Vishweshwar Bhat Column: ಹಣ ಗಳಿಸುವುದಷ್ಟೇ ಅಲ್ಲ, ಉಳಿಸುವುದೂ ಒಂದು ಕಲೆ !
ಹತ್ತು ರುಪಾಯಿಗೆ ಐನೂರು ರುಪಾಯಿ ಕೊಡುವಷ್ಟು ನಾನು ಶ್ರೀಮಂತನಿದ್ದಿರಬಹುದು. ಆದರೆ, ಅಷ್ಟು ಮೂರ್ಖನಲ್ಲ. ನಾನು ಅಂದು ಆ ಹೋಟೆಲ್ನಿಂದ ಎದ್ದು ಬಂದ ಪ್ರಸಂಗಕ್ಕೆ ಒಬ್ಬೊಬ್ಬರು ಒಂದೊಂ ದು ರೀತಿಯಲ್ಲಿ ಪ್ರತಿಕ್ರಿಯಿಸಿರಬಹುದು. ಅಂಬಾನಿ ಜುಗ್ಗ ಎನ್ನಬಹುದು, ನನಗೆ ಸ್ವಲ್ಪವೂ ವಿಷಾದ ವಿಲ್ಲ. ಇಂದಿಗೂ ಆ ನನ್ನ ನಿರ್ಧಾರದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ.


ನೂರೆಂಟು ವಿಶ್ವ
vbhat@me.com
ಒಮ್ಮೆ ಧೀರೂಭಾಯಿ ಅಂಬಾನಿ ಪಂಚತಾರಾ ಹೋಟೆಲ್ಗೆ ಹೋಗಿದ್ದರಂತೆ. ವೇಟರ್ ಮೆನು ಕಾರ್ಡ್ ತಂದಿಟ್ಟನಂತೆ. ಅಂಬಾನಿ ಎಲ್ಲ ಐಟಮ್ ಗಳ ರೇಟುಗಳನ್ನು ಗಮನಿಸಿದರಂತೆ. ಯಾವ ಆಹಾರ ಪದಾರ್ಥಗಳ ಬೆಲೆಯೂ ಐನೂರು ರುಪಾಯಿಗಳಿಗಿಂತ ಕಡಿಮೆ ಇರಲಿಲ್ಲ. ಒಂದು ಕಪ್ ಚಹದ ಬೆಲೆ ಆರು ನೂರು ರುಪಾಯಿ ಎಂದು ಬರೆದಿತ್ತು. ಒಂದು ಚಪಾತಿ ಮತ್ತು ರೊಟ್ಟಿಗೆ ತಲಾ ನೂರೈವತ್ತು ರುಪಾಯಿ! ಹೊಟ್ಟೆ ಹಸಿದಿತ್ತು. ಹಾಗಂತ ಕಿಸೆಯಲ್ಲಿ ಹಣ ಇರಲಿಲ್ಲ ಅಂತ ಅಲ್ಲ. ಸಾವಿರಾರು ಕೋಟಿ ರುಪಾಯಿಗಳ ಶ್ರೀಮಂತ. ಆದರೆ, ಜತೆಯಲ್ಲಿ ಯಾರೂ ಇರಲಿಲ್ಲ. ಯಾವ ಪ್ರತಿಷ್ಠೆ ಮೆರೆಯಬೇಕಂತ ಅಷ್ಟೆಲ್ಲ ಹಣ ಕೊಡ ಬೇಕು. ಇಷ್ಟೇ ಹಣದಲ್ಲಿ ವರ್ಷವಿಡೀ ಉಣಬಹು ದಲ್ಲ, ಒಂದು ಕಪ್ ಚಹಕ್ಕೆ ಐನೂರು ರುಪಾಯಿ ಕೊಡುವುದಂದರೇನು, ವರ್ಷವಿಡೀ ಚಹ ಕುಡಿಯ ಬಹುದಲ್ಲ.
