೆನಿಸುವ ರೀತಿಯಲ್ಲಿ ಆಡಬೇಕು. ಮಾತನಾಡುವಾಗ ವ್ಯಕ್ತಿ ಹಿತ ಹಾಗೂ ಸಮಷ್ಟಿ ಹಿತ- ಇವೆರಡನ್ನೂ ಅರ್ಥಮಾಡಿ ಕೊಂಡು ಆಡಿದರೆ ಅದು ಅತ್ಯಂತ ಸಫಲವಾಗುತ್ತದೆ. ಆಡಿದ ಒಂದು ಶಬ್ದದ ಪರಿಣಾಮ ಎಲ್ಲಿಯ ವರೆಗೆ ಆಗಬಹುದು ಎಂಬ ದೂರಾಲೋಚನೆಯನ್ನು ಮಾಡಿ ನಂತರ ಆ ಪದವನ್ನು ಬಳಸುವುದು ಕ್ಷೇಮ.

ಯಾವ ಮಾತನ್ನು ನಾವು ಆಡುವುದರಿಂದ ನಮಗೂ, ಇತರ ಎಲ್ಲರಿಗೂ ಯಾವುದೇ ಶಾರೀರಿಕ, ವಾಚಿಕ ಅಥವಾ ಮಾನಸಿಕ ನೋವು ಉಂಟಾಗುವುದಿಲ್ಲವೋ ಅಂಥ ಮಾತನ್ನೇ ಸದಾ ಆಡಬೇಕು. ಹಿತವಾದ ನುಡಿಗಳ ಜತೆಗೆ ನಾವು ಆಡಿದ ಮಾತು ಸದಾ ಪ್ರಯೋಜನಕಾರಿಯಾಗಿರಬೇಕು ಎಂಬ ಅರಿವಿದ್ದರೆ ಉತ್ತಮ..

‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್’- ಅಂದರೆ, ಎಂದಿಗೂ ಪ್ರಿಯವಾದ ಸತ್ಯವನ್ನೇ ಹೇಳಬೇಕು. ಅಪ್ರಿಯವಾದ ಸತ್ಯವನ್ನು ನುಡಿಯಬಾರದು. ಪ್ರಿಯವಾಗಿದ್ದರೂ ಸುಳ್ಳನ್ನು ಹೇಳಬಾ ರದು ಎಂಬುದು ನಮ್ಮ ಸನಾತನೀಯ ಧರ್ಮದ ಮಾತು. ಹಾಗಾದರೆ, ತಿಳಿದೂ ಅಪ್ರಿಯವಾದ ಸತ್ಯವನ್ನು ಹೇಳದೆ ಇರುವುದು ತಪ್ಪಾಗುವುದಲ್ಲವೇ ಎಂಬ ಸಂಶಯ ಸಹಜವಾಗಿಯೇ ಹುಟ್ಟುತ್ತದೆ. ‘ಅಪ್ರಿಯಂ ಸತ್ಯಂ ನ ಬ್ರೂಯಾತ್’- ಅಂದರೆ ಅಪ್ರಿಯ ವಾದ ಸತ್ಯವನ್ನು ಹೇಳಬಾರದು. ಅದೇ ರೀತಿ ‘ಸತ್ಯಂ ಬ್ರೂಯಾತ್’- ಅಂದರೆ ಸದಾ ಸತ್ಯವನ್ನೇ ಹೇಳಬೇಕು.

ನಾವು ಇವೆರಡೂ ತತ್ತ ಗಳನ್ನು ಪಾಲಿಸಬಹುದಾದ ಏಕೈಕ ವಿಧಾನವೆಂದರೆ- ಅಪ್ರಿಯವಾದ ಸತ್ಯ ವನ್ನು ಪ್ರಿಯವಾಗುವ ರೀತಿಯಲ್ಲಿ ಅಥವಾ ಅದರಿಂದ, ಕೇಳಿದ ವ್ಯಕ್ತಿಗೆ ಯಾವುದೇ ರೀತಿಯ ನೋವು ಉಂಟಾಗದೇ ಇರುವಂತೆ ಹೇಳಬೇಕು ಎಂಬುದು ಇದರರ್ಥ. ಇದನ್ನು ನಾವು ನಮ್ಮ ಜೀವನದಲ್ಲಿ ಪಾಲಿಸಿದ್ದೇ ಆದರೆ ಅನೇಕ ಸಂಕಷ್ಟಕರ ಪರಿಸ್ಥಿತಿಯಿಂದ ಸುಲಭವಾಗಿ ಪಾರಾಗ ಬಹುದು.

