Leena Joshi Column: ರೋಗಿ ಭಾರತೀಯ, ಬಿಲ್ ಲಾಭ ವಿದೇಶಕ್ಕೆ
ಕೆಕೆಆರ್, ಕಾರ್ಲೈಲ್, ಟಿಪಿಜಿ, ಟೆಮಾಸೆಕ್, ಬ್ಲ್ಯಾಕ್ ಸ್ಟೋನ್, ವಾರ್ಬರ್ಗ್ ಪಿಂಕಸ್, ಒಂಟಾರಿಯೊ ಟೀಚರ್ಸ್ ಪೆನ್ಷನ್ ಪ್ಲಾನ್ ಮುಂತಾದ ಜಾಗತಿಕ ಹೂಡಿಕೆದಾರರು ಭಾರತೀಯ ಆರೋಗ್ಯ ಸೇವಾ ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೆನಡಾದ ಒಂಟಾರಿಯೊ ಟೀಚರ್ಸ್ ಪೆನ್ಷನ್ ಪ್ಲಾನ್ 2022ರಲ್ಲಿ ಮಹಾರಾಷ್ಟ್ರದ ಸಹ್ಯಾದ್ರಿ ಆಸ್ಪತ್ರೆಗಳಲ್ಲಿ ಬೃಹತ್ ಹೂಡಿಕೆ ಮಾಡಿ ಷೇರುಗಳನ್ನು ಖರೀದಿಸಿತು. ಸಿಂಗಾಪುರದ ಟೆಮಾಸೆಕ್ ಕೂಡ ಮಣಿಪಾಲ್ ಆಸ್ಪತ್ರೆಗಳಲ್ಲಿ ದೊಡ್ಡ ಹೂಡಿಕೆ ಮಾಡಿದೆ.
-
ಅಮೃತಕಾಲ
ಲೀನಾ ಜೋಶಿ
ಆರೋಗ್ಯ ಕ್ಷೇತ್ರದಲ್ಲಿ ಒಂದು ಮೂಲಭೂತ ತತ್ವ ಇರಬೇಕು. ರೋಗಿ ಮೊದಲು, ಲಾಭ ನಂತರ ಎಂದು ಇರಬೇಕು. ಭಾರತಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಯನ್ನು ವಿರೋಧಿ ಸುವ ನೀತಿಯಲ್ಲ, ಹೂಡಿಕೆಗೆ ಮಾನವೀಯ ಮತ್ತು ಸಾರ್ವಜನಿಕ ಹಿತದ ಮಿತಿ ವಿಧಿಸುವ ನೀತಿ ಬೇಕಾಗಿದೆ. ಸರ್ಕಾರ ನಿರ್ಧರಿಸಲಿ, ತಡವಾಗುವ ಮುನ್ನ.
ಭಾರತಕ್ಕೆ ವಿದೇಶಿ ಹೂಡಿಕೆ ಬೇಕು. ಇದರಲ್ಲಿ ಎರಡು ಮಾತಿಲ್ಲ. ಕೈಗಾರಿಕೆಗಳು ಬೆಳೆಯಬೇಕು, ಹೊಸ ತಂತ್ರಜ್ಞಾನ ಬರಬೇಕು, ಉದ್ಯೋಗ ಸೃಷ್ಟಿಯಾಗಬೇಕು, ಉತ್ಪಾದನೆ ಹೆಚ್ಚಬೇಕು. ಅದಕ್ಕಾಗಿ ವಿದೇಶಿ ಬಂಡವಾಳ ಬಂದರೆ ಅದನ್ನು ಸ್ವಾಗತಿಸುವುದರಲ್ಲಿ ತಪ್ಪೇನಿಲ್ಲ. ಇದೇ ರೀತಿ ಆಸ್ಪತ್ರೆಗಳಲ್ಲಿ ಕೂಡ ವಿದೇಶಿ ಬಂಡವಾಳ ಸಾಗರದಂತೆ ಹರಿದು ಬಂದಿದೆ. ಖಾಸಗಿ ಆಸ್ಪತ್ರೆಗಳು ಕೂಡ ಈಗ ಬೃಹತ್ ಉದ್ಯಮ.
