ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ

ಆಧುನಿಕ ವೈದ್ಯಕೀಯದಲ್ಲಿ ಆಲಿಸು ವಿಕೆ (ಆಸ್ಕಲ್ಟೇಶನ್) ಎಂಬ ಪರೀಕ್ಷಾ ಪದ್ಧತಿಯು ಜಾರಿಗೆ ಬಂದಿತು. ಸ್ಟೆಥೋಸ್ಕೋಪಿನ ಮೂಲಕ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಸ್ವರೂಪವನ್ನು ಆತ ಅಧ್ಯಯನ ಮಾಡಿದ. ಅವುಗಳಲ್ಲಿ ‘ಪಲ್ಮನರಿ ಥೈಸಿಸ್’ ಎಂದು ಹೆಸರಾಗಿದ್ದ ಕ್ಷಯವು ಮುಖ್ಯವಾಗಿತ್ತು.

ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ

ಹಿಂದಿರುಗಿ ನೋಡಿದಾಗ

ಕ್ಷಯ ಬ್ಯಾಕ್ಟೀರಿಯವು ಪೂರ್ವ ಆಫ್ರಿಕದಲ್ಲಿ ಸುಮಾರು 30000 ವರ್ಷಗಳ ಹಿಂದೆ ಹುಟ್ಟಿರಬಹುದು. ಇದು ಮನುಕುಲವನ್ನು ನವಶಿಲಾಯುಗದಿಂದ ಕಾಡುತ್ತಿದೆ ಎನ್ನುವುದಕ್ಕೆ ಪುರಾವೆಯು ಈಜಿಪ್ಟಿನ ಮಮ್ಮಿಗಳಲ್ಲಿ (ಕ್ರಿ.ಪೂ.3000) ದೊರೆತಿದೆ. ರಾಬರ್ಟ್ ಬರ್ನ್ಸ್, ಜಾನ್ ಕೀಟ್ಸ್, ಬೈರನ್, ಶೆಲ್ಲಿ, ಆಂಟನ್ ಚೆಕಾವ್, ಫ್ರಾಂಜ಼್ ಕಾಫ್ಕ, ಡಿ.ಎಚ್.ಲಾರೆನ್ಸ್, ಜಾರ್ಜ್ ಆರ್ವೆಲ್, ಅಲೆಕ್ಸಾಂಡರ್ ಪೋಪ್, ಅಲೆಗ್ಸಾಂಡರ್ ಗ್ರಹಾಮ್ ಬೆಲ್, ಫ್ಲಾರೆನ್ಸ್ ನೈಟಿಂಗೇಲ್, ಜಾನ್ ರಸ್ಕಿನ್, ರಾಬರ್ಟ್ ಲೂಯಿ ಸ್ಟೀವನ್ಸನ್, ಶೋಪಿನ್, ಇಮಾನ್ಯುಯಲ್ ಕಂಟ್, ಡಿಮಿಟ್ರೀ ಮೆಂಡಲೀವ್, ನಥಾನಿಯಲ್ ಹಾಥೋರ್ನ್, ಹೆನ್ರಿ ಡೇವಿಡ್ ಥೋರು, ಇಮ್ಮಡಿ ನೆಪೋಲಿಯನ್, ಮುಹಮ್ಮದ್ ಅಲಿ ಜಿನ್ನ, ಪೇಶ್ವ ಮಾಧವರಾವ್-1, ನೆಲ್ಸನ್ ಮಂಡೇಲ, ಹೋ ಚಿ ಮಿನ್, ಆನಂದಿ ಗೋಪಾಲ ಜೋಷಿ (ಪ್ರಥಮ ಭಾರತೀಯ ವೈದ್ಯೆ), ಶ್ರೀನಿವಾಸ ರಾಮಾನುಜನ್, ನಂದಳಿಕೆಯ ನಾರಣಪ್ಪ (ಮುದ್ದಣ) ಮುಂತಾ ದವರೆಲ್ಲ ಈ ಮಾರಕ ರೋಗಕ್ಕೆ ಬಲಿಯಾದವರು.

