ಮುಂಬೈ ದಹಿ ಹಂಡಿ ದುರಂತ: ಬಾಲಕ ಸೇರಿ ಇಬ್ಬರು ಸಾವು, 212 ಮಂದಿ ಗಾಯ
Mumbai dahi handi accident: ಜನ್ಮಾಷ್ಟಮಿ ಹಬ್ಬದ ಭಾಗವಾಗಿ ಮಾನವ ಪಿರಮಿಡ್ ರಚಿಸಿ ಮಾಡಲಾಗುವ ಮುಂಬೈ ದಹಿ ಹಂಡಿಯಲ್ಲಿ ನಡೆದ ದುರಂತದಲ್ಲಿ 7 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ 168 ಮತ್ತು ಥಾಣೆ ನಗರದಲ್ಲಿ 44 ಮಂದಿ ಸೇರಿ 212 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ -
ಮುಂಬೈ: ಶ್ರೀ ಕೃಷ್ಣ ಜನ್ಮಾಷ್ಟಮಿ (Sri krishna janmastami) ಪ್ರಯುಕ್ತ ರಾಜ್ಯಾದ್ಯಂತ ನಡೆಯುವ ದಹಿ ಹಂಡಿ (dahi handi accident) ಆಚರಣೆ ವೇಳೆ ನಡೆದ ದುರಂತದಲ್ಲಿ (Mumbai dahi handi accident) ಓರ್ವ ಮಹಿಳೆ, 7 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಮುಂಬೈನಲ್ಲಿ (Mumbai) ಇಟ್ಟಿಗೆ ಕಂಬ ಕುಸಿದು ಏಳು ವರ್ಷದ ಬಾಲಕ, ಪುಣೆಯಲ್ಲಿ (pune) ಕಬ್ಬಿಣದ ಚೌಕಟ್ಟಿನಡಿಯಲ್ಲಿ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಮಾನವ ಪಿರಮಿಡ್ಗಳ ರಚನೆ ವೇಳೆ ಮುಂಬೈನ 168 ಮತ್ತು ಥಾಣೆ ನಗರದ 44 ಮಂದಿ ಸೇರಿ ಒಟ್ಟು 212 ಮಂದಿ ಗಾಯಗೊಂಡಿದ್ದಾರೆ.
ಮುಂಬೈನಲ್ಲಿ ಮಾಲ್ವಾನಿಯ ಚಿಕುವಾಡಿಯಲ್ಲಿರುವ ಏಕ್ತಾ ವೆಲ್ಫೇರ್ ಸೊಸೈಟಿಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆಯುತ್ತಿದ್ದ ದಹಿ ಹಂಡಿ ದುರಂತದಲ್ಲಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮಕ್ಕಳ ಗುಂಪು ಸೇರಿ ದಹಿ ಹಂಡಿಯನ್ನು ಆಚರಿಸುತ್ತಿದ್ದರು. ದಹಿ ಹಂಡಿ ಹಿಡಿದಿದ್ದ ಹಗ್ಗದ ಒಂದು ತುದಿಯನ್ನು ಮರಕ್ಕೆ ಮತ್ತು ಇನ್ನೊಂದು ತುದಿಯನ್ನು ನೆಲಮಹಡಿಯ ರಚನೆಯ ಇಟ್ಟಿಗೆ ಕಂಬಕ್ಕೆ ಕಟ್ಟಿದ್ದರು.
ಮಕ್ಕಳು ಸೇರಿ ಹಂಡಿಯನ್ನು ಒಡೆಯಲು ಪ್ರಯತ್ನಿಸಿದಾಗ ಇಟ್ಟಿಗೆ ಕಂಬ ಕುಸಿದು ಏಳು ವರ್ಷದ ರುದ್ರ ಕದಮ್ ಮೇಲೆ ಬಿದ್ದಿದೆ. ಈ ಅವಶೇಷಗಳ ಅಡಿ ಸಿಲುಕಿ ಹೂತು ಹೋದ ರುದ್ರ ಕದಮ್ ತಕ್ಷಣವೇ ಹೊರತೆಗೆದು ಹತ್ತಿರದ ಮಾಲ್ವಾನಿ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದರು. ಘಟನೆಯ ಬಳಿಕ ವಾರ್ಡ್ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಯಿತು.
