ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯ ಭೀಕರ ಹತ್ಯೆ; ಶಂಕಿತನ ಬಂಧನ
Elderly Sikh Couple Shot Dead: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯನ್ನು ಗುಂಡಿಕ್ಕಿ ಕೊಂದ ಮೂರು ದಿನಗಳ ನಂತರ, ಪೊಲೀಸರು ಪ್ರಮುಖ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಶಂಕಿತನನ್ನು ಅಮಜುಗರಿ ನಿವಾಸಿ ಶೇರ್ ಶಾ ಎಂದು ಗುರುತಿಸಲಾಗಿದೆ.
ಗುರುದ್ವಾರ (ಸಂಗ್ರಹ ಚಿತ್ರ) -
ಇಸ್ಲಾಮಾಬಾದ್, ಜೂ.19: ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗುರುದ್ವಾರ (Gurdwara) ದಲ್ಲಿ ವೃದ್ಧ ಸಿಖ್ ದಂಪತಿಯನ್ನು ಗುಂಡಿಕ್ಕಿ ಕೊಂದ ಮೂರು ದಿನಗಳ ನಂತರ, ಪೊಲೀಸರು ಪ್ರಮುಖ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಪೇಶಾವರದಿಂದ ವಾಯುವ್ಯಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಮರ್ದಾನ್ ಜಿಲ್ಲೆಯ ಬಾಬು ಮೊಹಲ್ಲಾದಲ್ಲಿರುವ ಗುರುದ್ವಾರದ ಉಸ್ತುವಾರಿ ವಹಿಸಿಕೊಂಡಿದ್ದ 70 ವರ್ಷದ ಜಗನ್ನಾಥ್ ಮತ್ತು ಅವರ ಪತ್ನಿ ಅಸ್ಮಾ ವಾಂಟಿ ಅವರನ್ನು ಬುಧವಾರ (ಜೂ.17) ಗುರುದ್ವಾರದೊಳಗೆ ಗುಂಡು ಹಾರಿಸಿ ಕೊಲ್ಲಲಾಯಿತು.
ಬಂಧಿತ ಶಂಕಿತನನ್ನು ಅಮಜುಗರಿ ನಿವಾಸಿ ಶೇರ್ ಶಾ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹ ಇಲಾಖೆ ಸಿಬ್ಬಂದಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ತಂಡ ನಡೆಸಿದ ತನಿಖೆಯಲ್ಲಿ, ಶಂಕಿತನನ್ನು ಯಾವುದೇ ನಿಷೇಧಿತ ಸಂಘಟನೆ, ಭಯೋತ್ಪಾದಕ ಸಂಘಟನೆ ಅಥವಾ ಸಂಘಟಿತ ಜಾಲದೊಂದಿಗೆ ಸಂಪರ್ಕಿಸುವ ಯಾವುದೇ ಸಾಕ್ಷ್ಯಗಳು ಇದುವರೆಗೆ ಕಂಡುಬಂದಿಲ್ಲ ಎಂದು ಮರ್ದಾನ್ ಜಿಲ್ಲಾ ಪೊಲೀಸ್ ಅಧಿಕಾರಿ ಮಸೂದ್ ಅಹ್ಮದ್ ಬಂಗಾಶ್ ಹೇಳಿದ್ದಾರೆ.
ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಶಂಕಿತನ ಹೇಳಿಕೆಗಳು ಹಾಗೂ ಇದುವರೆಗೆ ಸಂಗ್ರಹಿಸಲಾದ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರು ಗುರುದ್ವಾರಕ್ಕೆ ಪ್ರವೇಶಿಸಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗುರುದ್ವಾರದ ಭದ್ರತೆಗಾಗಿ ಪೊಲೀಸ್ ಕಾವಲುಗಾರನನ್ನು ನಿಯೋಜಿಸಲಾಗಿತ್ತು. ಆದರೆ ದಾಳಿಯ ಸಮಯದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಡಿಜಿಟಲ್ ವಿಡಿಯೊ ರೆಕಾರ್ಡರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಈ ಹತ್ಯಾಕಾಂಡವು ಭಾರತದಲ್ಲಿ ಅಕಾಲ್ ತಖ್ತ್ ಹಾಗೂ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಕಾಲ್ ತಖ್ತ್ ಜಥೇದಾರ್ (ಪ್ರಧಾನ ಅರ್ಚಕ) ಗಿಯಾನಿ ಕುಲದೀಪ್ ಸಿಂಗ್ ಗರ್ಗಜ್ ಹತ್ಯೆಯನ್ನು ಖಂಡಿಸಿದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಖೈಬರ್ ಪಖ್ತುಂಖ್ವಾದ ಮುಖ್ಯಮಂತ್ರಿ ಮುಹಮ್ಮದ್ ಸೊಹೈಲ್ ಖಾನ್ ಅಫ್ರಿದಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಈ ಹತ್ಯೆಯನ್ನು ಖಂಡಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದಲ್ಲೂ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಾತರಿಪಡಿಸುವ 1950 ರ ನೆಹರು-ಲಿಯಾಕತ್ ಒಪ್ಪಂದದ ಅಡಿಯಲ್ಲಿ ಮಾಡಿದ ಬದ್ಧತೆಗಳನ್ನು ಎತ್ತಿಹಿಡಿಯುವಲ್ಲಿ ಪಾಕಿಸ್ತಾನ ನಿರಂತರವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.