ಈ ಮಾರಕ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾದ ಪ್ರಾತಃಸ್ಮರಣೀಯ ವೈದ್ಯರು, ಸಂಶೋಧಕರು ಹಾಗೂ ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅಂಥವರಲ್ಲಿ ಬಹಳ ಮುಖ್ಯವಾಗಿರುವವರ ಕೊಡುಗೆಯನ್ನು ಸಂಕ್ಷಿಪ್ತವಾಗಿ ಗಮನಿಸೋಣ.

ಇದನ್ನೂ ಓದಿ: Dr N Someshwara Column: ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ

ಡಾ.ರೆನೆ ಥಿಯೋಫೈಲ್ ಹಯಾಸಿಂಥ್ ಲೆನೆಕ್ (1781-1826) ಓರ್ವ ಫ್ರೆಂಚ್ ವೈದ್ಯ ಹಾಗೂ ಸಂಗೀತ ಕೋವಿದ. ಇವನು ತನಗೆ ಅಗತ್ಯವಾಗಿದ್ದ ಕೊಳಲನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತಿದ್ದ. ಒಮ್ಮೆ ಓರ್ವ ದಢೂತಿ ಹೆಂಗಸಿನ ಸ್ತನದ ಮೇಲೆ ಕಿವಿಯನ್ನಿಟ್ಟು ಆಕೆಯ ಎದೆ ಬಡಿತವನ್ನು ಆಲಿಸುವುದು ಮುಜುಗರವೆನಿಸಿತು.

ಹಾಗಾಗಿ ಅವನು ಕಾಗದವನ್ನು ಸುರುಳಿ ಸುತ್ತಿ ಒಂದು ತುದಿಯನ್ನು ಆಕೆಯ ಎದೆಯ ಮೇಲಿಟ್ಟು ಮತ್ತೊಂದು ತುದಿಯನ್ನು ತನ್ನ ಕಿವಿಗೆ ಹೊಂದಿಸಿ, ಆಕೆಯ ಹೃದಯ ಮಿಡಿತವನ್ನು ಸ್ಪಷ್ಟವಾಗಿ ಆಲಿಸಿದ (1861). ಬಿದಿರಿನಿಂದ ಕೊಳಲನ್ನು ರೂಪಿಸಬಲ್ಲವ ನಾಗಿದ್ದ ಲೆನೆಕ್, ಸ್ಟೆಥೋಸ್ಕೋಪನ್ನು ರೂಪಿಸಿದ. ಆಧುನಿಕ ವೈದ್ಯಕೀಯ ಕ್ಷೇತ್ರದ ಅತ್ಯಂತ ಸರಳ ಆದರೆ ಅತ್ಯುಪಯುಕ್ತ ಸಾಧನವನ್ನು ನೀಡಿದ.

ಆಧುನಿಕ ವೈದ್ಯಕೀಯದಲ್ಲಿ ಆಲಿಸುವಿಕೆ (ಆಸ್ಕಲ್ಟೇಶನ್) ಎಂಬ ಪರೀಕ್ಷಾ ಪದ್ಧತಿಯು ಜಾರಿಗೆ ಬಂದಿತು. ಸ್ಟೆಥೋಸ್ಕೋಪಿನ ಮೂಲಕ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಸ್ವರೂಪವನ್ನು ಆತ ಅಧ್ಯಯನ ಮಾಡಿದ. ಅವುಗಳಲ್ಲಿ ‘ಪಲ್ಮನರಿ ಥೈಸಿಸ್’ ಎಂದು ಹೆಸರಾಗಿದ್ದ ಕ್ಷಯವು ಮುಖ್ಯ ವಾಗಿತ್ತು.

