Roopa Gururaj Column: ಶ್ರೀಕೃಷ್ಣನ ಅಂತ್ಯಕ್ಕೆ ಕಾರಣನಾದ ಜರವ್ಯಾಧ
ಆಹಾ! ಈ ದಿನ ನನಗೆ ಒಳ್ಳೆಯ ಬೇಟೆ ಸಿಗುತ್ತಿದೆ ಎಂದು ಭಾವಿಸಿದ ಆತ. ತಡ ಮಾಡದೆ ಅವನು ತನ್ನ ಬಾಣವನ್ನು ಪ್ರಯೋಗ ಮಾಡಿಯೇ ಬಿಟ್ಟ. ನಂತರ ತನ್ನ ಬೇಟೆ ಎಲ್ಲಿ ಬಿದ್ದಿದೆ ಎಂದು ಅರಸುತ್ತಾ ಬಂದಾಗ ಅಲ್ಲಿ ಬಾಣ ಕೃಷ್ಣನ ಪಾದಕ್ಕೆ ತಾಕಿರುವುದನ್ನು ನೋಡಿ ಭಯದಿಂದ ಗಡಗಡ ನಡುಗ ತೊಡಗಿದನು.


ಒಂದೊಳ್ಳೆ ಮಾತು
rgururaj628@gmail.com
ಯಾದವರು ಪರಸ್ಪರ ಕಾದಾಡಿಕೊಂಡು ನಾಶವಾದಾಗ ತುಂಬಾ ದುಃಖತಪ್ತನಾದ ಬಲರಾಮನು ಪರಮಾತ್ಮನನ್ನು ಧ್ಯಾನಿಸುತ್ತಾ ತನ್ನ ಆತ್ಮನನ್ನು, ಆತ್ಮ ಸ್ವರೂಪದಲ್ಲಿ ಸ್ಥಿರಗೊಳಿಸಿ ಈ ಭೂಲೋಕ ವನ್ನು ಬಿಟ್ಟು ಹೊರಟು ಹೋದನು. ಅಣ್ಣಬಲರಾಮನು ಈ ರೀತಿ ಗತಿಸಿ ಹೊರಟಾಗ ಕೃಷ್ಣನು ಏಕಾಂಗಿಯಾಗಿ ದುಃಖಿಸತೊಡಗಿದನು.
ನಂತರ ಅವನು ಒಂದು ಅರಳಿ ಮರದ ಕೆಳಗೆ ಹೋಗಿ ಮೌನಕ್ಕೆ ಶರಣಾಗಿ ಕುಳಿತು ಬಿಟ್ಟನು. ಆ ಸ್ಥಿತಿಯಲ್ಲೂ ಕೂಡ ಅವನ ಮುಖದಲ್ಲಿ ಸುಂದರವಾದ ನಗು ಸ್ಥಿರವಾಗಿತ್ತು. ಒಟ್ಟಿನಲ್ಲಿ ಶ್ರೀಕೃಷ್ಣನು ದುಃಖದಲ್ಲೂ ಕೂಡ ತನ್ನ ಸಮಚಿತ್ತವನ್ನು ಕಿಂಚಿತ್ತೂ ಕಳೆದುಕೊಂಡಿರಲಿಲ್ಲ.
ಈ ಮಧ್ಯೆ ಜರ ಎಂಬ ವ್ಯಾಧನು ಬೇಟೆ ಹುಡುಕುತ್ತಾ ಆ ಸ್ಥಳಕ್ಕೆ ಆಗಮಿಸಿದ. ಯಾದವರು ತಮ್ಮ ಕಲಹದಲ್ಲಿ ಕಬ್ಬಿಣದ ಒನಕೆಯನ್ನು ತೆಯ್ದಿದ್ದ ಚೂರನ್ನು ಎಸೆದಿದ್ದರು. ಆಚೂರು ಜರಾವ್ಯಾಧನಿಗೆ ಸಿಕ್ಕಿತ್ತು. ತನಗೆ ಸಿಕ್ಕಿದ್ದ ಕಬ್ಬಿಣದ ತುಂಡನ್ನು ತನ್ನ ಬಾಣದ ಅಲುಗನ್ನಾಗಿಸಿಕೊಂಡು ಅದರ ಸಹಾಯದಿಂದ ಬೇಟೆಯಾಡಲು ಆತನು ಬೇಟೆ ಹುಡುಕುತ್ತಾ ಹೊರಟಿದ್ದನು. ಅಲ್ಲಿಗೆ ಆಗಮಿಸಿದ ಆತನಿಗೆ ಮರದ ಕೆಳಗೆ ಮಲಗಿದ್ದ ಕೃಷ್ಣನ ಕೆಂಪಾದ ಪಾದವು ಜಿಂಕೆಯ ಮುಖದಂತೆ ಕಾಣುತ್ತಿತ್ತು.
