ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂದೂರ್ ದಾಳಿಯಿಂದ ಪಾಕಿಸ್ತಾನದ ವೈಮಾನಿಕ, ಭೂ ಸೇನಾ ಸ್ವತ್ತುಗಳಿಗೆ ಅಪಾರ ಹಾನಿ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಯುದ್ಧ ವಿಮಾನಗಳು ನಾಶವಾಗಿರುವುದು ಮಾತ್ರವಲ್ಲದೆ ಕಣ್ಗಾವಲು ವಿಮಾನ, ಸಶಸ್ತ್ರ ಡ್ರೋನ್‌ಗಳು, ಸಾರಿಗೆ ವಿಮಾನಗಳು ಸೇರಿದಂತೆ ಅಪಾರ ಪ್ರಮಾಣದ ವೈಮಾನಿಕ ಮತ್ತು ಭೂ ಸೇನಾ ಸ್ವತ್ತುಗಳಿಗೆ ಹಾನಿಯನ್ನುಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಸಿಂದೂರ್: ಪಾಕಿಸ್ತಾನ ಸೇನೆಯ 9 ವಿಮಾನಗಳು ನಾಶ

ನವದೆಹಲಿ: ಕಾಶ್ಮೀರದ (Kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್ (Pahalgam)ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕರ ದಾಳಿಯಿಂದ (terror attack) 27 ಮಂದಿ ಸಾವನ್ನಪ್ಪಿದ ಬಳಿಕ ಇದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರ್‌ನಲ್ಲಿ (Operation Sindoor) ಆರು ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಯುದ್ಧ ವಿಮಾನಗಳು, ಎರಡು ಹೆಚ್ಚಿನ ಮೌಲ್ಯದ ಕಣ್ಗಾವಲು ವಿಮಾನಗಳು, ಹತ್ತುಕ್ಕೂ ಹೆಚ್ಚು ಸಶಸ್ತ್ರ ಡ್ರೋನ್‌ ಮತ್ತು ಸಿ -130 ಹರ್ಕ್ಯುಲಸ್ ಸಾರಿಗೆ ವಿಮಾನಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.

ಮೇ ಆರಂಭದಲ್ಲಿ ನಡೆದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಪಾಕಿಸ್ತಾನದ ವೈಮಾನಿಕ ಮತ್ತು ಭೂ ಸೇನಾ ಸ್ವತ್ತುಗಳಿಗೆ ಅಪಾರ ಹಾನಿಯಾಗಿವೆ. ವೈಮಾನಿಕ ದಾಳಿಯ ಸಂದರ್ಭದಲ್ಲಿ ಆರು ಪಿಎಎಫ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಇದನ್ನು ಭಾರತೀಯ ವಾಯುಸೇನೆಯು ಆಕಾಶದಲ್ಲೇ ನಾಶಪಡಿಸಿತ್ತು. ಪಾಕಿಸ್ತಾನದ ಪಂಜಾಬ್ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (ಪಿಒಜೆಕೆ) ಕೆಲವು ಭಾಗಗಳಲ್ಲಿ ಈ ಕಾರ್ಯಾಚರಣೆಗಳು ನಡೆಯಿತು. ಇದನ್ನು ರಾಡಾರ್ ಟ್ರ್ಯಾಕಿಂಗ್ ಮೂಲಕ ದೃಢಪಡಿಸಲಾಗಿದೆ.

ಇನ್ನು ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ವೈಮಾನಿಕ ಮತ್ತು ಭೂ ಸೇನಾ ಸ್ವತ್ತುಗಳಿಗೆ ಹಾನಿಯಾಗಿವೆ. ದುಬಾರಿ ಮೌಲ್ಯದ ಎರಡು ಕಣ್ಗಾವಲು ವಿಮಾನಗಳನ್ನು ನಾಶಪಡಿಸಲಾಗಿದೆ. ನಾಲ್ಕು ದಿನಗಳ ಯುದ್ಧದ ಸಮಯದಲ್ಲಿ ಒಂದು ಪಾಕಿಸ್ತಾನದ ಕಣ್ಗಾವಲು ವಿಮಾನಗಳನ್ನು ಭಾರತದ ಸುದರ್ಶನ್ ಸುಮಾರು 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಾಶ ಮಾಡಿದೆ.