edit R

ವೈದ್ಯಕೀಯದಲ್ಲಿ ಬಳಸುವ ರೇಲ್ಸ್, ರಾಂಕೈ, ಕ್ರೆಪಿಟನ್ಸ್, ಇಗೋಫೋನಿ ಮುಂತಾದ ಶ್ವಾಸಕೋಶ ಗಳ ಭಿನ್ನ ಸ್ಥಿತಿ-ಗತಿಗಳನ್ನು ವಿವರಿಸುವ ತಾಂತ್ರಿಕ ಪರಿಭಾಷೆಗಳ ಜನನಕ್ಕೆ ಈತ ಕಾರಣನಾದ. ಮಾನವನ ಇತಿಹಾಸದಲ್ಲಿ ವೈದ್ಯರು ಮೊದಲ ಬಾರಿಗೆ ಶ್ವಾಸಕೋಶ ಕ್ಷಯವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಡಾ.ರಾಬರ್ಟ್ ಕಾಚ್ (1843-1910) ಜರ್ಮನಿಯ ಹ್ಯಾನೋವರ್‌ನಲ್ಲಿ ಜನಿಸಿದ.

ಈತ ಶಾಲೆಗೆ ಹೋಗದೇ, ಕೇವಲ ಪತ್ರಿಕೆಗಳಲ್ಲಿರುವ ಅಕ್ಷರಗಳನ್ನು ಗುರುತಿಸಿ ಓದಲು ಕಲಿತನಂತೆ. ಆಗ ಆತನಿಗೆ ಐದು ವರ್ಷ. ಗಾಂಟಿಂಜನ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಯನ್ನು ಪಡೆದ (1866). ಫ್ರಾಂಕೋ-ಪ್ರಶ್ಯನ್ ಯುದ್ಧದಲ್ಲಿ ಸೇವೆಯನ್ನು ಸಲ್ಲಿಸಿ, ಪೋಲಂಡಿನ ವೂಲ್‌ ಸ್ಟೈನ್‌ನಲ್ಲಿ ಜಿಲ್ಲಾ ವೈದ್ಯಾಧಿಕಾರಿಯಾಗಿ ನೇಮಿತನಾದ. ಅಲ್ಲಿಯೇ ‘ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು, ವಾಸ್ತವದಲ್ಲಿ ರೋಗಜನಕ ಗಳು’ ಎಂದು ತರ್ಕಿಸಿ ಸಂಶೋಧನೆಯನ್ನು ಆರಂಭಿಸಿದ.

ನೆರಡಿ ರೋಗಕ್ಕೆ (ಆಂಥ್ರಾಕ್ಸ್) ಕಾರಣವಾದ ಬ್ಯಾಕ್ಟೀರಿಯವನ್ನು ಹಾಗೂ ಅವುಗಳ ಬೀಜಕಗಳನ್ನು (ಸ್ಪೋರ್ಸ್) ಗಾಜಿನ ತುಂಡಿನ ಮೇಲೆ ಸ್ಥಿರೀಕರಿಸಿ, ಬಣ್ಣ ಕಟ್ಟಿ, ಅವುಗಳ ಛಾಯಾ ಚಿತ್ರವನ್ನು ತೆಗೆದ. ಆಂಥ್ರಾಕ್ಸ್ ಬ್ಯಾಕ್ಟೀರಿಯವು, ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ನೆರಡಿ ರೋಗವನ್ನು ಹರಡುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದ. ಆ ಬಗ್ಗೆ ಸಂಶೋಧನಾ ಬರಹವನ್ನು ಪ್ರಕಟಿಸಿದ (1876). ಈ ಪ್ರಬಂಧವು ಅವನಿಗೆ ಕೀರ್ತಿಯನ್ನು ತಂದುಕೊಟ್ಟಿತು, ಬರ್ಲಿನ್ನಿನ ‘ಇಂಪೀರಿಯಲ್ ಹೆಲ್ತ್ ಬ್ಯೂರೋ’ನಲ್ಲಿ ಉದ್ಯೋಗವನ್ನು ದೊರಕಿಸಿಕೊಟ್ಟಿತು.