ಹೀಗೆಲ್ಲ ಯೋಚಿಸಿದ ಅಂಬಾನಿ ಹಿಂದೆ ಮುಂದೆ ನೋಡದೇ, ಹೋಟೆಲ್ ವೇಟರ್ ಮತ್ತು ಸುತ್ತಲಿ ನವರ ಪ್ರತಿಕ್ರಿಯೆಗೂ ಕಾಯದೇ ಹೊರ ನಡೆದು, ರಸ್ತೆ ಬದಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ, ಹತ್ತು ರುಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿದರಂತೆ. ಈ ಘಟನೆ ಬಗ್ಗೆ ಅಂಬಾನಿ ಹೀಗೆ ಹೇಳಿದ ರಂತೆ- ‘ನಾನು ಸ್ಟಾರ್ ಹೋಟೆಲ್ಗಳಿಗೆ ಹೋಗಿಲ್ಲ ಅಂತಲ್ಲ. ಸಾಕಷ್ಟು ಸಲ ಹೋಗಿದ್ದೇನೆ. ನಮ್ಮ ಕಂಪನಿಯ ಹಲವಾರು ಔತಣಕೂಟಗಳನ್ನು ಅಲ್ಲಿ ಆಯೋಜಿಸಿದ್ದೇನೆ. ಅವೆಲ್ಲ ಅನಿವಾರ್ಯ. ಆದರೆ ನಾನೊಬ್ಬನೇ ಎಂದೂ ಅಲ್ಲಿಗೆ ಹೋಗಿ ಊಟ ಮಾಡಿಲ್ಲ. ಅಗತ್ಯ ಮತ್ತು ಅವಶ್ಯಕತೆ ಇದ್ದರೆ ಖರ್ಚು ಮಾಡಬಹುದು.
ಇದನ್ನೂ ಓದಿ: Vishweshwar Bhat Column: ಆತ್ಮಹತ್ಯೆಯಲ್ಲೂ ಮುಂದು
ಹತ್ತು ರುಪಾಯಿಗೆ ಐನೂರು ರುಪಾಯಿ ಕೊಡುವಷ್ಟು ನಾನು ಶ್ರೀಮಂತನಿದ್ದಿರಬಹುದು. ಆದರೆ, ಅಷ್ಟು ಮೂರ್ಖನಲ್ಲ. ನಾನು ಅಂದು ಆ ಹೋಟೆಲ್ನಿಂದ ಎದ್ದು ಬಂದ ಪ್ರಸಂಗಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿರಬಹುದು. ಅಂಬಾನಿ ಜುಗ್ಗ ಎನ್ನಬಹುದು, ನನಗೆ ಸ್ವಲ್ಪವೂ ವಿಷಾದವಿಲ್ಲ. ಇಂದಿಗೂ ಆ ನನ್ನ ನಿರ್ಧಾರದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ.
ಉಳಿಸಿದ ಹಣ ಗಳಿಸಿದ ಹಣಕ್ಕಿಂತ ಹೆಚ್ಚು ಎಂಬುದು ನನಗೆ ಚೆನ್ನಾಗಿ ಅರಿವಿಗೆ ಬಂದಿದೆ. ನಾನು ಸ್ಟಾರ್ ಹೋಟೆಲ್ನಲ್ಲಿ ಊಟ ಮಾಡಿದ ಬಿಲ್ ಕೊಟ್ಟವರಿಗೆ ಮಾತ್ರ ನನ್ನ ಬಗ್ಗೆ ಮಾತಾಡಲು ನೈತಿಕ ಹಕ್ಕಿದೆ. ಸ್ಟಾರ್ ಹೋಟೆಲ್ಗಳಲ್ಲಿ ಒಂದಕ್ಕೆ ನೂರು ತೆತ್ತು ಬರುವವರ ಬಗ್ಗೆ ನನಗೆ ವಿಷಾದ ವಿದೆ. ಈ ಕಾರಣ ಕ್ಕಾಗಿಯೇ ನಾನು ಅಂಥ ಹೋಟೆಲ್ಗಳನ್ನು ಕಟ್ಟಲಿಲ್ಲ.’

ಇನ್ನೊಮ್ಮೆ ಅಂಬಾನಿ ತಮ್ಮ ಮಕ್ಕಳ ಒತ್ತಾಯಕ್ಕೆ ಸ್ಟಾರ್ ಹೋಟೆಲ್ಗೆ ಹೋಗಿದ್ದರಂತೆ. ಊಟ ವಾದ ಬಳಿಕ ಅನಿಲ್ ಅಂಬಾನಿ ವೇಟರ್ಗೆ ಎರಡು ನೂರು ರುಪಾಯಿ ಟಿಪ್ಸ್ ಇಟ್ಟರಂತೆ. ಇದನ್ನು ಗಮನಿಸಿದ ಧೀರೂಭಾಯಿ ಅಂಬಾನಿ ಪರವಾಗಿಲ್ಲ, ನಿನ್ನ ಅಪ್ಪ ಶ್ರೀಮಂತ, ಹೀಗಾಗಿ ಅಷ್ಟು ಟಿಪ್ಸ್ ಇಟ್ಟಿದ್ದೀಯ. ಆದರೆ ನನ್ನ ಅಪ್ಪ ಅಂಥ ಶ್ರೀಮಂತನಲ್ಲ.