ಇನ್ನೊಂದು ಪಾಕಿಸ್ತಾನದ ಭೋಲಾರಿ ವಾಯುನೆಲೆಯಲ್ಲಿ ನೆಲೆಗೊಂಡಿದ್ದ ಸ್ವೀಡಿಷ್ ಮೂಲದ ಕಣ್ಗಾವಲು ವಿಮಾನವನ್ನು ಕ್ರೂಸ್ ಕ್ಷಿಪಣಿ ದಾಳಿ ಮೂಲಕ ನಾಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಉಪಗ್ರಹ ಚಿತ್ರವು ವಿಮಾನವನ್ನು ಇರಿಸಲಾಗಿದ್ದ ಹ್ಯಾಂಗರ್‌ ಸಂಪೂರ್ಣ ನಾಶವಾಗಿರುವುದನ್ನು ಬಹಿರಂಗಪಡಿಸಿದೆ.

ಇನ್ನು ಪಾಕಿಸ್ತಾನಿ ಪಂಜಾಬ್ ಮೇಲೆ ಭಾರತೀಯ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ ಪಿಎಎಫ್ ಸಿ-130 ಹರ್ಕ್ಯುಲಸ್ ವಿಮಾನ ನಾಶವಾಗಿದೆ. ಡ್ರೋನ್ ದಾಳಿ ನಡೆದಾಗ ಸಿ-130 ಅನ್ನು ಮುಲ್ತಾನ್ ಬಳಿಯ ಮುಂಚೂಣಿ ಕಾರ್ಯಾಚರಣಾ ನೆಲೆಯಲ್ಲಿ ನಿಲ್ಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಾಯು ಸೇನೆಯು ನಡೆಸಿದ ಮಾನವರಹಿತ ಕ್ಷಿಪಣಿಗಳು ನಿಖರವಾದ ದಾಳಿಗಳನ್ನು ನಡೆಸುವಲ್ಲಿ ಯಶಸ್ಸು ಸಾಧಿಸಿತ್ತು. ರಫೇಲ್ ಮತ್ತು ಸು-30 ಜೆಟ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗಿದೆ. ಇದರಿಂದ ಚೀನಾ ಮೂಲದ ವಿಂಗ್ ಲೂಂಗ್ ಸರಣಿಯ ಮಧ್ಯಮ, ಎತ್ತರದ ಹಾಗೂ ದೀರ್ಘ ಪ್ರಯಾಣ ನಡೆಸುವ ಡ್ರೋನ್‌ಗಳನ್ನು ಹೊಂದಿದ್ದ ಹ್ಯಾಂಗರ್ ನಾಶವಾಗಿದೆ. ಈ ಒಂದೇ ದಾಳಿಯಲ್ಲಿ ಹತ್ತುಕ್ಕೂ ಹೆಚ್ಚು ಯುಸಿಎವಿಗಳು ನಾಶವಾದವು ಎಂದು ಮೂಲಗಳು ಹೇಳಿವೆ.

ಈ ಸಂಘರ್ಷದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನ ವಲಯಗಳ ಮೇಲೆ ಹಾರಿ ಬಂದಿದ್ದ ಹಲವಾರು ಪಾಕಿಸ್ತಾನಿ ಯುಸಿಎವಿಗಳನ್ನು ಭಾರತೀಯ ವಾಯು ರಕ್ಷಣಾ ಘಟಕಗಳು ವಾಯುಪ್ರದೇಶದಲ್ಲೇ ತಡೆದು ಹೊಡೆದುರುಳಿಸಿದವು.

ಆಪರೇಷನ್ ಸಿಂದೂರ್‌ನಿಂದಾಗಿ ಬಹಿರಂಗಪಡಿಸದ ಅನೇಕ ಪಾಕಿಸ್ತಾನಿ ಮಿಲಿಟರಿ ನೆಲೆಗಳ ಬಗ್ಗೆ ಮಾಹಿತಿಗಳು ಹೊರಬಂದಿವೆ. ಪಾಕಿಸ್ತಾನ ಅಧಿಕೃತವಾಗಿ ಒಪ್ಪಿಕೊಂಡಿದ್ದಕ್ಕಿಂತ ಸುಮಾರು ಏಳು ಹೆಚ್ಚಿನ ಪ್ರದೇಶಗಳಿಗೆ ಭಾರತೀಯ ಸೇನೆ ದಾಳಿ ಮಾಡಿದೆ.