ಹೊಸ ಸ್ಥಳದಲ್ಲಿ ದೊರೆತ ಸಂಶೋಧನಾವಕಾಶಗಳನ್ನು ಈತ ಬಳಸಿಕೊಂಡ. ಪಾಲ್ ಎರ್ಲಿಕ್ (1854-1915) ನೆರವಿನಿಂದ ಬ್ಯಾಕ್ಟೀರಿಯಗಳ ಬಣ್ಣಕಟ್ಟುವಿಕೆಯ ತಂತ್ರಜ್ಞಾನವನ್ನು ಕಲಿತು ಕೊಂಡ. ಹಾಗೆಯೇ ಜೂಲಿಯ ರಿಚರ್ಡ್ ಪೆಟ್ರಿ (1852-1921: ಗೌರವನಾಮ ಪೆಟ್ರಿಡಿಶ್) ನೆರವಿನಿಂದ ಬ್ಯಾಕ್ಟೀರಿಯಗಳ ಕೃಷಿಕೆಯ (ಕಲ್ಚರ್) ಬಗ್ಗೆ ಪರಿಣತಿಯನ್ನು ಗಳಿಸಿದ.

ಇವರಿಬ್ಬರ ನೆರವಿನಿಂದ ಕಾಚ್, ಕ್ಷಯ ಸಂಬಂಧಿತ ಅಧ್ಯಯನಗಳನ್ನು ತ್ವರಿತಗೊಳಿಸಿದ. ಮೊದಲಿಗೆ ಕ್ಷಯವು ಆನುವಂಶಿಕ ಕಾಯಿಲೆ ಅಥವಾ ದೈವ ಪ್ರಕೋಪದ ಕಾಯಿಲೆ ಎನ್ನುವುದನ್ನು ಅಲ್ಲಗಳೆದ. ಕ್ಷಯಕ್ಕೆ ಕಾರಣವಾದ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಸೂಕ್ಷ್ಮ ಜೀವಿಯನ್ನು ಪತ್ತೆಹಚ್ಚಿದ. ಈ ಬ್ಯಾಕ್ಟೀರಿಯವು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ಕ್ಷಯ ವನ್ನು ಹರಡುತ್ತದೆ ಎನ್ನುವುದನ್ನು ಪುರಾವೆ ಸಹಿತ ನಿರೂಪಿಸಿ 1882ರಲ್ಲಿ ಪ್ರಬಂಧವನ್ನು ಪ್ರಕಟಿಸಿದ.

ಕೂಡಲೆ ಅವನಿಗೆ ಬರ್ಲಿನ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿತು. ಅಲ್ಲಿ ಆರಂಭವಾದ ‘ಇನ್‌ಸ್ಟಿಟ್ಯೂಟ್ ಆಫ್ ಹೈಜೀನ್’ ಸಂಸ್ಥೆಯ ನಿರ್ದೇಶಕನಾದ. ಕ್ಷಯ ಬ್ಯಾಕ್ಟೀರಿಯದ ಒಡಲಿನಿಂದ ಒಂದು ಔಷಧವನ್ನು ರೂಪಿಸಿ, ಕ್ಷಯವನ್ನು ಗುಣಪಡಿಸುವ ಕನಸನ್ನು ಕಂಡ. ಆದರೆ ಅವನಿಗೆ ‘ಟ್ಯುಬರ್ಕ್ಯುಲಿನ್’ ಎಂಬ ವಸ್ತುವು ದೊರೆಯಿತು. ಇದರಿಂದ ಮನುಷ್ಯರಲ್ಲಿ ಕ್ಷಯದ ಸೋಂಕನ್ನು ಪತ್ತೆಹಚ್ಚುವುದು ಸುಲಭವಾಯಿತು. ಇದು ‘ಮಾಂಟೂ ಪರೀಕ್ಷೆ ಅಥವ ಪಿಪಿಡಿ ಪರೀಕ್ಷೆ’ ಎಂದು ಹೆಸರಾಯಿತು. ‌

