ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Inspector Sandesh: ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ: ಸಚಿವ ಪರಮೇಶ್ವರ್

'ಮೂಡುಬಿದಿರೆ ಘಟನೆಯ ಕುರಿತು ಇಂದು ಕೆಲವು ಸಂತ್ರಸ್ತೆಯರು ನನ್ನನ್ನು ಭೇಟಿ ಮಾಡಿದರು. ಅವರು ನೀಡಿದ ಮಾಹಿತಿ ಮತ್ತು ಘಟನೆಗಳ ಆಧಾರದ ಮೇಲೆ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಡಿಜಿ-ಐಜಿಪಿ ಅವರಿಗೆ ಸೂಚನೆ ನೀಡಿದ್ದೇನೆ' ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ ಸಿಐಡಿಗೆ: ಸಚಿವ ಪರಮೇಶ್ವರ್

ಇನ್‌ಸ್ಪೆಕ್ಟರ್‌ ಸಂದೇಶ್‌, ಗೃಹ ಸಚಿವ ಜಿ ಪರಮೇಶ್ವರ್ -

ಹರೀಶ್‌ ಕೇರ
ಹರೀಶ್‌ ಕೇರ Mar 23, 2026 3:21 PM

ಬೆಂಗಳೂರು, ಮಾ.23: ಮೂಡುಬಿದಿರೆ (Mudubidire) ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ (Inspector Sandesh) ಅವರ ಮೇಲಿರುವ, ಸಂತ್ರಸ್ತ ಮಹಿಳೆಯರನ್ನು ಮಂಚಕ್ಕೆ ಕರೆದ (Harassment) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಂತ್ರಸ್ತ ಮಹಿಳೆಯರು ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home minister G Paramaeshwara) ಅವರನ್ನು ಭೇಟಿ ಮಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಂತ್ರಸ್ತೆಯರ ಅಹವಾಲು ಆಲಿಸಿದ ಗೃಹ ಸಚಿವರು, ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ತಕ್ಷಣವೇ ತನಿಖೆಯನ್ನು ಸಿಐಡಿ (CID) ಗೆ ವಹಿಸುವಂತೆ ಆದೇಶಿಸಿದ್ದಾರೆ.

ಗೃಹ ಸಚಿವರ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಸಂತ್ರಸ್ತೆಯರು ತಮಗಾದ ಅನ್ಯಾಯ ಮತ್ತು ಘಟನೆಯ ಪೂರ್ಣ ಮಾಹಿತಿಯನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, 'ಮೂಡುಬಿದಿರೆ ಘಟನೆಯ ಕುರಿತು ಇಂದು ಕೆಲವು ಸಂತ್ರಸ್ತೆಯರು ನನ್ನನ್ನು ಭೇಟಿ ಮಾಡಿದರು. ಅವರು ನೀಡಿದ ಮಾಹಿತಿ ಮತ್ತು ಘಟನೆಗಳ ಆಧಾರದ ಮೇಲೆ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಡಿಜಿ-ಐಜಿಪಿ ಅವರಿಗೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದರು.

ಈಗಾಗಲೇ ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಸಂಬಂಧಪಟ್ಟ ಇನ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ. 'ತನಿಖೆಯ ವರದಿಯನ್ನು ತುರ್ತಾಗಿ ನೀಡುವಂತೆ ಸೂಚಿಸಿದ್ದೇವೆ. ಈ ಕೃತ್ಯದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಸಿಐಡಿ ತನಿಖೆಯಿಂದ ಸಂಪೂರ್ಣವಾಗಿ ಹೊರಬರಲಿದೆ' ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು; ತನಿಖೆ ಶುರು

ಮಹಿಳಾ ಆಯೋಗದ ಮಧ್ಯಸ್ಥಿಕೆ

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಅವರಿಂದ ಕಿರುಕುಳಕ್ಕೊಳಗಾದ ಸಂತ್ರಸ್ತರೊಂದಿಗೆ ಗೃಹ ಸಚಿವರನ್ನು ಭೇಟಿ ಮಾಡಿದ ನಂತರ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾಧ್ಯಮಗಳೊಂದಿಗೆ ಮಾತನಾಡಿದರು. 'ಸಂತ್ರಸ್ತೆಯರು ತಮ್ಮ ನೋವು ಮತ್ತು ಘಟನೆಯ ತೀವ್ರತೆಯನ್ನು ನನ್ನ ಮುಂದೆ ತೆರೆದಿಟ್ಟಿದ್ದರು. ಇದನ್ನು ನೇರವಾಗಿ ಗೃಹ ಸಚಿವರ ಗಮನಕ್ಕೆ ತರುವುದೇ ಸೂಕ್ತ ಎಂದು ನನಗೆ ಅನಿಸಿತು. ಅವರಿಗೆ ನ್ಯಾಯ ಸಿಗುವ ಏಕೈಕ ಉದ್ದೇಶದಿಂದ ಇಂದು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ' ಎಂದರು.

ಮುಂದುವರಿದು ಮಾತನಾಡಿದ ಅವರು, 'ಗೃಹ ಸಚಿವರು ಸಂತ್ರಸ್ತೆಯರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡಿದ್ದಾರೆ. ಪ್ರಕರಣದ ಆಳ (Depth) ಅರ್ಥವಾದ ನಂತರ ಅವರು ತಕ್ಷಣವೇ ಪೊಲೀಸ್ ವರಿಷ್ಠಾಧಿಕಾರಿಗೆ ಫೋನ್ ಮಾಡಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ. ಸಂತ್ರಸ್ತೆಯರು ನೀಡಿದ ಸಾಕ್ಷ್ಯಗಳು ತನಿಖೆಗೆ ಪೂರಕವಾಗಿವೆ. ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸ ಶೀಘ್ರವೇ ಬಹಿರಂಗವಾಗಲಿದೆ' ಎಂದು ಹೇಳಿದರು.

ಮೂಡುಬಿದಿರೆ ಇನ್‌ಸ್ಪೆಕ್ಟರ್‌ ಸಂದೇಶ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದ ಕಮಿಷನರ್

ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ ಮತ್ತು ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ. ಸಂತ್ರಸ್ತೆಯರಿಗೆ ಸೂಕ್ತ ಭದ್ರತೆ ಮತ್ತು ನ್ಯಾಯ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಪ್ರಕರಣವು ಈಗ ಸಿಐಡಿ ಕೈ ಸೇರಿರುವುದರಿಂದ, ಮುಂಬರುವ ದಿನಗಳಲ್ಲಿ ತನಿಖೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.