ಇದನ್ನೂ ಓದಿ: Roopa Gururaj Column: ಕರೆದ ಕೂಡಲೇ ಕಾಪಾಡುವ ತುಳಜಾ ಭವಾನಿ
ಆಹಾ! ಈ ದಿನ ನನಗೆ ಒಳ್ಳೆಯ ಬೇಟೆ ಸಿಗುತ್ತಿದೆ ಎಂದು ಭಾವಿಸಿದ ಆತ. ತಡ ಮಾಡದೆ ಅವನು ತನ್ನ ಬಾಣವನ್ನು ಪ್ರಯೋಗ ಮಾಡಿಯೇ ಬಿಟ್ಟ. ನಂತರ ತನ್ನ ಬೇಟೆ ಎಲ್ಲಿ ಬಿದ್ದಿದೆ ಎಂದು ಅರಸುತ್ತಾ ಬಂದಾಗ ಅಲ್ಲಿ ಬಾಣ ಕೃಷ್ಣನ ಪಾದಕ್ಕೆ ತಾಕಿರುವುದನ್ನು ನೋಡಿ ಭಯದಿಂದ ಗಡಗಡ ನಡುಗ ತೊಡಗಿದನು.
ತನ್ನಿಂದ ಗೊತ್ತಿಲ್ಲದೆ ನಡೆದ ಈ ಮಹಾಪರಾಧಕ್ಕೆ ದುಃಖಿಸುತ್ತಾ ಕೃಷ್ಣನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿ ಹೊರಳಾಡತೊಡಗಿದನು. ನಿನ್ನ ಸ್ಮರಣೆ ಮಾತ್ರದಿಂದ ಮನುಷ್ಯರ ಅಜ್ಞಾನ ಅಂಧಕಾರ ವು ನಾಶವಾಗುತ್ತದೆ. ಅಂತಹ ಮಹಾಪುರುಷನಾದ ನಿನಗೆ ನಾನು ಇಂದು ದ್ರೋಹ ಮಾಡಿದೆ. ನಿನ್ನನ್ನು ಜಿಂಕೆ ಎಂದು ತಪ್ಪು ತಿಳಿದು ಬಾಣಪ್ರಯೋಗ ಮಾಡಿ ನಾನು ಮಹಾ ಪಾಪಿಯಾಗಿದ್ದೇನೆ.
ದಯಮಾಡಿ ನನ್ನನ್ನು ಈಗಲೇ ಕೊಂದು ಬಿಡು. ನಿನ್ನ ಕೈಯಿಂದ ನಾನು ಹತನಾದರೆ, ಖಂಡಿತ ವಾಗಿಯೂ ನನಗೆ ಸದ್ಗತಿ ದೊರಕುತ್ತದೆ ಎಂದು ಬೇಡತೊಡಗಿದ. ಅದಕ್ಕೆ ಕೃಷ್ಣನು, ಎಲೈ ವ್ಯಾಧನೆ, ಹೆದರಬೇಡ, ನೀನು ನನಗೆ ಇಷ್ಟವಾದುದನ್ನೆ ಮಾಡಿರುವೆ. ನಿನ್ನ ಬಾಣದಿಂದಲೇ ನಾನು ಹತನಾಗ ಬೇಕೆಂಬುದು ವಿಧಿ ನಿಯಮವಾಗಿತ್ತು.
ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ಈ ಕಾರ್ಯಕ್ಕಾಗಿ ನಿನಗೆ ಸ್ವರ್ಗಪ್ರಾಪ್ತಿಯಾಗುತ್ತದೆ ನೀನು ಪುಣ್ಯಾ ತ್ಮರಿಗೆ ದೊರಕುವಂತಹ ಸ್ವರ್ಗಕ್ಕೆ ಹೋಗುವೆ ಎಂದು ಹರಸಿದನು. ಕೃಷ್ಣನು ಜರವ್ಯಾಧನಿಗೆ ಈ ರೀತಿ ಅಪ್ಪಣೆ ಮಾಡಿದಾಗ ಆತನು ಕೃಷ್ಣನಿಗೆ ಮೂರು ಪ್ರದಕ್ಷಿಣೆ ಹಾಕಿ ಭಕ್ತಿಯಿಂದ ನಮಸ್ಕರಿಸಿದನು. ಆ ಹೊತ್ತಿಗೆ ಸರಿಯಾಗಿ ಸ್ವರ್ಗದಿಂದ ವಿಮಾನ ಒಂದು ಕೆಳಗಿಳಿಯಿತು. ಕೃಷ್ಣನ ಆದೇಶದಂತೆ ಜರವ್ಯಾಧನು ಆ ವಿಮಾನವನ್ನು ಏರಿ ಅಲ್ಲಿಂದ ದಿವ್ಯಲೋಕಕ್ಕೆ ಪ್ರಯಾಣ ಬೆಳೆಸಿದನು.
ಎಂತಹದೇ ಸಮಯ ಬಂದರೂ ಸ್ಥಿತಿ ಪ್ರಜ್ಞತೆಯನ್ನು ಉಳಿಸಿಕೊಳ್ಳುವುದನ್ನ ಈ ಘಟನೆಯಿಂದ ಕಲಿಯುತ್ತೇವೆ. ಬದುಕಿನಲ್ಲಿ ಏನಾಗಬೇಕೋ ಅದು ಆಗೇ ಆಗುತ್ತದೆ. ಅದರ ಬಗ್ಗೆ ಚಿಂತಿಸುತ್ತಾ ರಾತ್ರಿಗಳ ನಿದ್ದೆಯನ್ನು ಹಾಳು ಮಾಡಿಕೊಳ್ಳುತ್ತಾ ಬದುಕುವುದರಿಂದ ಯಾವ ಯೋಚನೆಗೂ ಪರಿಹಾರ ಸಿಗುವುದಿಲ್ಲ. ಅಥವಾ ನಮ್ಮ ಸುತ್ತಲಿರುವವರ ಮೇಲೆ ಅಸಮಾಧಾನಗೊಂಡು, ಕೋಪ ದಿಂದ ಕಿರುಚಾಡಿ ನಮ್ಮ ಅಸಹಾಯಕತೆಯನ್ನು ತೋರಿಸುವುದರಿಂದಲೂ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ.
ಅದೇನೇ ಇರಲಿ ಒಂದು ಸ್ಥಿತಪ್ರಜ್ಞತೆಯನ್ನು ಕಾಯ್ದಿರಿಸಿಕೊಂಡು ಬಂದದ್ದನ್ನು ಸಮಚಿತ್ತದಿಂದ ಸ್ವೀಕರಿಸಿದಾಗ ನಾವು ಕೂಡ ನೆಮ್ಮದಿಯಾಗಿರುತ್ತೇವೆ. ನಮ್ಮ ಜೊತೆಯಲ್ಲಿ ಇರುವವರನ್ನು ಕೂಡ ನೆಮ್ಮದಿಯಾಗಿ ಇರಲು ಸಹಕರಿಸುತ್ತೇವೆ. ಇಂದಿನ ಧಾವಂತದ ಯುಗದಲ್ಲಿ ಅನಗತ್ಯವಾಗಿ ಚಿತ್ತ ಸ್ವಾಸ್ಯವನ್ನು ಹಾಳು ಮಾಡುವ ಸಾವಿರ ವಿಷಯಗಳು ನಡೆಯುತ್ತವೆ. ಆದರೆ ಅದೆಲ್ಲವನ್ನೂ ನಿಭಾಯಿಸುವಂಥ ಶಕ್ತಿ ಕೊಡುವುದು ನಮ್ಮ ಮನಸ್ಸು ಅದನ್ನು ಗಟ್ಟಿಯಾಗಿರಿಸಿಕೊಂಡರೆ ಸಾಕು ಪ್ರಪಂಚವನ್ನೇ ಗೆಲ್ಲಬಹುದು.