ರಾಬರ್ಟ್ ಕಾಚ್ 1905ರಲ್ಲಿ ನೊಬೆಲ್ ಪಾರಿತೋಷಕದಿಂದ ಪುರಸ್ಕೃತನಾದ. ಡಾ.ಪಾಲ್ ಎರ್ಲಿಕ್ ಪ್ರಶ್ಯಾ ದೇಶದ ಸಿಲೇಸಿಯದಲ್ಲಿ ಹುಟ್ಟಿದ. 1878ರಲ್ಲಿ ವೈದ್ಯಕೀಯ ಪದವಿಯನ್ನು ಗಳಿಸಿದ. ಬೆರ್ಲಿನ್ ಮೆಡಿಕಲ್ ಕ್ಲಿನಿಕ್ಕಿನಲ್ಲಿ ಸಂಶೋಧಕನಾಗಿ ಸೇರಿದ ಈತನು ಸೂಕ್ಷ್ಮಜೀವಿಗಳು ಹಾಗೂ ಊತಕಗಳಿಗೆ ಬಣ್ಣ ಕಟ್ಟುವ ತಂತ್ರಜ್ಞಾನವನ್ನು (ಸ್ಟೇಯಿನಿಂಗ್) ಕರಗತಗೊಳಿಸಿಕೊಂಡ. ಈತನ ನೆರವಿನಿಂದ ರಾಬರ್ಟ್ ಕಾಚ್, ಕ್ಷಯ ಬ್ಯಾಕ್ಟೀರಿಯವನ್ನು ಸುಲಭವಾಗಿ ಪತ್ತೆಹಚ್ಚಿದ. ಬಣ್ಣಗಳ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಎರ್ಲಿಕ್, ಕೆಲವು ಬಣ್ಣಗಳು ರೋಗಜನಕಗಳನ್ನು ನಿಗ್ರಹಿಸಲು ಶಕ್ತವಾಗಿರಬಹುದು ಎಂದು ತರ್ಕಿಸಿದ. ಆತನ ತರ್ಕ ಸುಳ್ಳಾಗಲಿಲ್ಲ.

‘ಸ್ಯಾಲ್ವರಸನ್’ ಎಂಬ ಹೆಸರಿನ ಸಂಯುಕ್ತವು, ಮ್ಯಾಜಿಕ್ ಬುಲೆಟ್ ರೂಪದಲ್ಲಿ ಸಿಫಿಲಿಸ್ ಕಾಯಿಲೆ ಯನ್ನು ಗುಣಪಡಿಸಿತು. 1908ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ ಎರ್ಲಿಕ್ ರಸಾಯನ ಚಿಕಿತ್ಸೆ (ಕೀಮೋಥೆರಪಿ) ಎಂಬ ಹೊಸ ಚಿಕಿತ್ಸಾ ತಂತ್ರಜ್ಞಾನವು ಹುಟ್ಟಲು ಕಾರಣನಾದ.

ಡಾ.ಸೆಲ್ಮನ್ ವಕ್ಸ್‌ಮನ್ (1888-1973) ರಷ್ಯಾ ಮೂಲದವನಾದರೂ 1910ರಲ್ಲಿ ಅಮೆರಿಕದಲ್ಲಿ ನೆಲೆಸಿದ. ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಮೇಲೆ ರುಟ್ಗರ್ ವಿದ್ಯಾಲಯದಲ್ಲಿ ಮಣ್ಣಿನ ಸೂಕ್ಷ್ಮ ಜೀವಿಗಳ ತಜ್ಞನಾಗಿ ಕೆಲಸವನ್ನು ಮಾಡಲಾರಂಭಿಸಿದ. ತನ್ನ ವಿದ್ಯಾರ್ಥಿಗಳ ಜತೆಯಲ್ಲಿ ಸೇರಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಬಳಸಿಕೊಂಡು ಹೊಸ ಪ್ರತಿಜೈವಿಕಗಳನ್ನು ರೂಪಿಸುವ ಯೋಜನೆಯನ್ನು ಹಾಕಿಕೊಂಡ. ಆತನು ರೂಪಿಸಿದ ‘ನಿಯೋಮೈಸಿನ್’ ಪ್ರತಿಜೈವಿಕವು ಇಂದಿಗೂ ಬಳಕೆಯಲ್ಲಿದೆ.