ಹೀಗಾಗಿ ನಾನು ಅಷ್ಟು ಟಿಪ್ಸ್ ಇಡುವುದಿಲ್ಲ’ ಎಂದರಂತೆ. ಇತ್ತೀಚೆಗೆ ಸ್ನೇಹಿತರೊಬ್ಬರು ಟ್ವೀಟ್ ಮಾಡಿದ್ದರು- ‘ಲೀಲಾ ಹೋಟೆಲ್ಗೆ ವಿಪ್ರೊ ಕಂಪನಿಯ ಮಾಲೀಕ ಅಜೀಂ ಪ್ರೇಮ್ಜೀ ಆಗಮಿಸು ತ್ತಿರುವುದನ್ನು ಗಮನಿಸಿದೆ. ಭಾರತದ ಐವರು ಶ್ರೀಮಂತರಲ್ಲಿ ಒಬ್ಬರಾಗಿರುವ ಅವರು ಸಾಮಾನ್ಯ ಸ್ಕೋಡಾ ಕಾರಿನಲ್ಲಿ ಬಂದಿಳಿದರು. ಜುಗ್ಗ ಪ್ರೇಮ್ ಜೀ’. ನಾನು ಅದಕ್ಕೆ ಟ್ವೀಟ್ ಮಾಡಿದೆ- ‘ಹಾಗಾ ದರೆ ಅವರು ಯಾವ ಕಾರಿನಲ್ಲಿ ಬರಬೇಕಿತ್ತು ಅಂತೀರಿ? ಬೆಂಜ? ಬಿಎಂಡಬ್ಲ್ಯು? ರೋಲ್ಸ್ ರಾಯ್ಸ್? ನಿಮ್ಮ ಅಭಿಪ್ರಾಯ ವೇನು?’ ಅದಕ್ಕೆ ಅವರು ವಾಪಸ್ ಟ್ವೀಟ್ ಮಾಡಿದರು- ‘ಪ್ರೇಮ್ ಜೀಗೆ ಏನು ಧಾಡಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಬರಲು? ಅವರ ಸ್ಟ್ಯಾಂಡರ್ಡ್ ಗೆ ಸ್ಕೋಡಾ ಕಾರು ಸರಿ ಹೊಂದುವುದಿಲ್ಲ.’

ಪ್ರೇಮ್ಜೀಗೆ ಬೆಂಜಾಗಲಿ, ರೋಲ್ಸ್ ರಾಯ್ಸ್ ಕಾರನ್ನಾಗಲಿ ಖರೀದಿಸುವುದು ಏನು ಮಹಾ? ಮನಸ್ಸು ಮಾಡಿದರೆ ಅಂಥ ನೂರು ಕಾರುಗಳನ್ನು ರಾತ್ರಿ ಬೆಳಗಾಗುವುದರೊಳಗೆ ತಂದು ನಿಲ್ಲಿಸಬಲ್ಲರು. ಆದರೆ ಅವರಿಗೆ ಅದು ಬೇಕಾಗಿಲ್ಲ. ಪ್ರತಿ ವರ್ಷ ಅವರು ಸಾವಿರಾರು ಕೋಟಿ ರುಪಾಯಿಗಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿಯೇ ದೇಣಿಗೆ ಕೊಡುತ್ತಾರೆ.
ಇದನ್ನು ಕಳೆದ 18 ವರ್ಷಗಳಿಂದ ಕೊಡುತ್ತಿದ್ದಾರೆ. ಈ ದೇಶದಲ್ಲಿರುವ ಪ್ರಾಥಮಿಕ ಶಾಲೆಗಳ ಗುಣ ಮಟ್ಟವನ್ನು ಸುಧಾರಿಸಲು ಅವರು ಸ್ವತಃ ತಾವೇ ಖುದ್ದಾಗಿ ಆಸ್ಥೆವಹಿಸಿ ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಣದಲ್ಲಿ ಅವರು ತಮಗೆ ಬೇಕಾದ ಕಾರುಗಳನ್ನೆಲ್ಲ ಖರೀದಿಸಬಹುದಿತ್ತು.
ಪ್ರೇಮ್ ಜೀ ಕುರಿತು ಟ್ವೀಟ್ ಮಾಡಿದ ರೀತಿಯ ಜಿಎಂಆರ್ ಗ್ರೂಪ್ನ ಜಿ. ಮಲ್ಲಿಕಾರ್ಜುನ ರಾವ್ ಅವರ ಬಗ್ಗೆಯೂ ಆ ಮನುಷ್ಯ ಟ್ವೀಟ್ ಮಾಡಿದ್ದ. ಆದರೆ ಅದೇ ಮಲ್ಲಿಕಾರ್ಜುನ್ ರಾವ್ ಸಾವಿರಾರು ಕೋಟಿ ರುಪಾಯಿ ಸಮಾಜಮುಖಿ ಕೆಲಸಗಳಿಗೆ ದೇಣಿಗೆ ಕೊಡುವ ಸಂಗತಿ ಗೊತ್ತಿದ್ದಿದ್ದರೆ ಆ ಮಾತನ್ನು ಹೇಳುತ್ತಿರಲಿಲ್ಲ.

