Dr T N Vasudevamurthy Column: ತುರ್ತು ಪರಿಸ್ಥಿತಿ: ಯೋಗ್ಯ ಸರ್ವಾಧಿಕಾರ ಸ್ಥಾಪನೆಯ ಸಂಕಲ್ಪ
“ಗುಲಾಮತನವನ್ನು ಬಿಟ್ಟುಬಿಡಿ" ಎಂದು ಹೇಳಿ ಸುಮ್ಮನಾದರೆ ಸಾಕಾಗದು. ಎರಡು ಸಾವಿರ ವರ್ಷಗಳ ಗುಲಾಮತನ ನಮ್ಮ ದೇಹ ಮನಸ್ಸು ಆತ್ಮಗಳನ್ನೂ ಹೊಕ್ಕಿ ಬಿಟ್ಟಿದೆ. ರೋಗಿಗಳಿಗೆ “ಆರೋಗ್ಯವನ್ನು ಹುಷಾರಾಗಿ ನೋಡಿಕೋ" ಎಂದಷ್ಟೇ ಹೇಳಿದರೆ ಸಾಲದು. ಕೇವಲ ಔಷಧಿಯಿಂದಲೂ ಪ್ರಯೋಜನ ವಾಗದು, ಈ ಗುಲಾಮತನಕ್ಕೆ ಒಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ.


ಭಿನ್ನಭಾವ (ಭಾಗ- 1)
ಡಾ.ಟಿ.ಎನ್.ವಾಸದೇವಮೂರ್ತಿ
ಇಂದಿರಾ ಗಾಂಧಿಯವರು 50 ವರ್ಷಗಳ ಹಿಂದೆ ದೇಶದ ಮೇಲೆ ಹೇರಿದ ‘ತುರ್ತು ಪರಿಸ್ಥಿತಿ’ ಯನ್ನು ‘ಅದೊಂದು ಕರಾಳ ನೆನಪು’ ಎನ್ನುವವರು ಇರುವಂತೆಯೇ, ಅದನ್ನು ಸಕಾರಾ ತ್ಮಕವಾಗಿ ನೋಡಿದವರೂ ಉಂಟು. ವಿನೋಬಾ ಭಾವೆ, ದ.ರಾ.ಬೇಂದ್ರೆ ಮುಂತಾದ ಅಪ್ಪಟ ಭಾರತೀಯರು ಇಂದಿರಾರನ್ನು ಶ್ಲಾಘಿಸಿದರು, ಬೆಂಬಲಿಸಿದರು. ಅವರಲ್ಲಿ ಆಚಾರ್ಯ ರಜನೀಶ್ (ಓಶೋ) ಕೂಡ ಒಬ್ಬರಾಗಿದ್ದರು. ತುರ್ತು ಪರಿಸ್ಥಿತಿಯ ಕುರಿತು ‘ಓಶೋ’ ಅಲ್ಲಲ್ಲಿ ನುಡಿದಿರುವ ಮಾತುಗಳ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ.
ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಬರೀ ಈ ದೇಶದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಇಡೀ ಜಗತ್ತಿನಾದ್ಯಂತ ಹರಡಬೇಕು ಎಂದು ಬಯಸುತ್ತೇನೆ. ಆದರೆ ನಮ್ಮ ಸಾವಿರಾರು ವರ್ಷಗಳ ಗುಲಾಮತನದ ಸಂಸ್ಕಾರವನ್ನು ಪ್ರಜಾಪ್ರಭುತ್ವದ ಮೌಲ್ಯಗಳ ನೆರವಿನಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳೆಲ್ಲವೂ ಬರೀ ಮಾತನಾಡುವ ಸ್ವಾತಂತ್ರ್ಯಕ್ಕೆ ಸೀಮಿತ ವಾಗಿವೆ.