ಕಾರು, ದುಬಾರಿ ಮೊಬೈಲ್ ದೂರವಾಣಿ, ಮನೆ ಖರೀದಿಯನ್ನು ಹಣವಿಲ್ಲದಿದ್ದಲ್ಲಿ ಮುಂದೂಡ ಬಹುದು. ಆದರೆ ಹೃದಯಾಘಾತವಾದಾಗ, ಅಪಘಾತವಾದಾಗ, ಮಾರಣಾಂತಿಕ ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುವುದನ್ನು ಮುಂದೂಡಲು ಸಾಧ್ಯವಿಲ್ಲ. ಆ ಸಮಯದಲ್ಲಿ ಈ ಚಿಕಿತ್ಸೆ ದುಬಾರಿ ಯಾಗಿದೆ, ಬೇರೆ ಆಸ್ಪತ್ರೆಗೆ ಹೋಗೋಣ ಎಂದು ಸುಲಭವಾಗಿ ನಿರ್ಧರಿಸುವ ಸ್ಥಿತಿಯಲ್ಲಿ ಮನುಷ್ಯ ಇರುವುದಿಲ್ಲ. ಆರೋಗ್ಯ ಹಾಗೆ ಆಯ್ಕೆ ಮಾಡಬಹುದಾದ ಮಾರುಕಟ್ಟೆಯ ಸಾಮಾನ್ಯ ವಸ್ತುವಲ್ಲ, ಅದು ಮನುಷ್ಯನ ಬದುಕಿನ ಪ್ರಶ್ನೆ. ಭಾರತದಲ್ಲಿ ಖಾಸಗಿ ಆಸ್ಪತ್ರೆಗಳ ವಲಯ ಬಹಳ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ದೇಶೀಯ ಹೂಡಿಕೆ ಮಾತ್ರವಲ್ಲ, ವಿದೇಶಿ ಖಾಸಗಿ ಬಂಡವಾಳ ಸಂಸ್ಥೆಗಳು, ಪಿಂಚಣಿ ನಿಧಿಗಳು ಮತ್ತು ಇತರ ಸಾಂಸ್ಥಿಕ ಹೂಡಿಕೆದಾರರು ಕೂಡ ಹಣ ಹೂಡುತ್ತಿದ್ದಾರೆ.
ಕೆಕೆಆರ್, ಕಾರ್ಲೈಲ್, ಟಿಪಿಜಿ, ಟೆಮಾಸೆಕ್, ಬ್ಲ್ಯಾಕ್ ಸ್ಟೋನ್, ವಾರ್ಬರ್ಗ್ ಪಿಂಕಸ್, ಒಂಟಾರಿಯೊ ಟೀಚರ್ಸ್ ಪೆನ್ಷನ್ ಪ್ಲಾನ್ ಮುಂತಾದ ಜಾಗತಿಕ ಹೂಡಿಕೆದಾರರು ಭಾರತೀಯ ಆರೋಗ್ಯ ಸೇವಾ ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೆನಡಾದ ಒಂಟಾರಿಯೊ ಟೀಚರ್ಸ್ ಪೆನ್ಷನ್ ಪ್ಲಾನ್ 2022ರಲ್ಲಿ ಮಹಾರಾಷ್ಟ್ರದ ಸಹ್ಯಾದ್ರಿ ಆಸ್ಪತ್ರೆಗಳಲ್ಲಿ ಬೃಹತ್ ಹೂಡಿಕೆ ಮಾಡಿ ಷೇರುಗಳನ್ನು ಖರೀದಿಸಿತು. ಸಿಂಗಾಪುರದ ಟೆಮಾಸೆಕ್ ಕೂಡ ಮಣಿಪಾಲ್ ಆಸ್ಪತ್ರೆಗಳಲ್ಲಿ ದೊಡ್ಡ ಹೂಡಿಕೆ ಮಾಡಿದೆ.