ಅಕ್ಬರ್-ಬೀರಬಲ್ಲರ ಕತೆ ನಮ್ಮೆಲ್ಲರಿಗೂ ಗೊತ್ತಿರಲೇಬೇಕು. ‘ನಿಮ್ಮ ಮಕ್ಕಳು ಇನ್ನು ಕೆಲವೇ ವರ್ಷ ಗಳಲ್ಲಿ ಸಾಯುತ್ತಾರೆ’ ಎಂಬ ಅಪ್ರಿಯವಾದ ಸತ್ಯದ ಮಾತನ್ನು ಹೇಳುವ ಬದಲಿಗೆ ‘ನೀವು ನಿಮ್ಮ ಮಕ್ಕಳಿಗಿಂತ ಹೆಚ್ಚು ಕಾಲ ಬಾಳುತ್ತೀರಿ’ ಎಂಬ ಮಾತಿನ ಪರಿಣಾಮದಗುವ ಅಗಾಧ ವ್ಯತ್ಯಾಸವನ್ನು ಈ ಕತೆ ಸಾರುತ್ತದೆ.

ಮಿತಂ ಬ್ರೂಯಾತ್: ‘ತಲೆಯೆ ಹರಟಬೇಡ’ ಎಂದು ಮೊಮ್ಮಕ್ಕಳಿಗೆ ಬಯ್ಯುತ್ತಿದ್ದ ನಮ್ಮ ಅಜ್ಜಿಯ ಮಾತು ನನಗೆ ಸದಾ ನೆನಪಿಗೆ ಬರುತ್ತದೆ. ಅತಿಯಾಗಿ ಮಾತನಾಡುವವರನ್ನು ಹಿರಿಯರು ಎಂದಿಗೂ ಮೆಚ್ಚುತ್ತಿರಲಿಲ್ಲ. ಅತಿಯಾದ ಮಾತು ವಿಷಯಗಳ ಗಾಂಭೀರ್ಯವನ್ನು ಕುಗ್ಗಿಸುತ್ತದೆ. ಜತೆಗೆ, ಅತಿಯಾದ ಮಾತು ಯಾವಾಗಲೂ ಪರರಿಗೆ ಕಿರಿಕಿರಿಯೆನಿಸುತ್ತದೆ.

ಸಾಮಾನ್ಯವಾಗಿ, ಕಾಲೇಜುಗಳಲ್ಲಿ ರಗಳೆ ಮೇಷ್ಟ್ರು ಬಂದಾಗ, “ಅಯ್ಯೋ ಮಾರಾಯ, ಇನ್ನು ಇವರ ಕೊರೆತ ಆರಂಭವಾದರೆ ದೇವರೇ ಗತಿ" ಎಂಬ ವಿದ್ಯಾರ್ಥಿಗಳ ಮಾತನ್ನು ಕೇಳಿಯೇ ಇರುತ್ತೇವೆ. ಇಂದಿನ ಈ ಆಧುನಿಕ ಜೀವನದಲ್ಲಿ ಜನರಿಗೆ ಸಮಯವೆಲ್ಲಿದೆ? ಆದ್ದರಿಂದ ನಾವು ಹೇಳಬೇಕಾದ ವಿಷಯವನ್ನು ಸ್ಪಷ್ಟವಾಗಿ, ಸರಿಯಾಗಿ, ಅತಿ ಕಡಿಮೆ ಶಬ್ದಗಳಲ್ಲಿ ಹೇಳಿದರೆ ಅದು ಎಲ್ಲರಿಗೂ ಹಿತವನ್ನು ಉಂಟುಮಾಡುವುದು ನಿಶ್ಚಿತ.

ಅಭಿಸಂವಾದಿ ಬ್ರೂಯಾತ್: ಹೀಗೆಂದರೆ, ಸದಾ ಸತ್ಯವನ್ನೇ ನುಡಿಯಬೇಕು. ಸಾಲಗಾರನ ಕರೆಗಳಿಗೆ ಹೆದರಿ ಮನೆಯೊಳಗಿದ್ದ ತಂದೆಯು ಮಗನ ಮೂಲಕ ಹೇಳಿ ಕಳುಹಿಸಿದರಂತೆ- ‘ಅಪ್ಪ ಇಲ್ಲ ಎಂದು ಹೇಳು’ ಅಂತ! ‘ಅಪ್ಪ ಇಲ್ಲ ಎಂದು ಹೇಳು ಅಂತ ಅಪ್ಪ ಹೇಳಿದ್ದಾರೆ’ ಎಂದನಂತೆ ಮಗ. ಆಗಲಿಲ್ಲವೇ ಅಪಮಾನ? ಸ್ನೇಹಿತರೆ, ಈ ಸುಳ್ಳಿನ ಕಥೆಯೇ ಅಷ್ಟು.