“ಗುಲಾಮತನವನ್ನು ಬಿಟ್ಟುಬಿಡಿ" ಎಂದು ಹೇಳಿ ಸುಮ್ಮನಾದರೆ ಸಾಕಾಗದು. ಎರಡು ಸಾವಿರ ವರ್ಷಗಳ ಗುಲಾಮತನ ನಮ್ಮ ದೇಹ ಮನಸ್ಸು ಆತ್ಮಗಳನ್ನೂ ಹೊಕ್ಕಿ ಬಿಟ್ಟಿದೆ. ರೋಗಿಗಳಿಗೆ “ಆರೋಗ್ಯವನ್ನು ಹುಷಾರಾಗಿ ನೋಡಿಕೋ" ಎಂದಷ್ಟೇ ಹೇಳಿದರೆ ಸಾಲದು. ಕೇವಲ ಔಷಧಿ ಯಿಂದಲೂ ಪ್ರಯೋಜನವಾಗದು, ಈ ಗುಲಾಮತನಕ್ಕೆ ಒಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ.
ಗುಲಾಮರಿಗೆ ಸ್ವಾತಂತ್ರ್ಯವನ್ನು ನೀಡಿದರೆ ಅವರು ಖಂಡಿತ ಹಿಂಸಾಚಾರಕ್ಕೆ ಇಳಿಯುತ್ತಾರೆ. ಮೊದಲು ಒಂದು ಸೂಕ್ತ ವಾತಾವರಣವನ್ನು ಉಂಟು ಮಾಡಿಕೊಳ್ಳದೇ ಪ್ರಜಾಪ್ರಭುತ್ವವನ್ನು ತರಲಾಗದು. ಆದ್ದರಿಂದಲೇ ‘ಸ್ವಾತಂತ್ರ್ಯ’ ಬಂದಂದಿನಿಂದ ನಾವು ಕೈಗೆತ್ತಿಕೊಂಡ ಪ್ರತಿಯೊಂದು ಕಾರ್ಯಯೋಜನೆಯೂ ವಿಫಲವಾಗುತ್ತಿರುವುದು, ಈ ಮೂವತ್ತು ವರ್ಷಗಳಲ್ಲಿ ಸಮಸ್ಯೆಗಳು ಇನ್ನೂ ನೂರು ಪಟ್ಟು ಉಲ್ಬಣಗೊಂಡಿವೆ.
ಇದನ್ನೂ ಓದಿ: Srivathsa Joshi Column: ಹಂಚಿಕೆಯ ಪಂಚ-ತಂತ್ರದಲಿ ಪಾಲಿಗೆ ಬಂದಿದ್ದೇ ಪಂಚಾಮೃತ !
ನಾನು ಪ್ರಜಾಪ್ರಭುತ್ವವನ್ನು ಎಷ್ಟು ಪ್ರೀತಿಸುತ್ತೇನೆಂದರೆ ಜನರಿಗೆ ಅದನ್ನು ಉಳಿಸಿಕೊಳ್ಳಲು ತರಬೇತಿ ನೀಡಬಲ್ಲ ಒಂದು ಯೋಗ್ಯ ಸರ್ವಾಧಿಕಾರ ಸ್ಥಾಪನೆಯಾದರೂ ಅಡ್ಡಿಯಿಲ್ಲ ಎಂದು ನಂಬಿದ್ದೇನೆ. ನನ್ನ ಮಾತುಗಳು ನಿಮಗೆ ವಿರೋಧಾಭಾಸದಂತೆ ಕಾಣಿಸಬಹುದು. ಆದರೆ ಕೆಲವು ವಿರೋಧಾಭಾಸಗಳು ನಮ್ಮನ್ನು ವಂಚಿಸಿ ಬಿಡುತ್ತವೆ.
ನನ್ನ ಮಾತುಗಳಲ್ಲಿ ಎಂಥ ಮೂರ್ಖನಿಗೂ ಸುಲಭವಾಗಿ ವಿರೋಧಾಭಾಸಗಳು ಕಾಣಿಸುತ್ತವೆ. ಆದರೆ ಬದುಕು ಎಂದಿಗೂ ನಮ್ಮ ಸರಳ ತರ್ಕಗಳನ್ನು ಮೀರಿರುತ್ತದೆ, ಅದು ಎಂದಿಗೂ ವಿರೋಧಾ ಭಾಸದ ಹಾದಿಗಳ ನಡೆಯುತ್ತದೆ.