ಇದನ್ನೂ ಓದಿ: Leena Joshi Column: ರಸ್ತೆ ಮಧ್ಯೆ ನರಳಿದ ಪಾಕಿಸ್ತಾನದ ಜನಕ
ಅಗ್ರವಾಲ್ ಕಣ್ಣಿನ ಆಸ್ಪತ್ರೆ ಬೆಳೆದಿದ್ದೇ ವಿದೇಶಿ ಬಂಡವಾಳದಿಂದ. ಕೆಲವೊಮ್ಮೆ ಹೂಡಿಕೆದಾರ ಮೊದಲಿಗೆ ಅಲ್ಪಸಂಖ್ಯಾತ ಪಾಲನ್ನು ತೆಗೆದುಕೊಳ್ಳುತ್ತಾನೆ. ಕಂಪನಿಯ ವ್ಯವಹಾರ ಮಾದರಿ, ನಿರ್ವಹಣೆ ಮತ್ತು ಬೆಳವಣಿಗೆಯ ಸಾಧ್ಯತೆಯನ್ನು ಅರ್ಥಮಾಡಿಕೊಂಡ ನಂತರ ತನ್ನ ಪಾಲನ್ನು ಹೆಚ್ಚಿಸುತ್ತಾನೆ. ನಂತರ ಕಂಪನಿಯ ಮೌಲ್ಯಮಾಪನ ಹೆಚ್ಚಾದಾಗ ತನ್ನ ಪಾಲಿನ ಒಂದು ಭಾಗ ಅಥವಾ ಸಂಪೂರ್ಣ ಪಾಲನ್ನು ಮತ್ತೊಬ್ಬ ಹೂಡಿಕೆದಾರನಿಗೆ ಮಾರುತ್ತಾನೆ. ಮುಕ್ತ ಮಾರುಕಟ್ಟೆ ಯ ಮಾರಾಟವಾಗಬಹುದು. ಅಥವಾ ಕಂಪನಿ ಷೇರು ಮಾರುಕಟ್ಟೆಗೆ ಆರಂಭಿಕ ಸಾರ್ವಜನಿಕ ಷೇರು ಮಾರಾಟದ ಮೂಲಕ ಬಂದಾಗ ಹೂಡಿಕೆದಾರ ತನ್ನ ಷೇರುಗಳನ್ನು ಮಾರಾಟ ಮಾಡಿ ಹೂಡಿಕೆಯಿಂದ ಹೊರಬರಬಹುದು.
ಟೆಮಾಸೆಕ್- ಮಣಿಪಾಲ್ ಉದಾಹರಣೆ ಇದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಿಂಗಾಪುರದ ಟೆಮಾಸೆಕ್ನ ಅಂಗಸಂಸ್ಥೆ ಶಿಯರ್ಸ್ ಹೆಲ್ತ್ಕೇರ್ 2017ರಲ್ಲಿ ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ನಲ್ಲಿ 18% ಮಾಲೀಕತ್ವದ ಪಾಲು ತೆಗೆದುಕೊಂಡಿತ್ತು. ನಂತರ 2023ರಲ್ಲಿ ಟೆಮಾಸೆಕ್ 41% ಪಾಲು ಪಡೆಯಲು ಒಪ್ಪಂದ ಮಾಡಿಕೊಂಡಿತು; ಇದರಿಂದ ಒಟ್ಟು ಷೇರು ಪಾಲುದಾರಿಕೆ 59%ಕ್ಕೆ ಏರಿತು.
ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಆರೋಗ್ಯ ಸೇವಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಹಣ ಹರಿದು ಬಂದಿದೆ. ಇದೇ ಅವಧಿಯಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಹಣ ಹೂಡಿಕೆ ದಾರರು ಲಾಭದೊಂದಿಗೆ ಹೊರ ನಡೆದಿದ್ದಾರೆ. ಹೂಡಿಕೆ ಬರುತ್ತಿದೆ. ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ ಮತ್ತು ಆ ಹೂಡಿಕೆಯಿಂದ ಹೊರಬರುವ ಹಣವೂ ದೊಡ್ಡ ಪ್ರಮಾಣದಲ್ಲಿದೆ. ಯಾವುದೇ ಹೂಡಿಕೆದಾರ ಧರ್ಮಾರ್ಥಕ್ಕಾಗಿ ಬಂಡವಾಳ ಹೂಡುವುದಿಲ್ಲ. ಅವನು ಆರ್ಥಿಕ ಪ್ರತಿಫಲ ನಿರೀಕ್ಷಿಸುತ್ತಾನೆ. ಅವನಿಗೆ ಆಸ್ಪತ್ರೆ ಎಂದರೆ ಕೇವಲ ರೋಗಿಗಳನ್ನು ಗುಣಪಡಿಸುವ ಸಂಸ್ಥೆಯಲ್ಲ. ಅದು ವ್ಯಾಪಾರ ವೇದಿಕೆ. ಅದರ ಆದಾಯ, ಲಾಭ, ಮೌಲ್ಯಮಾಪನ, ವ್ಯಾಪಾರದ ವಿಸ್ತರಣೆಯ ಸಾಧ್ಯತೆ ಮತ್ತು ಭವಿಷ್ಯದ ನಿರ್ಗಮನದ ಮೌಲ್ಯ ಇವೆಲ್ಲವೂ ಹೂಡಿಕೆಯ ನಿರ್ಧಾರದಲ್ಲಿ ಮುಖ್ಯವಾಗುತ್ತವೆ.