ಸುಳ್ಳಿಗೊಂದು ಸುಳ್ಳನ್ನು ಸೇರಿಸಿ ಸುಳ್ಳಿನ ಸರಮಾಲೆಯನ್ನೇ ಕಟ್ಟಬೇಕಾಗುತ್ತದೆ. ಆದರೆ ಸುಳ್ಳನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಇಲ್ಲ. ಸುಳ್ಳಿನಿಂದ ನಾವು ಕಟ್ಟಿಕೊಂಡ ಬದುಕಲ್ಲಿ ಎಂದಿಗೂ ಸುಖ ವನ್ನು ಮತ್ತು ಸ್ವಾಸ್ಥ್ಯವನ್ನು ಅನುಭವಿಸಲು ಸಾಧ್ಯವೇ ಇಲ್ಲ. ತಾತ್ಕಾಲಿಕವಾಗಿ ಸುಳ್ಳು ನಮ್ಮನ್ನು ಕಷ್ಟದಿಂದ ದೂರ ಮಾಡಿದರೂ ಪರಿಣಾಮದಲ್ಲಿ ಸತ್ಯವೇ ನಮಗೆ ಪರಮ ಸುಖವನ್ನು ನೀಡುವುದು ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು.

ಪೇಷಲಮ್ ಬ್ರೂಯಾತ್: ಹೀಗೆಂದರೆ, ನಾವು ಆಡುವ ಮಾತುಗಳು ಸದಾ ಮನೋಜ್ಞವಾಗಿ ಮತ್ತು ಮಧುರವಾಗಿ ಇರಬೇಕು. ನಾವು ಹೇಳುವುದನ್ನು ಸುಂದರವಾಗಿ, ಸ್ಪಷ್ಟ ಶಬ್ದಗಳಲ್ಲಿ ಇನ್ನೊಬ್ಬರಿಗೆ ಸಂಪೂರ್ಣ ಅರ್ಥವಾಗುವಂತೆ ಹೇಳುವುದು ಉತ್ತಮ. ಉದಾಹರಣೆಗಳಿಲ್ಲದ, ಅಲಂಕಾರ ರಹಿತ ವಾದ, ಉತ್ತಮ ಶಬ್ದಗಳಿಲ್ಲದ ಮಾತುಗಳು ಕೇಳುಗರ ಮನಸ್ಸಿನಲ್ಲಿ ಒಳ್ಳೆಯ ಪರಿಣಾಮವನ್ನು ಬೀರಲು ಸಾಧ್ಯವಿಲ್ಲ. ಸತ್ಯವನ್ನು ಹೇಳುವುದರ ಜತೆಗೆ ಮಾತುಗಳು ಸುಂದರವಾಗಿಯೂ ಇರಲಿ ಎನ್ನುವುದು ಆಯುರ್ವೇದದ ಅಭಿಮತ.

ಪೂರ್ವಾಭಿಭಾಷಿ: ಈಗಿನ ಕಾಲದಲ್ಲಂತೂ, ನಮಗೆ ಅಕ್ಕ ಪಕ್ಕದ ಮನೆಯವರ ಪರಿಚಯ ಇರುವುದೇ ವಿರಳ. ಯಾವುದಾದರೂ ಸಭೆ-ಸಮಾರಂಭಕ್ಕೆ ಹೋಗಿ ಅಲ್ಲಿ ಕಾಲ ಕಳೆದರೂ, ನಮ್ಮ ಪಾಡಿಗೆ ನಾವು ಮೊಬೈಲ್‌ಗಳ ವೀಕ್ಷಣೆಯಲ್ಲಿ ವ್ಯಸ್ತರಾಗಿರುವುದೇ ಹೆಚ್ಚು.