ಸದ್ಯಕ್ಕೆ ನಮ್ಮ ದೇಶವು 20 ಕೋಟಿ ಜನಸಂಖ್ಯೆಯನ್ನು ಧರಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಆದರೆ ನಮ್ಮ ಇಂದಿನ ಜನಸಂಖ್ಯೆ 70 ಕೋಟಿ. ಈ ಶತಮಾನದ ಅಂತ್ಯದ ವೇಳೆಗೆ ಚೀನಾವನ್ನೂ ಹಿಂದಿಕ್ಕಿ ನಾವು 100 ಕೋಟಿಯನ್ನು ದಾಟಲಿದ್ದೇವೆ. ಬರೀ ಜನಸಂಖ್ಯೆಯಲ್ಲಿ ಮಾತ್ರವಲ್ಲ, ಹಸಿವು ಬಡತನಗಳ ವಿಷಯದಲ್ಲೂ ಇದು ಜಗತ್ತಿನ ಅತಿದೊಡ್ಡ ದೇಶವಾಗಲಿದೆ.

ಹಸಿದವರ ಮಧ್ಯೆ ನಿಂತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕುರಿತು ಮಾತನಾಡುವುದು ನಿಜಕ್ಕೂ ಅಸಂಗತ. ನಮ್ಮ ಸದ್ಯದ ಪ್ರಜಾಪ್ರಭುತ್ವ ಹಿಂಸೆ ಹಾಗೂ ಸಮಸ್ಯೆಗಳನ್ನು ಮಾತ್ರ ಸೃಷ್ಟಿಸಬಲ್ಲದು. ಹಸಿದವನು ಸುಲಭವಾಗಿ ಹಿಂಸಾಚಾರಕ್ಕಿಳಿಯುತ್ತಾನೆ.
ಮನುಷ್ಯರಂತೆ ಬದುಕುವ ಅವಕಾಶವೂ ಇಲ್ಲದ ವಾತಾವರಣದಿಂದ ಉದಾತ್ತ ಪ್ರಜೆಗಳು ಹುಟ್ಟಿ ಬರಬೇಕೆಂದು ನಿರೀಕ್ಷಿಸಲಾಗದು. ನಮ್ಮ ಸದ್ಯದ ಪ್ರಜಾಪ್ರಭುತ್ವ ದುಷ್ಟ ರಾಜಕಾರಣಿಗಳಿಗೆ ಮಾತ್ರ ಅನುಕೂಲಕರವಾಗಿದೆ. ಆದ್ದರಿಂದಲೇ ಎಲ್ಲ ರಾಜಕಾರಣಿಗಳೂ ನನ್ನನ್ನು ದೂಷಿಸುತ್ತಿರು ವುದು. ಮೊರಾರ್ಜಿ ದೇಸಾಯಿ ಮೊನ್ನೆಯಷ್ಟೇ ರಾಜ್ಕೋಟ್ನಲ್ಲಿ “ಪ್ರಜಾಪ್ರಭುತ್ವದ ಶತ್ರುವಾದ ಆಚಾರ್ಯ ರಜನೀಶರನ್ನು ಗುಜರಾತ್ನಿಂದ ಬಹಿಷ್ಕರಿಸಲಾಗಿದೆ" ಎಂದು ಘೋಷಿಸಿದ್ದಾರೆ.
ಈ ಪ್ರಜಾಪ್ರಭುತ್ವವಾದಿಗಳಿಗೆ ತಮ್ಮ ಮಾತುಗಳಲ್ಲಿರುವ ದ್ವಂದ್ವವೇ ಕಾಣಿಸುವುದಿಲ್ಲವಲ್ಲ! ಆ ಪ್ರಬುದ್ಧತೆ ಬರುವವರೆಗೂ ಅಂಥ ಅರ್ಥವಿಲ್ಲದ ಖಾಲಿ ಪದಗಳ ಬಳಕೆಯನ್ನು ಸ್ವಲ್ಪ ಕಾಲ ನಿಲ್ಲಿಸುವುದೇ ಕ್ಷೇಮ. ಭಾರತ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದುದರಿಂದ ನಮ್ಮ ಬಹುತೇಕ ನಾಯಕರು ಗಳು ಬ್ರಿಟನ್ನಿನ ವಿದ್ಯಾಭ್ಯಾಸ ಮಾಡಿದ್ದರು.