ದುಡ್ಡಿನ ಬಗ್ಗೆ ಜನರ ಅಭಿಪ್ರಾಯವೇನು ಎಂಬ ಬಗ್ಗೆ ಇತ್ತೀಚೆಗೆ ಪ್ರತಿಷ್ಠಿತ ‘ಫೋರ್ಬ್ಸ್’ ಪತ್ರಿಕೆ ನಡೆಸಿದ ಸಂದರ್ಶನದ ವಿವರಗಳನ್ನು ಓದುತ್ತಿದ್ದೆ. ಹಣದ ಬಗ್ಗೆ ಒಬ್ಬೊಬ್ಬರ ಧೋರಣೆ ಒಂದೊಂದು ರೀತಿ. ಹಣ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗುಣ, ವ್ಯಕ್ತಿತ್ವವನ್ನು ತಂದು ಕೊಟ್ಟಿದೆ. ಅತಿ ಶ್ರೀಮಂತ ನಾದವನಿಗೂ, ಬಡವನಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬ ತತ್ವಜ್ಞಾನಿ ಯ ಮಾತು ಈ ಸಮೀಕ್ಷೆಯನ್ನು ಓದಿದಾಗ ನೆನಪಿಗೆ ಬರದೇ ಇರದು.
ಜಗತ್ತಿನ ಅತ್ಯಂತ ಶ್ರೀಮಂತ ವಾರೆನ್ ಬಫೆಟ್ ಇದ್ದಾನಲ್ಲ, ಅವನಿಗೆ ಸ್ವಂತ ಮನೆಯೆಂಬುದೇ ಇಲ್ಲ. ಆತ ಒಂದು ಮೊಬೈಲ್ ಫೋನನ್ನೂ ಇಟ್ಟುಕೊಂಡಿಲ್ಲ. ತನ್ನ ಕಾರನ್ನು ತಾನೇ ಡ್ರೈವ್ ಮಾಡು ತ್ತಾನೆ. ಅಂದರೆ ಡ್ರೈವರ್ ಗಳನ್ನು ಇಟ್ಟುಕೊಂಡಿಲ್ಲ. ತಾನೆ ಸ್ವತಃ ಮಾಲ್ಗೆ ಹೋಗಿ ಮನೆಗೆ ಬೇಕಾ ಗುವ ಸಾಮಾನುಗಳನ್ನು ಶಾಪಿಂಗ್ ಮಾಡುತ್ತಾನೆ.
ಮನೆ ತುಂಬಾ ಆಳು-ಕಾಳುಗಳನ್ನು ಇಟ್ಟುಕೊಂಡಿಲ್ಲ. ಬಾಡಿಗೆ ಮನೆಯಲ್ಲಿ ಆತ ಎಲ್ಲ ರೀತಿಯ ತುಂಬು ನೆಮ್ಮದಿಯ ಜೀವನವನ್ನು ಕಾಣುತ್ತಿದ್ದಾನೆ. ಇಂಥ ವಾರೆನ್ ಬಫೆಟ್ ಒಂದು ದಿನ ತಾನು ದುಡಿದ ಹಣದ ಬಹುಪಾಲನ್ನು ತಗೊಳ್ಳಿ ಚಾರಿಟಿಗೆ. ‘ನಾನು ದುಡಿದಿದ್ದನ್ನೆಲ್ಲ ಇದೋ ದೇಣಿಗೆ ಕೊಡುತ್ತಿದ್ದೇನೆ’ ಎಂದು ಬಿಟ್ಟ. ಮರುದಿನದಿಂದ ಮತ್ತಷ್ಟು ಆಸ್ಥೆಯಿಂದ ದುಡ್ಡು ಗಳಿಸಲು ಕುಳಿತ. ಹೆಚ್ಚು ಹಣ ಗಳಿಸುವ ಹೊಸ ಹೊಸ ಮಾರ್ಗಗಳ ಬಗ್ಗೆ ಚಿಂತಿಸಲಾರಂಭಿಸಿದ.