ಹೂಡಿಕೆದಾರ ತನ್ನ ಹೂಡಿಕೆಗೆ ಪ್ರತಿಫಲ ಬಯಸುವುದು ಸಹಜವಾದ ಆರ್ಥಿಕ ವರ್ತನೆ. ಅದು ಅವರ ಸಹಜವಾದ ಆರ್ಥಿಕ ಉದ್ದೇಶ. ಆ ಹೂಡಿಕೆಯ ಪ್ರತಿಫಲ ಯಾರ ಆರೋಗ್ಯದ ಮೇಲೆ ನಿರ್ಮಾಣವಾಗುತ್ತಿದೆ? ಆಸ್ಪತ್ರೆ ಮತ್ತು ಸಾಮಾನ್ಯ ವ್ಯವಹಾರದ ನಡುವಿನ ವ್ಯತ್ಯಾಸ ಇಲ್ಲಿಯೇ ಪ್ರಾರಂಭವಾಗುತ್ತದೆ. ಒಂದು ಗ್ರಾಹಕ ಕಂಪನಿ ತನ್ನ ಉತ್ಪನ್ನದ ಬೆಲೆಯನ್ನು ಹೆಚ್ಚಿಸಿದರೆ ಗ್ರಾಹಕ ಆ ಉತ್ಪನ್ನವನ್ನು ಖರೀದಿಸದೆ ಇರಬಹುದು. ಆದರೆ ತೀವ್ರ ನಿಗಾ ಘಟಕಕ್ಕೆ ದಾಖಲಾಗಿರುವ ರೋಗಿಗೆ ಪರ್ಯಾಯದ ಅವಕಾಶ ಬಹಳ ಸೀಮಿತವಾಗಿರುತ್ತದೆ.
ಒಬ್ಬ ಭಾರತೀಯ ಉದ್ಯೋಗಿ ತನ್ನ ಸಂಬಳದಿಂದ ಆರೋಗ್ಯ ವಿಮೆಗೆ ಹಣ ಕೊಡುತ್ತಾನೆ, ಅವನ ಕಂಪನಿಯೂ ವಿಮೆಗೆ ಹಣ ಕೊಡುತ್ತದೆ. ವಿಮಾ ಕಂಪನಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಪಾವತಿಸುತ್ತದೆ. ಆಸ್ಪತ್ರೆ ತನ್ನ ಸೇವೆಗಳಿಗೆ ಹಣ ಪಡೆಯುತ್ತದೆ. ಇವೆಲ್ಲವೂ ಸೇರಿ ಒಂದು ದೊಡ್ಡ ಆರೋಗ್ಯ ಸೇವಾ ಆರ್ಥಿಕತೆಯನ್ನು ನಿರ್ಮಿಸುತ್ತವೆ. ಈ ವ್ಯವಸ್ಥೆಯಲ್ಲಿ ಆಸ್ಪತ್ರೆಯ ಮಾಲೀಕರು ಮತ್ತು ಹೂಡಿಕೆದಾರರು ಲಾಭ ಗಳಿಸುವುದು ಸಹಜ. ಭಾರತೀಯರ ಆರೋಗ್ಯದ ಮೇಲೆ ನಿರ್ಮಾಣ ವಾಗುತ್ತಿರುವ ಈ ದೊಡ್ಡ ಆರ್ಥಿಕ ವ್ಯವಸ್ಥೆಯ ಅಂತಿಮ ಲಾಭ ಯಾರಿಗೆ ಸಿಗುತ್ತಿದೆ? ಭಾರತೀಯ ಸಮಾಜಕ್ಕೆ ಎಷ್ಟು? ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಎಷ್ಟು? ಹೂಡಿಕೆದಾರರಿಗೆ ಎಷ್ಟು? ಇದು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ.