ಅಲ್ಲಿ ಪ್ರಜಾಪ್ರಭುತ್ವ ಅದ್ಭುತವಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಇಲ್ಲೂ ಅದನ್ನೇ ತರಲು ಪ್ರಯತ್ನಿಸಿದರು. ಆದರೆ ಇಂಗ್ಲೆಂಡಿನ ಪ್ರಜಾಪ್ರಭುತ್ವಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇಂಗ್ಲೆಂಡನ್ನು ಅನುಕರಿಸಿದ ಮಾತ್ರಕ್ಕೆ ಭಾರತ ಇಂಗ್ಲೆಂಡ್ ಆಗಿಬಿಡುವುದೇ? ನಮ್ಮ ಇತಿಹಾಸ- ಪರಂಪರೆ ಎಂಥದ್ದು, ಇದಕ್ಕೆ ಎಂಥ ರಾಜಕೀಯ ವ್ಯವಸ್ಥೆ ಹೊಂದುತ್ತದೆ ಎಂಬುದನ್ನು ಕುರಿತು ಆಲೋಚನೆ ಮಾಡದೆ ಈ 30 ವರ್ಷಗಳನ್ನು ಸುಮ್ಮನೆ ಹಾಳುಮಾಡಿಕೊಂಡೆವು.
ಮೊದಲಿಗೆ, ‘ರಾಷ್ಟ್ರೀಯತೆ’ ಎಂಬ ಪರಿಕಲ್ಪನೆಯೇ ಭಾರತಕ್ಕೆ ಹೊಸತು. ಇಲ್ಲಿ ನೂರಾರು ಸಂಸ್ಥಾನ ಗಳಿದ್ದವು. ಪ್ರತಿಯೊಂದೂ ಧಾರ್ಮಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಪರಸ್ಪರ ಕಿತ್ತಾಡು ತ್ತಿದ್ದವು. ಇಂಗ್ಲೆಂಡಿನಲ್ಲಿ ಇದ್ದುದು ಎರಡೇ ರಾಜಕೀಯ ಪಕ್ಷಗಳು. ಇದರೂ ನೂರಾರು ರಾಜಕೀಯ ಪಕ್ಷಗಳಿವೆ. ಒಂದು ಸ್ಥಿರವಾದ ಸರಕಾರ ನೀಡಲು ಇಂದು ಎಲ್ಲ ರಾಜಕೀಯ ಪಕ್ಷಗಳೂ ಅಸಮರ್ಥ ವಾಗಿವೆ.
ನಮ್ಮ ರಾಜಕಾರಣಿಗಳಿಗೆ ಇವೆಲ್ಲ ಗೊತ್ತಿದ್ದರೂ ರಾಜಕೀಯ ಅಧಿಕಾರವೊಂದೇ ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ. ಯಾರಿಗೂ ದೇಶದ ನಿಜವಾದ ಸಮಸ್ಯೆಯನ್ನು ಬೆದಕುವ ಚಿಂತೆ ಇದ್ದಂತಿಲ್ಲ. ಪ್ರಜಾಪ್ರಭುತ್ವ ಬಡವರಿಗೆ ಎಂದೂ ಬಾಧಕವೆನಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಹಣಕ್ಕಾಗಿ ಮತವನ್ನು ಮಾರಿಕೊಳ್ಳಲು ಸಾಧ್ಯ.
ವೋಟನ್ನು ಮಾರಿಕೊಳ್ಳುವ ಜನರಿರುವ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಹೇಗೆ ಸ್ಥಾಪನೆಯಾದೀತು? ಸ್ವಾತಂತ್ರ್ಯದ ಹೆಸರು ಹೇಳಿ ಎಲ್ಲ ತರಹದ ಭ್ರಷ್ಟರು, ಕಳ್ಳಸಾಗಾಣಿಕೆದಾರರು, ಗೂಂಡಾಗಳು ಸುಲಭವಾಗಿ ಇಂಥ ವ್ಯವಸ್ಥೆಯ ಲಾಭ ಪಡೆಯುತ್ತಾರೆ. ನಾನು ಕಂಡಂತೆ ಭಾರತದ ಜನ ಮಹಾ ಸ್ವಾರ್ಥಿಗಳು. ಇನ್ನೊಬ್ಬರ ಕಷ್ಟವನ್ನು ಕಂಡು ಸ್ವಲ್ಪವೂ ಮರುಗದೆ ‘ಪ್ರತಿಯೊಬ್ಬರೂ ಅವರವರ ಪೂರ್ವಕೃತ ಕರ್ಮವನ್ನು ಅನುಭವಿಸುತ್ತಾರೆ’ ಎಂದು ವಾದಿಸುವ ಈ ಜನ ತಮ್ಮ ಸ್ವಾರ್ಥವನ್ನು ಮುಚ್ಚಿಟ್ಟುಕೊಳ್ಳಬಲ್ಲ ಮಹಾಚಾಣಾಕ್ಷರು.