ದೇಣಿಗೆ ಕೊಡುವುದನ್ನೇ ಹವ್ಯಾಸ ಮಾಡಿಕೊಂಡ. ಇದು ಅವನಿಗೆ ಹೆಚ್ಚು ದುಡಿಯುವುದು ಹೇಗೆ ಎಂಬುದನ್ನು ಕಲಿಸಲಾರಂಭಿಸಿತು. ಇನ್ನು ವಾರೆನ್ ಬಫೆಟ್ನನ್ನು ನೋಡಿದವರು ಅವನೇಕೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಲಿಲ್ಲ, ಅವನೇಕೆ ಭವ್ಯ ಬಂಗಲೆ ಕಟ್ಟಿಸಲಿಲ್ಲ, ನಾವೇ ಆಳು-ಕಾಳುಗಳನ್ನು ಇಟ್ಟುಕೊಳ್ತೇವೆ ಅವನಿಗೇನು ಧಾಡಿ ಎಂದರೆ ಅವರಿಗೆ ಏನೆನ್ನೋಣ? ಹಣದ ಬಗ್ಗೆ ಎಲ್ಲರ ಧೋರಣೆಯೂ ಒಂದೇ ರೀತಿ ಇರುವುದಿಲ್ಲ.
ಭಾರತ ಪತ್ರಿಕೋದ್ಯಮದ ಧೀಮಂತ ರಾಮನಾಥ ಗೋಯೆಂಕಾ ಅವರ ಜೀವನದ ಘಟನೆ ಯೊಂದನ್ನು ಇಲ್ಲಿ ಉಲ್ಲೇಖಿಸಬಹುದಾದರೆ, ಒಮ್ಮೆ ಹಬ್ಬದ ನಿಮಿತ್ತ ಗೋಯೆಂಕಾ ಅವರಿಗೆ ಅವರ ಸೊಸೆ ಖಾದಿ ಜುಬ್ಬಾ, ಧೋತಿಯನ್ನು ಉಡುಗೊರೆಯಾಗಿ ಕೊಟ್ಟರಂತೆ. ಇದಕ್ಕೆ ಪ್ರತಿಯಾಗಿ ರಾಮನಾಥ ಗೋಯೆಂಕಾ ಅವರು ಸೊಸೆಗೆ ಪತ್ರ ಬರೆದರಂತೆ- ‘ಹಬ್ಬದ ನಿಮಿತ್ತ ನನಗೆ ಉಡುಗೊ ರೆಯಾಗಿ ಧೋತಿ, ಜುಬ್ಬವನ್ನು ಕೊಟ್ಟಿದ್ದಕ್ಕೆ ನನಗೆ ಬಹಳ ಸಂತಸವಾಗಿದೆ. ಆದರೆ ಇನ್ನು ಮುಂದೆ ನನಗೆ ಇಂಥ ವಸ್ತ್ರವನ್ನು ಖಾದಿ ಭಂಡಾರದಲ್ಲಿ ಶೇ.30ರಷ್ಟು ರಿಯಾಯತಿ ದರದಲ್ಲಿ ಮಾರಾಟ ವಿದ್ದ ಸಂದರ್ಭದಲ್ಲಿ ಖರೀದಿಸಿ ಕೊಡಬಹುದು.’ ಹಣದ ಬಗ್ಗೆ ಅಂಥ ಧೋರಣೆ ತಳೆದಿದ್ದರು ಗೋಯೆಂಕಾ. ಹಣದ ಮಹತ್ವ ಗೊತ್ತಿದ್ದವರು, ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಂಡವರು, ಜೀವನದಲ್ಲಿ ಪರಿಶ್ರಮದ ಅರಿವು ಇರುವವರು ಮಾತ್ರ ಇಂಥ ನಿಲುವು ತಾಳಲು ಸಾಧ್ಯ.
ಪತ್ರಕರ್ತೆ ಬಚಿ ಕರ್ಕಾರಿಯಾ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹಾಗೂ ಸಂಸ್ಥೆಯ ಅಂತರಂಗ ಪರಿಚಯಿಸುವ ಪುಸ್ತಕವೊಂದನ್ನು ಬರೆದಿದ್ದಾರೆ. ಅದರ ಹೆಸರು Behind the Times ಅಂತ. ಈ ಕೃತಿಯಲ್ಲಿ ಆ ಪತ್ರಿಕೆಯ ಮಾಲೀಕ ಸಮೀರ್ ಜೈನ್ ಕುರಿತು ಸ್ವಾರಸ್ಯವಾಗಿ ಬರೆದಿದ್ದಾರೆ. ಸಮೀರ್ ಜೈನ್ ಎಷ್ಟು ಧಾರಾಳಿಯೋ, ಅಷ್ಟೇ ದುಂದು ವೆಚ್ಚವನ್ನು ಕಂಡರೆ ಆಗದವರು. ಅನಗತ್ಯವಾಗಿ ಒಂದು ರುಪಾಯಿ ಹೆಚ್ಚು ಖರ್ಚಾಗುವುದನ್ನು ಸಹಿಸದವರು. ಒಮ್ಮೆ ಸಮೀರ್ ಜೈನ್ ಅವರು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಜಾಹೀರಾತು ವಿಭಾಗದ ಮುಖ್ಯಸ್ಥೆ ಇಂದಿರಾ ಡೆಯಿಸ್ ಹಾಗೂ ಇತರರೊಂದಿಗೆ ವಿದೇಶಕ್ಕೆ ಹೋಗಿದ್ದರು.