ಇಂದು ನಗರ ಪ್ರದೇಶದ ಮಧ್ಯಮ ವರ್ಗದ ಬಹಳಷ್ಟು ಜನರಿಗೆ ಆರೋಗ್ಯ ವಿಮೆ ಇದೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸುಲಭವಾಗಿದೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವ ಅಷ್ಟು ಸರಳವಲ್ಲ. ವಿಮೆ ಇದ್ದರೂ ಕಂತಿನ ಹಂತವಿದೆ, ಪಾಲಿಸಿ ಮಿತಿ ಇದೆ. ಎಲ್ಲಾ ವೆಚ್ಚಗಳು ಒಂದೇ ರೀತಿಯಲ್ಲಿ ಒಳಗೊಳ್ಳುವುದಿಲ್ಲ. ಕೆಲವೊಮ್ಮೆ ಮಿತಿ ಮುಗಿಯುತ್ತದೆ, ಹೆಚ್ಚುವರಿ ವೆಚ್ಚವನ್ನು ಕುಟುಂಬವೇ ಭರಿಸಬೇಕಾಗುತ್ತದೆ.
ಒಂದು ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ದೀರ್ಘಕಾಲದ ಚಿಕಿತ್ಸೆಯ ನಂತರ ಕುಟುಂಬದ ಉಳಿತಾಯವೇ ಖಾಲಿಯಾಗಬಹುದು. ಹೀಗಾಗಿ ವಿಮೆ ಇದೆ ಎಂದರೆ ಚಿಕಿತ್ಸೆ ಅಗ್ಗವಾಗಿದೆ ಎಂದಲ್ಲ. ವಿಮೆ ಅನೇಕ ಕುಟುಂಬಗಳಿಗೆ ರಕ್ಷಣೆ ನೀಡುತ್ತದೆ. ಆದರೆ ಅದೇ ಸಮಯದಲ್ಲಿ, ಆರೋಗ್ಯ ಸೇವೆಯ ಒಟ್ಟಾರೆ ವೆಚ್ಚ ಹೆಚ್ಚಾಗುತ್ತಿದ್ದರೆ ಅದರ ಹೊರೆ ಅಂತಿಮವಾಗಿ ಯಾರ ಮೇಲಾದರೂ ಬೀಳುತ್ತದೆ, ಅದು ರೋಗಿಯಾಗಿರ ಬಹುದು, ವಿಮಾ ಕಂಪನಿ ಯಾಗಿರಬಹುದು.
ಒಬ್ಬ ಹೂಡಿಕೆದಾರನಿಗೆ ಆಸ್ಪತ್ರೆ ಒಂದು ಹೂಡಿಕೆ, ಅಲ್ಲಿ ಆದಾಯವಿದೆ, ಲಾಭವಿದೆ, ಮೌಲ್ಯ ಮಾಪನವಿದೆ. ಬೆಳವಣಿಗೆ ಇದೆ. ಒಂದು ದಿನ ಹೂಡಿಕೆಯಿಂದ ಹೊರಬರುವ ಅವಕಾಶವೂ ಇರಬಹುದು. ಆಸ್ಪತ್ರೆಗೆ ಬಂದಿರುವ ರೋಗಿಗೆ ಇವುಗಳಲ್ಲಿ ಯಾವುದೂ ಮುಖ್ಯವಲ್ಲ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ತಂದೆಗೆ ಆಸ್ಪತ್ರೆಯ ಮೌಲ್ಯಮಾಪನ ಮುಖ್ಯ ವಲ್ಲ. ಹೃದಯ ಚಿಕಿತ್ಸೆಗಾಗಿ ಬಂದ ವೃದ್ಧನಿಗೆ ಖಾಸಗಿ ಬಂಡವಾಳ ನಿಧಿಯ ಪ್ರತಿಫಲ ಮುಖ್ಯವಲ್ಲ. ಅಪಘಾತ ಕ್ಕೊಳಗಾದ ವ್ಯಕ್ತಿಯ ಕುಟುಂಬಕ್ಕೆ ಆಸ್ಪತ್ರೆಯ ಲಾಭದ ಅಂಚಿನ ಬಗ್ಗೆ ಚಿಂತೆಯಿಲ್ಲ, ಅವರಿಗೆ ಬೇಕಿರುವುದು ಚಿಕಿತ್ಸೆ. ಅದಕ್ಕಾಗಿಯೇ ಆರೋಗ್ಯ ಕ್ಷೇತ್ರದಲ್ಲಿ ಒಂದು ಮೂಲಭೂತ ತತ್ವ ಇರಬೇಕು.