ನಮ್ಮ ದುರಂತಕ್ಕೆ ನಮ್ಮ ಸಾಮಾಜಿಕ ರಚನೆ, ನಮ್ಮ ಧಾರ್ಮಿಕ ಕಂದಾಚಾರಗಳು ಕಾರಣವೆಂದು ಇವರು ಯೋಚಿಸುವುದೇ ಇಲ್ಲ. ಇವರು ಮಾನವರಾಗಿ ಹುಟ್ಟಿದ ಮೇಲೆ ಮಕ್ಕಳನ್ನು ಹುಟ್ಟಿಸುವುದು ತಮ್ಮ ಮೂಲಭೂತ ಹಕ್ಕು ಎಂದು ಭಾವಿಸಿದ್ದಾರೆ.
ಸಾಲದ್ದಕ್ಕೆ ಈ ಜನ ಮಹಾ ಸೋಮಾರಿಗಳು, ತಮ್ಮ ಸೋಮಾರಿತನವನ್ನು ಮುಚ್ಚಿಟ್ಟುಕೊಳ್ಳಲು ಇಡೀ ಜಗತ್ತೇ ಮಾಯೆ ಎಂಬ ಸಿದ್ಧಾಂತ ಮಾಡಿಟ್ಟುಕೊಂಡು ಕೂತಿದ್ದಾರೆ. ಪ್ರಜಾಪ್ರಭುತ್ವವನ್ನು ನೆಚ್ಚಿಕೊಂಡು ಇಂಥ ಜನರನ್ನು ಸರಿದಾರಿಗೆ ತರಲು ಎಂದಿಗೂ ಸಾಧ್ಯವಿಲ್ಲ. ಇಂಥ ವ್ಯವಸ್ಥೆಗೆ ಯೋಗ್ಯ ಸರ್ವಾಧಿಕಾರವೇ ನೇರಮದ್ದು.
ಯೋಗ್ಯ ಸರ್ವಾಧಿಕಾರವೆಂದರೆ ಪ್ರಜಾಪ್ರಭುತ್ವಕ್ಕೆ ದಾರಿ ಮಾಡಿಕೊಡಬಲ್ಲ ಸರ್ವಾಧಿಕಾರ ಎಂದರ್ಥ. ಇದಕ್ಕೆ ಇಂದಿರಾ ಗಾಂಧಿಯೇ ಯೋಗ್ಯ ವ್ಯಕ್ತಿ ಎಂಬುದು ನನ್ನ ಅಭಿಮತ. ಏಕೆಂದರೆ ಮೊದಲಿಗೆ, ಆಕೆ ಒಬ್ಬ ಮಹಿಳೆ. ಹಾಗಾಗಿ ಎಲ್ಲ ಗಂಡಸರಿಗಿಂತಲೂ ಆಕೆ ಹೆಚ್ಚು ಯೋಗ್ಯಳು. ಒಬ್ಬ ತಾಯಿಯೂ ಆಗಿರುವ ಆಕೆಗೆ ದೇಶದ ಬಗ್ಗೆ ನಿಜವಾದ ಕಳಕಳಿ ಇದೆ ಎಂದು ನಾನು ಬಲ್ಲೆ.