ತಾವು ತಂಗಿದ್ದ ಹೋಟೆಲ್ನಲ್ಲಿ ಇಂದಿರಾ ಅವರು ರಿಸೆಪ್ಶನ್ ಕೌಂಟರ್ ಬಳಿ ಹೋಗಿ ಮರುದಿನ ಆರು ಗಂಟೆಗೆ ತಮ್ಮನ್ನು ಎಬ್ಬಿಸುವಂತೆಯೂ, ಅದಾದ ಐದು ನಿಮಿಷದ ಬಳಿಕ ಬೆಡ್ ಟೀ ತರು ವಂತೆಯೂ ಹೇಳಿದರು. ಅಲ್ಲಿಯೇ ಸನಿಹದಲ್ಲಿದ್ದ ಸಮೀರ್ ಜೈನ್ ಈ ಸಂಭಾಷಣೆಯನ್ನು ಕೇಳಿಸಿ ಕೊಂಡರು, ಇಂದಿರಾ ಹತ್ತಿರ ಹೋಗಿ ತಮ್ಮ ಕೋಟಿನ ಜೇಬಿನಿಂದ ಏನನ್ನೋ ತೆಗೆದು ಅವಳ ಕೈಗೆ ಕೊಟ್ಟರು.
ನೋಡಿದರೆ ಎರಡು ಟೀ ಬ್ಯಾಗ್! ಬೆಡ್ ಟೀ ಬದಲು ಬರೀ ಬಿಸಿ ನೀರನ್ನಷ್ಟೇ ತರಲು ಹೇಳಿ, ಈ ಟೀ ಬ್ಯಾಗ್ ಅದ್ದಿಕೊಳ್ಳಿ. ಅದಕ್ಯಾಕೆ ಸುಮ್ಮನೆ ಮುನ್ನೂರು-ನಾನೂರು ರುಪಾಯಿ ಖರ್ಚು ಮಾಡುತ್ತೀರಿ? ನಾನು ಸದಾ ಪಂಚ ತಾರಾ ಹೋಟೆಲ್ನಲ್ಲಿ ಉಳಿದು ಕೊಳ್ಳುವಾಗ ಟೀ ಬ್ಯಾಗನ್ನು ನನ್ನೊಂದಿಗೆ ಇಟ್ಟುಕೊಂಡಿರುತ್ತೇನೆ’ ಎಂದರು ಸಮೀರ್ ಜೈನ್.
ಭಾರತದ ನಂ.1 ಪತ್ರಿಕಾ ಸಂಸ್ಥೆಯ, ಶ್ರೀಮಂತ ಮಾಲೀಕರು ರೂಪಿಸಿಕೊಂಡ ರೂಢಿಯಿದು. ಇನ್ನೊಂದು ಸಂದರ್ಭ. ಸಮೀರ್ ಜೈನ್ ಅವರು ಪತ್ರಿಕೆಯ 175ನೇ ವಾರ್ಷಿಕೋತ್ಸವದ ನಿಮಿತ್ತ ಪಂಚತಾರಾ ಹೋಟೆಲ್ನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಅವರ ಸಹೋದ್ಯೋಗಿ ಯೊಬ್ಬರು ಊಟ ಮಾಡುವಾಗ ಎರಡು-ಮೂರು ಸಲ ಪ್ಲೇಟನ್ನು ಬದಲಾಯಿಸಿದರು. ಇದನ್ನು ಗಮನಿಸಿದ ಸಮೀರ್ ಜೈನ್, ‘ನೋಡಿ, ಪಂಚತಾರಾ ಹೋಟೆಲ್ನಲ್ಲಿ ಇಂಥ ಪಾರ್ಟಿಯಲ್ಲಿ ಎಷ್ಟು ಜನ ಊಟ ಮಾಡಿದ್ದಾರೆಂಬುದನ್ನು ಪ್ಲೇಟ್ಗಳಿಂದ ಲೆಕ್ಕ ಹಾಕುತ್ತಾರೆ.
ನೀವು ಊಟ ಮಾಡುವಾಗ ಪ್ರತಿಸಲ ಬೇರೆ ಬೇರೆ ಐಟೆಮ್ಗಳನ್ನು ಹಾಕಿಕೊಳ್ಳುವಾಗ ಪ್ಲೇಟನ್ನು ಬದಲಿಸಿದರೆ, ಹೆಚ್ಚು ಜನ ಊಟ ಮಾಡಿದ್ದಾರೆಂದು ಹೆಚ್ಚು ಬಿಲ್ ಮಾಡುತ್ತಾರೆ. ಆದ್ದರಿಂದ ಒಂದೇ ಪ್ಲೇಟಿನಿಂದ ಊಟ ಮಾಡಿ’ ಎಂದು ಹೇಳಿದರು.
