ಗಂಡು ಮಗುವಿನ ವ್ಯಾಮೋಹ: ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಿ ಕೊಂದ ಪಾಪಿ ಪತಿ!
ತೆಲಂಗಾಣದಲ್ಲಿ ಗಂಡು ಮಗುವಿನ ಆಸೆಗೆ ಮೂವರು ಬಲಿಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಪತಿ ಈಜುಕೊಳಕ್ಕೆ ತಳ್ಳಿ ಕೊಂದಿದ್ದಾನೆ. ಮೂರನೇ ಬಾರಿಯೂ ಹೆಣ್ಣು ಮಗು ಹುಟ್ಟಬಹುದು ಎಂಬ ಸಂಶಯದಿಂದ ಪತಿ ತನ್ನ ಗರ್ಭಿಣಿ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದಾನೆ.
ಕೊಲೆಯಾದ ದುರ್ದೈವಿಗಳು -
ಹೈದರಾಬಾದ್, ಏ. 3: ಗಂಡು ಮಗುವಿನ ಮೇಲಿನ ಅತಿಯಾದ ವ್ಯಾಮೋಹ ಮತ್ತು ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಇಡೀ ಕುಟುಂಬವೇ ಬಲಿಯಾಗಿರುವ ಅತ್ಯಂತ ಅಮಾನುಷ ಘಟನೆ ತೆಲಂಗಾಣದ (Telangana) ಹನುಮಕೊಂಡ (Hanumakonda) ಜಿಲ್ಲೆಯ ಪುನ್ನೆಲ (Punnela) ಗ್ರಾಮದಲ್ಲಿ ನಡೆದಿದೆ. ಮೂರನೇ ಬಾರಿಯೂ ಹೆಣ್ಣು ಮಗು ಹುಟ್ಟಬಹುದು ಎಂಬ ಸಂಶಯದಿಂದ ಪತಿ ತನ್ನ ಗರ್ಭಿಣಿ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ ಕೊಲೆ ಮಾಡಿದ್ದಾನೆ.
ಮೃತರನ್ನು 26 ವರ್ಷ ಫರ್ಹತ್ (Farhat) ಮತ್ತು ಆಕೆಯ ಪುತ್ರಿಯರಾದ 8 ವರ್ಷದ ಉಮೇರಾ (Umera) ಹಾಗೂ 6 ವರ್ಷದ ಆಯೇಷಾ (Ayesha) ಎಂದು ಗುರುತಿಸಲಾಗಿದೆ. ವಾರಂಗಲ್-ಖಮ್ಮಂ ರಾಷ್ಟ್ರೀಯ ಹೆದ್ದಾರಿಯ ಸಮೀಪ ಈ ಕುಟುಂಬವು ಒಂದು ಈಜುಕೊಳವನ್ನು (Swimming Pool) ನಡೆಸುತ್ತಿತ್ತು. ಬುಧವಾರ ರಾತ್ರಿ ಎಂದಿನಂತೆ ಈಜುಕೊಳದ ಬಳಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಮೂವರ ಶವಗಳು ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾದಾಗ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ.
ಅಪಘಾತವೆಂದು ಬಿಂಬಿಸಲು ಯತ್ನ
ಆರಂಭದಲ್ಲಿ ಪತಿ ಮೊಹಮ್ಮದ್ ಅಜರುದ್ದೀನ್, ಇದು ಆಕಸ್ಮಿಕವಾಗಿ ನಡೆದ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದ. ಪತ್ನಿ ಮತ್ತು ಮಕ್ಕಳು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಆತ ಕಥೆ ಕಟ್ಟಿದ್ದ. ಆದರೆ ಫರ್ಹತ್ ಅವರ ತಂದೆ ಅಲಿ ಅಜರುದ್ದೀನ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದು, ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ದೂರಿದ್ದಾರೆ.
ಸೈಬರ್ ವಂಚನೆಗೀಡಾಗಿ 1.28 ಕೋಟಿ ರೂಪಾಯಿ ಕಳೆದುಕೊಂಡ ಭೂಪ!
ಘೋರ ಕಾರಣ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಜರುದ್ದೀನ್ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದ ಕಾರಣ, ಈಗ ಗರ್ಭಿಣಿಯಾಗಿರುವ ಪತ್ನಿ ಮತ್ತೆ ಹೆಣ್ಣು ಮಗುವಿಗೇ ಜನ್ಮ ನೀಡಬಹುದು ಎಂಬ ಆತಂಕ ಆತನನ್ನು ಕಾಡಿತ್ತು. ಈ ಹಿಂದೆ ಕೂಡ ಹೆಣ್ಣು ಭ್ರೂಣ ಎಂಬ ಶಂಕೆಯ ಮೇಲೆ ಪತ್ನಿಗೆ ಬಲವಂತವಾಗಿ ಗರ್ಭಪಾತ ಮಾಡಿಸಲು ಆತ ಯತ್ನಿಸಿದ್ದ ಎನ್ನಲಾಗಿದೆ. ಈ ಬಾರಿ ಫರ್ಹತ್ ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಆತ ಈಜುಕೊಳಕ್ಕೆ ಕರೆದೊಯ್ದು ಪತ್ನಿ ಮತ್ತು ಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಪೊಲೀಸರು ಈಗ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮ ಲಿಂಗ ಪತ್ತೆ ಮತ್ತು ಬಲವಂತದ ಗರ್ಭಪಾತದ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಗಂಡು ಮಗುವಿನ ವ್ಯಾಮೋಹಕ್ಕೆ ಮೂರು ಜೀವಗಳು ಬಲಿಯಾಗಿರುವುದು ಇಡೀ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.