ಪುಣೆಯ ಪಿಂಪ್ರಿ ಚಿಂಚ್ವಾಡ್ನ ಹಳೆಯ ಸಾಂಗವಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದ ದಹಿ ಹಂಡಿ ವೇಳೆ ಸ್ಥಳೀಯರಾದ ಸಲ್ಮಾ ಸಲಾವುದ್ದೀನ್ ಪಠಾಣ್ ಅವರ ಮೇಲೆ ಧ್ವನಿವರ್ಧಕಗಳ ರಾಶಿಯನ್ನು ಬೆಂಬಲಿಸಲು ನಿರ್ಮಿಸಲಾದ ತಾತ್ಕಾಲಿಕ ಕಬ್ಬಿಣದ ರಚನೆ ಕುಸಿದು ಬಿದ್ದಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ.
ವಿಘ್ನಹರ್ತಾ ಮಂಡಲ ಆಯೋಜಿಸಿದ್ದ ಕಾರ್ಯಕ್ರಮ ಮುಗಿದ ಬಳಿಕ ಕಾರ್ಮಿಕರು ಕಬ್ಬಿಣದ ರಚನೆಯನ್ನು ತೆಗೆಯುತ್ತಿದ್ದಾಗ ಅದರ ಭಾರವಾದ ಭಾಗ ಸಲ್ಮಾ ಸಲಾವುದ್ದೀನ್ ಪಠಾಣ್ ಅವರ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಸಲ್ಮಾ ಅವರ ಮಗ ಸಂಘಟನಾ ಮಂಡಲದ ಪದಾಧಿಕಾರಿಯಾಗಿದ್ದು ಅವರ ಕುಟುಂಬವು ಸಂಘಟಕರ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದೆ. ಆಕೆಯ ಸಾವು ಆಕಸ್ಮಿಕವಾಗಿದೆ ಎಂದು ಪೊಲೀಸರು ಎಫ್ ಐಆರ್ ದಾಖಲಿಸಿದರು. ಪೊಲೀಸರು ರಚನೆಯ ಕುಸಿತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮುಂಬೈನ ವಿವಿಧ ಭಾಗಗಳಲ್ಲಿ ನಡೆದ ದಹಿ ಹಂಡಿಯಲ್ಲಿ ಒಟ್ಟು 168 ಮಂದಿ ಗಾಯಗೊಂಡಿದ್ದಾರೆ. ಎಂದು ವಿವಿಧ ಸರ್ಕಾರಿ ಮತ್ತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಆಸ್ಪತ್ರೆಗಳ ಮಾಹಿತಿ ವಿಭಾಗ ವರದಿ ಮಾಡಿದೆ. 168 ಗಾಯಾಳುಗಳಲ್ಲಿ 29 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, 81 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 58 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈನ ವರ್ಲಿ, ದಾದರ್ ಮತ್ತು ಘಾಟ್ಕೋಪರ್ನಲ್ಲಿ ನಡೆದ ದಹಿ ಹಂಡಿ ಕಾರ್ಯಕ್ರಮಗಳಿಗೆ ಭೇಟಿ ನೀಡಿ ನಾಗರಿಕರು ವಿಶೇಷವಾಗಿ ಯುವಕರು ವ್ಯಸನದಿಂದ ದೂರವಿರಲು ಒತ್ತಾಯಿಸಿದರು. ಈ ಆಚರಣೆಗಳು ರಾಜ್ಯದಲ್ಲಿ ಮಾದಕ ವಸ್ತು ಮುಕ್ತ ಮಹಾರಾಷ್ಟ್ರ ಅಭಿಯಾನವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಹಬ್ಬವು ಕೇವಲ ಆಚರಣೆಯಲ್ಲ, ಬದಲಾಗಿ ಮಹಾರಾಷ್ಟ್ರದ ಸಂಪ್ರದಾಯ, ಅದರ ಯುವಕರ ಧೈರ್ಯ ಮತ್ತು ತಂಡದ ಕೆಲಸದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ದೆಹಲಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಹಲ್ಲೆ; ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ
ಥಾಣೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ದಹಿ ಹಂಡಿ ಸಮಯದಲ್ಲಿ ದಾಖಲೆ ಮುರಿದ ಮಾನವ ಪಿರಮಿಡ್ಗಳ ಮೇಲೆ ಸುರಕ್ಷತೆಯ ಅಗತ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ತಿಳಿಸಿದರು.
ದಹಿ ಹಂಡಿ ಪ್ರಯುಕ್ತ ಮುಂಬೈನಾದ್ಯಂತ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದು, ಉತ್ಸವಕ್ಕಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಂದೋಬಸ್ತ್ ನಿಯೋಜಿಸಲಾಗಿತ್ತು.