ಸಮೀರ್ಜೈನ್ ಹಣ ಉಳಿಸುವ ಸಂಗತಿ ಬಂದಾಗ ಅವು ಎಷ್ಟೇ ಸಣ್ಣಪುಟ್ಟ ಅಂಶಗಳಾಗಿರಲಿ, ಅದನ್ನು ತಮ್ಮ ಸಹೋದ್ಯೋಗಿಗಳಿಗೆ ತಿಳಿಸದೇ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅದನ್ನು ಭಾರತ ದಲ್ಲಿರುವ ತಮ್ಮ ಎಲ್ಲ ಆವೃತ್ತಿಗಳಲ್ಲೂ ಜಾರಿಗೆ ತರುತ್ತಾರೆ. ಒಮ್ಮೆ ಬಳಸಿದ ಕಾಗದ, ಲಕೋಟೆ ಗಳನ್ನು ಪುನಃ ಬಳಸುವಂತೆ ಸೂಚಿಸುತ್ತಾರೆ.
ಒಂದೇ ಮಗ್ಗುಲಿಗೆ ಬಳಸಿದ ಕಾಗದವನ್ನು ಕಸದ ಬುಟ್ಟಿಗೆ ಎಸೆದಿದ್ದನ್ನು ಕಂಡರೆ ಸುಮ್ಮನೆ ಬಿಡುವುದಿಲ್ಲ. ಖಾಲಿಯಿರುವ ಮಗ್ಗುಲನ್ನು ಬಳಸಿ ಎಂದು ಸೂಚಿಸುತ್ತಾರೆ. ಲೆಟರ್ ಹೆಡ್ನಲ್ಲಿ ಬರೆದಿದ್ದನ್ನು ನೇರವಾಗಿ ಫ್ಯಾಕ್ಸ್ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಹಾಗೆ ಮಾಡುವ ಬದಲು ಆ ಲೆಟರ್ ಹೆಡ್ ಫೋಟೋಕಾಪಿ (ಜೆರಾಕ್ಸ್) ತೆಗೆದು ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು.
ಕಾರಣ ಇಷ್ಟೆ. ಲೆಟರ್ಹೆಡ್ ಬಳಸಿದ ಕಾಗದವನ್ನು ಫ್ಯಾಕ್ಸ್ ಮಾಡಲು ಹೆಚ್ಚು ಸಮಯ ಬೇಕಾಗು ತ್ತದೆ, ಇದರಿಂದ ಫೋನ್ಬಿಲ್ ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಲು ಲೆಟರ್ಹೆಡ್ ಅನ್ನು ಜೆರಾಕ್ಸ್ ಮಾಡಿ ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು. ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಸಂಪಾದಕೀಯ ಮಂಡಳಿಯಲ್ಲಿ ಹಿರಿಯರಬ್ಬರಾಗಿರುವ ಜಗ್ ಸುರಯ್ಯ ಇತ್ತೀಚೆಗೆ ತಾವು ಬರೆದ JS and The Times of My Life’ ಪುಸ್ತಕದಲ್ಲೂ ಸಮೀರ್ ಜೈನ್ ಕುರಿತು ಪ್ರಸ್ತಾಪಿಸಿದ್ದಾರೆ.
ಒಮ್ಮೆ ಜಗ್ ಸುರಯ್ಯ ಅವರು ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ರಾತ್ರಿ ಗುಂಡು ಪಾರ್ಟಿ ಮಾಡುತ್ತಿದ್ದರಂತೆ. ಆಗ ಅಲ್ಲಿಗೆ ಬರುವುದಾಗಿ ಸಮೀರ್ ಜೈನ್ ಅವರಿಂದ ಫೋನ್ ಬಂತಂತೆ. ಕೆಲಕ್ಷಣ ಗಳಲ್ಲಿ ತಮ್ಮ ಪತ್ನಿಯೊಂದಿಗೆ ಆಗಮಿಸಿದರಂತೆ. ಏಳೆಂಟು ಜನರಿದ್ದ ಆ ಪಾರ್ಟಿಯಲ್ಲಿ ಸಮೀರ್ ಒಂದು ಮೂಲೆಯಲ್ಲಿ ಕುಳಿತು ಎಲ್ಲರ ಹರಟೆಯನ್ನು ಕುತೂಹಲದಿಂದ ಆಲಿಸುತ್ತಿದ್ದ ರಂತೆ.