ರೋಗಿ ಮೊದಲು, ಲಾಭ ನಂತರ ಎಂದು ಇರಬೇಕು. ವಿದೇಶಿ ಬಂಡವಾಳದಿಂದ ಉತ್ತಮ ಆಸ್ಪತ್ರೆ ಗಳು ನಿರ್ಮಾಣವಾಗಬಹುದು, ಹೊಸ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳು ಬರಬಹುದು, ನಿರ್ವಹಣಾ ಗುಣಮಟ್ಟ ಸುಧಾರಿಸಬಹುದು. ಅತ್ಯುತ್ತಮ ವಿಶ್ವದರ್ಜೆಯ ವೈದ್ಯಕೀಯ ಸೇವೆಗಳು ಹೆಚ್ಚು ಜನರಿಗೆ ಸಿಗಬಹುದು. ಅದೇ ಸಮಯದಲ್ಲಿ, ಆರೋಗ್ಯ ಕ್ಷೇತ್ರವನ್ನು ಯಾವುದೋ ಸಾಮಾನ್ಯ ಉದ್ಯಮದಂತೆ ಮಾತ್ರ ನಿಯಂತ್ರಿಸುವುದು ಸರಿಯೇ? ಆಸ್ಪತ್ರೆಗಳು ಮತ್ತು ನಿರ್ಣಾಯಕ ಆರೋಗ್ಯ ಸೇವಾ ಸಂಸ್ಥೆಗಳಿಗೆ ಪ್ರತ್ಯೇಕ ವಿದೇಶಿ ಬಂಡವಾಳ ನಿಯಮಗಳು ಇರಬೇಕೇ ಎಂಬುದನ್ನು ಭಾರತ ಗಂಭೀರವಾಗಿ ಪರಿಶೀಲಿಸಬೇಕು. ಇದು ಸಂಪೂರ್ಣ ನಿಷೇಧದ ಪ್ರಶ್ನೆಯಾಗಬೇಕಿಲ್ಲ.
ಮಿತಿ, ನಿಯಂತ್ರಣ ಮತ್ತು ಪಾರದರ್ಶಕತೆಯ ಪ್ರಶ್ನೆ. ಸರ್ಕಾರಿ ಆಸ್ಪತ್ರೆ ಎಂದರೆ ಗುಣಮಟ್ಟ ಕಡಿಮೆ ಎಂಬ ಭಾವನೆ ನಮ್ಮ ಸಮಾಜದಲ್ಲಿ ಬೇರೂರಿದೆ. ಹಣವಿರುವವರು ಖಾಸಗಿ ಆಸ್ಪತ್ರೆಗೆ ಹೋಗು ತ್ತಾರೆ, ಮಧ್ಯಮ ವರ್ಗವೂ ಖಾಸಗಿ ಆಸ್ಪತ್ರೆಗೆ ಹೋಗುತ್ತದೆ. ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚಾಗಿ ಬಡವರ ಆಯ್ಕೆಯೆಂದು ನೋಡಲಾಗುತ್ತದೆ. ಈ ಮನೋಭಾವ ಬದಲಾಗಬೇಕು. ಅದರರ್ಥ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳನ್ನು ನಿರಾಕರಿಸುವುದಲ್ಲ.