ವಕ್ಸ್‌ಮನ್ ಬಳಿ ಆಲ್ಬರ್ಟ್ ಶಾಟ್ಜ್ (1920-2005) ಎಂಬ ಸ್ನಾತಕ ವಿದ್ಯಾರ್ಥಿಯಿದ್ದ. 1943ರಲ್ಲಿ ಈತನು ಮಣ್ಣಿನಲ್ಲಿದ್ದ ‘ಸ್ಟ್ರೆಪ್ಟೋಮೈಸೀಸ್ ಗ್ರೈಸಿಯನ್ಸ್’ ಎಂಬ ಬ್ಯಾಕ್ಟೀರಿಯವನ್ನು ಗುರುತಿಸಿ, ಪ್ರತ್ಯೇಕಿಸಿ, ಶುದ್ಧರೂಪದಲ್ಲಿ ಸಂಗ್ರಹಿಸಿದ. ವಕ್ಸ್ ಮನ್ ಕೂಡಲೇ ಮೆರ್ಕ್ ಔಷಧ ತಯಾರಿಕಾ ಸಂಸ್ಥೆಯ ಜತೆಯಲ್ಲಿ ಒಪ್ಪಂದವನ್ನು ಮಾಡಿಕೊಂಡ. ಶಿಷ್ಯನು ಕಂಡುಹಿಡಿದ ಬ್ಯಾಕ್ಟೀರಿಯವು ಉತ್ಪಾದಿಸುವ ‘ಸ್ಟ್ರೆಪ್ಟೋಮೈಸೀನ್’ ಪ್ರತಿಜೈವಿಕವು ಕ್ಷಯವನ್ನು ಗುಣಪಡಿಸಬಲ್ಲುದೆ ಎಂಬುದರ ಬಗ್ಗೆ ಕ್ರಮಬದ್ಧ ಸಂಶೋಧನೆಯನ್ನು ನಡೆಸಿದ.

1947ರಲ್ಲಿ ಕ್ಷಯವನ್ನು ಗುಣಪಡಿಸಬಲ್ಲ ಮೊದಲ ಔಷಧವನ್ನು ಜಗತ್ತಿಗೆ ನೀಡಿದ. ಒಂದು ವರ್ಷದ ಒಳಗೆ ಸ್ವೀಡಿಶ್ ವಿಜ್ಞಾನಿ ಜೋರ್ಗನ್ ಲೆಹ್ಮನ್ (1898-1989) ಪ್ಯಾರಾ ಅಮೈನೋ ಸ್ಯಾಲಿಸಿಲಿಕ್ ಆಸಿಡ್ (ಪ್ಯಾಸ್) ಎಂಬ ಔಷಧವನ್ನು ರೂಪಿಸಿದ. ಸ್ಟ್ರೆಪ್ಟೋಮೈಸಿನ್ ಮತ್ತು ಪ್ಯಾಸ್ ಎರಡೂ ಔಷಧಗಳನ್ನು ಒಟ್ಟಿಗೆ ನೀಡಿದಾಗ ಅವು ಕ್ಷಯವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದವು.

1952ರಲ್ಲಿ ವಕ್ಸ್‌ಮನ್ ನಿಗೆ ಸ್ಟ್ರೆಪ್ಟೋಮೈಸಿನ್ ‘ಕಂಡುಹಿಡಿದುದಕ್ಕಾಗಿ’ ನೊಬೆಲ್ ಪಾರಿತೋಷಕವು ದೊರೆಯಿತು. ಆದರೆ ನೊಬೆಲ್ ಸಮಿತಿಯು ಶಾಟ್ಜ್ ಮತ್ತು ಲೆಹ್ಮನ್‌ರನ್ನು ಪ್ರಜ್ಞಾಪೂರ್ವಕ ವಾಗಿ ಮರೆಯಿತು.

