Hari Paraak Column: ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್: ಸೋಪ್ ಫ್ಯಾಕ್ಟರಿ
ಇತ್ತೀಚೆಗೆ ಪಕ್ಕದ ರಾಜ್ಯದ ಪುಣ್ಯಾತ್ಮರೊಬ್ಬರು ಸಿನಿಮಾ ಒಂದು ಬಿಡುಗಡೆ ಆಗಿ ಒಂದು ವಾರ ಆಗೋವರೆಗೂ ಅದನ್ನು ವಿಮರ್ಶೆ ಮಾಡಬಾರದು ಅಂತ ಕೋರ್ಟಿಗೆ ಹೋಗಿದ್ದರು. ನೆಗೆಟಿವ್ ವಿಮರ್ಶೆ ಮಾಡೋರ ವಿರುದ್ಧದ ಈ ಹೋರಾಟಕ್ಕೆ ಕೋರ್ಟ್ನಲ್ಲಿ ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದರೂ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ವಿಶೇಷವಾಗಿ ಅವರು ಯುಟ್ಯೂಬರ್ ಗಳನ್ನು ಗಮನದಲ್ಲಿಟ್ಟು ಕೊಂಡು ಈ ಕಾನೂನು ಹೋರಾಟ ನಡೆಸುತ್ತಿದ್ದಾರಂತೆ.


ತುಂಟರಗಾಳಿ
hariparaak@gmail.com
ಸಿನಿಗನ್ನಡ
ಇತ್ತೀಚೆಗೆ ಪಕ್ಕದ ರಾಜ್ಯದ ಪುಣ್ಯಾತ್ಮರೊಬ್ಬರು ಸಿನಿಮಾ ಒಂದು ಬಿಡುಗಡೆ ಆಗಿ ಒಂದು ವಾರ ಆಗೋವರೆಗೂ ಅದನ್ನು ವಿಮರ್ಶೆ ಮಾಡಬಾರದು ಅಂತ ಕೋರ್ಟಿಗೆ ಹೋಗಿದ್ದರು. ನೆಗೆಟಿವ್ ವಿಮರ್ಶೆ ಮಾಡೋರ ವಿರುದ್ಧದ ಈ ಹೋರಾಟಕ್ಕೆ ಕೋರ್ಟ್ನಲ್ಲಿ ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದರೂ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ವಿಶೇಷವಾಗಿ ಅವರು ಯುಟ್ಯೂಬರ್ ಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನು ಹೋರಾಟ ನಡೆಸುತ್ತಿದ್ದಾರಂತೆ.
ಕನ್ನಡದ ನಟ ಆದಿತ್ಯ ಕೂಡಾ ತಮ್ಮ ‘ಮುಂದುವರೆದ ಅಧ್ಯಾಯ’ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಯುಟ್ಯೂಬರ್ಗಳ ಮೇಲೆ ರಾಂಗ್ ಆಗಿದ್ದರು. ನಿರ್ದೇಶಕ ಎ.ಪಿ.ಅರ್ಜುನ್ ಕೂಡಾ ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯುಟ್ಯೂಬರ್ಗಳ ಮೇಲೆ ‘ಪೊಗರು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು.
ಆದಿತ್ಯ ಅವರದ್ದು ಅದರ ಮುಂದುವರೆದ ಅಧ್ಯಾಯ ಆಗಿತ್ತು ಅಷ್ಟೇ. ಆದಿತ್ಯ ತಮ್ಮ ಚಿತ್ರದ ಹೆಸರಿಗೆ ತಕ್ಕಂತೆ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಚೇಂಬರ್ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲಿ, ಯುಟ್ಯೂಬರ್ಗಳ ಮೇಲೆ ಕ್ರಮ ತೆಗೆದು ಕೊಳ್ಳುವ ಭರವಸೆ ಸಿಕ್ಕಿತ್ತಾದರೂ ಚೇಂಬರ್ ಇನ್ನೂ ಯಾವ ಕ್ರಮ ತೆಗೆದುಕೊಂಡ ಬಗ್ಗೆ ವರದಿ ಆಗಿಲ್ಲ. ಈಗ ಈ ವಿಷಯ ಕೋರ್ಟ್ನ ಮೆಟ್ಟಿಲೇರಿದೆ.