ಉತ್ತಮ ವೈದ್ಯರು, ಆಧುನಿಕ ಉಪಕರಣಗಳು, ಸ್ವಚ್ಛತೆ, ಕಡಿಮೆ ಕಾಯುವಿಕೆ, ಉತ್ತಮ ನಿರ್ವಹಣೆ ಮತ್ತು ಗೌರವಯುತ ಸೇವೆ ಇವು ಸರ್ಕಾರಿ ಆಸ್ಪತ್ರೆಗಳಲ್ಲೂ ದೊರೆಯಬೇಕು. ಒಳ್ಳೆಯ ಸರ್ಕಾರಿ ಆಸ್ಪತ್ರೆ ಬಡವರಿಗಷ್ಟೇ ಅಲ್ಲ; ಅದು ಮಧ್ಯಮ ವರ್ಗದ ಕುಟುಂಬವನ್ನೂ ಒಂದು ದೊಡ್ಡ ವೈದ್ಯಕೀಯ ಸಾಲದಿಂದ ರಕ್ಷಿಸಬಲ್ಲದು. ನಾವು ವಿದೇಶಿ ಹೂಡಿಕೆಯನ್ನು ದ್ವೇಷಿಸುವ ಅಗತ್ಯವಿಲ್ಲ. ಆದರೆ ಆಸ್ಪತ್ರೆ ಕ್ಷೇತ್ರಕ್ಕೆ ಸಾಮಾನ್ಯ ಕೈಗಾರಿಕಾ ವಿದೇಶಿ ನೇರ ಹೂಡಿಕೆ ನೀತಿಯನ್ನೇ ಅನ್ವಯಿಸು ವುದು ದೊಡ್ಡ ತಪ್ಪು.
ಒಂದು ಕಂಪನಿಯ ಷೇರು ಬೆಲೆ, ಒಂದು ಕಾರಿನ ಬೆಲೆ, ಒಂದು ಮನೆಯ ಬೆಲೆಯನ್ನು ಮಾರುಕಟ್ಟೆ ನಿರ್ಧರಿಸಬಹುದು. ಆದರೆ ಒಬ್ಬ ಮನುಷ್ಯನ ಜೀವದ ಬೆಲೆಯನ್ನು ಮಾರುಕಟ್ಟೆ ನಿರ್ಧರಿಸಬಾರದು. ಆಸ್ಪತ್ರೆಯ ಬಾಗಿಲಿಗೆ ಬರುವ ವ್ಯಕ್ತಿ ಮೊದಲು ರೋಗಿ; ಗ್ರಾಹಕ ನಂತರ. ಅವನ ಜೀವವು ಒಂದು ಹೂಡಿಕೆಯ ಪ್ರತಿಫಲವಲ್ಲ. ಅವನ ಚಿಕಿತ್ಸೆ ಒಂದು ವ್ಯಾಪಾರ ಅವಕಾಶ ಮಾತ್ರವಲ್ಲ. ಅವನ ಕುಟುಂಬದ ಕಣ್ಣೀರನ್ನು ಲೆಕ್ಕಪತ್ರದಲ್ಲಿ ಅಳೆಯಲು ಸಾಧ್ಯವಿಲ್ಲ. ಆದರೆ ಆ ಪ್ರತಿಫಲ ಪಡೆಯುವ ಪ್ರಕ್ರಿಯೆಯಲ್ಲಿ ಭಾರತೀಯ ಕುಟುಂಬಗಳು ವೈದ್ಯಕೀಯ ಸಾಲದಲ್ಲಿ ಮುಳುಗಬಾರದು. ಆದ್ದರಿಂದ ಭಾರತಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಯನ್ನು ವಿರೋಧಿಸುವ ನೀತಿಯಲ್ಲ, ಹೂಡಿಕೆಗೆ ಮಾನವೀಯ ಮತ್ತು ಸಾರ್ವಜನಿಕ ಹಿತದ ಮಿತಿ ವಿಧಿಸುವ ನೀತಿ ಬೇಕಾಗಿದೆ.
ಚಿಕಿತ್ಸೆಯ ಬೆಲೆಯ ಮೇಲೂ ನಿಯಂತ್ರಣ ಮತ್ತು ಪಾರದರ್ಶಕತೆ ಇರಲಿ. ಆರೋಗ್ಯ ವ್ಯವಸ್ಥೆಯನ್ನು ಯಾರಿಗಾಗಿ ಕಟ್ಟುತ್ತಿದ್ದೇವೆ ಎಂಬ ಪ್ರಶ್ನೆಯಿದೆ. ಹೂಡಿಕೆದಾರರಿಗಾಗಿಯೋ, ಆಸ್ಪತ್ರೆಗಳಿಗಾಗಿಯೋ ಅಥವಾ ಭಾರತೀಯರಿ ಗಾಗಿಯೋ? ಸರ್ಕಾರ ನಿರ್ಧರಿಸಲಿ, ತಡವಾಗುವ ಮುನ್ನ.