ಜತೆಗೆ ಒಬ್ಬ ಸರ್ವಾಧಿಕಾರಿಗೆ ಇರಬೇಕಾದ ಎಲ್ಲ ಗುಣಲಕ್ಷಣಗಳೂ ಆಕೆಗಿವೆ. ಸಮಸ್ಯೆ ಏನೆಂದರೆ ಒಬ್ಬ ವ್ಯಕ್ತಿ ಒಮ್ಮೆ ಸರ್ವಾಧಿಕಾರಿಯಾದರೆ ಮತ್ತೆ ಆತನಿಂದ ಅಧಿಕಾರವನ್ನು ಹಿಂಪಡೆಯುವುದು ಅಸಾಧ್ಯ. ತನ್ನ ಅಧಿಕಾರವನ್ನು ಪ್ರಜಾಪ್ರಭುತ್ವಕ್ಕೆ ಹಸ್ತಾಂತರಿಸುವುದು ಆತನಿಗೂ ತುಂಬ ಕಷ್ಟವಾಗುತ್ತದೆ. ಆದರೆ ಇಂದಿರಾಗೆ ಈಗಾಗಲೇ ಅರವತ್ತು ತುಂಬಿದೆ,
ಇನ್ನು 15 ವರ್ಷಗಳಲ್ಲಿ ಆಕೆಯ ವಯಸ್ಸು 75 ವರ್ಷಗಳಾಗುತ್ತವೆ. ಅಷ್ಟು ದೀರ್ಘಾವಧಿಯಲ್ಲಿ ಅಧಿಕಾರವನ್ನು ಚೆನ್ನಾಗಿಯೇ ಅನುಭವಿಸುವ ಆಕೆ ನಿಜಕ್ಕೂ ಬಳಲಿರುತ್ತಾಳೆ. ಈಗಾಗಲೇ ಆಕೆ ಅಽಕಾರದಿಂದ ಸಾಕಷ್ಟು ಬಳಲಿದ್ದಾಳೆ. ದೇಶವನ್ನು ಒಂದು ಸರಿದಾರಿಗೆ ತರಬೇಕು ಎಂಬ ಏಕಮೇವ ಉದ್ದೇಶದಿಂದ ಈಗಲೂ ಆಕೆ ಅಧಿಕಾರ ಸೂತ್ರಗಳನ್ನು ತನ್ನ ಕೈಲಿ ಹಿಡಿದಿಟ್ಟುಕೊಂಡಿದ್ದಾಳೆ.
ನಾನು ಕಂಡಂತೆ ಇಂದಿನವರೆಗೂ ಆಕೆ ತುಂಬ ಸೂಕ್ಷ್ಮಜ್ಞತೆಯಿಂದ, ಉದಾರ ಬುದ್ಧಿಯಿಂದ ಅಽಕಾರ ನಡೆಸಿಕೊಂಡು ಬಂದಿದ್ದಾಳೆ. ಆಕೆಯ ಕೈಯಲ್ಲಿ ಸರ್ವಾಧಿಕಾರ ಸರಿಯಾದ ದಾರಿಯಲ್ಲಿ ನಡೆಯ ಬಲ್ಲದು ಎಂಬ ಸಂಪೂರ್ಣ ಭರವಸೆ ನನಗಿದೆ. ಮೊರಾರ್ಜಿ ದೇಸಾಯಿಯಂಥವರು ಸರ್ವಾಧಿಕಾರ ವನ್ನು ಸುಲಭವಾಗಿ ಹೊಲಬುಗೆಡಿಸುತ್ತಾರೆ. ಮೊರಾರ್ಜಿ ದೇಸಾಯಿ ಶುದ್ಧ ಮೂಲಭೂತವಾದಿ, ತೀರಾ ಸಂಕುಚಿತ ಬುದ್ದಿಯವನು, ಮಹಾ ಹಠಮಾರಿ ಹಾಗೂ ವಿಪರೀತ ಮಹತ್ವಾಕಾಂಕ್ಷಿ. ಆತನೇನಾದರೂ ಅಧಿಕಾರದಲ್ಲಿ ಇದ್ದಿದ್ದರೆ “ಇನ್ನು 15 ವರ್ಷಗಳ ಕಾಲ ಚುನಾವಣೆ ನಡೆಯ ಕೂಡದು" ಎಂದು ನಾನು ಖಂಡಿತ ಹೇಳಿಕೆ ನೀಡುತ್ತಿರಲಿಲ್ಲ. ಬದಲಿಗೆ ಪ್ರತಿ ಆರು ತಿಂಗಳಿಗೂ ಚುನಾವಣೆಗಳು ತಪ್ಪದೆ ನಡೆಯತಕ್ಕದ್ದು ಎನ್ನುತ್ತಿದ್ದೆ.