ಇದನ್ನೂ ಓದಿ: Hari Paraak Column: ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ
ಆದರೆ ಈ ವಿಷಯಕ್ಕೆ ನೆಟ್ಟಿಗರು ಮಾತ್ರ ‘ಇದು ಕೆಟ್ಟ ಬೆಳವಣಿಗೆ, ನಿಮ್ಮ ಸಿನಿಮಾ ನೋಡಿದವರೆಲ್ಲ, ಚೆನ್ನಾಗಿದೆ ಅಂತಲೇ ವಿಮರ್ಶೆ ಮಾಡಬೇಕಾ?’ ಅಂತ ಪ್ರಶ್ನಿಸಿದ್ದಾರೆ. ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯುಟ್ಯೂಬರ್ ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕ ವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ‘ರೋ’ ಅಂತಲೇ ಕರೆದುಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿಯಾಗಿರುತ್ತಾರೆ. ಅವರ ಈ ದಂಧೆಯ ವಿರುದ್ಧ ಮಾತಾಡೋದು ಸರಿ.
ಆದರೆ, ತೀರಾ ಕೋರ್ಟಿಗೆ ಹೋಗಿ ನಮ್ಮ ಚಿತ್ರ ಹೇಗಿದ್ದರೂ ಅದನ್ನು ಚೆನ್ನಾಗಿದೆ ಅನ್ನಬೇಕು. ಇಲ್ಲದಿದ್ದರೆ, ವಿಮರ್ಶೆ ಮಾಡೋದೇ ತಪ್ಪು ಎನ್ನುವಂತೆ ನ್ಯಾಯ ಕೇಳುತ್ತಿರೋದು ಮಾತ್ರ ಸರಿ ಅಲ್ಲ ಅನ್ನೋದು ಬಹುತೇಕರ ಅಭಿಪ್ರಾಯ.
ಲೂಸ್ ಟಾಕ್- ನವೆಂಬರ್ ಕನ್ನಡಿಗ
ನಮಸ್ಕಾರ ಸ್ವಾಭಿಮಾನಿ ಕನ್ನಡಿಗರಿಗೆ. ಕರ್ನಾಟಕದಲ್ಲಿ ಕನ್ನಡಿಗರು, ಪರಭಾಷೆಯವರ ಮಧ್ಯೆ ದಿನಾ ಜಟಾಪಟಿ ನಡೀತಾ ಇದೆ. ನೀವು ಇನ್ನೂ ಮಲಗೇ ಇದ್ದೀರಲ್ಲ?
- ಹಲೋ ಬಾಸ್, ಇದು ಜೂನ್, ನವೆಂಬರ್ ಅಲ್ಲ. ಮನೇಲಿ ಕ್ಯಾಲೆಂಡರ್ ಹಾಕ್ಕೊಂಡಿದ್ದೀರೋ ಇಲ್ವೋ?
ಹೋ, ಅಂದ್ರೆ ನಿಮ್ಮ ಅಭಿಮಾನ 3 ದಿನದಾ ಬಾಳೂ ಅಲ್ವಾ... ನೀವು ನವೆಂಬರ್ ನಲ್ಲಿ ಮಾತ್ರ ಕನ್ನಡಿಗರಾ? ಹೋಗ್ಲಿ, ಬೆಂಗಳೂರಲ್ಲಿ ಕನ್ನಡ ಮಾತಾಡದೇ ಇದ್ರೆ, ಕನ್ನಡ ಹಾಡು ಹಾಕದಿದ್ರೆ, ಕನ್ನಡದಲ್ಲಿ ಬೋರ್ಡ್ ಹಾಕದಿದ್ರೆ ನಮ್ಮವರು ಹೊರಗಿನವರ ಮೇಲೆ ಕೈ ಮಾಡ್ತಾ ರಲ್ಲ ಇದು ಸರೀನಾ?
- ಮತ್ತೆ, ಬೋರ್ಡಿಗಿಲ್ಲದವರೆ ಇಲ್ಲಿಗೆ ಬಂದು, ಕನ್ನಡ ಬೋರ್ಡ್ ಹಾಕಲ್ಲ ಅಂದ್ರೆ, ಸುಮ್ನೆ ಇರ್ಬೇಕಾ. ಕುವೆಂಪು ಅವರೇ ಹೇಳಿದ್ದಾರಲ್ಲ, ಕನ್ನಡಕ್ಕಾಗಿ ಕೈ ಎತ್ತು ಅಂತ. ಇಲ್ಲಾ ಅಂದ್ರೆ ನಾವ್ ತಲೆ ಎತ್ಕೊಂಡ್ ಓಡಾಡೋಕಾಗುತ್ತಾ.
ಸರ್, ಕುವೆಂಪು ಅವರು ಹೇಳಿದ್ದು ಬೇರೆ ಅರ್ಥದಲ್ಲಿ. ಹೋಗ್ಲಿ ಬಿಡಿ, ನೀವು ಕನ್ನಡ ರಕ್ಷಕರು ಅಲ್ವಾ? ಹಾಗಿದ್ರೆ ಕನ್ನಡಕ್ಕಾಗಿ ಹೋರಾಡಿದ ಒಂದಿಬ್ಬರು ಮಹನೀಯರ ಹೆಸರು ಹೇಳಿ ನೋಡೋಣ?