ಡಾ.ಆಲ್ಬರ್ಟ್ ಶಾಟ್ಜ್, ಅಮೆರಿಕದ ಕನೆಕ್ಟಿಕಟ್ ಪ್ರದೇಶದಲ್ಲಿ ಜನಿಸಿದ. ಕೃಷಿ ಪದವಿಯನ್ನು ಪಡೆಯಲು ರಟ್ಗರ್ ವಿಶ್ವವಿದ್ಯಾಲಯವನ್ನು ಸೇರಿಕೊಂಡ. ಆದರೆ ವಕ್ಸ್ ಮನ್ ಸಂಸರ್ಗದಿಂದ ಸೂಕ್ಷ್ಮಜೀವಿಶಾಸದಲ್ಲಿ ಆಸಕ್ತಿಯನ್ನು ತಳೆದು ಸಂಶೋಧನೆಗೆ ಇಳಿದ. ವಿಶ್ವದ ಎರಡನೆಯ ಮಹಾ ಯುದ್ಧದಲ್ಲಿ ಅಲೆಗ್ಸಾಂಡರ್ ಫ್ಲೆಮಿಂಗ್ ಕಂಡುಹಿಡಿದ ಪೆನಿಸಿಲಿನ್, ರೋಧಕತೆಯ (ರೆಸಿಸ್ಟನ್ಸ್) ಕಾರಣ ಕೆಲವರಲ್ಲಿ ವಿಫಲವಾಗಿ, ಸೈನಿಕರು ಸಾಯುವುದನ್ನು ಕಣ್ಣಾರೆ ಕಂಡ.

ಹೊಸ ಪ್ರತಿಜೈವಿಕವನ್ನು ಜಗತ್ತಿಗೆ ನೀಡಲು ನಿರ್ಧರಿಸಿದ. ಅದರಂತೆಯೇ ಸ್ಟ್ರೆಪ್ಟೋಮೈಸಿನ್ ಅನ್ನು ರೂಪಿಸಿದ. ಈ ಸಂಶೋಧನೆಯಿಂದ ಅವನಿಗೆ ಸುಲಭವಾಗಿ ಪಿಎಚ್‌ಡಿ ದೊರೆಯಿತು. ಆದರೆ ಮೆರ್ಕ್ ಜತೆಯಲ್ಲಿ ವಕ್ಸ್‌ಮನ್ ಮಾಡಿಕೊಂಡಿದ್ದ ಅಪಾರ ಮೊತ್ತದ ಒಪ್ಪಂದದಲ್ಲಿ ಶಾಟ್ಜ್ ಹೊರಗುಳಿ ದಿದ್ದ. ಹಾಗಾಗಿ ಅವನಿಗೆ ನ್ಯಾಯಬದ್ಧವಾಗಿ ದೊರೆಯಬೇಕಾಗಿದ್ದ ಹಣ ದೊರೆಯಲಿಲ್ಲ. ಶಾಟ್ಜ್‌ನಿಗೆ ಅಪಾರ ಖೇದವಾಗಿ ಅಮೆರಿಕವನ್ನೇ ಬಿಟ್ಟು ಚಿಲಿ ದೇಶಕ್ಕೆ ಹೋದ.

ಆದರೆ ವಕ್ಸ್‌ಮನ್ ಜತೆಯಲ್ಲಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಸಂಘರ್ಷಕ್ಕಿಳಿದ. ನೊಬೆಲ್ ಸಮಿತಿಯೂ ಶಾಟ್ಜ್‌ನನ್ನು ಸಂಪೂರ್ಣವಾಗಿ ಕಡೆಗಣಿಸಿದಾಗ ಹತಾಶನಾದ. ಅಲ್ಲಿಯೂ ಅವನು ಆರ್ಥಿಕವಾಗಿ ನಷ್ಟವನ್ನು ಅನುಭವಿಸಿದ. 1990ರಲ್ಲಿ ಅಮೆರಿಕದ ಔದ್ಯೋಗಿಕ ಸೂಕ್ಷ್ಮಜೀವಿ ವಿಜ್ಞಾನದ ಸಂಸ್ಥೆ ಹಾಗೂ ಅಮೆರಿಕದ ಎದೆಗೂಡಿನ ತಜ್ಞರ ಸಂಸ್ಥೆಗಳು ‘ಕ್ಷಯ ಚಿಕಿತ್ಸೆಯ ಯಶಸ್ಸು ಶಾಟ್ಜ್‌ಗೆ ಸಹ ಸಲ್ಲಬೇಕು’ ಎಂದು ಅಧಿಕೃತವಾಗಿ ಸಾರಿದವು.