ಸ್ವಲ್ಪ ವರ್ಷಗಳ ಹಿಂದೆಯಾದರೂ ಟ್ರೇನ್ ನಲ್ಲಿ ಅಥವಾ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಗಂಟೆಗಟ್ಟಲೆ ಹರಟೆ ಹೊಡೆಯುವ ಅಭ್ಯಾಸವಿತ್ತು. ಆದರೆ, ಈಗಂತೂ ಎರಡು ಮೂರು ದಿನಗಳು ಒಟ್ಟಿಗೆ ಪ್ರಯಾಣ ಮಾಡಿದರೂ ಒಬ್ಬರ ಮುಖ ಇನ್ನೊಬ್ಬರಿಗೆ ಬೇಡವಾದ ಪರಿಸ್ಥಿತಿ.

‘ನಮಗೇಕೆ ಇತರರ ಗೊಡವೆ?’ ಎಂಬ ನಿರ್ಲಕ್ಷ್ಯ ಕೆಲವರಿಗಾದರೆ, ‘ಅವರೇ ಬೇಕಾದರೆ ಮಾತನಾಡಿ ಸಲಿ’ ಎಂಬ ಅಹಂಕಾರ ಇನ್ನು ಕೆಲವರಿಗೆ. ಆದರೆ ಆಯುರ್ವೇದ ಹೇಳುತ್ತದೆ- ನಾವೇ ಸವಿನಯ ದಿಂದ ಮೊದಲು ಮಾತನಾಡಿಸಿದರೆ ಅದರಿಂದ ಆಗುವ ಪರಿಣಾಮಗಳು ಬಹಳ ಉತ್ತಮವಾದದ್ದು ಅಂತ. ಹಾಗಾಗಿ, ಪರಿಚಯ ಇಲ್ಲದವರನ್ನು ನಾವೇ ಮೊದಲು ಹೋಗಿ ಪರಿಚಯ ಮಾಡಿಕೊಳ್ಳು ವುದು ಸದಾ ಶ್ರೇಯಸ್ಕರ.

ನಮ್ಮ ನುಡಿಯ ಮೂಲಕ ಸ್ವಾಸ್ಥ್ಯವನ್ನು ಸಂಪಾದಿಸಲು ನೆನಪಿನಲ್ಲಿಟ್ಟುಕೊಳ್ಳಬೇಕಾದಂಥ ಇನ್ನಷ್ಟು ಆಚರಣೆಗಳೆಂದರೆ:

ನಮ್ಮ ಮಾತಿನಲ್ಲಿ ಇನ್ನೊಬ್ಬರ ದೋಷವನ್ನು ಹೇಳಬಾರದು.

ತನ್ನ ಹೊಗಳಿಕೆಯನ್ನು ತಾನೇ ಮಾಡಿಕೊಳ್ಳಬಾರದು.

ಇನ್ನೊಬ್ಬರ ರಹಸ್ಯವನ್ನು ಎಂದಿಗೂ ಹೊರಗೆಡಹಬಾರದು.

ಸಜ್ಜನರಿಗೆ ಮತ್ತು ಗುರುಹಿರಿಯರಿಗೆ ತಿರುಗಿಸಿ ಉತ್ತರಿಸಬಾರದು.

ಅತಿ ಎತ್ತರದ ಸ್ವರದಲ್ಲಿ ಅಥವಾ ಅತಿ ಸಣ್ಣ ಸ್ವರದಲ್ಲಿ ಮಾತನಾಡಬಾರದು.

ಮಾತನಾಡುವಾಗ ಅಹಂಕಾರಿಕ ಮಾತು ಅಥವಾ ಅಟ್ಟಹಾಸದ ನಗು ಒಳ್ಳೆಯದಲ್ಲ.

ಅವಾಚ್ಯ ಮಾತು ಎಂದಿಗೂ ಸಲ್ಲದು.

ಪ್ರಸನ್ನವದನರಾಗಿ ಒಂದು ಒಳ್ಳೆಯ ನಗುವಿನೊಂದಿಗೆ ಸದಾ ಮಾತನಾಡುವ ಪ್ರಯತ್ನವಿರಲಿ!

ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ |

ಹಿತವಿರಲಿ ವಚನದಲಿ ಋತವ ಬಿಡದಿರಲಿ |

ಹಸನೊಂದು ನುಡಿಯಲ್ಲಿ, ನಡೆಯಲ್ಲಿ, ನೋಟದಲಿ |

ಪಸರುತಿರೆ ಬಾಳ್ ಚೆಲುವು ಮಂಕುತಿಮ್ಮ ||