ಪತ್ನಿಯನ್ನು ಕೊಂದು ತಲೆ ಕಡಿದು ಫ್ರಿಡ್ಜ್ನಲ್ಲಿಟ್ಟಿದ್ದ ಪತಿ ಸಾವು; ಪರಾರಿಯಾಗಲು ಹೋಗಿ ಚಲಿಸುತ್ತಿದ್ದ ಪೊಲೀಸ್ ಜೀಪ್ನಿಂದ ಬಿದ್ದ ಕಿರಾತಕ
ಕಳೆದ ಒಂದು ವಾರದ ಹಿಂದೆ ಗುಹಾವಟಿಯಲ್ಲಿ ಪತ್ನಿ ರಿಯಾ ತಾಲೂಕ್ದಾರ್ ಭೀಕರವಾಗಿ ಕೊಲೆ ಮಾಡಿ ಆಕೆಯ ತೆಲೆಯನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿ ಪತಿ ರಾಮಾನುಜ್ ಗೋಸ್ವಾಮಿ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಗುಹಾವಟಿ: ಕಳೆದ ಒಂದು ವಾರದ ಹಿಂದೆ ಗುಹಾವಟಿಯಲ್ಲಿ ಪತ್ನಿ ರಿಯಾ ತಾಲೂಕ್ದಾರ್ ಭೀಕರವಾಗಿ ಕೊಲೆ ಮಾಡಿ ಆಕೆಯ ತೆಲೆಯನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿ ಪತಿ ರಾಮಾನುಜ್ ಗೋಸ್ವಾಮಿ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ. ವೈದ್ಯಕೀಯ ತಪಾಸಣೆ ನಂತರ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಪೊಲೀಸರ ಮೇಲೆ ದಾಳಿ ಮಾಡಿ, ಪರಾರಿಯಾಗಲು ನೋಡಿದ್ದಾನೆ. ಆ ವೇಳೆ ಚಲಿಸುತ್ತಿದ್ದ ಪೊಲೀಸ್ ಜೀಪ್ನಿಂದ ಕೆಳಗೆ ರಸ್ತೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸ್ರ ಮೇಲೆ ದಾಳಿ
ಗುಹಾವಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಗಿಸಿ ನರಕಾಸುರ್ ಪಹಾರ್ ಪ್ರದೇಶದ ಬಳಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಗೋಸ್ವಾಮಿ ಪೊಲೀಸ್ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಲು ಪ್ರಯತ್ನ ಮಾಡಿದ್ದಾನೆ. ಪೊಲೀಸರ ಜೀಪ್ ವೇಗದಲ್ಲಿ ಚಲಿಸುತ್ತಿದ್ದ ಕಾರಣ ಈತ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರೊಳಗಾಗಿಯೇ ಆತ ಸಾವನ್ನಪ್ಪಿದ್ದಾನೆ. ಆರೋಪಿಯ ವಿರುದ್ಧ ಹೊಸ ಅಪರಾಧ ಕಾನೂನಾದ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) (ಕೊಲೆ) ಮತ್ತು ಸೆಕ್ಷನ್ 238 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದಿಂದ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.
ಏನಿದು ಘಟನೆ?
ಸೆಪ್ಟಂಬರ್ 3 ರಂದು ರಾಮಾನುಜ್ ಗೋಸ್ವಾಮಿ ತನ್ನ ಪತ್ನಿ ರಿಯಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಮೇಲೆ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಹಲವು ದಿನಗಳಿಂದ ಫ್ಲಾಟ್ನಿಂದ ದುರ್ವಾಸನೆ ಬಂದ ಹಿನ್ನಲೆಯಲ್ಲಿ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ಫ್ಲಾಟ್ಗೆ ಬಂದ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಫ್ರಿಡ್ಜ್ನಲ್ಲಿ ಕಪ್ಪು ಪಾಲಿಥಿನ್ ಚೀಲದಲ್ಲಿ ಮಹಿಳೆಯ ಕತ್ತರಿಸಿದ ತಲೆ ಹಾಗೂ ಬೆರಳುಗಳು ಪತ್ತೆಯಾಗಿದ್ದವು. ಕೊಲೆ ಮಾಡಿದ ನಂತರ ತಲೆಮರೆಸಿಕೊಂಡಿದ್ದ ರಾಮಾನುಜ್, ಸೆಪ್ಟೆಂಬರ್ 6ರ ರಾತ್ರಿ ಪೊಲೀಸರ ಮುಂದೆ ಶರಣಾಗಿದ್ದ ಈತನನ್ನು ಸ್ಥಳ ಮಹಜರಿಗೆ ಕರೆದೊಯ್ದಾಗ, ನನಗೆ ಪಶ್ಚಾತ್ತಾಪವಿಲ್ಲ, ಜೈಲಿನಿಂದ ಹೊರಬಂದರೆ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನೂ ಕೊಲ್ಲುತ್ತೇನೆ ಎಂದು ಯಾವುದೇ ಭಯವಿಲ್ಲದೆ ಹೇಳಿಕೆ ನೀಡಿದ್ದ.
ಕೊಲೆಗೆ ಬಳಸಲಾಗಿದೆ ಎನ್ನಲಾದ ರಕ್ತಸಿಕ್ತ ಕೊಚ್ಚುಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಘಟನೆ ನಡೆದಾಗ ತಾನು ಮದ್ಯಪಾನ ಮಾಡಿದ್ದಾಗಿ ಗೋಸ್ವಾಮಿ ಹೇಳಿದ್ದು, ಫ್ಲ್ಯಾಟ್ನಿಂದ ಖಾಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಗೋಸ್ವಾಮಿಗೆ ಮಾದಕ ವ್ಯಸನದ ಚಟವಿತ್ತು ಎಂದು ತಪಾಸಣೆ ವೇಳೆ ತಿಳಿದು ಬಂದಿತ್ತು. ಆತ ತಮ್ಮ ಬಳಿ ವೈದ್ಯಕೀಯ ಸಮಸ್ಯೆಗಳನ್ನು ಮುಚ್ಚಿಟ್ಟಿದ್ದ ಹಾಗೂ 2019ರ ಹಣಕಾಸು ವಂಚನೆ ಪ್ರಕರಣವೊಂದರಲ್ಲಿ ಹಿಂದೆ ಬಂಧನಕ್ಕೊಳಗಾಗಿದ್ದ ಎಂದು ರಿಯಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಎಲ್ಲಾ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.