ದಾಖಲೆಯಲ್ಲಿರುವ ನಕ್ಷೆ ಮತ್ತು ದತ್ತಾಂಶಗಳ ಪ್ರಕಾರ ಭಾರತೀಯ ವಾಯುದಾಳಿಯಲ್ಲಿ ಪೇಶಾವರ, ಜಾಂಗ್, ಸಿಂಧ್ ನಲ್ಲಿರುವ ಹೈದರಾಬಾದ್, ಪಂಜಾಬ್ ನಲ್ಲಿರುವ ಗುಜರಾತ್, ಬಹಾವಲ್‌ನಗರ, ಅಟಾಕ್ ಮತ್ತು ಚೋರ್‌ನಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಗುರಿ ಮಾಡಿದೆ. ಈ ಮೂಲಕ ಭಾರತೀಯ ವಾಯು ಸೇನೆಯು ಪಾಕಿಸ್ತಾನದೊಳಗೆ ಹೆಚ್ಚು ದೂರದಲ್ಲಿದ್ದ ಪ್ರದೇಶವನ್ನು ತಲುಪಿರುವುದು ಖಚಿತವಾಗಿದೆ.

ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯು ಮೇ 6 ಮತ್ತು 7ರಂದು ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಬಹಾವಲ್‌ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ, ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಶಿಬಿರ ಮತ್ತು ಮುಜಫರಾಬಾದ್, ಕೋಟ್ಲಿ, ರಾವಲಕೋಟ್, ಭಿಂಬರ್ ಮತ್ತು ಚಕ್ವಾಲ್‌ನಲ್ಲಿರುವ ಕಚೇರಿಗಳು ಸೇರಿ ಒಂಬತ್ತು ಸ್ಥಳಗಳು ಸೇರಿವೆ.

ಆರಂಭದಲ್ಲಿ ಭಾರತೀಯ ಸೇನೆಯು ಕೇವಲ ಭಯೋತ್ಪಾದಕರ ನೆಲೆಗಳ ಮೇಲೆ ನಿಖರ ದಾಳಿಯನ್ನು ನಡೆಸಿತ್ತು. ಆದರೆ ಮೇ 8ರಂದು ಪಾಕಿಸ್ತಾನವು ಭಾರತದ ನಾಗರಿಕ ಮತ್ತು ಮಿಲಿಟರಿ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲು ಪ್ರಾರಂಭಿಸಿದ್ದರಿಂದ ಭಾರತೀಯ ಸೇನೆ ಬಳಿಕ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಆದರೆ ಇದು ತಮ್ಮ ಗುರಿಯಾಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಇದನ್ನೂ ಓದಿ: Narendra Modi: ಮತ್ತೆ ಸಚಿವ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ; ಆಪರೇಷನ್‌ ಸಿಂದೂರ್‌ ಬಳಿಕ ಇದೇ ಮೊದಲ ಹೈವೋಲ್ಟೇಜ್‌ ಮೀಟಿಂಗ್‌

ಪಾಕಿಸ್ತಾನವು ಭಾರತದ ಪಶ್ಚಿಮ ಗಡಿಯಲ್ಲಿರುವ ರಾಜಸ್ಥಾನದ ಕೆಲವು ಸ್ಥಳಗಳು, ಜಮ್ಮು ಮತ್ತು ಗುಜರಾತ್‌ನಲ್ಲಿರುವ ಮಿಲಿಟರಿ ಸ್ಥಾಪನೆಗಳು ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತವು 11 ಪಾಕಿಸ್ತಾನಿ ವಾಯುನೆಲೆಗಳನ್ನು ನಾಶ ಮಾಡಿವೆ. ಇದರಲ್ಲಿ ನೂರ್ ಖಾನ್, ರಫೀಕಿ, ಮುರಿಯ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಸ್ಕಾರ್ಡು, ಭೋಲಾರಿ ಮತ್ತು ಜಕೋಬಾಬಾದ್ ಸೇರಿದೆ.

ರಾಜತಾಂತ್ರಿಕ ಒತ್ತಡ ಮತ್ತು ಯುದ್ಧಭೂಮಿಯಲ್ಲಿನ ಹಿನ್ನಡೆಯಿಂದಾಗಿ ಮೇ 10ರಂದು ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಅವರು ಭಾರತದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರನ್ನು ಸಂಪರ್ಕಿಸಿ ತಕ್ಷಣ ಕದನ ವಿರಾಮಕ್ಕೆ ಮನವಿ ಮಾಡಿದರು. ಆ ಬಳಿಕ ಭಾರತವು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡಿತು. ಆದರೆ ಕದನ ವಿರಾಮ ಉಲ್ಲಂಘಿಸಿದರೆ ಮತ್ತೆ ದಾಳಿ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿತ್ತು.