ದೇಶದ ವಾತಾವರಣವನ್ನು ಪ್ರಜಾಪ್ರಭುತ್ವಕ್ಕೆ ಅನುಕೂಲವಾಗುವಂತೆ ಬದಲಾಯಿಸಲು ಇಂದಿರಾ ನಿಸ್ಸಂಶಯವಾಗಿ ನೆರವಾಗಬಲ್ಲಳು. 4 ತಲೆಮಾರುಗಳಿಂದಲೂ ಪ್ರಜಾಪ್ರಭುತ್ವವನ್ನು ಗೌರವಿಸು ತ್ತಲೇ ಬಂದಿರುವ ಕುಟುಂಬದಲ್ಲಿ ಹುಟ್ಟಿದ ಆಕೆಗೆ ನಮ್ಮ ಬೆಂಬಲ ಬೇಕಿದೆ. ಆಕೆ ಪಶ್ಚಿಮದಲ್ಲಿ ವಿದ್ಯಾಭ್ಯಾಸ ಮಾಡಿದವಳು, ಆಕೆಯ ತಂದೆಯೂ ಪಶ್ಚಿಮದಲ್ಲಿ ತರಬೇತಿ ಪಡೆದವರು.
ಭಾರತಕ್ಕೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದೇ ಆಕೆಯ ತಂದೆ. ನೆಹರು ಎಂದೂ ಭಾರತೀಯರಂತೆ ಆಲೋಚನೆ ಮಾಡಿದವರಲ್ಲ. ಇಂಥವರ ಮಗಳು ಪ್ರಜಾಪ್ರಭುತ್ವವನ್ನು ಖಂಡಿತ ನಾಶಮಾಡಳು. ಆಕೆಯ ಸಮಸ್ಯೆ ಏನೆಂದರೆ ಸರ್ವಾಧಿಕಾರದ ಕಲ್ಪನೆಯ ಬಗ್ಗೆ ಆಕೆಗೂ ಹಿಂಜರಿಕೆ ಇದೆ. ಇಂದು ಆಕೆ ಆ ಹಿಂಜರಿಕೆಯಿಂದ ಹೊರಬರಬೇಕಾಗಿದೆ. ಪಶ್ಚಿಮ ದೇಶಗಳು ಆಕೆಯನ್ನು ನಿಂದಿಸಬಹುದು, ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಕಿಂಚಿತ್ತಾದರೂ ತ್ಯಾಗ ಮಾಡಲು ಆಕೆ ಸಿದ್ಧಳಿರಬೇಕು.
ಏಕೆಂದರೆ ಪ್ರಜಾಪ್ರಭುತ್ವವನ್ನು ಗೌರವಿಸುವ ಆಕೆಯನ್ನು ಚರಿತ್ರೆಯು ಇನ್ನು ಮುಂದೆ ‘ಒಬ್ಬ ನಿರಂಕುಶ ಸರ್ವಾಧಿಕಾರಿ’ ಎಂದು ಗುರುತಿಸಲಿದೆ. ಚರಿತ್ರೆಯಲ್ಲಿ ಆ ಕಳಂಕವನ್ನು ಹೊತ್ತು ನಿಲ್ಲಲು ಆಕೆ ಸಿದ್ಧಳಾಗುವುದಾದರೆ ದೇಶಕ್ಕೆ ಮಹಾ ಉಪಕಾರವಾಗಲಿದೆ.
ಇನ್ನು 15 ವರ್ಷಗಳ ಅವಧಿಯಲ್ಲಿ ಇಲ್ಲಿ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಬಹುದು. ದೇಶದಾದ್ಯಂತ ಒಂದೇ ಸಮನೆ ಗಲಭೆ ಎಬ್ಬಿಸುತ್ತಿರುವ ಎಲ್ಲ ಫಟಿಂಗ ರಾಜಕಾರಣಿಗಳನ್ನೂ ಹತ್ತಿಕ್ಕಬಹುದು, ಅವರ ಎಲ್ಲ ಬಗೆಯ ಕಳ್ಳಸಾಗಾಣಿಕೆ, ಅಪರಾಧಗಳನ್ನು ಕೂಡಲೆ ನಿಲ್ಲಿಸಬಹುದು. ಇನ್ನು 15 ವರ್ಷಗಳ ಅವಧಿಯಲ್ಲಿ ದೇಶವನ್ನು, ಸ್ವಾರ್ಥ ಹಾಗು ಸೋಮಾರಿತನಗಳಿಂದ ಮುಕ್ತಗೊಳಿಸಿ ಶ್ರೀಮಂತಗೊಳಿಸಬಹುದು.