ಡಾ.ಜಾರ್ಗನ್ ಲೆಹ್ಮನ್, ಡೆನ್ಮಾಕಿನ ಕೋಪನ್‌ಹೇಗನ್‌ನಲ್ಲಿ ಹುಟ್ಟಿದ. ಲಂಡ್ ವಿಶ್ವವಿದ್ಯಾಲಯ ದಿಂದ ಅಂಗಕ್ರಿಯಾ ವಿಜ್ಞಾನದಲ್ಲಿ ಪದವಿಯನ್ನು ಪಡೆದ. ಸ್ವೀಡನ್ನಿಗೆ ಬಂದು ಸಂಶೋಧನೆಯಲ್ಲಿ ತೊಡಗಿಕೊಂಡ. ರಕ್ತಗರಣೆಯನ್ನು ಕರಗಿಸಬಲ್ಲ ಡೈಕ್ಯುಮರಾಲ್ ಔಷಧವನ್ನು 1941ರಲ್ಲಿ ರೂಪಿಸಿದ. ಎರಡು ವರ್ಷಗಳ ನಂತರ ‘ಪ್ಯಾಸ್’ ರೂಪಿಸಿ, ಕ್ಷಯರೋಗಿಗಳ ಮೇಲೆ ಪ್ರಯೋಗಿಸಿದ. ಲೆಹ್ಮನ್ ತನ್ನ ಅಷ್ಟೂ ಅಧ್ಯಯನವನ್ನು ವಿಶ್ವದ ಎರಡನೆಯ ಮಹಾಯುದ್ಧದ ಅವಧಿಯಲ್ಲಿ ನಡೆಸಿದ ಕಾರಣ, ಅವನ ಸಂಶೋಧನೆಯು ಹೊರಜಗತ್ತಿಗೆ ತಿಳಿಯಲಿಲ್ಲ.

ವಕ್ಸ್‌ಮನ್‌ನಿಗೂ ಈ ಬಗ್ಗೆ ಮಾಹಿತಿಯಿರಲಿಲ್ಲ. 1948ರ ವೇಳೆಗೆ ಕ್ಷಯ ಬ್ಯಾಕ್ಟೀರಿಯವು ಸ್ಟ್ರೆಪ್ಟೋ ಮೈಸಿನ್ ಪ್ರತಿ ಜೈವಿಕಕ್ಕೆ ರೋಧಕತೆಯನ್ನು ಬೆಳೆಸಿಕೊಂಡ ಕಾರಣ, ಎರಡೂ ಔಷಧಗಳನ್ನು ಒಟ್ಟಿಗೆ ಪ್ರಯೋಗಿಸುವ ಅಧ್ಯಯನಗಳು ನಡೆದವು. ಜೋಡಿ ಔಷಧಗಳು ಹೆಚ್ಚು ಪರಿಣಾಮಕಾರಿ ಯಾದವು. ‘ಪ್ಯಾಸ್’ ಅನ್ನು ಇಂದಿಗೂ ಬಳಸುತ್ತಿದ್ದೇವಾದರೂ, ಆತ ಸದಾಕಾಲಕ್ಕೂ ನೊಬೆಲ್ ವಂಚಿತನಾಗಿ ಉಳಿಯುತ್ತಾನೆ ಎನ್ನುವುದು ಒಂದು ವಿಪರ್ಯಾಸವಾಗಿದೆ.