ದಿಲ್ಲಿಯಲ್ಲಿ ಗುಂಡು ಹಾಕಲು ಪ್ರಶಸ್ತವಾದ ಹೊಸ ತಾಣಗಳ ಬಗ್ಗೆ ಚರ್ಚೆ ನಡೆಯುತ್ತಿತ್ತಂತೆ. ಆಗ ತಾನೆ ಆರಂಭವಾದ ಸ್ಪಾನಿಶ್ ರೆಸ್ಟೋರೆಂಟ್ ಬಹಳ ಚೆನ್ನಾಗಿದೆ. ಆದರೆ ಬಹಳ ದುಬಾರಿ’ ಎಂದು ಯಾರೋ ಹೇಳಿದಾಗ, ವಿಶೇಷ ಸಂದರ್ಭದಲ್ಲಿ ಮಾತ್ರ ಹೋಗಬಹುದು’ ಎಂದು ಇನ್ಯಾರೋ ಹೇಳಿದರಂತೆ. ಆಗ ಸಮೀರ್ ಜೈನ್ ಮಧ್ಯಪ್ರವೇಶಿಸಿದಾಗ ಎಲ್ಲರೂ ಮೌನರಾಗಿ ಅವರ ಮಾತಿನೆಡೆ ಲಕ್ಷ್ಯವಿಟ್ಟರಂತೆ.
‘ಏನು ಹೇಳ್ತಾ ಇದ್ದೀರಾ ನೀವು? ನಿಮಗೆ ಹೆಚ್ಚು ಹಣ ತೆತ್ತು ದುಬಾರಿ ಹೋಟೆಲ್ಗೆ ಹೋಗೊದಂದ್ರೆ ಇಷ್ಟಾನಾ? ಇದರಿಂದ ನಿಮಗೆ ಸಂತಸವಾಗುತ್ತದಾ?’ ಎಂದು ಕೇಳಿದರಂತೆ. ಅದಕ್ಕೆ ಜಗ್ ಸುರಯ್ಯ ‘ಹೌದು. ನಮಗೆ ಹಣ ಖರ್ಚು ಮಾಡುವುದೆಂದರೆ ಬಹಳ ಇಷ್ಟ, ಅದೂ ವಿಶೇಷ ಸಂದರ್ಭದಲ್ಲಿ. ನಾವೇನು ಅಲ್ಲಿಗೆ ದಿನಾ ಹೋಗುವುದಿಲ್ಲವಲ್ಲ? ನಮಗೆ ಅಷ್ಟು ಹಣ ಖರ್ಚು ಮಾಡುವ ಸಾಮರ್ಥ್ಯ ವಿರುವಾಗ ಆಗೊಮ್ಮೆ ಈಗೊಮ್ಮೆ ಹೋಗುತ್ತೇವೆ.
ಅದಕ್ಕಾಗಿಯೇ ನಮಗೆ ಅಂಥ ಸಂದರ್ಭಗಳು ವಿಶೇಷವೆನಿಸುತ್ತವೆ’ ಎಂದರಂತೆ. ಅವರ ಮಾತಿಗೆ ತಲೆಯಾಡಿಸಿದ ಸಮೀರ್ ಜೈನ್ ‘ಓಹೋ ಹೌದಾ? ನಿಮಗೆ ಹಣ ಖರ್ಚು ಮಾಡುವುದೆಂದರೆ ಇಷ್ಟವಾ? ಇಂಟರೆಸ್ಟಿಂಗ್!’ ಎಂದು ಗಂಭೀರವಾಗಿ ಉದ್ಗಾರ ತೆಗೆದರಂತೆ. ಸಮೀರ್ ಜೈನ್ ಯಾಕೆ ಯಶಸ್ವಿ ಪತ್ರಿಕಾ ಮಾಲೀಕರು ಎಂಬುದು ಈಗ ಅರ್ಥವಾಗಿರಲಿಕ್ಕೆ ಸಾಕು. ನೀವು ಹೊಂದಿರುವ ಹಣದಿಂದ ನೀವು ಶ್ರೀಮಂತರಾಗುವುದಿಲ್ಲ. ನೀವು ಹಣಕ್ಕೆ ಕೊಡುವ ಮರ್ಯಾದೆಯಿಂದ ಮಾತ್ರ ಶ್ರೀಮಂತರಾಗುತ್ತೀರಿ. ಶ್ರೀಮಂತರಾಗುವವರಿಗೆ ಈ ಅರ್ಹತೆ ಬೇಕು. ಹಣ ಗಳಿಸುವುದಷ್ಟೇ ಅಲ್ಲ, ಉಳಿಸುವುದೂ ಒಂದು ಕಲೆ!