ನಿಜಕ್ಕೂ ಇದು ಎಲ್ಲ ರೀತಿಯಿಂದಲೂ ಮಹಾಶ್ರೀಮಂತ ದೇಶ ಎಂದು ತುಂಬ ಜನಕ್ಕೆ ತಿಳಿದಿಲ್ಲ. ಪುರೋಹಿತರುಗಳು ಮತ್ತು ರಾಜಕಾರಣಿಗಳು ದೇಶದ ಜನರ ಸಹಜ ಬುದ್ಧಿಶಕ್ತಿಯನ್ನೇ ಹಾಳು ಮಾಡಿದ್ದಾರೆ. ಇದೆಲ್ಲ ಒಂದು ಶಸ್ತ್ರಚಿಕಿತ್ಸೆಯಿಂದ ಮಾತ್ರ ಪರಿಹರಿಸಬಹುದಾದ ರೋಗಗಳಾಗಿವೆ. ಯಾವ ಬದಲಾವಣೆಯನ್ನೂ ತರದ ಬರಿಮಾತಿನ ಪ್ರಜಾಪ್ರಭುತ್ವದಿಂದ ಪ್ರಯೋಜನವಿಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಎಂದೂ ಪ್ರಜಾಪ್ರಭುತ್ವ ಇರಲೇ ಇಲ್ಲ. ಪ್ರಜಾಪ್ರಭುತ್ವ ಗ್ರೀಕರ ಪರಿಕಲ್ಪನೆ. ಭಾರತದ ಮಣ್ಣಿನಲ್ಲಿ ಅದರ ಬೇರುಗಳೇ ಇಲ್ಲ. ಆ ಪರಕೀಯ ಕಲ್ಪನೆಯನ್ನು ತರುವ ಮುನ್ನ ಈ ನೆಲವನ್ನು, ಈ ಗಾಳಿಯನ್ನು, ಇಲ್ಲಿನ ವಾತಾವರಣವನ್ನು ಮೊದಲು ಬದಲಿಸಬೇಡವೇ? ಹಾಗೆ ಬದಲಿಸಲು ಹೊರಡುವ ನನ್ನಂಥವರು ಇಲ್ಲಿ ಜನವಿರೋಧಿಗಳು ಎಂದು ಕರೆಸಿಕೊಳ್ಳ ಬೇಕಾಗುತ್ತದೆ.
ಇವರ ಎಲ್ಲ ಸಮಸ್ಯೆಗಳ ಮೂಲವಾಗಿರುವ ಇವರ ಸಂಸ್ಕೃತಿ ಹಾಗೂ ಧರ್ಮಗಳನ್ನು ಬುಡಮೇಲು ಮಾಡಲು ಹೊರಟಿರುವುದರಿಂದಲೇ ಈ ಜನ ನನ್ನನ್ನು ದ್ವೇಷಿಸುತ್ತಿರುವುದು, ಇದಲ್ಲದೇ ಬೇರೆ ಮತ್ತೇನು ಕಾರಣವಿದೆ? ಪ್ರಜಾಪ್ರಭುತ್ವವನ್ನು ಮನಸಾರೆ ಗೌರವಿಸುವ ಒಬ್ಬ ಸರ್ವಾಧಿಕಾರಿ ಯಾದರೂ ಇದನ್ನೆಲ್ಲ ಸುಲಭವಾಗಿ ನೆರವೇರಿಸಬಲ್ಲ. ನನ್ನ ದೃಷ್ಟಿಯಲ್ಲಿ, ಇಂದು ಇದು ಇಂದಿರಾಗೆ ಸಾಧ್ಯವಾಗದಿದ್ದಲ್ಲಿ, ಭವಿಷ್ಯದ ಇನ್ನಾವ ರಾಜಕಾರಣಿಗೂ ಇದು ಮತ್ತೆ ಸಾಧ್ಯವಾಗದು.
(ಮುಂದುವರಿಯುವುದು)
(ಲೇಖಕರು ಸಹ ಪ್ರಾಧ್ಯಾಪಕರು, ಆದಿಚುಂಚನಗಿರಿ
ವಿಶ್ವವಿದ್ಯಾಲಯ)