-ನಾರಾಯಣಗೌಡ್ರು, ರೂಪೇಶ್ ರಾಜಣ್ಣ, ಕಿರಿಕ್ ಕೀರ್ತಿ, ಮತ್ತೆ... ಇನ್ನೊಂದಿಬ್ರು ಇದ್ದಾರೆ, ಇರಿ ಹೇಳ್ತೀನಿ
ಅಯ್ಯೋ ಸಾಕು ಬಿಡಿ, ಓವರ್ ಡೋಸ್ ಆಗೋಯ್ತು. ಸರಿ, ಸಾಫ್ಟ್ ವೇರ್ ಕಂಪನಿಗಳಲ್ಲಿ ಕನ್ನಡವನ್ನ, ಕನ್ನಡಿಗರನ್ನ ನಿರ್ಲಕ್ಷ್ಯ ಮಾಡ್ತಿದಾರೆ. ನೀವು ಅಲ್ಲಿ ಕೆಲಸ ಮಾಡ್ತಾ ಇದ್ರೆ ಏನ್ ಮಾಡ್ತಿದ್ರಿ?
-ನಾನು ಅಂಥವರ ಕೈಕೆಳಗೆ ಕೆಲಸ ಮಾಡೋದೇ ಇಲ್ಲ. ಬೇಕಿದ್ರೆ ಸರಕಾರಿ ಕೆಲಸಕ್ಕೆ ಸೇರಿ, ಟೇಬಲ್ ಕೆಳಗೆ ಕೈ ಇಟ್ಕೊಂಡ್ ಜೀವನ ಮಾಡ್ತೀನಿ.
ಓಹೋ, ಟೇಬಲ್ ಮ್ಯಾನರ್ಸ್ ಬಗ್ಗೆ ಮಾತಾಡ್ತಾ ಇದ್ದೀರಿ. ಆದ್ರೆ ಈ ಟೈಮ್ ಟೇಬಲ್ ಹಾಕ್ಕೊಂಡು, ನವೆಂಬರ್ ಬಂದಾಗ ಮಾತ್ರ ‘ಕನ್ನಡ, ಕನ್ನಡ’ ಅನ್ನೋರಿಗೆ ನಿಮ್ಮ ಕಿವಿ ಮಾತು?
- ಏನಿಲ್ಲ ಬಿಡ್ರೀ, ಅದರಲ್ಲಿ ತಪ್ಪೇನಿದೆ? ಅವರಿಗೆ ಒಳ್ಳೆ ಟೈಮ್ ಸೆನ್ಸ್ ಇದೆ ಅಂತ ಅಪ್ರಿಶಿಯೇಟ್ ಮಾಡ್ಬೇಕು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ರಾತ್ರಿ ವೇಳೆ ಸಿಡಿಲು, ಗುಡುಗು ಸಹಿತ ಭಾರಿ ಮಳೆ ಬಂದು ರಸ್ತೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಸೋಮು ತನ್ನ ಗಾಡಿ ಮೇಲೆ ಆ ಮಳೆಯ ಹೊರಗೆ ಹೊರಟ. ಅವನು ಹಾಕಿಕೊಂಡಿದ್ದ ಜರ್ಕಿನ್ನ ಜಿಪ್ ಕಿತ್ತು ಹೋಗಿತ್ತು. ಹಾಗಾಗಿ, ಅದು ಗಾಳಿಗೆ ಅಗಲ ಆಗಿ ಹಾರಾಡುತ್ತಾ ತೊಂದರೆ ಕೊಡುತ್ತಿತ್ತು. ಹೀಗಾಗಿ ಸೋಮು ಅದನ್ನು ಬಿಚ್ಚಿ ಅದರ ಜಿಪ್ ಬೆನ್ನಿನ ಮೇಲೆ ಬರುವಂತೆ, ಅದರ ಹಿಂಭಾಗ ತನ್ನ ಎದೆ ಮೇಲೆ ಬರುವಂತೆ ಮಾಡಿ ಹಾಕಿಕೊಂಡು ಹೊರಟ. ಸ್ವಲ್ಪ ಹೊತ್ತಿನ ನಂತರ, ರಾತ್ರಿ ಮನೆಯ ಇದ್ದ ಖೇಮುಗೆ ಒಂದ್ ಕಾಲ್ ಬಂತು. ನೋಡಿದ್ರೆ ಸೋಮುದು. ಕಾಲ್ ಎತ್ತಿದ ತಕ್ಷಣ, “ಖೇಮು, ಆಕ್ಸಿ ಡೆಂಟ್ ಆಗಿದೆ, ಹೈವೇ ಪಕ್ಕ ಗಾಡಿ ಸ್ಕಿಡ್ ಆಗಿ ಪಕ್ಕದ ಹಳ್ಳಕ್ಕೆ ಬಿದ್ದಿದ್ದೇನೆ. ಬೇಗ ಬಾ" ಅಂತ ಲೊಕೇ ಶನ್ ಹೇಳಿದ ಸೋಮು. ಹೈ ವೇ ರೋಡಿನ ಪಕ್ಕದ ಮನೆಯಿದ್ದ ಖೇಮು ಸುರಿಯುವ ಮಳೆಯ ಅವಸರವಾಗಿ ಗಾಡಿ ಹತ್ತಿ ಹೈ ವೇನಲ್ಲಿ ಹೊರಟ. ಸೋಮು ಹೇಳಿದ ಲೊಕೇಶನ್ ತಲುಪಿದಾಗ ಅಲ್ಲಿ ಸೋಮು ಗಾಡಿ ಬಿದ್ದಿತ್ತು. ಪಕ್ಕದಲ್ಲಿ ಬಗ್ಗಿ ನೋಡಿದಾಗ ಆಳವಾದ ಹಳ್ಳದಲ್ಲಿ ಬಿದ್ದಿದ್ದ ಸೋಮು ಕಾಣಿಸಿದ. ಖೇಮು ಏನೇ ಪ್ರಯತ್ನ ಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು, ಆಸ್ಪತ್ರೆಗೆ ತರೋಕೆ ಮುಂಚೆನೇ ಇವರ ಪ್ರಾಣ ಹೋಗಿದೆ ಅಂತ ಹೇಳಿಬಿಟ್ಟರು. ದುಃಖದಲ್ಲಿ ಕೂತಿದ್ದ ಖೇಮುವನ್ನು ಪೊಲೀಸರು ವಿಚಾರಿಸಲು ಬಂದರು. ಖೇಮುವನ್ನು ಪೊಲೀಸ್ ಆಫೀಸರ್ ಕೇಳಿದ “ನೀವು ಅಲ್ಲಿಗೆ ಹೋದಾಗ ಅವರ ಪ್ರಾಣ ಹೋಗಿತ್ತಾ?". ಅದಕ್ಕೆ ಖೇಮು ಹೇಳಿದ, “ಇ ಸರ್, ಆಕ್ಸಿಡೆಂಟ್ ಆಗಿ ಬಿದ್ದ ರಭಸಕ್ಕೆ ಸೋಮುನ ತಲೆ ಉಲ್ಟಾ ತಿರುಗಿಕೊಂಡಿತ್ತು. ನಾನು ಅದನ್ನ ಸರಿ ಮಾಡಿದೆ. ತಕ್ಷಣ ಪ್ರಾಣ ಹೋಯ್ತು"
ಲೈನ್ಮ್ಯಾನ್
ಒಂದರ ಹಿಂದೆ ಒಂದು ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್
- ‘ಸೋಪ್’ ಫ್ಯಾಕ್ಟರಿ
ಸೋತವರನ್ನು ಆಡಿಕೊಳ್ಳೋ ಮಂದಿ, ಆಡಿಕೊಂಡು ಸಾಕಾದಾಗ ಏನಂತಾರೆ?
-ಅಯ್ಯೋ, ಹೋಗ್ಲಿ ಬಿಡಿ, ದಿನಾ ಸೋಲೋರಿಗೆ ನಗೋರ್ಯಾರು
ಯಾರೋ ಕಿರಿಕಿರಿ ಮಾಡಿದ್ರು ಅಂತ ಆ ಸಿಟ್ಟನ್ನ ಊಟದ ಮೇಲೆ ತೋರಿಸುವವರಿಗೆ ಒಂದು ಮಾತು
-ಅವ್ರ್ಯಾರೋ ತಲೆ ತಿಂದ್ರು ಅಂತ, ನಾವು ತಿನ್ನೋದು ಬಿಡೋಕಾಗುತ್ತಾ..
ಬೆಟ್ಟದ ತುದಿಯಲ್ಲಿ ನಿಂತಿದ್ದ ಸೋಮು: ನನ್ನ ಜೀವನದಲ್ಲಿ ನಂಗೆ ಬೆನ್ನು ತಟ್ಟೋರೇ ಯಾರೂ ಇಲ್ಲ
-ಖೇಮು: ನಾನಿದ್ದೀನಿ. ಆದ್ರೆ ಈಗ ಬೆನ್ನು ತಟ್ಟಿದ್ರೆ ನಿಂಗೇ ಕಷ್ಟ, ಬ್ಯಾಡ ಬಿಡು.